ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯಿಂದಾಗಿ ಕರ್ನಾಟಕದ ಭಟ್ಕಳ, ಬೆಂಗಳೂರು ಸೇರಿದಂತೆ ಹಲವೆಡೆ ಪೆಟ್ರೋಲ್ ಬಂಕ್ಗಳಲ್ಲಿ ಜನಜಂಗುಳಿ ಉಂಟಾಗಿದೆ. ಇರಾನ್ ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಎಚ್ಚರಿಕೆ ನೀಡಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಆತಂಕ ಸೃಷ್ಟಿಯಾಗಿದೆ.
ಭಟ್ಕಳ: ಮಧ್ಯಪ್ರಾಚ್ಯದಲ್ಲಿ ಉಲ್ಬಣವಾಗುತ್ತಿರುವ ಯುದ್ಧಸನ್ನಿವೇಶದ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಬಹುದು ಹಾಗೂ ಇಂಧನದ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂಬ ವದಂತಿ ಹರಡುತ್ತಿದ್ದಂತೆ, ರಾಜ್ಯದ ಹಲವು ನಗರಗಳಲ್ಲಿ ಪೆಟ್ರೋಲ್ ಬಂಕ್ಗಳ ಮುಂದೆ ವಾಹನಗಳ ಉದ್ದ ಸಾಲು ಕಂಡುಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ, ಬೆಂಗಳೂರಿನ ಪೆಟ್ರೋಲ್ ಬಂಕ್ಗಳ ಮುಂದೆ ವಾಹನಗಳ ಉದ್ದ ಸಾಲು ಕಂಡುಬಂದಿದೆ.
29
ಮಂಗಳೂರಿನ ಎಂಆರ್ಪಿಎಲ್ ಘಟಕಗಳಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದೆ
ಮುನ್ನೆಚ್ಚರಿಕೆಯಾಗಿ ಜನರು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಧಾವಿಸಿರುವುದರಿಂದ ಕೆಲವೆಡೆ ತಾತ್ಕಾಲಿಕ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಉಡುಪಿ ಮತ್ತು ಮಂಗಳೂರಿನ ಎಂಆರ್ಪಿಎಲ್ ಘಟಕಗಳಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದೆ, ಸದ್ಯಕ್ಕೆ ಯಾವುದೇ ಆತಂಕ ಅಗತ್ಯವಿಲ್ಲ ಎಂಬ ಮಾಹಿತಿ ಹೊರಬಿದ್ದಿತ್ತು. ಆದಾಗ್ಯೂ, ಯುದ್ಧದ ವ್ಯಾಪ್ತಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಮತ್ತೆ ಭೀತಿ ಮೂಡಿದೆ.
39
ಸಂಘರ್ಷ 12ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪ್ತಿ
ಇದುವರೆಗೆ ಇರಾನ್, ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಕುವೈತ್, ಬಹ್ರೈನ್ ಹಾಗೂ ಕತಾರ್ ದೇಶಗಳಿಗೆ ಸೀಮಿತವಾಗಿದ್ದ ಸಂಘರ್ಷ ಇದೀಗ ಲೆಬನಾನ್ ಮತ್ತು ಸೈಪ್ರಸ್ ಸೇರಿದಂತೆ ಒಟ್ಟು 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಸೈಪ್ರಸ್ನಲ್ಲಿರುವ ಬ್ರಿಟನ್ ಸೇನಾ ನೆಲೆಗಳ ಮೇಲೆ ಇರಾನ್ ಡ್ರೋನ್ ದಾಳಿಗೆ ಯತ್ನಿಸಿರುವ ವರದಿಗಳು ಹೊರಬಂದಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಫ್ರಾನ್ಸ್, ಬ್ರಿಟನ್, ಜರ್ಮನಿ ಸೇರಿದಂತೆ ನ್ಯಾಟೋ ರಾಷ್ಟ್ರಗಳು ಅಮೆರಿಕಾ–ಇಸ್ರೇಲ್ ಪರವಾಗಿ ನಿಲ್ಲಲು ಮುಂದಾಗಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
