ನಿರ್ಮಾಪಕರಾದ ವಿಜಯ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್, ನಟಿ ತಾರಾ ಅನುರಾಧಾ ಅವರಿಗೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವಿಶೇಷ ಪ್ರಶಸ್ತಿ ಸಂದಿದೆ.
ವಿಜಯ ಕಿರಗಂದೂರು ಪರವಾಗಿ ಅವರ ಪತ್ನಿ ಶೈಲಜಾ ಪ್ರಶಸ್ತಿ ಸ್ವೀಕರಿಸಿದರು. ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಪಾಲ್ಗೊಂಡರು.
ಚಲನಚಿತ್ರ ವಾಣಿಜ್ಯ ಸಂಘದ ಅಧ್ಯಕ್ಷ ಭಾ ಮ ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕ್ಕಾರ್ ಪ್ರಶಸ್ತಿ ಪ್ರದಾನ ಮಾಡಿದರು.
ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಪಿ ಧನರಾಜ್, ಈಶ್ವರ ದೈತೋಟ, ಕುಮಾರ್ ಗೋವಿಂದ್, ಸದಾಶಿವ ಶೆಣೈ, ರಾಜೇಶ್ ಕೃಷ್ಣನ್, ಸಾಯಿಪ್ರಕಾಶ್, ತುಳಸಿ, ನೋಬಿನ್ ಪಾಲ್, ಮಧುಚಂದ್ರ, ಶ್ರೀನಿ, ಪ್ರಮೋದ್ ಮರವಂತೆ, ಶ್ರೀನಿವಾಸ್ ಮೂರ್ತಿ ಮೊದಲಾದವರು ಪ್ರಶಸ್ತಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಹಿರಿಯ ನಟಿ ತುಳಸಿ, ‘9 ವರ್ಷ ವಯಸ್ಸಲ್ಲಿ ಚಿತ್ರರಂಗ ಪ್ರವೇಶಿಸಿದ್ದೆ. ಆಗ ಶಂಕರ್ನಾಗ್ ಧೈರ್ಯ ತುಂಬಿದರು. ಈಗ 56 ವರ್ಷ ವಯಸ್ಸಾಗಿದೆ. ಇನ್ನೇನು ನಿವೃತ್ತಿಯ ವಯಸ್ಸು ಅನ್ನುವಾಗಲೇ ಈ ಪ್ರಶಸ್ತಿ ಸಂದಿದೆ. ಇದನ್ನು ಮಗುವಿಗೆ ಸಿಕ್ಕ ಚಾಕ್ಲೇಟ್ನ ಹಾಗೆ ಖುಷಿಯಿಂದ ಸ್ವೀಕರಿಸುತ್ತಿದ್ದೇನೆ’ ಎಂದರು.
ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ಸಂಸ್ಥೆಯ ಆಶಯಗಳ ಬಗೆಗೆ ಮಾತನಾಡಿದರು. ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುನೀಲ್, ವಾಸು ಮೊದಲಾದವರು ಹಾಜರಿದ್ದರು.
ಡಿವಿ ಸುಧೀಂದ್ರ ಸ್ಥಾಪಿಸಿರುವ ಈ ಸಂಸ್ಥೆಗೆ 25 ವರ್ಷಗಳ ಸಂಭ್ರಮ. ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಚಿತ್ರರಂಗಕ್ಕೆ ಕೊಡುಗೆಯನ್ನು ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೂ ಪ್ರಶಸ್ತಿಯನ್ನು ನೀಡಲಾಗುತ್ತದೆ.