Independence Day: ಕ್ವಿಟ್‌ ಇಂಡಿಯಾ ಚಳವಳಿಗೆ ಧುಮುಕಿ 18ರ ಹರೆಯದಲ್ಲೇ ವೀರ ಮರಣವನ್ನಪ್ಪಿದ ಸಿಂಗೂರು ಕುಟ್ಟಪ್ಪ!

By Kannadaprabha NewsFirst Published Aug 15, 2022, 8:33 AM IST
Highlights
  • ಕ್ವಿಟ್‌ ಇಂಡಿಯಾ ಚಳವಳಿಗೆ ಧುಮುಕಿ 18ರ ಹರೆಯದಲ್ಲೇ ವೀರ ಮರಣವನ್ನಪ್ಪಿದ ಸಿಂಗೂರು ಕುಟ್ಟಪ್ಪ
  • ಸೋಮವಾರಪೇಟೆ ತಾಲೂಕಿನ ಸಿಂಗೂರು ಗ್ರಾಮದ ಸಿಂಹವೆಂದೇ ಖ್ಯಾತಿ ಪಡೆದಿದ್ದ ಕುಟ್ಟಪ್ಪ

ವರದಿ: ಮುರಳೀಧರ್‌ ಶಾಂತಳ್ಳಿ

ಸೋಮವಾರಪೇಟೆ (ಆ.15) : ಭಾರತದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರನ್ನು ದೇಶಬಿಟ್ಟು ತೊಲಗಿ ಎಂದು ಘೋಷಿಸಿದ ಸಂದರ್ಭ ಹೋರಾಟಕ್ಕೆ ಧುಮುಕಿದ ಯುವಕರ ಪೈಕಿ ದೇಶಕ್ಕಾಗಿ ಕೊಡಗಿನ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದ 18ನೇ ವಯಸ್ಸಿನ ತರುಣ ಸಿಂಗೂರು ಕುಟ್ಟಪ್ಪ ಪೊಲೀಸರ ಲಾಠಿ ಏಟಿಗೆ ಬಲಿದಾನಗೈದರು. ಅದೇ ಕುಟುಂಬದ ಮತ್ತೋರ್ವ ಸೈನಿಕ ಸುಬೇದಾರ್‌ ಸಿಂಗೂರು ಮೇದಪ್ಪನವರೂ ಕೂಡ ಪಾಕ್‌ ಕುತಂತ್ರದಿಂದ ಕಾರ್ಗಿಲ್‌ ಯುದ್ಧದಲ್ಲಿ ಬಲಿಯಾದರು. ಒಂದೇ ಕುಟುಂಬದ ಇಬ್ಬರು ದೇಶಕ್ಕಾಗಿ ವೀರಮರಣ ಅಪ್ಪಿದ್ದು ದೇಶದ ಇತಿಹಾಸದಲ್ಲೇ ಅಪರೂಪ.

India@75:ಕ್ವಿಟ್ ಇಂಡಿಯಾದಲ್ಲಿ ಮಡಿಕೇರಿ ವಿದ್ಯಾರ್ಥಿಗಳ ಕಿಚ್ಚು

ಸಿಂಗೂರು((Singooru) ಗ್ರಾಮದ ಮಾದಪ್ಪ ಮತ್ತು ಗಂಗಮ್ಮನವರ ಹಿರಿಯ ಪುತ್ರನಾಗಿ 1924ರಲ್ಲಿ ಜನಿಸಿದ ಕುಟ್ಟಪ್ಪ(Kuttappa)ನವರು ಮಡಿಕೇರಿ(Madikeri)ಯ ಸೆಂಟ್ರಲ್‌ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಸಂದರ್ಭ 1942ರ ಆಗಸ್ಟ್‌ 14ರಂದು ಕೊಡಗಿನ ವಿದ್ಯಾರ್ಥಿಗಳಾದ ಅಜ್ಜಿಕುಟ್ಟೀರ ಅಪ್ಪಣ್ಣ, ಪಾರುವಂಗಡ ಉತ್ತಪ್ಪ(Appanna Paruvangada Uttappa), ಮಲಚೀರ ಮುತ್ತಣ್ಣ, ಕೋದಂಡ ದೇವಯ್ಯ, ಕರ್ತಮಾಡ ಸುಬ್ಬಯ್ಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಮಡಿಕೇರಿಯಲ್ಲಿ ಹೋರಾಟ ಆರಂಭಿಸಿದರು. ಇವರೆನ್ನೆಲ್ಲಾ ಪೊಲೀಸರು ಬಂಧಿಸಿ ಸೆರೆಮನೆಗೆ ತಳ್ಳಿದರು. ಈ ಸಂದರ್ಭ ಬ್ರಿಟಿಷ್‌ ಅಧಿಕಾರಿಗಳ ಆಕ್ರೋಶಕ್ಕೆ ಗುರಿಯಾದ ವಿದ್ಯಾರ್ಥಿಗಳ ಮೇಲೆ ನಡೆಸಿದ ಲಾಠಿ ಪ್ರಹಾರಕ್ಕೆ ತೀವ್ರವಾಗಿ ಗಾಯಗೊಂಡ ಸಿಂಗೂರು ಕುಟ್ಟಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಯಿತು. ಚಿಕತ್ಸೆ ಫಲಕಾರಿಯಾದೆ ಕುಟ್ಟಪ್ಪ ತನ್ನ 18ನೇ ವಯಸ್ಸಿನಲ್ಲಿಯೇ ಮರಣ ಹೊಂದಿದರು.

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ತೀವ್ರವಾಗಿದ್ದ ದಿನಗಳಲ್ಲಿ 1942ರ ಆಗಸ್ಟ್‌ 8ರಂದು ಮುಂಬೈನ ಆಗಸ್ಟ್‌ ಕ್ರಾಂತಿ ಮೈದಾನದಲ್ಲಿ ಮಹಾತ್ಮ ಗಾಂಧೀಜಿ(Mahatma Gandhiji) ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ(quit india) ಎಂದು ಹೋರಾಟ ಆರಂಭಿಸಿದ ಸಂದರ್ಭ ಕೊಡಗಿ(Kodagu)ನಲ್ಲಿಯೂ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿತು. ಕ್ವಿಟ್‌ ಇಂಡಿಯಾ ಚಳವಳಿಗೆ ಬೆಂಬಲಿಸಲು ಕೊಡಗು ಸತ್ಯಾಗ್ರಹ ಸಮಿತಿಯ ಪ್ರಮುಖರಾದ ಪಂದ್ಯಂಡ ಬೆಳ್ಯಪ್ಪ ಮತ್ತು ಅವರ ಪತ್ನಿ ಸೀತಾ, ಕೊಳ್ಳಿಮಾಡ ಕರುಂಬಯ್ಯ, ಮುಲ್ಲೇಂಗಡ ಚಂಗಪ್ಪ, ಕಾಕಮಾಡ ನಾಣಯ್ಯ, ಚೆಪ್ಪುಡಿರ ಪೂಣಚ್ಚ ಸೇರಿದಂತೆ ಹಲವು ನಾಯಕರು ಅಣಿಯಾದರು. ಕೊಡಗಿನಲ್ಲಿ ಸ್ವಾತಂತ್ಯದ ಕಹಳೆಯನ್ನು ಮೊಳಗಿಸಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಕ್ಕೆ ತಮ್ಮ ಜೀವದ ಹಂಗು ತೊರೆದು ಶ್ರಮಿಸಿದರು. ಇವರುಗಳ ಮನವಿ ಮೇರೆಗೆ ಗಾಂಧೀಜಿಯವರು 1934ರ ಫೆಬ್ರವರಿ 21 ರಿಂದ 23 ರವರೆಗೆ ಕೊಡಗಿಗೆ ಭೇಟಿ ನೀಡಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದರು. ಇದರಿಂದ ಪ್ರೇರಿತರಾದ ಕೊಡಗಿನ ಹಲವು ಹೋರಾಟಗಾರರು ಜೀವ ತೆತ್ತಾದರೂ ಸರಿ ದೇಶಕ್ಕೆ ಸ್ವಾತಂತ್ರ್ಯ ತರಲು ಮುಂದಾದರು.

