ಬೆಳಗಾವಿ ಕೋಟೆಕೆರೆಯಲ್ಲಿ ಬೃಹತ್‌ ಧ್ವಜಾರೋಹಣ

By Kannadaprabha NewsFirst Published Aug 14, 2022, 10:19 AM IST
Highlights

 ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಘಳಿಗೆಯಲ್ಲಿ ದೇಶದ ಅತೀ ಎತ್ತರದ ಧ್ವಜಸ್ತಂಭಗಳಲ್ಲಿ ಒಂದಾಗಿರುವ ಕೋಟೆಕೆರೆ ಆವರಣದ 110 ಮೀಟರ್‌ ಎತ್ತರದ ಧ್ವಜಸ್ತಂಭದಲ್ಲಿ 9600 ಚದರ್‌ ಅಡಿಯ ಬೃಹತ್‌ ತ್ರಿವರ್ಣಧ್ವಜವನ್ನು ಹಾರಿಸಲಾಯಿತು.

ಬೆಳಗಾವಿ (ಆ.14) : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಘಳಿಗೆಯಲ್ಲಿ ದೇಶದ ಅತೀ ಎತ್ತರದ ಧ್ವಜಸ್ತಂಭಗಳಲ್ಲಿ ಒಂದಾಗಿರುವ ಇಲ್ಲಿನ ಕೋಟೆಕೆರೆ ಆವರಣದ 110 ಮೀಟರ್‌ ಎತ್ತರದ ಧ್ವಜಸ್ತಂಭದಲ್ಲಿ 9600 ಚದರ್‌ ಅಡಿಯ ಬೃಹತ್‌ ತ್ರಿವರ್ಣಧ್ವಜವು ಜಿಟಿಜಿಟಿ ಮಳೆಯ ನಡುವೆಯೂ ನೀಲಿಬಾನಂಗಳಲ್ಲಿ ಹಾರಿತು. 110 ಮೀಟರ್‌ ಎತ್ತರದ ಬೃಹತ್‌ ಧ್ವಜಸ್ತಂಭದಲ್ಲಿ ಅಳತೆಯ ತ್ರಿವರ್ಣ ಧ್ವಜವು ಆಕಾಶದಲ್ಲಿ ಗರಿಬಿಚ್ಚಿ ಪಟಪಟನೇ ಹಾರಾಡುತ್ತಿದ್ದಾಗ ವಂದೇ ಮಾತರಂ ಹಾಡು ಕೇಳಿ ರೋಮಾಂಚನಗೊಂಡ ನೆರೆದ ಜನರು ಭಾರತ ಮಾತಾಕೀ ಜೈ ಎಂದು ಜಯಘೋಷ ಹಾಕಿದರು.

ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಹರ್‌ಘರ್‌ ತಿರಂಗಾ(Har Ghar Tiranga) ಅಭಿಯಾನದ ಅಂಗವಾಗಿ ಕೋಟೆಕೆರೆ ಆವರಣದ ಬೃಹತ್‌ ಧ್ವಜಸ್ತಂಭದಲ್ಲಿ ಶನಿವಾರ ಬೃಹತ್‌ ಧ್ವಜಾರೋಹಣ ನಡೆಯಿತು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ(Anil Benake) ಧ್ವಜಾರೋಹಣ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ ಅಂಗವಾಗಿ ದೇಶದಾದ್ಯಂತ ಹರ್‌ಘರ್‌ ತಿರಂಗಾ ಅಭಿಯಾನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಭಾಗವಹಿಸಿ ಅಮೃತ ಮಹೋತ್ಸವದ ಸಂಭ್ರಮ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಬೆಳಗಾವಿ(Belagavi) ಕೋಟೆಕೆರೆಯಲ್ಲಿರುವ ದೇಶದ ಬೃಹತ್‌ ಧ್ವಜವನ್ನು ನಿರಂತರವಾಗಿ ಹಾರಿಸುವ ಯೋಚನೆಯಿದೆ. ಆದರೆ ಬೃಹತ್‌ ಧ್ವಜವು ಮಳೆಗಾಲದಲ್ಲಿ ನೆನೆದು ಹರಿಯುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಬೇಸಿಗೆ ಕಾಲದಲ್ಲಿ ನಿರಂತರವಾಗಿ ಧ್ವಜ ಹಾರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌, ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹನೀಯರನ್ನು ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ನಾವು ಸ್ಮರಿಸಬೇಕಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶದ ಬಗ್ಗೆ ಹೆಮ್ಮೆಯಾಗುತ್ತದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಬರುತ್ತದೆ ಎಂದು ಹೇಳಿದರು.

