ಚಿಕ್ಕಮಗಳೂರು: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಿದ ಪೋಷಕರು, ಆಫ್ರೀಕಾದಲ್ಲಿ ಯುವತಿ ಆರ್ತನಾದ!

Published : Jul 16, 2026, 12:25 PM IST

ಚಿಕ್ಕಮಗಳೂರಿನ ಪೋಷಕರು ಹಣದಾಸೆಗೆ  ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಾರೆ. ಯುವತಿಯು ವಿಡಿಯೋ ಮೂಲಕ ಸಹಾಯ ಯಾಚಿಸಿದ ನಂತರ, ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಆಕೆಯನ್ನು ರಕ್ಷಿಸಲಾಗಿದೆ. ಇದೀಗ ಪಾಪಿ ಪೋಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

PREV
15
ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಿದ ಪೋಷಕರು!

ಚಿಕ್ಕಮಗಳೂರು: ಹಣದ ಆಸೆಗಾಗಿ ಹೆತ್ತ ಮಗಳನ್ನೇ ಪೋಷಕರು ವಿದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿರುವ ಅಮಾನುಷ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ವಿದೇಶಕ್ಕೆ ಕರೆದೊಯ್ದು, ಸ್ವಂತ ಮಗಳನ್ನೇ ಜೀವಾಳ ಬಲಿಗೊಟ್ಟ ಪಾಪಿ ಪೋಷಕರ ಕೃತ್ಯ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಟ್ಟಿದ್ದ 20 ವರ್ಷದ ಯುವತಿ ನಂದಿತಾಳನ್ನು ಭಾರತೀಯ ರಾಯಭಾರ ಕಚೇರಿ (Indian Embassy) ಹಾಗೂ ಸ್ಥಳೀಯರ ಸಹಾಯದಿಂದ ಇದೀಗ ಯಶಸ್ವಿಯಾಗಿ ರಕ್ಷಿಸಲಾಗಿದೆ.

25
ಗಿಡಮೂಲಿಕೆ ವ್ಯಾಪಾರದ ಹೆಸರಲ್ಲಿ ಆಫ್ರಿಕಾಕ್ಕೆ ಕರೆದೊಯ್ದು ಮಾರಾಟ!

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಸಮೀಪವಿರುವ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ಎಂಬ ದಂಪತಿಗೆ ನಂದಿತಾ (20) ಎಂಬ ಮಗಳಿದ್ದಾಳೆ. ಮೂಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಕುಟುಂಬವು ಗಿಡಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕಾಗಿ ಸುಮಾರು 4 ತಿಂಗಳ ಹಿಂದಷ್ಟೇ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿತ್ತು.

35
₹7 ಲಕ್ಷ ರೂಪಾಯಿ ಪಡೆದು ಭಾರತಕ್ಕೆ ಮರಳಿದ್ದ ಕಟುಕ ಪೋಷಕರು

ತಮ್ಮೊಂದಿಗೆ ಮಗಳು ನಂದಿತಾಳನ್ನು ಕರೆದೊಯ್ದಿದ್ದ ಪೋಷಕರು, ಕೇವಲ 10 ದಿನಗಳ ಹಿಂದೆ ತೀವ್ರ ಹಣದ ಆಸೆಗೆ ಬಿದ್ದು, ಅಲ್ಲಿನ ವೇಶ್ಯಾವಾಟಿಕೆ ದಂಧೆಕೋರರಿಗೆ ಬರೋಬ್ಬರಿ ₹7 ಲಕ್ಷ ರೂಪಾಯಿಗೆ ಮಗಳನ್ನೇ ಮಾರಾಟ ಮಾಡಿದ್ದರು. ಮಗಳನ್ನು ಮಾರಾಟ ಮಾಡಿದ ಬಳಿಕ ಭಾರತಕ್ಕೆ ಮರಳಿದ್ದ ಈ ಕಟುಕ ಪೋಷಕರು, "ಮಗಳು ಭಾರತಕ್ಕೆ ಮರಳಿದ್ದಾಳೆ, ನಮಗಿಂತ ಮೊದಲೇ ಊರಿಗೆ ಹೋಗಿದ್ದಾಳೆ" ಎಂದು ಸ್ಥಳೀಯರ ಬಳಿ ಸುಳ್ಳು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದರು.

