ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಕತ್ತಲು ಭಾಗ್ಯ; ಬೆಳಕಿಲ್ಲದೆ ಸಾಲು ಸಾಲು ಅಪಘಾತ!

First Published Jul 11, 2024, 2:35 PM IST

ಇಂಧನ ಸಚಿವ ಕೆ ಜೆ ಜಾರ್ಜ್ ಜಿಲ್ಲಾಉಸ್ತುವಾರಿ ಹೊಣೆ ಹೊತ್ತಿರುವ ಜಿಲ್ಲೆಯಲ್ಲೇ ಕತ್ತಲು. ಸೂರ್ಯ ಮುಳುಗುತ್ತಿದ್ದಂತೆ ಜಿಲ್ಲಾ ಕೇಂದ್ರದಲ್ಲಿ ಸ್ವಾಗತ ಕೋರುತ್ತದೆ ಕತ್ತಲು. ಬೆಳಕಿನ ವ್ಯವಸ್ಥೆ ಇಲ್ಲದೆ ಸಾಲು ಸಾಲು ವಾಹನಗಳು ಅಪಘಾತಕ್ಕೀಡಾಗುತ್ತಿವೆ.

ಎರಡು ವರ್ಷಗಳೇ ಕಳೆದರೂ ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಬಳಿ  ಕಡೂರು–ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ  ಟ್ಯೂಬಲರ್ ಕಂಬಗಳಿಗೆ ಬೆಳಕಿನ ಭಾಗ್ಯ ಸಿಕ್ಕಿಲ್ಲ. ರಸ್ತೆ ಮಾರ್ಗದ ಉದ್ದಕ್ಕೂ ರಾತ್ರಿ ಸಂಪೂರ್ಣ ಕತ್ತಲೆ ಆವರಿಸುವ ಕಾರಣ ವಾಹನ ಸಂಚಾರಕ್ಕೆ ಅಡಚಣೆಯಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ.ಸ್ವತಃ ಇಂಧನ ಸಚಿವರಾಗಿರುವ ಕೆ ಜೆ ಜಾರ್ಜ್ ಜಿಲ್ಲಾಉಸ್ತುವಾರಿ ಹೊಣೆಹೊತ್ತಿರುವ ಜಿಲ್ಲೆಯಲ್ಲೇ ಕತ್ತಲು ಭಾಗ್ಯ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಬೇಲೂರು–ಹಿರೇಮಗಳೂರು ರಸ್ತೆ, ಕೆ.ಎಂ. ರಸ್ತೆ, ಎಂ.ಜಿ ರಸ್ತೆ ಒಳಗೊಂಡಂತೆ ನಗರ ವ್ಯಾಪ್ತಿಯಲ್ಲಿ ವರ್ಷದ ಈವರೆಗೂ ಒಟ್ಟು 200ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ನಗರ ಸಂಚಾರಿ ಠಾಣೆಯಲ್ಲಿ ದಾಖಲಾಗಿವೆ. ಈ ಪೈಕಿ ಕೆ.ಎಂ. ರಸ್ತೆಯಲ್ಲಿಯೇ (ದಂಟರಮಕ್ಕಿ)  25ಪ್ರಕರಣಗಳು ದಾಖಲಾಗಿದ್ದು ಬಹುತೇಕ ಮೋಟಾರ್ ಬೈಕ್ ಪಾದಾಚಾರಿಗೆ ಡಿಕ್ಕಿ ಹಾಗೂ ಕಾರು ಅಪಘಾತಗಳೇ ಹೆಚ್ಚಾಗಿದೆ. ಸುಮಾರು ಎರಡುವರೆ ವರ್ಷದ ಹಿಂದೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಚಿಕ್ಕಮಗಳೂರು–ಕಡೂರು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಅಂದು ರಸ್ತೆ ವಿಸ್ತರಣೆ ನೆಪದಲ್ಲಿ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿತ್ತು. ಈಗ ಹೊಸದಾಗಿ ಕಂಬಗಳನ್ನು ಅಳವಡಿಸಿದ್ದರೂ ನಗರವ್ಯಾಪ್ತಿಯ ಕತ್ರಿಮಾರಮ್ಮ ದೇವಾಲಯದ ಮಾರ್ಗದಿಂದ ಎಪಿಎಂಸಿ, ಹೌಸಿಂಗ್ ಬೋರ್ಡ್, ಕಣಿವೆ ರುದ್ರೇಶ್ವರ ದೇವಾಲಯದವರೆಗೂ ರಸ್ತೆಬದಿಯಲ್ಲಿ ದೀಪಗಳಿಲ್ಲದೇ ನಗರವನ್ನು ಕತ್ತಲೆಯಲ್ಲಿಡಲಾಗಿದೆ.
 