ಹೋರ್ಮುಜ್ ಜಲಸಂಧಿ ಬಂದ್: ಜಾಗತಿಕ ಇಂಧನ ಮಾರುಕಟ್ಟೆಗೆ ಹೊಡೆತ
ತೈಲ ನಿಕ್ಷೇಪಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಇರಾನ್ ಯುದ್ಧಗ್ರಸ್ತವಾಗಿರುವ ಸಂದರ್ಭದಲ್ಲೇ, ಜಗತ್ತಿನ ಬಹುಪಾಲು ಕಚ್ಚಾ ತೈಲ ಸಾಗುವ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣ ಬಂದ್ ಮಾಡಿರುವುದಾಗಿ ಘೋಷಿಸಿದೆ. ‘ಅಲ್ಲಿಂದ ಸಾಗುವ ಎಲ್ಲಾ ಹಡಗುಗಳನ್ನು ಸುಟ್ಟುಹಾಕುತ್ತೇವೆ’ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ ರೆವಲ್ಯೂಷನರಿ ಗಾರ್ಡ್ನ ಸಲಹೆಗಾರ ಬ್ರಿಗೇಡಿಯರ್ ಜನರಲ್ ಜಬ್ಬಾರಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, “ಹೋರ್ಮುಜ್ ಜಲಸಂಧಿ ಮುಚ್ಚಲಾಗಿದೆ. ಈ ಪ್ರದೇಶದಿಂದ ಯಾವುದೇ ಹಡಗು ಸಾಗಲು ಅವಕಾಶ ನೀಡುವುದಿಲ್ಲ. ದುಸ್ಸಾಹಸಕ್ಕೆ ಕೈ ಹಾಕಿದರೆ ಆ ನೌಕೆಗಳಿಗೆ ಬೆಂಕಿ ಹಚ್ಚಲಾಗುವುದು. ಪರಿಣಾಮವಾಗಿ ತೈಲದ ಬೆಲೆ ಪ್ರತಿ ಬ್ಯಾರಲ್ಗೆ 200 ಡಾಲರ್ ದಾಟಬಹುದು,” ಎಂದು ಎಚ್ಚರಿಸಿದ್ದಾರೆ. ಜೊತೆಗೆ, ಪೈಪ್ಲೈನ್ಗಳನ್ನು ಧ್ವಂಸ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
59
ಇರಾನ್ ಹೋರ್ಮುಜ್ ಜಲಸಂಧಿಯನ್ನು ಮುಚ್ಚುವ ಪ್ರಕ್ರಿಯೆ ಆರಂಭ
ಮಾರ್ಚ್ 1ರಂದು ಹೋರ್ಮುಜ್ ಮೂಲಕ ಕೇವಲ ಮೂರು ಟ್ಯಾಂಕರ್ಗಳು 28 ಲಕ್ಷ ಬ್ಯಾರಲ್ ತೈಲವನ್ನು ಸಾಗಿಸಿವೆ. ಇದು ಸಾಮಾನ್ಯ ದಿನದ ಸರಾಸರಿಗಿಂತ ಶೇ.86ರಷ್ಟು ಕುಸಿತವಾಗಿದೆ. ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.10ರಷ್ಟು ಏರಿಕೆಯಾದರೆ, ಯುರೋಪಿಯನ್ ಅನಿಲದ ಬೆಲೆ ಶೇ.40ಕ್ಕಿಂತ ಹೆಚ್ಚು ಜಿಗಿದಿದೆ. ಮೂಲಗಳ ಪ್ರಕಾರ, ಅಮೆರಿಕಾ ದಾಳಿಯ ಹಿನ್ನೆಲೆ ಕುದಿಯುತ್ತಿರುವ ಇರಾನ್ ಹೋರ್ಮುಜ್ ಜಲಸಂಧಿಯನ್ನು ಮುಚ್ಚುವ ಪ್ರಕ್ರಿಯೆ ಆರಂಭಿಸಿದೆ. ಇದು ಜಗತ್ತಿನ ಪ್ರಮುಖ ತೈಲ ಸಾಗರ ಮಾರ್ಗವಾಗಿರುವುದರಿಂದ, ಹಡಗುಗಳ ಸಂಚಾರ ಸ್ಥಗಿತಗೊಂಡರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
69
ಭಾರತದಲ್ಲಿ ಇಂಧನ ದಾಸ್ತಾನು ಎಷ್ಟು?
