ರಾಜ್ಯದ 8 ಸರ್ಕಾರಿ ಭ್ರಷ್ಟ ಅಧಿಕಾರಿಗಳ 42ಸ್ಥಳಗಳಲ್ಲಿ ಲೋಕಾ ಶೋಧ ಮುಕ್ತಾಯ, ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!

Published : Mar 05, 2026, 09:56 PM IST

ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ  8 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 42 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಸ್ಥಿರ ಮತ್ತು ಚರ ಆಸ್ತಿಗಳು ಪತ್ತೆಯಾಗಿದೆ.

PREV
19
ಒಟ್ಟು 42 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ

ಬೆಂಗಳೂರು: ಅಕ್ರಮ ಆಸ್ತಿ ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧ ಭಾಗಗಳಲ್ಲಿ Karnataka Lokayukta ಅಧಿಕಾರಿಗಳು ಭಾರೀ ದಾಳಿ ನಡೆಸಿದ್ದಾರೆ. ಎಂಟು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 42 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ದಾಳಿಯ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ರಾಜ್ಯದಾದ್ಯಂತ ಒಟ್ಟು ಸುಮಾರು ₹35.65 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ₹24.05 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹಾಗೂ ₹11.59 ಕೋಟಿ ಮೌಲ್ಯದ ಚರ ಆಸ್ತಿ ಸೇರಿವೆ ಎಂದು ತಿಳಿದುಬಂದಿದೆ.

29
ಶಶಿಧರ್ ಆರ್ ಅಕ್ರಮ ₹3.43 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಬೆಂಗಳೂರು ಜಿಲ್ಲೆಯ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಆರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದರು. ಈ ವೇಳೆ ಒಟ್ಟು ₹4.25 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ನಾಲ್ಕು ನಿವೇಶನಗಳು, ಎರಡು ವಾಸದ ಮನೆಗಳು ಹಾಗೂ ಎರಡು ಎಕರೆ ಕೃಷಿ ಜಮೀನು ಸೇರಿವೆ. ಇದರ ಜೊತೆಗೆ ₹90.59 ಲಕ್ಷ ಮೌಲ್ಯದ ಚರ ಆಸ್ತಿ ಪತ್ತೆಯಾಗಿದ್ದು, ₹1.35 ಲಕ್ಷ ನಗದು, ₹29.74 ಲಕ್ಷ ಮೌಲ್ಯದ ಚಿನ್ನಾಭರಣ, ₹42.22 ಲಕ್ಷ ಮೌಲ್ಯದ ವಾಹನಗಳು ಹಾಗೂ ₹17.25 ಲಕ್ಷ ಮೌಲ್ಯದ ಸ್ಥಿರ ಠೇವಣಿ (FD) ಸೇರಿವೆ. ಒಟ್ಟಾರೆ ಇವರ ಬಳಿ ಸುಮಾರು ₹3.43 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

39
ಹೆಚ್.ಸಿ. ಇಂದ್ರೇಶ್ ಮನೆಗಳಲ್ಲಿ ಶೋಧ, ₹1.88 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಹೆಚ್.ಸಿ. ಇಂದ್ರೇಶ್ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಶೋಧದ ವೇಳೆ ಸುಮಾರು ₹2.20 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 10 ನಿವೇಶನಗಳು ಮತ್ತು ಎರಡು ವಾಸದ ಮನೆಗಳು ಸೇರಿವೆ. ಇದೇ ವೇಳೆ ₹32.10 ಲಕ್ಷ ಮೌಲ್ಯದ ಚರ ಆಸ್ತಿ ಪತ್ತೆಯಾಗಿದ್ದು, ₹1.25 ಲಕ್ಷ ನಗದು, ₹11.95 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹18.90 ಲಕ್ಷ ಮೌಲ್ಯದ ವಾಹನಗಳು ಸೇರಿವೆ. ಒಟ್ಟಾರೆ ಇವರ ಬಳಿ ಸುಮಾರು ₹1.88 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