Latest Videos


ಮಲೆನಾಡಿನ ಭಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಶನಿವಾರ, ಭಾನುವಾರದ ದಿನಗಳಲ್ಲಿ ಜಿಲ್ಲೆಗೆ ಪ್ರವಾಸಿಗರು ಭೇಟಿ ಕೊಡುತ್ತಾರೆ. ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ರಾತ್ರಿಯ ವೇಳೆಯಲ್ಲಿ  ಜಿಲ್ಲಾ ಕೇಂದ್ರಕ್ಕೆ ಎಂಟ್ರಿಕೊಟ್ಟಾಗ ಅವರನ್ನು ಕತ್ತಲು ಸ್ವಾಗತಕೊರುವ ದುಸ್ಥಿತಿ ಎದುರಾಗಿದೆ.ನಗರವ್ಯಾಪ್ತಿಯ ಹೆದ್ದಾರಿಯಲ್ಲಿ ಟ್ಯೂಬಲರ್ ಕಂಬಕ್ಕೆ ವಿದ್ಯುತ್ ದೀಪ, ಹೈಮಾಸ್ಟ್ ಅಳವಡಿಸಲು ನಗರೋತ್ಥಾನ ಹಂತ 4 ರ ಯೋಜನೆಯಡಿ ಈ ಹಿಂದೆ ಎರಡು ಬಾರಿ ಇ–ಟೆಂಡರ್ಗೆ ಆಹ್ವಾನಿಸಲಾಗಿತ್ತು. 
 

ಆದರೆ ಟೆಂಡರ್ದಾರರ ಅನರ್ಹತೆ, ತಾಂತ್ರಿಕತೆ ಆಕ್ಷೇಪಣೆ ಕಾರಣಾಂತರಗಳಿಂದ ಟೆಂಡರ್ ಪ್ರಕ್ರಿಯೆ ಸಾಧ್ಯವಾಗಲಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಟೆಂಡರ್ ಹಿಂಪಡೆಯಲಾಗಿತ್ತು. ರಾತ್ರಿ ಸಮಯ ಆ ಮಾರ್ಗದಲ್ಲಿ ವಾಹನಗಳು ವೇಗವಾಗಿ ಸಂಚರಿಸುವ ಕಾರಣ  ಪಾದಾಚಾರಿಗಳು ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. 

ಅಧಿಕಾರಿಗಳು ಮಾತ್ರ ಕಣ್ಮಚ್ಚಿ ಕುಳಿತಿದ್ದಾರೆ.  ಎಂಬುದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಕೇಂದ್ರದಲ್ಲೇ ಇಂತಹ ದುಸ್ಥಿತಿ ಇರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಕನ್ನಡಿ ಎನ್ನುವಂತಾಗಿದೆ. ಇನ್ನಾದ್ರೂ ತಕ್ಷಣ ಎಚ್ಚೇತುಗೊಂಡು ಅಧಿಕಾರಿಗಳು, ಜನಪ್ರತಿನಿಧಿಗಳು ಬೆಳಕಿನ ಭಾಗ್ಯ ನೀಡುವತ್ತ ಗಮನಹರಿಸಬೇಕಾಗಿದೆ..

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

click me!