ದೇವೇಗೌಡ್ರು ಪ್ಲಾನ್‌ ಮಾಡಿಯೇ ಪ್ರಜ್ವಲ್‌ನ ವಿದೇಶಕ್ಕೆ ಕಳ್ಸಿದ್ದಾರೆ: ಸಿಎಂ ಸಿದ್ದರಾಮಯ್ಯ

First Published May 2, 2024, 4:23 AM IST

ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರೇ ಪ್ಲ್ಯಾನ್ ಮಾಡಿ ವಿದೇಶಕ್ಕೆ ಕಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. 

ಸುರಪುರ (ಮೇ.02): ಅಶ್ಲೀಲ ವಿಡಿಯೋ ಪ್ರಕರಣದ ಆಪಾದಿತ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರೇ ಪ್ಲ್ಯಾನ್ ಮಾಡಿ ವಿದೇಶಕ್ಕೆ ಕಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. 

ಆದರೂ, ಈ ಪ್ರಕರಣವನ್ನು ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಸಿ ಸತ್ಯವನ್ನು ಜನರಿಗೆ ತಿಳಿಸಲಾಗುವುದು ಎಂದವರು ಭರವಸೆ ನೀಡಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮ ಸಮೀಪದ ಹೆಲಿಪ್ಯಾಡ್‌ನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ವೀಸಾ ಕೊಡುವವರು ಯಾರು? ಪಾಸ್ ಕೊಡುವವರು ಬಿಜೆಪಿಯವರೇ ತಾನೆ. ಅಂದ ಮೇಲೆ ಇದರಲ್ಲಿ ಬಿಜೆಪಿಯವರು ಭಾಗಿಯಾಗಿದ್ದಾರೆ ಅಂತ ತಾನೇ ಎಂದು ಪ್ರಶ್ನಿಸಿದರು.  

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ವಿಷಯ ತಿಳಿದಿದ್ದರೂ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿದ ಪ್ರಜ್ವಲ್‌ಗೆ ಟಿಕೆಟ್ ಯಾಕೆ ಕೊಟ್ಟರು ಎಂಬುದನ್ನು ಜನತೆಗೆ ಅವರೇ ತಿಳಿಸಬೇಕು ಎಂದು ಚಾಟಿ ಬೀಸಿದರು. ಕುಮಾರಸ್ವಾಮಿಯವರು ರಾಜಕೀಯವಾಗಿ ಡಿ.ಕೆ.ಶಿವಕುಮಾರ್‌ ಮೇಲೆ ಆರೋಪ ಮಾಡುತ್ತಿದ್ದಾರೆ. 

ಪ್ರಜ್ವಲ್ ಪೆನ್‌ಡ್ರೈವ್‌ ಕೇಸ್‌ಗೂ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೂ ಸಂಬಂಧವಿಲ್ಲ. ಪ್ರಜ್ವಲ್ ನ ಸಹೋದರ ಸೂರಜ್ ರೇವಣ್ಣ ಜೊತೆ ಪೋಟೋ ಇರುವುದಕ್ಕೆ ಸಂಬಂಧ ಕಲ್ಪಿಸಲು ಆಗುವುದಿಲ್ಲ. ಕುಮಾರಸ್ವಾಮಿ ಜೊತೆಗೂ ಡಿ.ಕೆ.ಶಿವಕುಮಾರ್ ಫೋಟೋ ಇದೆ. 

ನನ್ನದೂ ರೇವಣ್ಣನ ಜೊತೆ ಫೋಟೋ ಇದ್ದರೆ ಅವರಿಗೆ ಸಹಾಯ ಮಾಡುತ್ತೀನಿ ಅಂತಾನಾ ಎಂದ ಅವರು ಪ್ರಶ್ನಿಸಿದರು. ಸರ್ಕಾರ ಪ್ರಕರಣ ಕುರಿತು ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಪಾರದರ್ಶಕವಾಗಿ ತನಿಖೆ ನಡೆಯಲಿದೆ. ತನಿಖೆಯಿಂದ ಸತ್ಯ ಹೊರಬರಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಅವರು ಭರವಸೆ ನೀಡಿದರು.

click me!