ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದಾರೆ. ಮಳೆಗಾಗಿ ಹೂವಿನಹಡಗಲಿಯ ಇಟ್ಟಿಗಿ ಗ್ರಾಮದಲ್ಲಿ ಕತ್ತೆಗಳ ಮದುವೆ ಹಾಗೂ ವಿಜಯಪುರದ ಮುತ್ತಗಿ ಗ್ರಾಮದಲ್ಲಿ ಗೊಂಬೆಗಳ ಮದುವೆಯಂತಹ ಸಾಂಪ್ರದಾಯಿಕ ಆಚರಣೆಗಳ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಮುಂಗಾರು ದುರ್ಬಲವಾದ್ರೂ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮುಂದಿನ ಏಳು ದಿನ ಮಳೆಯ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಲಾಗಿದೆ.
25
ಕರಾವಳಿ & ಒಳನಾಡು ಭಾಗದಲ್ಲಿ ಮಳೆ ಸಾಧ್ಯತೆ
ಕರಾವಳಿ ಜಿಲ್ಲೆಗಳಲ್ಲಿ ಜೂನ್ 22 ರಿಂದ 24 ರವರೆಗೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜೂನ್ 22, 23 & 25 ರಂದು ಮಳೆಯಾಗುವ ಸಾಧ್ಯತೆಗಳಿವೆ. ಮಳೆಗಾಲ ಆರಂಭವಾಗಿ 15 ದಿನಕ್ಕೂ ಹೆಚ್ಚಾಗಿದ್ದು, ಆದ್ರೆ ರಾಜ್ಯದಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆ ರೈತರಲ್ಲಿ ಆತಂಕ ಮನೆ ಮಾಡಿದೆ.
35
ಮುಂಗಾರು ಕೊರತೆ
ಈ ಬಾರಿ ಮುಂಗಾರು ಪ್ರವೇಶ ವಿಳಂಬವಾದ್ರೂ ಆರಂಭದಲ್ಲಿ ವರುಣನ ಸಿಂಚನ ಆಗಿತ್ತು. ಈ ಹಿನ್ನೆಲೆ ಮಳೆಯಾಶ್ರಿತ ಪ್ರದೇಶದಲ್ಲಿ ಕೆಲ ರೈತರು ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ 15 ದಿನಗಳಾದ್ರೂ ಒಂದು ಹನಿಯೂ ಮಳೆ ಬರುತ್ತಿಲ್ಲ. ಮಳೆ ಕೊರತೆ ಹಿನ್ನೆಲೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರೈತರು ಬಿತ್ತಿದ ಬೆಳೆಯನ್ನು ನಾಶ ಮಾಡಿದ್ದಾರೆ.
ಮಳೆಗಾಗಿ ರಾಜ್ಯದಲ್ಲಿ ಪ್ರಾರ್ಥನೆ ಸೇರಿದಂತೆ ಕತ್ತೆ, ಗೊಂಬೆಗಳ ಮದುವೆ ಮಾಡಲಾಗುತ್ತಿದೆ. ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಕತ್ತೆಗಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಹೆಣ್ಣು, ಗಂಡು ಕತ್ತೆಗಳಿಗೆ ಸ್ನಾನ ಮಾಡಿಸಿ, ಬಾಸಿಂಗ ಕಟ್ಟಿ, ಶಾಸ್ತ್ರೋಕ್ತವಾಗಿ ಮಾಂಗಲ್ಯ ಧಾರಣೆ ಮಾಡಿಸಿದರು. ಸ್ಥಳದಲ್ಲಿದ್ದ ಮಹಿಳೆಯರು ಸಂಪ್ರದಾಯದಂತೆ ಆರತಿ ಬೆಳಗಿ, ಅಕ್ಷತೆ ಹಾಕಿದರು. ನಂತರ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಶನಿವಾರ ಮುಂಗಾರು ಮಳೆಗೆ ಪ್ರಾರ್ಥಿಸಿ ಗ್ರಾಮ ದೇವತೆ ಯುವಕ ಸಂಘ ಹಾಗೂ ಗ್ರಾಮದ ಗುರು-ಹಿರಿಯರು ಸೇರಿಕೊಂಡು ಗೊಂಬೆಗಳ ಮದುವೆ ಮಾಡಿ ಗ್ರಾಮ ದೇವತೆಗೆ ಉಡಿ ತುಂಬಿ ಪ್ರಾರ್ಥಿಸಿದರು. ಮುಂಗಾರು ಹಂಗಾಮು ಆರಂಭವಾಗಿ ಜೂನ್ ತಿಂಗಳು ಗತಿಸುತ್ತಾ ಬಂದರೂ ಮಳೆ ಬಾರದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮುತ್ತಗಿ ಗ್ರಾಮಸ್ಥರು ಮಳೆಗೆ ಪ್ರಾರ್ಥಿಸಲು ಗೊಂಬೆಗಳ ಮದುವೆ ಮಾಡಿದರು.