45
ಸೆನಗಲ್ ದೇಶದ ವೇಶ್ಯಾವಾಟಿಕೆ ದಂಧೆಕೋರರ ಕೈಗಿಟ್ಟಿಟ್ಟ ಪಾಪಿ ಪೋಷಕರು

ಮಗಳನ್ನು ದಂಧೆಗೆ ತಳ್ಳಿದ ಬಳಿಕ ಭಾರತಕ್ಕೆ ಮರಳಿದ್ದ ಈ ಪೋಷಕರು, ತಮ್ಮ ಪಾಪದ ಕೃತ್ಯವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದರು. ಯಾರಾದರೂ ಮಗಳ ಬಗ್ಗೆ ವಿಚಾರಿಸಿದರೆ, "ಮಗಳು ಭಾರತಕ್ಕೆ ವಾಪಸ್ ಹೋಗಿದ್ದಾಳೆ" ಎಂದು ಸುಳ್ಳಿನ ಕಥೆ ಕಟ್ಟಿ ಎಲ್ಲರನ್ನೂ ನಂಬಿಸಲು ಯತ್ನಿಸಿದ್ದರು. ವಿದೇಶದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ನಂದಿತಾ, ಧೈರ್ಯಗೆಡದೆ ಕಷ್ಟಪಟ್ಟು ಸೆನೆಗಲ್‌ನಿಂದಲೇ ತನಗೆ ಪರಿಚಯವಿದ್ದವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾಳೆ. ತಂದೆ-ತಾಯಿಯೇ ಹಣಕ್ಕಾಗಿ ತನ್ನನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡಿರುವ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಅಷ್ಟೇ ಅಲ್ಲದೆ, ತನಗೆ ಆಗಿರುವ ಅನ್ಯಾಯ ಮತ್ತು ಅಲ್ಲಿ ತಾನು ಅನುಭವಿಸುತ್ತಿರುವ ಚಿತ್ರಹಿಂಸೆಯ ಬಗ್ಗೆ ವಿಡಿಯೋ ಮಾಡಿ ತಾಯ್ನಾಡಿಗೆ ಕಳುಹಿಸಿಕೊಟ್ಟಿದ್ದಾಳೆ. ಈ ವಿಡಿಯೋ ಊರಿನ ಪರಿಚಯಸ್ಥರ ಕೈ ತಲುಪುತ್ತಿದ್ದಂತೆ ಇಡೀ ಹಕ್ಕಿಪಿಕ್ಕಿ ಕಾಲೋನಿಯ ಜನ ದಿಗ್ಭ್ರಮೆಗೊಂಡಿದ್ದಾರೆ.

55
ರಕ್ಷಣಾ ಕಾರ್ಯಾಚರಣೆ

ಯುವತಿಯ ವಿಡಿಯೋ ಮತ್ತು ಸಂದೇಶ ತಲುಪುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಹಾಗೂ ಸಂಘಟನೆಯವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿಗೆ (Indian Embassy) ವಿಷಯ ಮುಟ್ಟಿಸಿ, ಸೆನಗಲ್‌ನ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ನಂದಿತಾಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ತಮ್ಮ ಮಗಳನ್ನು ರಕ್ಷಿಸಿರುವ ವಿಷಯ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕ್ರಾಂತಿ ಮತ್ತು ರಾಜಶೇಖರ್ ದಂಪತಿ ಸದ್ದಿಲ್ಲದೆ ಊರಿಗೆ ಮರಳಿದ್ದಾರೆ. ಸದ್ಯ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಂದಿತಾಗೆ ಸೂಕ್ತ ನ್ಯಾಯ ಕೊಡಿಸಬೇಕು ಮತ್ತು ಆಕೆಯನ್ನು ಈ ನರಕಕ್ಕೆ ತಳ್ಳಿದ ಹೆತ್ತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಮುಖಂಡರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (SP) ಅಧಿಕೃತವಾಗಿ ದೂರು ಪತ್ರ ಸಲ್ಲಿಸಿದ್ದಾರೆ. ಸದ್ಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

Read more Photos on
click me!

Recommended Stories