ಭಾರತವು ಜಗತ್ತಿನ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶವಾಗಿದೆ. ಪ್ರಸ್ತುತ ದೇಶದಲ್ಲಿ ಸುಮಾರು 10 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಹಾಗೂ 5–7 ದಿನಗಳಿಗೆ ಸಾಕಾಗುವಷ್ಟು ಸಿದ್ಧ ಇಂಧನದ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದ ಮಂಗಳೂರಿನಲ್ಲಿ 15 ಲಕ್ಷ ಮೆಟ್ರಿಕ್ ಟನ್, ಉಡುಪಿಯ ಪಾದೂರಿನಲ್ಲಿ 25 ಲಕ್ಷ ಮೆಟ್ರಿಕ್ ಟನ್ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 13.3 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಭೂಗತ ತೈಲ ಸಂಗ್ರಹಣಾ ಕೇಂದ್ರಗಳಿವೆ. ಈ ಮೂರು ಭೂಗತ ಸಂಗ್ರಹಣಾ ಕೇಂದ್ರಗಳಿಂದ ದೇಶದ ವಿವಿಧ ಭಾಗಗಳಿಗೆ ಇಂಧನ ಪೂರೈಸಲಾಗುತ್ತದೆ. ಮಂಗಳೂರು ಹಾಗೂ ಪಾದೂರು ಘಟಕಗಳಲ್ಲಿ ಸದ್ಯಕ್ಕೆ ಸಮರ್ಪಕ ಪ್ರಮಾಣದ ತೈಲ ಸಂಗ್ರಹವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಒಟ್ಟು ಇಂಧನ ಸಂಗ್ರಹವು ಸುಮಾರು 74 ದಿನಗಳ ಬೇಡಿಕೆಯನ್ನು ಪೂರೈಸಬಲ್ಲದು ಎಂಬ ಅಂದಾಜು ಇದೆ. ಆದರೆ ಭಾರತದ ಎಲ್ಪಿಜಿ ಆಮದಿನಲ್ಲಿ ಶೇ.80–85ರಷ್ಟು ಕೊಲ್ಲಿ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರುವುದರಿಂದ, ಪ್ರಸ್ತುತ ದಾಸ್ತಾನು ಕೇವಲ ಎರಡು ವಾರಗಳಿಗೆ ಸಾಕಾಗುವ ಸಾಧ್ಯತೆ ಇದೆ.
79
ಬೆಲೆ ಏರಿಕೆಯ ಭೀತಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಕಚ್ಚಾ ತೈಲದ ಬೆಲೆ ಜನವರಿಗಿಂತ ಶೇ.16ರಷ್ಟು ಏರಿಕೆಯಾಗಿದೆ. ಪ್ರಸ್ತುತ ಪ್ರತಿ ಬ್ಯಾರಲ್ಗೆ ಸುಮಾರು ₹6,830 ಇರುವ ದರ ಮುಂದಿನ ದಿನಗಳಲ್ಲಿ ₹7,286 ಅಥವಾ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆ ತಜ್ಞರು ವ್ಯಕ್ತಪಡಿಸಿದ್ದಾರೆ. ಹೋರ್ಮುಜ್ ಜಲಸಂಧಿ ದೀರ್ಘಕಾಲ ಬಂದ್ ಆಗಿದ್ದರೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
89
ಸರ್ಕಾರದ ತುರ್ತು ಕ್ರಮಗಳು
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಲವು ತುರ್ತು ಕ್ರಮಗಳಿಗೆ ಮುಂದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ರಫ್ತನ್ನು ನಿಯಂತ್ರಿಸುವುದು, ರಷ್ಯಾದಿಂದ ಕಚ್ಚಾ ತೈಲ ಆಮದು ಹೆಚ್ಚಿಸುವುದು ಹಾಗೂ ರಾಜ್ಯ ರಿಫೈನರಿಗಳಲ್ಲಿ ಎಲ್ಪಿಜಿ ಉತ್ಪಾದನೆಯನ್ನು ವೃದ್ಧಿಸುವುದು ಸೇರಿದಂತೆ ಪರ್ಯಾಯ ವ್ಯವಸ್ಥೆಗಳನ್ನು ಪರಿಗಣಿಸಲಾಗುತ್ತಿದೆ.
99
ಜನರಿಗೆ ಮನವಿ
ಭಟ್ಕಳ ಸೇರಿದಂತೆ ಹಲವೆಡೆ ಪೆಟ್ರೋಲ್ ಬಂಕ್ಗಳ ಮುಂದೆ ಜನರು ಆತಂಕದಿಂದ ಇಂಧನ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳು ಸದ್ಯಕ್ಕೆ ಯಾವುದೇ ತಕ್ಷಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನರು ವದಂತಿಗಳಿಗೆ ಕಿವಿಗೊಡದೇ, ಅಧಿಕೃತ ಮಾಹಿತಿಯನ್ನೇ ನಂಬಿ ಶಾಂತವಾಗಿರಬೇಕೆಂದು ಮನವಿ ಮಾಡಲಾಗಿದೆ. ಒಟ್ಟಾರೆ, ಮಧ್ಯಪ್ರಾಚ್ಯದ ಯುದ್ಧಾತಂಕ ಜಾಗತಿಕ ಇಂಧನ ಮಾರುಕಟ್ಟೆಯನ್ನು ಕದಡಿದ್ದು, ಅದರ ಪರಿಣಾಮ ಭಾರತದಲ್ಲಿಯೂ ಕಂಡುಬರುವ ಸಾಧ್ಯತೆ ಇದೆ. ಆದರೆ ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳಿಂದ ತಕ್ಷಣದ ಅಭಾವ ಉಂಟಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