49
ವಸಂತ್ ವಲ್ಲಪ್ಪ ನಾಯಕ್, ಏಳು ವಾಸದ ಮನೆ, ₹4.41 ಕೋಟಿ ಅಕ್ರಮ ಆಸ್ತಿ

KSHIP ಮುಖ್ಯ ಇಂಜಿನಿಯರ್ ವಸಂತ್ ವಲ್ಲಪ್ಪ ನಾಯಕ್ ಅವರಿಗೆ ಸಂಬಂಧಿಸಿದ ಹತ್ತು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ₹5.65 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದ್ದು, ನಾಲ್ಕು ನಿವೇಶನಗಳು, ಏಳು ವಾಸದ ಮನೆಗಳು ಹಾಗೂ 22 ಎಕರೆ 20 ಗುಂಟೆ ಕೃಷಿ ಜಮೀನು ಸೇರಿವೆ. ಇದರ ಜೊತೆಗೆ ₹74.74 ಲಕ್ಷ ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ₹75 ಸಾವಿರ ನಗದು, ₹12.25 ಲಕ್ಷ ಮೌಲ್ಯದ ಚಿನ್ನಾಭರಣ, ₹34.25 ಲಕ್ಷ ಮೌಲ್ಯದ ವಾಹನಗಳು ಹಾಗೂ ₹27.49 ಲಕ್ಷ ಮೌಲ್ಯದ FD ಸೇರಿವೆ. ಒಟ್ಟಾರೆ ಇವರ ಬಳಿ ಸುಮಾರು ₹4.41 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

59
ಸತೀಶ್ ವಿರುದ್ಧ ನಾಲ್ಕು ಕಡೆಗಳಲ್ಲಿ ದಾಳಿ, ₹3.01 ಕೋಟಿ ಮೌಲ್ಯದ ಅಕ್ರಮ ಆಸ್ತಿ

ಮಂಡ್ಯದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ₹2.19 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ಮೂರು ನಿವೇಶನಗಳು, ಎರಡು ವಾಸದ ಮನೆಗಳು ಹಾಗೂ ಆರು ಎಕರೆ ಕೃಷಿ ಜಮೀನು ಸೇರಿವೆ. ಇದಲ್ಲದೆ ₹2.26 ಕೋಟಿ ಮೌಲ್ಯದ ಚರ ಆಸ್ತಿ ಪತ್ತೆಯಾಗಿದ್ದು, ₹6.7 ಲಕ್ಷ ನಗದು, ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹23 ಲಕ್ಷ ಮೌಲ್ಯದ ವಾಹನಗಳು ಹಾಗೂ ₹1.77 ಕೋಟಿ ಮೌಲ್ಯದ ಠೇವಣಿ ಮತ್ತು ಇತರೆ ವಸ್ತುಗಳು ಸೇರಿವೆ. ಒಟ್ಟಾರೆ ಸುಮಾರು ₹3.01 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

69
ಎನ್.ಕೆ. ಸುರಕೋಡ್ ವಿರುದ್ಧ ಶೋಧ,  ₹1.82 ಕೋಟಿ ಮೌಲ್ಯದ ಅಕ್ರಮ ಆಸ್ತಿ

ಗದಗ ಜಿಲ್ಲೆಯ ಶಿರಹಟ್ಟಿಯ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎನ್.ಕೆ. ಸುರಕೋಡ್ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಈ ವೇಳೆ ₹1.38 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದ್ದು, ಆರು ನಿವೇಶನಗಳು, ಒಂದು ವಾಸದ ಮನೆ ಹಾಗೂ 29 ಎಕರೆ ಕೃಷಿ ಜಮೀನು ಸೇರಿವೆ. ಇದಲ್ಲದೆ ₹73.56 ಲಕ್ಷ ಮೌಲ್ಯದ ಚರ ಆಸ್ತಿ ಪತ್ತೆಯಾಗಿದ್ದು, ₹89 ಸಾವಿರ ನಗದು, ₹25.25 ಲಕ್ಷ ಮೌಲ್ಯದ ಚಿನ್ನಾಭರಣ, ₹31.40 ಲಕ್ಷ ಮೌಲ್ಯದ ವಾಹನಗಳು ಹಾಗೂ ₹16 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿವೆ. ಒಟ್ಟಾರೆ ಸುಮಾರು ₹1.82 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

