INDIA@75: ಮಡಿಕೇರಿಯಲ್ಲಿ ಬೃಹತ್‌ ಪಂಜಿನ ಮೆರವಣಿಗೆ

By Kannadaprabha NewsFirst Published Aug 14, 2022, 10:52 AM IST
Highlights

ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಪ್ರಯುಕ್ತ ಹಿಂದೂ ಜಾಗದರಣ ವೇದಿಕೆಯ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಶುಕ್ರವಾರ ರಾತ್ರಿ ನಗರದ ಮುಖ್ಯ ಬೀದಿಗಳಲ್ಲಿ ಬೃಹತ್‌ ಪಂಜಿನ ಮೆರವಣಿಗೆ ನಡೆಯಿತು

ಮಡಿಕೇರಿ (ಆ.14) : ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಪ್ರಯುಕ್ತ ಹಿಂದೂ ಜಾಗದರಣ ವೇದಿಕೆಯ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ನಗರದ ಮುಖ್ಯ ಬೀದಿಗಳಲ್ಲಿ ಬೃಹತ್‌ ಪಂಜಿನ ಮೆರವಣಿಗೆ ನಡೆಯಿತು. ಮಡಿಕೇರಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಅಖಂಡ ಭಾರತದ ಸಂಕಲ್ಪಕ್ಕಾಗಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಭಗವಾಧ್ವಜ ಮತ್ತು ಉರಿಯುವ ಪಂಜುಗಳನ್ನು ಹಿಡಿದ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು, ಸಾರ್ವಜನಿಕರು, ಮಾತೆಯರು, ಮಕ್ಕಳು ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

RSS ಮೈ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮವಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನಂತರ ಮಡಿಕೇರಿ(Madikeri)ಯ ಲಕ್ಷ್ಮೇನರಸಿಂಹ ಕಲ್ಯಾಣ ಮಂಟಪದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. 1947ರ ಆಗಸ್ವ್‌ 14ರ ಮಧ್ಯರಾತ್ರಿ ನಮ್ಮ ದೇಶ ವಿಭಜನೆಗೊಂಡ ಇತಿಹಾಸದ ಕರಾಳ ಸತ್ಯವನ್ನು ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಉಡುಪಿಯ ಖ್ಯಾತ ವಾಗ್ಮಿ ಶ್ರೀಕಾಂತ್‌ ಶೆಟ್ಟಿವಿವರಿಸಿದರು.

ಅಂದು ಕಳೆದುಕೊಂಡಿರುವ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಮೂಲಕ ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಎಲ್ಲ ಸ್ವಾತಂತ್ರ್ಯ ಯೋಧರಿಗೆ ಗೌರವ ಸಮರ್ಪಣೆ ಮಾಡಬೇಕಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಸಮಾಜ ವಿರೋಧಿ ಶಕ್ತಿಗಳನ್ನು ಹುಟ್ಟಡಗಿಸುವ ಕೆಲಸವನ್ನು ಮಾಡಬೇಕಿದೆ. ಈ ಉದ್ದೇಶದ ಭಾಗವಾಗಿ ವೇದಿಕೆಯು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದರು. ಭಾರತೀಯ ನೌಕಾದಳದ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಚೋಂಡಿರ ಸುರೇಶ್‌ ಅಧ್ಯಕ್ಷತೆ ವಹಿಸಿದ್ದರು.

ಹಿಂ.ಜಾ.ವೇ(Hindu Jagaran Vedike). ವಿಭಾಗ ಸಂಯೋಜಕ್‌ ಮಹೇಶ್‌ ಕಡಗದಾಳು(Mahesh Kadagadalu), ಜಿಲ್ಲಾ ಸಂಯೋಜಕರಾದ ಕುಕ್ಕೇರ ಅಜಿತ್‌, ಜಿಲ್ಲಾ ಸಹ ಸಂಯೋಜಕ ಚೇತನ್‌ ಶಾಂತಿನಿಕೇತನ್‌, ಜಿಲ್ಲಾ ಸಮಿತಿಯ ಪ್ರಮುಖರಾದ ಲಕ್ಷ್ಮೇನಾರಾಯಣ, ಪವಿತ್ರಾ, ಶಾಂತೆಯಂಡ ತಿಮ್ಮಯ್ಯ, ಕುಮಾರ್‌ ಮೇಕೇರಿ, ಸುನಿಲ್‌ ಮಾದಾಪುರ, ವಿನಯ್‌ ಮಡಿಕೇರಿ ಹಾಗೂ ತಾಲೂಕು ಸಂಯೋಜಕರಾದ ಮುಗೇರನ ಬೆಳ್ಯಪ್ಪ, ಸಹ ಸಂಯೋಜಕರಾದ ಮನು ರೈ, ಚೇತನ್‌ ಚೆಟ್ಚಳ್ಳಿ, ದುರ್ಗೇಶ್‌ ಹಾಗೂ ಬಿಜೆಪಿ, ಎಬಿವಿಪಿ, ಸೇವಾ ಭಾರತಿ ಹಿಂ.ಜಾ.ವೇ. ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಾತೆಯರು ಹಾಜರಿದ್ದರು.

ದೇಶಭಕ್ತಿ ಹವಾ: ಇಂದು ಮನೆ ಮನೆಯಲ್ಲಿ ತಿರಂಗಾ ಹಾರಾ​ಟ

ಅಮೃತ್‌ ರಾಜ್‌ ಪ್ರಾರ್ಥಿಸಿದರು. ಸುನಿಲ್‌ ಮಾದಾಪುರ ಸ್ವಾಗತಿಸಿದರು. ವಿನಯ್‌ ನಿರೂಪಿಸಿದರು. ಮುಗೇರನ ಬೆಳ್ಯಪ್ಪ ವಂದಿಸಿದರು. ಪದ್ಮಪ್ರಿಯ ಅವರ ವಂದೇ ಮಾತರಂ ಗೀತೆ ಗಾಯನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.

click me!