Indian Independence Day: ನಮ್ಮ ತಿರಂಗಕ್ಕೆ ಇರುವ ಶಕ್ತಿ, ಅಮೃತ ಮಹೋತ್ಸವದಲ್ಲಿ ಅನಾವರಣಗೊಂಡಿದೆ: ಮೋದಿ

ಬಾಲ್ಯದಿಂದಲೇ ಹೋರಾಟದ ಕಿಚ್ಚು ಹಚ್ಚಿಸಿಕೊಂಡಿದ್ದ ಕುಟ್ಟಪ್ಪ!

ಕೊಡಗಿನ ಹಿರಿಯ ರಾಜಕೀಯ ಮುತ್ಸದ್ಧಿ ಸೋಮವಾರಪೇಟೆ(Somavarapete)ಯ ಚೌಡ್ಲು ಗ್ರಾಮದ, ವಿಧಾನಪರಿಷತ್‌ ಮಾಜಿ ಸದಸ್ಯ ದಿ.ಸಿ.ಕೆ.ಕಾಳಪ್ಪ(C.K.Kalappa) ನವರ ಕುಟುಂಬ, ಸಿಂಗೂರು ಮಾದಪ್ಪನವರ ಕುಟುಂಬ ಸೇರಿದಂತೆ ಅವರ ಹಲವು ಸ್ನೇಹಿತರು, ಬೆಂಬಲಿಗರು ಆದಾಗಲೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಸಿಂಗೂರು ಮಾದಪ್ಪನವರು 1938ರಲ್ಲಿಯೇ ಡಿಸ್ಟ್ರಿಕ್ಟ್ ಬೋರ್ಡ್‌ ಸದಸ್ಯರಾಗಿ ಸಮಾಜ ಸೇವೆಯನ್ನು ಆರಂಭಿಸಿದರು. ಇವರಿಂದ ಪ್ರೇರಿತರಾದ ಕುಟ್ಟಪ್ಪ ಬಾಲ್ಯದಿಂದಲೇ ಸ್ವಾತಂತ್ರ್ಯ ಚಳವಳಿಯ ಹೋರಾಟವನ್ನು ಕಣ್ಣಾರೆ ಕಂಡು ತಾವು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ತೀರ್ಮಾನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯಲ್ಲಿ ಪೂರೈಸಿದ ನಂತರ, ಸೋಮವಾರಪೇಟೆಯಲ್ಲಿ ಹೈಸ್ಕೂಲ್‌ ಇಲ್ಲದ್ದರಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಡಿಕೇರಿಯ ಸೆಂಟ್ರಲ್‌ ಹೈಸ್ಕೂಲ್‌ಗೆ ಸೇರ್ಪಡೆಗೊಂಡರು. ಅಲ್ಲಿ ಇವರಿಗೆ ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಹಲವು ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಸಂಪರ್ಕ ದೊರೆಯಿತು. ಆದರೆ ಸ್ವಾತಂತ್ರ್ಯ ಹೋರಾಟ ಪೂರ್ಣಗೊಳ್ಳುವ ಮುನ್ನವೇ 1942ರ ಆಗಸ್ಟ್‌ 14 ರಂದು ಬ್ರಿಟಿಷರ ಲಾಠಿ ಏಟಿಗೆ ಬಲಿಯಾಗಿ 18 ವರ್ಷದ ತರುಣ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತೆರಬೇಕಾಯಿತು. ಇವರ ಕುಟುಂಬದ ಸುಬೇದಾರ್‌ ಸಿಂಗೂರು ಮೇದಪ್ಪ ಅವರು ಪಾಕಿಸ್ತಾನದ ಸೈನ್ಯದ ವಿರುದ್ಧ ಜರುಗಿದ 1999ರ ಕಾರ್ಗಿಲ್‌ ಯುದ್ಧದಲ್ಲಿ ವೀರಮರಣವನ್ನಪ್ಪಿದರು.