79
ಆಸಿಫ್ ಇಕ್ಬಾಲ್ ಮನೆಗಳಲ್ಲಿ ಶೋಧ,  ₹6.89 ಕೋಟಿ ಮೌಲ್ಯದ ಅಕ್ರಮ ಆಸ್ತಿ

ಮೈಸೂರು ನಗರದಲ್ಲಿನ ನೀರು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿ ಆಸಿಫ್ ಇಕ್ಬಾಲ್ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ₹5.80 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ಐದು ನಿವೇಶನಗಳು, ಏಳು ವಾಸದ ಮನೆಗಳು ಹಾಗೂ 38 ಗುಂಟೆ ಜಮೀನು ಸೇರಿವೆ. ಇದಲ್ಲದೆ ಸುಮಾರು ₹3 ಕೋಟಿ ಮೌಲ್ಯದ ಚರ ಆಸ್ತಿ ಪತ್ತೆಯಾಗಿದ್ದು, ₹2.78 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹22.50 ಲಕ್ಷ ಮೌಲ್ಯದ ವಾಹನಗಳು ಸೇರಿವೆ. ಒಟ್ಟಾರೆ ಇವರ ಬಳಿ ಸುಮಾರು ₹6.89 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

89
ಪ್ರಕಾಶ್ ಈರಪ್ಪ ವಿರುದ್ಧ ದಾಳಿ,  ₹4.60 ಕೋಟಿ ಮೌಲ್ಯದ  ಅಕ್ರಮ ಆಸ್ತಿ

ವಿಜಯಪುರ ಜಿಲ್ಲೆಯ ಇಂಡಿಯ ಕಿರಿಯ ಅಭಿಯಂತರು ಪ್ರಕಾಶ್ ಈರಪ್ಪ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಈ ವೇಳೆ ₹1.45 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ಎರಡು ವಾಸದ ಮನೆಗಳು ಹಾಗೂ ಒಂದು ಶಾಲಾ ಕಟ್ಟಡ ಸೇರಿವೆ. ಇದಲ್ಲದೆ ₹3.15 ಕೋಟಿ ಮೌಲ್ಯದ ಚರ ಆಸ್ತಿ ಪತ್ತೆಯಾಗಿದ್ದು, ₹29.97 ಲಕ್ಷ ಮೌಲ್ಯದ ಚಿನ್ನಾಭರಣ, ₹2.64 ಕೋಟಿ ಮೌಲ್ಯದ ವಾಹನಗಳು ಹಾಗೂ ₹30 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿವೆ. ಒಟ್ಟಾರೆ ಸುಮಾರು ₹4.60 ಕೋಟಿ ಮೌಲ್ಯದ  ಅಕ್ರಮ ಆಸ್ತಿ ಪತ್ತೆಯಾಗಿದೆ.

99
ವೀರೇಶ್ ರುದ್ರಯ್ಯ ಹಿರೇಮಠ್ ಮನೆಗಳಲ್ಲಿ ಶೋಧ

ಯಾದಗಿರಿ ಜಿಲ್ಲೆಯ ಇಂಧನ ಇಲಾಖೆಯ ಎಲೆಕ್ಟ್ರಿಕ್ ಇನ್ಸ್‌ಪೆಕ್ಟರ್ ವೀರೇಶ್ ರುದ್ರಯ್ಯ ಹಿರೇಮಠ್ ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ₹1.09 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ಐದು ನಿವೇಶನಗಳು, ಎರಡು ವಾಸದ ಮನೆಗಳು ಹಾಗೂ 8 ಎಕರೆ 34 ಗುಂಟೆ ಕೃಷಿ ಜಮೀನು ಸೇರಿವೆ. ಇದಲ್ಲದೆ ₹44.24 ಲಕ್ಷ ಮೌಲ್ಯದ ಚರ ಆಸ್ತಿ ಪತ್ತೆಯಾಗಿದ್ದು, ₹39 ಸಾವಿರ ನಗದು, ₹14.77 ಲಕ್ಷ ಮೌಲ್ಯದ ಚಿನ್ನಾಭರಣ, ₹20.16 ಲಕ್ಷ ಮೌಲ್ಯದ ವಾಹನಗಳು ಹಾಗೂ ₹9.90 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿವೆ. ಒಟ್ಟಾರೆ ಸುಮಾರು ₹1.54 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಒಟ್ಟಾರೆ ಈ ದಾಳಿಯ ವೇಳೆ ವಿವಿಧ ಅಧಿಕಾರಿಗಳ ಬಳಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories