World Cup
ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಕಿವೀಸ್ಗೆ ಶರಣಾಗುವುದರ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತ ಸಮಿತಿ ನಾಯಕ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಜತೆ ವಿಮರ್ಶೆ ಸಭೆ ನಡೆಸಲಿದ್ದು, ಈ ಇಬ್ಬರಿಗೂ ಕಠಿಣ ಪ್ರಶ್ನೆಗಳು ಎದುರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಲಂಡನ್(ಜು.13): ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ), ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಪ್ರಧಾನ ಕೋಚ್ ರವಿಶಾಸ್ತ್ರಿ ಹಾಗೂ ಆಯ್ಕೆ ಸಮಿತಿ ಜತೆ ವಿಶ್ವಕಪ್ ವಿಮರ್ಶೆ ಸಭೆ ನಡೆಸಲಿದೆ. ಜುಲೈ 14, ಭಾನುವಾರ ಲಂಡನ್ನಿಂದ ಮುಂಬೈಗೆ ಆಟಗಾರರು ವಾಪಸಾಗಲಿದ್ದು, ಮುಂದಿನ ವಾರ ಸಭೆ ನಡೆಯಲಿದೆ ಎನ್ನಲಾಗಿದೆ.
ಮಿಸ್ ಆಯ್ತು ICC ಪ್ಲ್ಯಾನ್: ಶ್ರೇಷ್ಠ ತಂಡಕ್ಕಿಲ್ಲ ವಿಶ್ವಕಪ್..!
ವಿಶ್ವಕಪ್ಗೆ ಆಟಗಾರರ ಆಯ್ಕೆ, ಬದಲಿ ಆಟಗಾರರ ಸೇರ್ಪಡೆ, ಸೆಮಿಫೈನಲ್ನಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಆದ ಎಡವಟ್ಟು ಸೇರಿದಂತೆ ಕೆಲ ಪ್ರಮುಖ ಪ್ರಶ್ನೆಗಳನ್ನು ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್, ಸದಸ್ಯರಾದ ಡಯಾನ ಎಡುಲ್ಜಿ ಹಾಗೂ ರವಿ ತೊಡ್ಗೆ, ಕೊಹ್ಲಿ ಹಾಗೂ ಶಾಸ್ತ್ರಿ ಮುಂದಿಡಲಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ 2020ರ ಟಿ20 ವಿಶ್ವಕಪ್ಗೆ ಮಾರ್ಗಸೂಚಿ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಏನೇನು ಪ್ರಶ್ನೆ ಕೇಳಬಹುದು?
* ವಿಶ್ವಕಪ್ಗೆ ಅಂಬಟಿ ರಾಯುಡು ಆಯ್ಕೆ ಸೂಕ್ತವಲ್ಲ ಎನಿಸಿದ್ದರೂ, ಕಳೆದೊಂದು ವರ್ಷದಲ್ಲಿ ಅವರಿಗೆ ಸತತವಾಗಿ ಅವಕಾಶ ನೀಡಿದ್ದೇಕೆ?
* ತಂಡದಲ್ಲಿ ಮೂವರು ವಿಕೆಟ್ ಕೀಪರ್ಗಳಿಗೆ ಸ್ಥಾನ ನೀಡಿದ್ದೇಕೆ?
* ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ತೋರದ, ಐಪಿಎಲ್ನಲ್ಲೂ ಲಯ ಕಾಣದ ದಿನೇಶ್ ಕಾರ್ತಿಕ್ರನ್ನು ಆಯ್ಕೆ ಮಾಡಿದ್ದೇಕೆ?
* ಸೆಮಿಫೈನಲ್ನಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಿದ್ದೇಕೆ?