ಅಭಿಪ್ರಾಯಗಳು:

ಸಿಂಗೂರು ಕುಟ್ಟಪ್ಪನವರ ಕುಟುಂಬ ಅಪ್ಪದ ದೇಶ ಪ್ರೇಮವನ್ನು ಮೈಗೂಡಿಸಿಕೊಂಡು ಬಂದಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಹೋರಾಡಿ ತನ್ನ 18ನೇ ವಯಸ್ಸಿನಲ್ಲಿಯೇ ಪ್ರಾಣತೆತ್ತ ಯುವಕ ಕುಟ್ಟಪ್ಪನವರ ತ್ಯಾಗ-ಬಲಿದಾನವನ್ನು ಇಂದು ನಾವೆಲ್ಲರೂ ಸ್ಮರಿಸಬೇಕಾಗಿದೆ. ಇದರೊಂದಿಗೆ ವೀರಯೋಧ ಸಿಂಗೂರು ಮೇದಪ್ಪನವರೂ ಕೂಡ 1999ರ ಕಾರ್ಗಿಲ್‌ ಯುದ್ಧದಲ್ಲಿ ವೀರಮರಣವನ್ನು ಅರ್ಪಿಸಿದ್ದರು. ಜಿಲ್ಲೆಯ ಹಲವು ಯುವಕರಿಗೆ ಮಾದರಿಯಾಗಿದ್ದ ಕುಟ್ಟಪ್ಪ ಮೃತಪಟ್ಟು 80ವರ್ಷಗಳು ತುಂಬುತ್ತಿದ್ದು, ಅವರ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ

- ಎಸ್‌.ಎಂ. ಚಂಗಪ್ಪ, ಅಧ್ಯಕ್ಷರು, ಜಿಲ್ಲಾ ಒಕ್ಕಲಿಗರ ಸಂಘ, ಕೊಡಗು ಜಿಲ್ಲೆ

ನನ್ನ ಅಣ್ಣ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರ ಲಾಠಿ ಏಟಿಗೆ ಬಲಿಯಾದ ಸಂದರ್ಭ ಚಿಕ್ಕವನಾಗಿದ್ದ ನನಗೆ ಅಷ್ಟೇನೂ ತಿಳಿದಿಲ್ಲ. ಆದರೆ ವಿದ್ಯಾರ್ಥಿ ದಿಸೆಯಿಂದಲೇ ಅವರ ಹೋರಾಟ, ದೇಶಪ್ರೇಮದ ಬಗ್ಗೆ ಅಪ್ಪ-ಅಮ್ಮನಿಂದ ಕೇಳಿ ತಿಳಿದು ಹೆಮ್ಮೆಯೆನಿಸಿತ್ತು. ಇಂತಹ ಪುತ್ರನನ್ನು ಪಡೆದ ನಮ್ಮ ಕುಟುಂಬ ಮತ್ತು ನಮ್ಮ ಗ್ರಾಮಕ್ಕೆ ಹೆಮ್ಮೆಯೆನಿಸುತ್ತಿದೆ. ಅವರ ಆದರ್ಶವನ್ನು ಮುಂದಿನ ಯುವಪೀಳಿಗೆ ಮುಂದುವರಿಸಬೇಕಾಗಿದೆ

- ಸಿಂಗೂರು ಎಂ. ಕೃಷ್ಣಕಾಂತ್‌, ಕುಟ್ಟಪ್ಪನವರ ಸಹೋದರ

click me!