ಹರ್ ಘರ್ ತಿರಂಗಾ ಬದಲಿಗೆ ಹರ್ ಘರ್ ಪೇಡ್ ಪೌದಾ ಅಭಿಯಾನ ಮಾಡುವಂತೆ ಮೋದಿಗೆ ಮನವಿ

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ಭಾರತ ಸರ್ಕಾರವು ಧ್ವಜಸಂಹಿತೆಯನ್ನು ಮಾರ್ಪಾಡು ಮಾಡಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ಆಗಸ್ಟ್‌ 13ರಿಂದ ಆ. 15ರ ಸಂಜೆಯವರೆಗೆ ನಿರಂತರವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯರಾದ ಡಾ. ಸಾಬಣ್ಣ ತಳವಾರ, ಚೆನ್ನರಾಜ ಹಟ್ಟಿಹೊಳಿ, ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಿರಂಗಾ ಯಾತ್ರೆ; ಕಾಲ್ನಡಿಗೆ ಜಾಥಾ:

ಧ್ವಜಾರೋಹಣದ ಬಳಿಕ ಕೋಟೆಕೆರೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಹಾಯ್ದು ಚೆನ್ನಮ್ಮ ವೃತ್ತದವರೆಗೆ ಕಾಲ್ನಡಿಗೆ ಜಾಥಾ ಹಾಗೂ 75 ಮೀಟರ ಉದ್ದದ ತಿರಂಗಾ ಯಾತ್ರೆ ನಡೆಯಿತು. ಅನೇಕ ಗಣ್ಯರು, ಅಧಿಕಾರಿಗಳು, ನಾಗರಿಕರು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಅಶೋಕ ಸರ್ಕಲ್  ಆರ್‌ಟಿಒ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಚೆನ್ನಮ್ಮ ವೃತ್ತದವರೆಗೆ ಜಾಥಾ ನಡೆಯಿತು. ರಸ್ತೆಯ ಇಕ್ಕೆಗಳಲ್ಲಿ ನೆರೆದಿದ್ದ ಜನರು ವಂದೇ ಮಾತರಂ ಹಾಗೂ ಭಾರತ ಮಾತೆಗೆ ಜಯಘೋಷಣೆ ಹಾಕಿದರು.

75 ಮೀಟರ್‌ ಉದ್ದದ ತಿರಂಗಾ ಹಿಡಿದು ಮಕ್ಕಳು ಸಾಗುತ್ತಿರುವಾಗ ಎರಡೂ ಕಡೆಗಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ನಾಗರಿಕರು ದೇಶಪ್ರೇಮ ಮೆರೆದರು. ಶಾಸಕ ಅನಿಲ… ಬೆನಕೆ ಅವರು ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕೊನೆಯಲ್ಲಿ ವಂದೇ ಮಾತರಂ, ಬೋಲೋ ಭಾರತ ಮಾತಾ ಕೀ ಜೈ ಘೋಷಣೆಗಳ ಕರತಾಡನ ಹಾಗೂ ರಾಷ್ಟ್ರಗೀತೆಯೊಂದಿಗೆ ಜಾಥಾ ಸಮಾರೋಪಗೊಂಡಿತು.

click me!