ಮೈಸೂರು ಜಿಲ್ಲೆಯ ಹುಣಸೂರಿನ ನ್ಯೂ ಮಾರುತಿ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ಕೌಟುಂಬಿಕ ಕಲಹ ಅಥವಾ ಆರ್ಥಿಕ ಸಂಕಷ್ಟ ಕಾರಣವಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೌಟುಂಬಿಕ ಕಲಹವೋ ಅಥವಾ ಮತ್ಯಾವುದೋ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದು, ತಾನೂ ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ನಡೆದಿದೆ.
ಘಟನೆಯ ವಿವರ
ನ್ಯೂ ಮಾರುತಿ ಬಡಾವಣೆಯ ನಿವಾಸಿ ಹರೀಶ್ (40) ಎಂಬಾತನೇ ಈ ಕೃತ್ಯ ಎಸಗಿದ ವ್ಯಕ್ತಿ. ಹರೀಶ್ ತನ್ನ ಪತ್ನಿ ನಿಶ್ಚಿತಾ (36), ಮಕ್ಕಳಾದ ನೆಕ್ಸಾ (13) ಮತ್ತು ರಕ್ಷಾ (6) ಎಂಬುವವರನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ. ರಕ್ಷಾ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
24
ಯಾರಿಗೂ ಸಂಶಯ ಬಾರದಂತೆ ಸ್ಕೆಚ್
ಹರೀಶ್ ಈ ಕೃತ್ಯ ಎಸಗುವ ಮುನ್ನ ವ್ಯವಸ್ಥಿತವಾಗಿ ಸ್ಕೆಚ್ ಹಾಕಿದ್ದ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮನೆಯಲ್ಲಿ ಹರೀಶ್ ತಾಯಿ ಕೂಡ ವಾಸವಾಗಿದ್ದರು. ಮೂರು ದಿನಗಳ ಹಿಂದೆಯೇ ಹರೀಶ್ ತನ್ನ ತಾಯಿಯನ್ನು ಅಜ್ಜಿ ಮನೆಗೆ ಕಳುಹಿಸಿಕೊಟ್ಟಿದ್ದ. ಮನೆಯಲ್ಲಿ ತಾಯಿ ಇಲ್ಲದ ಸಮಯ ನೋಡಿಕೊಂಡು ಈ ಘೋರ ಕೃತ್ಯ ಎಸಗಿದ್ದಾನೆ.
34
ಬಾಯಿ-ಮೂಗಿಗೆ ಪ್ಲಾಸ್ಟರ್ ಹಚ್ಚಿ ಕ್ರೌರ್ಯ
ಹರೀಶ್ ತನ್ನ ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡಲು ಆರಿಸಿಕೊಂಡ ಹಾದಿ ಅತ್ಯಂತ ಕ್ರೂರವಾಗಿದೆ. ಪತ್ನಿ ಮತ್ತು ಮಕ್ಕಳ ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಅಂಟಿಸಿ, ಅವರು ಕಿರುಚದಂತೆ ಮತ್ತು ಉಸಿರಾಡಲು ಸಾಧ್ಯವಾಗದಂತೆ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ ಈ ಮೂವರ ಮೃತದೇಹಗಳು ಪತ್ತೆಯಾಗಿವೆ. ಕುಟುಂಬಸ್ಥರನ್ನು ಕೊಂದ ಬಳಿಕ ಹರೀಶ್ ಕೂಡ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಹುಣಸೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಒಂದು ನೋಟ್ ಪತ್ತೆಯಾಗಿದ್ದು, ಅದರಲ್ಲಿ ಏನಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಹರೀಶ್ ಈ ನಿರ್ಧಾರ ತೆಗೆದುಕೊಳ್ಳಲು ಆರ್ಥಿಕ ಸಂಕಷ್ಟ ಕಾರಣವೇ ಅಥವಾ ಕೌಟುಂಬಿಕ ಕಲಹವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹರೀಶ್ ಅವರ ತಂದೆ ಕೋಡಿ ಸತ್ಯನಾರಾಯಣ್ ಅವರು ಸ್ಥಳಕ್ಕೆ ಆಗಮಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಬಡಾವಣೆಯಲ್ಲಿ ಶೋಕದ ಛಾಯೆ ಆವರಿಸಿದೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.