ಕಾಡುಗೋಡಿ ಮಗು ಹತ್ಯೆ ಪ್ರಕರಣ: ಐಸ್‌ಕ್ರೀಂ ಕೇಳಿದ್ದಕ್ಕೆ ಕಾರಲ್ಲೇ ಒದ್ದು ಕೊಂದೆ, ಪೊಲೀಸರೆದುರು ಬಾಯಿಬಿಟ್ಟ ಪ್ರಿಯಕರ!

Published : Jun 09, 2026, 06:45 PM IST

ಬೆಂಗಳೂರಿನ ಕಾಡುಗೋಡಿಯಲ್ಲಿ, ಪ್ರಿಯಕರನೊಂದಿಗೆ ಸೇರಿ ಮಗಳನ್ನು ಕೊಂದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಮೋಹನ್ ಸಿಕ್ಕಿಬಿದ್ದಿದ್ದಾನೆ. ಐಸ್‌ಕ್ರೀಂಗಾಗಿ ಹಠ ಹಿಡಿದ ಮಗುವನ್ನು ಮೋಹನ್ ಕಾರಿನಲ್ಲೇ ಒದ್ದು ಕೊಂದಿದ್ದು, ನಂತರ ಇಬ್ಬರೂ ಸೇರಿ ಕೊಲೆಯನ್ನು ಮುಚ್ಚಿಹಾಕಲು ನಾಟಕವಾಡಿದ್ದರು.  

PREV
18
ಕಾಡುಗೋಡಿ ಮಗು ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್

ಬೆಂಗಳೂರು: ರಾಜಧಾನಿಯ ಕಾಡುಗೋಡಿ ವ್ಯಾಪ್ತಿಯಲ್ಲಿ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿತ್ತು. ಹೆತ್ತ ಮಗಳನ್ನೇ ಪ್ರಿಯಕರನೊಂದಿಗೆ ಸೇರಿ ಪ್ಲಾನ್ ಮಾಡಿ ಕೊಲೆಗೈದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ ಸಿಕ್ಕಿಬಿದ್ದಿದ್ದರು. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಮೋಹನ್ ತನಿಖಾಧಿಕಾರಿಗಳ ಮುಂದೆ ಕೊಲೆಯ ಭೀಕರ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ತಾನೇ ಕಾಲಿನಿಂದ ಒದ್ದು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ತಲೆಮರೆಸಿಕೊಂಡಿರುವ ತಾಯಿ ಪ್ರಿಯಾಂಕಾಳಿಗಾಗಿ ಹುಡುಕಾಟ ಮುಂದುವರೆದಿದೆ.

28
ಮಧುರೈ ಟ್ರಿಪ್ ಮುಗಿಸಿ ಬಂದ ಬೆನ್ನಲ್ಲೇ ದುರಂತ!

ಪೊಲೀಸ್ ತನಿಖೆಯ ಪ್ರಕಾರ, ಮಾರ್ಚ್ 21 ರಂದು ಆರೋಪಿ ಮೋಹನ್ ಹಾಗೂ ಪ್ರಿಯಾಂಕಾ ತಮ್ಮ ಮಗು ವೆನ್ನಿಲ್ಲಾಳೊಂದಿಗೆ ತಮಿಳುನಾಡಿನ ಮಧುರೈಗೆ ಮೂರು ದಿನಗಳ ಕಾಲ ದೇವಸ್ಥಾನಗಳ ಪ್ರವಾಸಕ್ಕೆ ತೆರಳಿದ್ದರು. ಮಾರ್ಚ್ 24 ರಂದು ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದರು. ಅದೇ ದಿನ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಪ್ರಿಯಾಂಕಾ ಇಂದಿರಾನಗರದಲ್ಲಿ ಶಾಪಿಂಗ್ ಮಾಡಲು ತೆರಳಿದ್ದಳು. ಈ ಸಮಯದಲ್ಲಿ ಕಾರಿನಲ್ಲಿ ಪ್ರಿಯಕರ ಮೋಹನ್ ಮತ್ತು ಮಗು ವೆನ್ನಿಲ್ಲಾ ಮಾತ್ರ ಇದ್ದರು.

