Modern Farmer: ಐಷಾರಾಮಿ ಕಾರು ಬಳಸಿ ರಾಶಿ ಮಾಡಿದ ರೈತ..!

First Published Dec 23, 2021, 12:33 PM IST

ಮುದ್ದೇಬಿಹಾಳ(ಡಿ.23): ತನ್ನ ಜಮೀನಿನಲ್ಲಿ(Land) ಬೆಳೆದಿದ್ದ ಅಜವಾನ ರಾಶಿಗೆ(Heap) ಅಗತ್ಯ ಕೂಲಿ ಕಾರ್ಮಿಕರು ಸಿಗದೇ ಇರುವುದರಿಂದ ತನ್ನ ಐಷಾರಾಮಿ ಕಾರನ್ನೇ(Luxury Car) ಬಳಸಿ ರಾಶಿ ಮಾಡಿದ ವಿಡಿಯೋವೊಂದು ವೈರಲ್‌ ಆಗಿದೆ.

ವಿಜಯಪುರ(Vijayapura) ಜಿಲ್ಲೆಯ ಮುದ್ದೇಬಿಹಾಳ(Muddebihal) ತಾಲೂಕಿನ ರೋಳ ಗ್ರಾಮದ ರೈತ ಮುತ್ತಣ್ಣ ಪ್ಯಾಟಿಗೌಡರ್‌(Muttanna Pyatigoudar) ಇಂತಹದೊಂದು ವಿನೂತನ ಕಾರ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ಐದು ತಿಂಗಳ ಹಿಂದೆ ತನ್ನ ಒಟ್ಟು 12 ಎಕರೆ ಜಮೀನಿನಲ್ಲಿ 3 ಎಕರೆ ಅಜವಾನ, 5 ಎಕರೆ ತೊಗರಿ ಬೆಳೆ ಹಾಗೂ ಇನ್ನುಳಿದ ಜಮೀನಿನಲ್ಲಿ ಕಡಲೆ ಮತ್ತು ಗೋದಿ ಬೆಳೆದಿದ್ದ. ಆದರೆ, ಐದು ತಿಂಗಳ ಅವಧಿಗೆ ಅಜವಾನ ಫಸಲು ಕೈಗೆ ಬಂದಿದೆ.

ಸದ್ಯ ಎಲ್ಲೆಡೆ ತೊಗರಿ ರಾಶಿ ಪ್ರಾರಂಭವಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಅಗತ್ಯ ಯಂತ್ರೋಪಕರಣಗಳು(Agricultural Machinery) ಮತ್ತು ಕೂಲಿ ಕಾರ್ಮಿಕರು(Workers) ಸಿಗದಿರುವ ಕಾರಣ ಸ್ವಂತ ಕಾರ್‌ ಅನ್ನೇ ಬಳಸಿ ರಾಶಿ ಮಾಡುವ ವಿಚಾರಕ್ಕೆ ಬಂದಿದ್ದಾರೆ. ಹೇಗೋ ರಾಶಿ ಮಾಡಿದೆ. 

ಹೊಟ್ಟು ತೂರುವುದಕ್ಕಾಗಿ ಕೆಲವೇ ಕೆಲ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಈ ರಾಶಿಗಾಗಿ ಕಾರ್‌ಗೆ 1 ಸಾವಿರ ಪೆಟ್ರೋಲ್‌(Petrol) ಮಾತ್ರ ಬಳಸಲಾಗಿದೆ. ಇದರಿಂದಾಗಿ ಹೊಸ ಅನುಭವ ದೊರಕಿದೆ ಎನ್ನುತ್ತಾರೆ ಮುತ್ತಣ್ಣ.

ಕಾರ್‌ಗೆ ಯಾವುದೇ ಹಾನಿಯಾಗಿಲ್ಲ. ಅತ್ಯಂತ ಸರಳವಾಗಿ, ಸುಲಭವಾಗಿ ಒಂದೇ ದಿನದಲ್ಲಿ ಅಜವಾನ ರಾಶಿ ಮಾಡಲಾಗಿದೆ. ಈ ರಾಶಿಯಿಂದ ಅಂದಾಜು 35 ಗೋಣಿ ಚೀಲದಷ್ಟು ಅಜವಾನ ಗಿಡದಿಂದ ಬಿಡಿಸಿ ರಾಶಿ ಮಾಡಲಾಗಿದೆ. ಇದರಿಂದ ಉಳಿತಾಯಗೊಂಡಿದ್ದು ಮಾತ್ರವಲ್ಲದೇ ಕಡಿಮೆ ಖರ್ಚಿನಲ್ಲೇ ಹೆಚ್ಚು ಆದಾಯ ಪಡೆಯಬಹುದು ಎನ್ನುತ್ತಾರೆ ರೈತ ಮುತ್ತಣ್ಣ ಪ್ಯಾಟಿಗೌಡರ.

click me!