3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ; ರಾಜ್ಯಾದ್ಯಂತ ಬಿಜೆಪಿ ಹಿಂದೂಪರ ಕಾರ್ಯಕರ್ತರಿಂದ ವಿಶೇಷ ಪೂಜೆ, ಹರಕೆ!

First Published Jun 9, 2024, 1:05 PM IST

ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ಕಲಬುರಗಿ, ವಿಜಯಪುರ, ಹುಬ್ಬಳ್ಳಿ,ರಾಯಚೂರು ಸೇರಿ ರಾಜ್ಯಾದ್ಯಂತ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ನಡೆಸಿದರು.
 

ಕಲಬುರಗಿ ನಗರದ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು. ಈ ವೇಳೆ ಭಾರತ್ ಮಾತಾ, ಜೈಶ್ರೀರಾಮ್, ಜೈನರೇಂದ್ರ ಮೋದಿ ಎಂದು ಘೋಷಣೆ ಕೂಗುತ್ತಾ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಕೇಸರಿ ಬಣ್ಣ ಎರಚಿ ಸಂಭ್ರಮಾಚರಣೆ ಮಾಡಿದರು. 
 

ವಿಜಯನಗರದಲ್ಲಿ ಮೋದಿಗಾಗಿ ವಿಶೇಷ ಪೂಜೆ

ವಿಜಯನಗರ ಜಿಲ್ಲೆಯ ಹೊಸಪೇಟೆ ಗಣೇಶ್ ದೇವಾಲಯದಲ್ಲಿ ನರೇಂದ್ರ ಮೋದಿಯವರ ಆರೋಗ್ಯವೃದ್ಧಿಗಾಗಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಗಣೇಶ ದೇಗುಲದಲ್ಲಿ ಪಂಚಾಮೃತ ಅಭಿಷೇಕ, ಪಷ್ಪಾಭಿಷೇಕ ಮಾಡಿದರು. ಈ ವೇಳೆ ಮಾಜಿ ಸಚಿವ ಆನಂದ್ ಸಿಂಗ್ ಪುತ್ರ(ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ) ಸಿದ್ಧಾರ್ಥ್ ಸಿಂಗ್ ನೇತೃತ್ವದಲ್ಲಿ ನಡೆಯಿತು.

ದಾವಣಗೆರೆಯಲ್ಲಿ ಲಾಡು ತಯಾರಿಸಿ ಮನೆಮನೆಗೆ ವಿತರಿಸಿದ ಬಿಜೆಪಿ ಕಾರ್ಯಕರ್ತರು. ನಿನ್ನೆ ರಾತ್ರಿಯೆಲ್ಲ ಬಾಣಸಿಗರಿಂದ ಲಾಡು ತಯಾರಿಸಿದ್ದಾರೆ. ಇಂದು ಬೆಳಗ್ಗೆಯಿಂದ ಮನೆಮನೆಗೆ ಸಿಹಿ ವಿತರಿಸುತ್ತಿರುವ ಬಿಜೆಪಿ ಕಾರ್ಯಕರ್ತರು. ದಾವಣಗೆರೆ ಸೇರಿದಂತೆ ಅವರಗೆರೆ ಗ್ರಾಮದಲ್ಲೂ ಲಾಡು ವಿತರಣೆ. ಈ ವೇಳೆ ಜೈ ಶ್ರೀರಾಮ, ಜೈ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು.

101 ಈಡುಗಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿ

ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು, ಬೊಮ್ಮಾಯಿ ಗೆಲ್ಲಬೇಕು ಎಂದು ಹರಕೆ ಹೊತ್ತಿದ್ದ ಮುಂಡರಗಿ ಪಟ್ಟಣದ ಶಾಮರಾಜ್ ಎಂಬ ಅಭಿಮಾನಿ ಇದೀಗ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ಲಕ್ಷ್ಮೀಕನಕ ನರಸಿಂಹ ದೇವರಿಗೆ 101 ಈಡುಗಾಯಿ ಒಡೆದು ಹರಕೆ ತೀರಿಸಿದ್ದಾನೆ.

Latest Videos

click me!