ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು 2.50 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಿಲ್ಲಾಡಳಿತದ ಪರಿಶೀಲನೆ ವೇಳೆ ಅದು ಅಪ್ಪಟ ಚಿನ್ನವಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳೆಂದು ತಿಳಿದುಬಂದಿದೆ.
ಕೊಪ್ಪಳ: ಹನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿಯಾದ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದಾನ ನೀಡಿದ್ದೇನೆ ಎಂದು ಹೇಳಿಕೊಂಡಿದ್ದ ಉದ್ಯಮಿಯೊಬ್ಬರ ಅಸಲಿ ಮುಖವಾಡ ಈಗ ಬಯಲಾಗಿದೆ. ಅವರು ನೀಡಿದ್ದು ಅಪ್ಪಟ ಚಿನ್ನದ ಆಭರಣಗಳಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
26
ಏನಿದು ಪ್ರಕರಣ?
ಕಳೆದ ಮೇ 8 ರಂದು ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಆಗಮಿಸಿ ಅಂಜನಾದ್ರಿ ದೇವಸ್ಥಾನಕ್ಕೆ ಭವ್ಯವಾದ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದಾನವಾಗಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಜನಾರ್ದನ ರೆಡ್ಡಿ ಅವರು, ತಮ್ಮ ಆಪ್ತ ಸ್ನೇಹಿತರಾದ ಮಹೇಶ್ ರೆಡ್ಡಿ ಅವರು ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದೇವರಿಗೆ ಅರ್ಪಿಸಿದ್ದಾರೆ ಎಂದು ತಿಳಿಸಿದ್ದರು.
36
ಪರಿಶೀಲನೆ ವೇಳೆ ಬಯಲಾದ ಸತ್ಯ:
ದಾನವಾಗಿ ಪಡೆದ ಆಭರಣಗಳನ್ನು ಜಿಲ್ಲಾಡಳಿತವು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ನಿಯಮದಂತೆ ಪರಿಶೀಲನೆ ನಡೆಸಿತು. ಸಹಾಯಕ ಆಯುಕ್ತರಾದ (AC) ಮಹೇಶ್ ಮಾಲಗಿತ್ತಿ ಅವರ ನೇತೃತ್ವದಲ್ಲಿ ಆಭರಣಗಳ ಖಚಿತತೆ ಪರೀಕ್ಷೆ ನಡೆಸಿದಾಗ ಅಧಿಕಾರಿಗಳಿಗೆ ಭಾರಿ ಶಾಕ್ ಕಾದಿತ್ತು.
ಕೋಟಿ ಮೌಲ್ಯದ ಬಂಗಾರ ಎಂದು ನಂಬಲಾಗಿದ್ದ ಆಭರಣಗಳಲ್ಲಿ ಪತ್ತೆಯಾಗಿದ್ದು ಕೇವಲ 28 ಗ್ರಾಂ ಬಂಗಾರ ಮಾತ್ರ! ಉಳಿದಂತೆ ಇಡೀ ಆಭರಣಗಳು ತಾಮ್ರದಿಂದ ಮಾಡಲ್ಪಟ್ಟಿದ್ದು, ಮೇಲೆ ಚಿನ್ನದ ಲೇಪನ (Gold Plated) ಮಾಡಲಾಗಿತ್ತು ಎಂಬುದು ದೃಢಪಟ್ಟಿದೆ.
56
ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ
ಉದ್ಯಮಿ ಮಹೇಶ್ ರೆಡ್ಡಿ ಅವರು ಈ ಆಭರಣಗಳಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಬಿಲ್ ಅಥವಾ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ನೀಡಿರಲಿಲ್ಲ. ಉದ್ಯಮಿಯ ಕೋರಿಕೆಯ ಮೇರೆಗೆ ಎರಡು ದಿನಗಳ ಕಾಲ ಮಾತ್ರ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ ಈಗ ಸತ್ಯಾಂಶ ಬಯಲಾದ ಬೆನ್ನಲ್ಲೇ, ಜಿಲ್ಲಾಧಿಕಾರಿಗಳು ಉದ್ಯಮಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಭರಣಗಳ ನಿಖರ ಮೌಲ್ಯ ಮತ್ತು ಅದರ ಅಧಿಕೃತ ಬಿಲ್ಗಳನ್ನು ತಕ್ಷಣವೇ ಸಲ್ಲಿಸುವಂತೆ ಸೂಚಿಸಲಾಗಿದೆ.
66
ಖಜಾನೆಗೆ ಸೇರದ ಆಭರಣಗಳು:
ಅಧಿಕೃತ ದಾಖಲೆಗಳು ಮತ್ತು ಬಿಲ್ಗಳಿಲ್ಲದ ಕಾರಣ, ಜಿಲ್ಲಾಡಳಿತವು ಈ ಆಭರಣಗಳನ್ನು ಸರ್ಕಾರಿ ಖಜಾನೆಗೆ ಸೇರಿಸಿಕೊಳ್ಳಲು ನಿರಾಕರಿಸಿದೆ. ದೇವಸ್ಥಾನದ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡಿದ ಈ ಘಟನೆ ಈಗ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಭಾವಿ ರಾಜಕಾರಣಿಯ ಜೊತೆ ಬಂದು ಕೋಟಿ ಮೌಲ್ಯದ ದಾನ ಎಂದು ಪ್ರಚಾರ ಪಡೆದ ಉದ್ಯಮಿ, ಈಗ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