38
ಮಗುವಿನ ಹೊಟ್ಟೆಯ ಭಾಗಕ್ಕೆ ಬಲವಾಗಿ ಒದ್ದು ಮೋಹನ್ ಕ್ರೌರ್ಯ!

ಕಾರಿನಲ್ಲಿ ಕುಳಿತಿದ್ದಾಗ ಮಗು ವೆನ್ನಿಲ್ಲಾ ತನಗೆ ಐಸ್‌ಕ್ರೀಂ ಬೇಕೆಂದು ಮೋಹನ್ ಬಳಿ ಹಠ ಹಿಡಿದಿದೆ. ಮಗುವಿನ ಆಸೆಯಂತೆ ಮೋಹನ್ ಹೋಗಿ ಐಸ್‌ಕ್ರೀಂ ತಂದುಕೊಟ್ಟಿದ್ದಾನೆ. ಆದರೆ, ಈ ಐಸ್‌ಕ್ರೀಂ ಬೇಡ, ಬೇರೆ ಐಸ್‌ಕ್ರೀಂ ಬೇಕು ಎಂದು ಮಗು ಮತ್ತೆ ಪಟ್ಟು ಹಿಡಿದು ಜೋರಾಗಿ ಅಳಲು ಪ್ರಾರಂಭಿಸಿದೆ. ಇದರಿಂದ ತೀವ್ರ ಕೋಪಗೊಂಡ ಮೋಹನ್ ಕಾರಿನ ಒಳಗಡೆಯೇ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.

ತನ್ನ ಕಾಲಿನಿಂದ ಮಗುವಿನ ಹೊಟ್ಟೆಯ ಭಾಗಕ್ಕೆ ಬಲವಾಗಿ ಒದ್ದಿದ್ದಾನೆ. ಇದರಿಂದ ಮಗು ನೋವು ತಡೆಯಲಾರದೆ ಜೋರಾಗಿ ಕಿರುಚಾಡಿ ಒದ್ದಾಡತೊಡಗಿದೆ. ಮಗುವಿನ ಕಿರುಚಾಟ ಕಾರಿನ ಹೊರಗಡೆ ಯಾರಿಗೂ ಕೇಳಿಸಬಾರದೆಂದು ಮೋಹನ್ ಮಗುವಿನ ಮೂಗು ಮತ್ತು ಬಾಯಿಯನ್ನು ತನ್ನ ಎರಡೂ ಕೈಗಳಿಂದ ಬಲವಾಗಿ ಒತ್ತಿ ಹಿಡಿದಿದ್ದಾನೆ. ಪರಿಣಾಮವಾಗಿ ಉಸಿರಾಡಲು ಸಾಧ್ಯವಾಗದೆ ಮಗು ಕಾರಿನಲ್ಲೇ ಕೊನೆಯುಸಿರೆಳೆದಿದೆ. ಕೋಪದಲ್ಲಿ ಮೋಹನ್ ಉದ್ದೇಶಪೂರ್ವಕವಾಗಿಯೇ ಮಗುವನ್ನು ಕೊಲೆ ಮಾಡಿದ್ದಾನೆ.

48
ಕೊಲೆ ಮುಚ್ಚಿಡಲು ತಾಯಿ-ಪ್ರಿಯಕರನ ಒಳಸಂಚು, ಹೈಡ್ರಾಮಾ!

