1971ರ ಯುದ್ಧದಲ್ಲಿ ಪಾಕಿಸ್ತಾನಿ ಸೈನ್ಯದ ಹೆಡೆಮುರಿ ಕಟ್ಟಿದ್ದ ಲಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ

By Suvarna NewsFirst Published Apr 22, 2022, 4:53 PM IST
Highlights

1971 ರ ಯುದ್ಧದಲ್ಲಿ, ಆಲ್ಬರ್ಟ್ ಎಕ್ಕಾ ಡಿಸೆಂಬರ್ 3ರ ರಾತ್ರಿ ಅಗರ್ತಲಾದಲ್ಲಿ ಪಾಕಿಸ್ತಾನಿ ಸೇನೆಯನ್ನು ಮಕಾಡೆ ಮಲಗಿಸಿದ್ದರು. ಎಕ್ಕಾ ಮತ್ತು ಅವರ ಸಂಗಡಿಗರು ಅಗರ್ತಲಾವನ್ನು ಪಾಕಿಸ್ತಾನಿ ಸೇನೆ ವಶಪಡಿಸಿಕೊಳ್ಳದಂತೆ ರಕ್ಷಿಸಿದ್ದರು.

ನವದೆಹಲಿ (ಏ. 22): ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಸ್ವಾತಂತ್ರ್ಯಾನಂತರ ಭಾರತ ಹಲವು ಸವಾಲುಗಳನ್ನು ಎದುರಿಸಿದೆ. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಅನೇಕ ಯುದ್ಧಗಳು ನಡೆದಿವೆ. ಈ ಯುದ್ಧಗಳಲ್ಲಿ, ಭಾರತದ ವೀರ ಪುತ್ರರು ಅದಮ್ಯ ಧೈರ್ಯವನ್ನು ತೋರಿಸಿದ್ದಾರೆ. ಇಂದು ನಾವು ಅಂತಹ ವೀರ ಯೋಧ ಆಲ್ಬರ್ಟ್ ಎಕ್ಕಾರ ರೋಚಕ ಕಥೆ ಹೇಳುತ್ತಿದ್ದೇವೆ. 1971ರ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯ‌ನ್ನು ಮಕಾಡೆ ಮಲಗಿಸಿದ್ದ ವೀರ ಯೋಧ ಆಲ್ಬರ್ಟ್ ಎಕ್ಕಾ ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರವನ್ನು ನೀಡಲಾಯಿತು.

ಬಾಲ್ಯದಿಂದಲೂ ಸೈನ್ಯಕ್ಕೆ ಸೇರುವ ಆಸೆ: ಆಲ್ಬರ್ಟ್ ಎಕ್ಕಾ ಅವರು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಜರಿ ಗ್ರಾಮದಲ್ಲಿ 1942 ರಲ್ಲಿ ಜನಿಸಿದರು. ಬಾಲ್ಯದಿಂದಲೂ ಸೈನ್ಯಕ್ಕೆ ಸೇರುವ ಆಸೆ ಅವರಿಗಿತ್ತು. 1962 ರಲ್ಲಿ ಅವರು ಬಿಹಾರ ರೆಜಿಮೆಂಟ್ ಸೇರಿದರು. ಅವರನ್ನು 14 ಗಾರ್ಡ್ಸ್‌ನಲ್ಲಿ ನಿಯೋಜಿಸಲಾಗಿತ್ತು. ಅವರ ಶೌರ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಲ್ಯಾನ್ಸ್ ನಾಯಕ್ ರ‍್ಯಾಂಕ್‌ ನೀಡಲಾಗಿತ್ತು. 

