ನಗರದ ಗಾನಭಾರತಿ ಕಲಾ ಸಮುಚ್ಚಯದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಭಾನುವಾರ 'ಡಿವಿಜಿ ಬಳಗ ಪ್ರತಿಷ್ಠಾನ'ದ ವತಿಯಿಂದ ನೀಡುವ ಪ್ರತಿಷ್ಠಿತ 'ಡಿವಿಜಿ ಪ್ರಶಸ್ತಿ 2025' ಸ್ವೀಕರಿಸಿ ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಮಾತನಾಡಿದರು.
ಯಾವುದೇ ಭಾಷೆಯನ್ನು ನಾವು ತಿರಸ್ಕರಿಸಬೇಕಿಲ್ಲ. ಅಥವಾ ಅಗೌರವ ತೋರಿಸಬೇಕಿಲ್ಲ. ಎಲ್ಲ ಭಾಷೆಗಳ ಸತ್ವ ಹೀರಿ ಬೆಳೆದಿದೆ ನಮ್ಮ ತಾಯ್ನುಡಿ. ಇತರ ಭಾಷೆಗಳನ್ನು ಸೊಸೆ ಎಂದುಕೊಳ್ಳೋಣ. ಕನ್ನಡವೇ ಸದಾ ನಮ್ಮ ತಾಯಿಯ ಸ್ಥಾನದಲ್ಲಿರಲಿ' ಎಂದು ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಸಂವಾದದ ಸೊಗಸು ಕಣ್ಮರೆಯಾಗುತ್ತಿದೆ. ಅನಗತ್ಯವಾದ ಇಂಗ್ಲಿಷ್ ಪದಗಳನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿದೆ. ನಾವು ಕನ್ನಡಿಗರು, ನಾವೇ ಕನ್ನಡ ಬಳಸದಿದ್ದರೆ ಹೇಗೆ? ಇತರ ಭಾಷೆಗಳಿಗೆ ಗೌರವ, ಮರ್ಯಾದೆ ಕೊಡೋಣ. ಆದರೆ ಕನ್ನಡವನ್ನು ಅಮ್ಮನ ಸ್ಥಾನದಲ್ಲಿ ಉಳಿಸಿಕೊಳ್ಳೋಣ' ಎಂದರು.
24
ಡಿವಿಜಿ ಪ್ರಶಸ್ತಿ 2025 ಪ್ರದಾನ
ಕನ್ನಡದ ಹಲವು ಮಹತ್ವದ ಕವಿಗಳ ಕೊಡುಗೆ ಮೆಲುಕು ಹಾಕಿದ ಅವರು, 'ನೀವು ವೇದ, ಪುರಾಣ, ರಾಮಾಯಣ, ಮಹಾಭಾರತ ಓದದಿದ್ದರೂ ಪರವಾಗಿಲ್ಲ. ಆದರೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಮಾತ್ರ ತಪ್ಪದೆ ಓದಿ. ಅದರಲ್ಲಿ ಎಲ್ಲದರ ಸಾರವಿದೆ. ಬದುಕಿನ ಸೂಕ್ಷ್ಮಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಸುತ್ತಲೇ ಕಷ್ಟಗಳನ್ನು ಸಹಿಸುವ ಮನಸ್ಥಿತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ' ಎಂದು ತಿಳಿಸಿದರು.
ನನ್ನ ಮನೆಗೆ ಬೆಂಕಿ ಬಿದ್ದ ನಂತರದ 16 ವರ್ಷ ನಾನು ಏನೂ ಬರೆಯಲಿಲ್ಲ. ಸತತವಾಗಿ ದೇಶ ಸುತ್ತಿದ್ದೇನೆ. ಬದುಕಿನ ಕಷ್ಟಗಳ ಅರಿವು ನನಗಿದೆ. ಎದುರಾಗುವ ಎಲ್ಲರೂ ನನಗೆ ಗುರುಸ್ವರೂಪರೇ. ಎಲ್ಲರಿಂದಲೂ ಏನಾದರೂ ಒಂದು ಕಲಿತಿದ್ದೇನೆ ಎಂದು ನೆನಪಿಸಿಕೊಂಡರು.
ಸಹಿತವಾದದ್ದು ಸಾಹಿತ್ಯ. ಎಲ್ಲವನ್ನೂ ಒಳಗೊಳ್ಳಲು, ಎಲ್ಲರನ್ನೂ ಬೆಸೆಯಲು ಸಾಹಿತ್ಯಕ್ಕೆ ಸಾಧ್ಯ ಎಂದರು.
34
ಡಿವಿಜಿ ಪ್ರಶಸ್ತಿ 2025 ಪ್ರದಾನ
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಸಂಗೀತ ವಿದ್ವಾಂಸ ಡಾ ರಾ.ಸ.ನಂದಕುಮಾರ್ ಮಾತನಾಡಿ, 'ಸಂಗೀತಾಭ್ಯಾಸ ಆರಂಭಿಸುವ ಮಕ್ಕಳಿಗೆ ಅನುಕೂಲವಾಗುವಂತೆ ಸ್ವರಬದ್ಧವಾದ ಸಣ್ಣ ಕೃತಿಗಳನ್ನು ರಚಿಸಿಕೊಡಿ. ಸಾಹಿತ್ಯ ಸರಸ್ವತಿ ಸಂಗೀತದಲ್ಲಿ ವಿಸ್ತರಿಸಲಿ. ಸಂಗೀತವು ಸಾಹಿತ್ಯದ ಜೊತೆಗಿದ್ದಾಗ ಹೆಚ್ಚು ಜನರನ್ನು ತಲುಪುತ್ತದೆ' ಎಂದು ಅಭಿಪ್ರಾಯಪಟ್ಟರು.
ಖ್ಯಾತ ವಾಗ್ಮಿ ಜಿ.ಎಸ್.ನಟೇಶ್ ಅವರ ತನಾಶಿ ಅವರ ವಚನಗಳನ್ನು ವಾಚಿಸಿ ಅರ್ಥ ವಿವರಿಸಿದರು. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹಾಗೂ ಸರ್ವಜ್ಞನ ವಚನಗಳನ್ನು ವಾಚಿಸಿ ಅರ್ಥ ವಿವರಿಸಿದರು.
ತುಮಕೂರಿನ ಚಿಣ್ಣರಾದ ಆರ್ಯ ಭಟ್, ಗಾರ್ಗಿ ಭಟ್ ಮಂಕುತಿಮ್ಮನ ಕಗ್ಗದ ಕೆಲವು ಕಗ್ಗಗಳ ವಾಚಿಸಿ ಸೊಗಸಾಗಿ ವ್ಯಾಖ್ಯಾನಿಸಿದರು. ಅವರ ಪ್ರಯತ್ನ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ತನಾಶಿ ಅವರ ಕೆಲ ರಚನೆಗಳನ್ನು ಖ್ಯಾತ ಗಾಯಕ ಶ್ರೀಹರ್ಷ ಹಾಡಿದರು. ಡಿವಿಜಿ ಬಳಗದ ಸಂಚಾಲಕ ಕನಕರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