ಏನು ಪ್ರಾರ್ಥನೆ ಮಾಡಬೇಕೋ ಮಾಡಿದ್ದೇನೆ, ಕೋಡಿಶ್ರೀಗಳ ಭೇಟಿ ಮಾಡಿದ ಡಿಕೆ ಶಿವಕುಮಾರ್

Published : Jul 26, 2025, 09:09 PM IST
DK Shivakumar

ಸಾರಾಂಶ

ಡಿಸಿಎಂ ಡಿಕೆ ಶಿವಕುಮಾರ್ ಕೋಡಿ ಶ್ರೀಗಳ ಭೇಟಿ ಮಾಡಿದ್ದಾರೆ. ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಡಿಕೆಶಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ನಾನು ಏನು ಪ್ರಾರ್ಥನೆ ಬೇಕೋ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹಾಸನ (ಜು.26) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಿಢೀರ್ ಕೋಡಿಶ್ರೀಗಳ ಭೇಟಿ ಮಾಡಿದ್ದಾರೆ. ಹಾಸನ ಜಿಲ್ಲೆಯ ‌ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿ ಮಠಕ್ಕೆ ಭೇಟಿ ನೀಡಿ ದರ್ಶನ ಮಾಡಿದ್ದಾರೆ. ಕೋಡಿ ಶ್ರೀಗಳ ಭೇಟಿ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಏನು ಪ್ರಾರ್ಥನೆ ಮಾಡಬೇಕು ಮಾಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ಸ್ವಾಮೀಗಳು ಊರಿನಲ್ಲಿ ಇದ್ದಾರೆ ಎಂಬುದು ಗೊತ್ತಾಯ್ತು. ಹೀಗಾಗಿ ಭೇಟಿಗೆ ಬಂದಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಡಿಕೆಶಿ ವಿಶೇಷ ಪ್ರಾರ್ಥನೆ

ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಡಿಕೆಶಿವಕುಮಾರ್ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದರೆ. ಈ ವೇಳೆ ನಾನು ಏನು ಪಾರ್ಥನೆ ಮಾಡಬೇಕು ಮಾಡಿದ್ದೇನೆ ಎಂದಿದ್ದಾರೆ. ಈಗಷ್ಟೇ ರಾಜ್ಯದ ನಾಯಕತ್ವ ಬದಲಾವಣೆ ಚರ್ಚೆ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಪ್ರಾರ್ಥನೆ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

ಧರ್ಮದ ಬಗ್ಗೆ, ದೇವರ ಬಗ್ಗೆ, ಸಂಸ್ಕೃತಿ ಬಗ್ಗೆ, ಆಚಾರ-ವಿಚಾರಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇನೆ. ಯಾವುದೇ ಧರ್ಮದಲ್ಲಾಗಲಿ ಒಂದು ಶಕ್ತಿ ಇದೆ. ಕೆಲವರು ನಂಬಬಹುದು, ಕೆಲವರು ನಂಬದೇ ಇರಬಹುದು. ಆದರೆ ನನಗೆ ನಂಬಿಕೆ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಂಬಿಕೆ ಇರುವ ಕಾರಣ ಇಷ್ಟು ದೂರ ಬಂದಿದ್ದೇನೆ. ಈ ಹಿಂದೆ ನಾನು, ಮನೆಯವರು ಈ ಕ್ಷೇತ್ರಕ್ಕೆ ಬಂದಿದ್ದೇವು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಜೇನುಕಲ್ ಬೆಟ್ಟಕ್ಕೂ ನಾನು ಹೋಗಿರಲಿಲ್ಲ. ಆದರೆ ಇದೀಗ ಪೀಠಕ್ಕೆ ಭೇಟಿ ಮಾಡಿದ್ದೇನೆ. ಭೇಟಿ ಅತೀವ ಸಂತಸ ತಂದಿದೆ. ಉತ್ತಮವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸುರ್ಜೆವಾಲ ಅಧಿಕಾರಿಗಳ ಸಭೆ ವಿಚಾರಕ್ಕೆ ಪ್ರತಿಕ್ರಿಯೆ

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಅನ್ನೋ ವಿಪಕ್ಷಗಳ ಆರೋಪಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ನಡೆದಿಲ್ಲ. ಇವೆಲ್ಲಾ ಸುಳ್ಳು, ಸುರ್ಜೆವಾಲ ಯಾವ ಅಧಿಕಾರಿಯನ್ನೂ ಭೇಟಿ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಮ್ಮ ಸರ್ಕಾರನೇ ಇರಬೇಕಾದರೆ ಏನಾದರೂ ಇದ್ದರೆ ನಮಗೆ ಹೇಳ್ತಾರೆ. ನಾವು ಸರ್ಕಾರದವರು, ಏನಾದರೂ ತಪ್ಪುಗಳಿದ್ದರೆ ತಿದ್ದಿಕೊಳ್ಳುತ್ತೇವೆ. ಇದನ್ನು ಹೊರತುಪಡಿಸಿದರೆ, ಸುರ್ಜೆವಾಲ ಅವರಾಗಲಿ ಯಾರೇ ಆಗಲಿ, ನಮ್ಮ ರಾಜ್ಯದಲ್ಲಿರುವಂತಹ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಒಬ್ಬ ಆಫೀಸರ್‌ಗೆ ಇದುವರೆಗೂ ಫೋನ್ ಮಾಡಿಲ್ಲ, ಅವರು ಫೋನ್ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದೇ ವೇಳೆ ಸುರ್ಜೆವಾಲ ಸಭೆ ಬಗ್ಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆಯಿಂದಲೇ ವಿವಾದ ಜೋರಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ ಎಂದು ರಾಜಣ್ಣ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದಾರೆ. ರಾಜಣ್ಣ ಅವರಿಗೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಉತ್ತರ ಕೊಟ್ಟ ಮೇಲೆ ನಾನೇನು ಉತ್ತರ ಕೊಡೋದು ಇದೆ. ಮುಖ್ಯಮಂತ್ರಿಗಳಿಗೆ ನನಗಿಂತ ಮಾಹಿತಿ ಇದೆ ಎಂದಿದ್ದಾರೆ.

ರಾಜ್ಯದಲ್ಲಿ ಗೊಬ್ಬರ ಕೊರತೆ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡಬೇಕಿರುವುದು ಕೇಂದ್ರ ಸರ್ಕಾರದ ಕೆಲವು ಸಂಸ್ಥೆಗಳು. ಈಗ ಹೆಚ್ಚು ರೈತರು ಬೆಳೆ ಹಾಕಿದ್ದಾರೆ. ಹೀಗಾಗಿ ಗೊಬ್ಬರಕ್ಕಾಗಿ ನಮ್ಮ ಸರ್ಕಾರ ಒತ್ತಾಯ ಮಾಡುತ್ತಿದೆ. ರೈತರು ತಾಳ್ಮೆಯಿಂದ ಇರಲಿ, ಅದಕ್ಕೆ ಏನು ವ್ಯವಸ್ಥೆ ಬೇಕು ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

 

PREV
Read more Articles on
click me!

Recommended Stories

Hassan: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಅದಲು ಬದಲು: 6 ವಿದ್ಯಾರ್ಥಿಗಳಿಗೆ ಅನ್ಯಾಯ
Heartbreaking Incident in Hassan: ಸಾಲ ಮಾಡಿ ತಂದ ಮೇವಿನ ಬಣವೆಗೆ ಬೆಂಕಿ, ರೈತ ಕಣ್ಣೀರು