ಹೊರಗಿನವರು, ಒಳಗಿನವರು ಅನ್ನೋ ಚರ್ಚೆ ಅಪ್ರಸ್ತುತ: ಜಗದೀಶ್‌ ಶೆಟ್ಟರ್‌

First Published Mar 29, 2024, 6:23 AM IST

ಚುನಾವಣಾ ಕಣದಲ್ಲಿ ಹೊರಗಿನವರು, ಒಳಗಿನವರು ಎನ್ನುವ ಚರ್ಚೆ ಅಪ್ರಸ್ತುತ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ತಿರುಗೇಟು ನೀಡಿದರು. 
 

ಬೆಳಗಾವಿ (ಮಾ.29): ಚುನಾವಣಾ ಕಣದಲ್ಲಿ ಹೊರಗಿನವರು, ಒಳಗಿನವರು ಎನ್ನುವ ಚರ್ಚೆ ಅಪ್ರಸ್ತುತ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ತಿರುಗೇಟು ನೀಡಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ನನ್ನನ್ನು ಹೊರಗಿನವರು ಎನ್ನುವುದಕ್ಕೆ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್‌ನ ಅಜಯ ಮಾಕನ್‌ ಅವರನ್ನು ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ರಾಹುಲ್‌ ಗಾಂಧಿ ಕೇರಳದ ವಯನಾಡು ಕ್ಷೇತ್ರದಿಂದ ಗೆದ್ದಿದ್ದಾರೆ. 

ಸೋನಿಯಾ ಗಾಂಧಿ ಬಳ್ಳಾರಿಯಿಂದ, ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದಿದ್ದರು. ಹಾಗಾಗಿ ಹೊರಗಿನವರು ಎನ್ನುವುದು ಅಪ್ರಸ್ತುತ ಎಂದು ನುಡಿದರು. ಈ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕಿದೆ. ಚುನಾವಣೆಯಲ್ಲಿ ರಾಷ್ಟ್ರೀಯ ಆಧಾರ, ಅಭಿವೃದ್ಧಿ ವಿಚಾರಧಾರೆ ಮೇಲೆ ನಾನು ಮತ ಕೇಳುತ್ತೇನೆ. 

ಹುಬ್ಬಳ್ಳಿ ನನ್ನ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ. ಇಲ್ಲೇ ಮನೆ ಮಾಡಿ ಇರುತ್ತೇನೆ. ಬೆಳಗಾವಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೋದಿ ಅವರ ಸಾಧನೆಯನ್ನು ಜನರ ಮುಂದೆ ಇಟ್ಟು ಕೆಲಸ ಮಾಡುತ್ತೇನೆ ಎಂದರು. ಕಾಂಗ್ರೆಸ್‌ಗೆ ಸೋಲಿನ ಭಯ ಆರಂಭವಾಗಿದೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಕೇಸರಿ ಶಾಲು ಹಾಕಿದರೆ ಮನಸ್ಥಿತಿ ಬದಲಾಗದು: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಹಿತ ಕಾಂಗ್ರೆಸ್‌ ನಾಯಕರು ಕೇಸರಿ ಶಾಲು ಹಾಕಿ ಪ್ರಚಾರ ರ್‍ಯಾಲಿ ಮಾಡಿದ್ದಾರೆ. ಕೇಸರಿ ಶಾಲು ಹಾಕಿದರೆ ಜನ ನಿಮಗೆ ಮರಳಾಗಲ್ಲ. ನಿಮ್ಮ ಮನಸ್ಥಿತಿ ಬದಲಾಗದು. ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ನಿಲ್ಲದು.  ಮಾಜಿ ಸಿಎಂ ಕುಮಾರಸ್ವಾಮಿ ಕೇಸರಿ ಶಾಲು ಹಾಕಿದಾಗ ಟೀಕೆ ಮಾಡಿದ್ದೀರಿ. ಈಗ ನೀವ್ಯಾಕೆ ಕೇಸರಿ ಶಾಲು ಹಾಕಿಕೊಂಡು ಚುನಾವಣಾ ಪ್ರಚಾರ ಮಾಡಿದ್ದೀರಿ. ಗೋ ಹತ್ಯೆ, ಮತಾಂತರ ನಿಷೇಧ ಕಾನೂನಿನ ಬಗ್ಗೆ ಕಾಂಗ್ರೆಸ್‌ ತನ್ನ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಒತ್ತಾಯಿಸಿದ್ದಾರೆ.

click me!