ಅಗರ್ತಲಾ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಪಾಕಿಸ್ತಾನ: 1971ರ ಯುದ್ಧದಲ್ಲಿ ಆಲ್ಬರ್ಟ್ ಎಕ್ಕಾ ಪ್ರಮುಖ ಪಾತ್ರ ವಹಿಸಿದ್ದರು. ಅಗರ್ತಲಾ ಮೇಲೆ ಭಾರೀ ದಾಳಿ ನಡೆಸಲು ಪಾಕಿಸ್ತಾನ ಯೋಜನೆ ರೂಪಿಸಿತ್ತು. ಆಲ್ಬರ್ಟ್ ಎಕ್ಕಾ ಅವರಿಗೆ ಅಗರ್ತಲಾವನ್ನು ಉಳಿಸುವ ಜವಾಬ್ದಾರಿಯನ್ನು ನೀಡಲಾಯಿತು. ಡಿಸೆಂಬರ್ 3-4 ರ ರಾತ್ರಿ, ಆಲ್ಬರ್ಟ್ ಎಕ್ಕಾ ಮತ್ತು ಅವರ ಸಹಚರರು ಪಾಕಿಸ್ತಾನಿ ಸೈನಿಕರೊಂದಿಗೆ ಭೀಕರ ಯುದ್ಧವನ್ನು ನಡೆಸಿದರು. ಗಂಗಾಸಾಗರ ರೈಲು ನಿಲ್ದಾಣದ ಬಳಿ ನಡೆದ ಈ ಕದನದಲ್ಲಿ ಭಾರತದ ವೀರ ಪುತ್ರರು ಪಾಕಿಸ್ತಾನದ ಸೇನೆಯನ್ನು ಹೊಡೆದುರುಳಿಸಿದ್ದರು.

ಇದನ್ನೂ ಓದಿ: ಶತ್ರುಗಳ ದಾಳಿಗೆ ಎದೆಗುಂದಲಿಲ್ಲ ಚಿಮನ್ ಸಿಂಗ್, ವೀರನನ್ನು ನೋಡಲು ಬಾಂಗ್ಲಾ ಆಸ್ಪತ್ರೆಗೆ ತೆರಳಿದ್ದ ಇಂದಿರಾ

ಗಾಯಗೊಂಡ ನಂತರವೂ ಸಾಹಸ ತೋರಿದ ಯೋಧ: ಡಿಸೆಂಬರ್ 3 ರ ರಾತ್ರಿ ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಯಿಂದ ಭಾರೀ ಗುಂಡಿನ ದಾಳಿಯನ್ನು ಎದುರಿಸಬೇಕಾಯಿತು. ಎಕ್ಕಾ ಶತ್ರುಗಳ ಬಂಕರ್ ಮೇಲೆ ದಾಳಿ ನಡೆಸಿದ್ದರು. ಈ ಸಮಯದಲ್ಲಿ ಅವರು ಗಾಯಗೊಂಡರು, ಆದರೆ ಬಂಕರ್‌ನಲ್ಲಿ ಅಡಗಿಕೊಂಡಿದ್ದ ಪಾಕಿಸ್ತಾನಿ ಸೈನಿಕರನ್ನು ಕೊಂದರು. ಈ ವೇಳೆ ಕಟ್ಟಡದಿಂದ ಗುಂಡು ಹಾರಿದಾಗ ಶತ್ರು ಸೈನ್ಯದ ಮೇಲೆ ಗ್ರೆನೇಡ್ ಎಸೆದಿದ್ದಷ್ಟೇ ಅಲ್ಲದೇ  ಗೋಡೆ ಏರಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನಿ ಸೈನಿಕರನ್ನು ಏಕ್ಕಾ ಕೊಂದು ಹಾಕಿದ್ದರು.

ಈ ಯುದ್ಧದಲ್ಲಿ, ಆಲ್ಬರ್ಟ್ ಎಕ್ಕಾ ಮತ್ತು ಅವರ ಅನೇಕ ಸಹಚರರು ಹುತಾತ್ಮರಾದರು. ಎಲ್ಲಾ ಹುತಾತ್ಮರನ್ನು ಶ್ರೀಪಲ್ಲಿ ಗ್ರಾಮದಲ್ಲಿ ಸಮಾಧಿ ಮಾಡಲಾಯಿತು. ಈ ಯುದ್ಧದಲ್ಲಿ ಸೋತ ನಂತರ ಪಾಕಿಸ್ತಾನ ಸಂಪೂರ್ಣ ನಾಶವಾಯಿತು. ಪಾಕಿಸ್ತಾನ ಡಿಸೆಂಬರ್ 16 ರಂದು ಭಾರತಕ್ಕೆ ಶರಣಾಗಬೇಕಾಯಿತು. ಎಕ್ಕಾ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ನೀಡಲಾಯಿತು.

click me!