ಶಾಪಿಂಗ್ ಮುಗಿಸಿ ಪ್ರಿಯಾಂಕಾ ಕಾರಿನ ಬಳಿ ವಾಪಸ್ ಬಂದಾಗ ಮೋಹನ್ ಮಗು ಮೃತಪಟ್ಟಿರುವುದನ್ನು ತಿಳಿಸಿದ್ದಾನೆ. ಅಲ್ಲದೆ, ಇದು ಆಕಸ್ಮಿಕವಾಗಿ ನಡೆದುಹೋಯಿತು ಎಂದು ಆಕೆಗೆ ನಂಬಿಸಿ ಕಥೆ ಕಟ್ಟಿದ್ದಾನೆ. ಆ ಬಳಿಕ ಇಬ್ಬರೂ ಸೇರಿ ಶವವನ್ನು ಕಾರಿನಲ್ಲಿಟ್ಟುಕೊಂಡು ಸೀದಾ ಕಾಡುಗೋಡಿಯಲ್ಲಿದ್ದ ತಮ್ಮ ವಿಲ್ಲಾಗೆ ತಂದಿದ್ದಾರೆ. ಮಗು ನಿದ್ದೆ ಮಾಡುತ್ತಿರುವಂತೆ ಕಾಣಲೆಂದು ಭುಜದ ಮೇಲೆ ಮಲಗಿಸಿಕೊಂಡು ವಿಲ್ಲಾ ಒಳಗೆ ಕರೆದೊಯ್ದಿದ್ದಾರೆ. ಅಂದು ರಾತ್ರಿಯಿಡೀ ಮಗುವಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡು, ಪೊಲೀಸರಿಗೆ ಮತ್ತು ಮನೆಯವರಿಗೆ ಏನು ಹೇಳಬೇಕೆಂದು ಇಬ್ಬರೂ ಒಳಸಂಚು ರೂಪಿಸಿದ್ದಾರೆ.

ಮರುದಿನ ಬೆಳಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದ ಇಬ್ಬರು, ಮಗು ಬೆಳಗ್ಗೆ ಎದ್ದೇಳುತ್ತಿಲ್ಲ. ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದಿತ್ತು, ಹಾಗಾಗಿ ಮಲಗಿಸಿದ್ದೆವು ಎಂದು ವೈದ್ಯರ ಮುಂದೆ ಸುಳ್ಳು ಕಥೆ ಹೇಳಿದ್ದಾರೆ. ಆದರೆ ಪರಿಶೀಲಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾ ತನಗೇನೂ ತಿಳಿಯದವಳಂತೆ ಆಸ್ಪತ್ರೆಯಲ್ಲೇ ಬಿದ್ದು ಒದ್ದಾಡಿ ಭೀಕರ ಹೈಡ್ರಾಮಾ ಸೃಷ್ಟಿಸಿದ್ದಾಳೆ. ತದನಂತರ ಮರಣೋತ್ತರ ಪರೀಕ್ಷೆ ಮುಗಿಸಿ ಸದ್ದಿಲ್ಲದೆ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾರೆ.

58
ಕಳ್ಳಾಟ ಬಯಲು ಮಾಡಿದ ಮರಣೋತ್ತರ ಪರೀಕ್ಷೆ ವರದಿ!

ಆದರೆ ಪಾಪದ ಕೊಡ ತುಂಬಿ ಬಂದಾಗ ಸತ್ಯ ಅಡಗಿರಲು ಸಾಧ್ಯವಿಲ್ಲ. ಮಗುವಿನ ಮರಣೋತ್ತರ ಪರೀಕ್ಷೆಯ (Post-mortem) ವರದಿ ಬರುತ್ತಿದ್ದಂತೆ ಇಡೀ ಕಥೆ ಉಲ್ಟಾ ಆಗಿದೆ. ವರದಿಯಲ್ಲಿ ಮಗುವಿನ ಸಾವು ಸಹಜವಾದುದಲ್ಲ, ಅದು ಕೊಲೆ ಎಂಬುದು ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಮಗುವಿನ ಮೂಗು ಮತ್ತು ಬಾಯಿಯನ್ನು ಬಲವಾಗಿ ಒತ್ತಿ ಹಿಡಿದಿದ್ದರಿಂದ ಉಸಿರಾಟದ ಸಮಸ್ಯೆಯಾಗಿ ಸಾವು ಸಂಭವಿಸಿದೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಒಳಗಡೆ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ವರದಿಯಲ್ಲಿ ಧೃಢಪಡಿಸಿದ್ದರು.

68
ಪತಿ ಪ್ರವೀಣ್‌ ಆರೋಪಗಳು!

ಈ ನಡುವೆ ಪ್ರಿಯಾಂಕಾಳ ಮೊದಲ ಪತಿ ಪ್ರವೀಣ್ ಅವರು ಹೆಂಡತಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರವೀಣ್ ಮತ್ತು ಪ್ರಿಯಾಂಕಾ ಅವರಿಗೆ ಹತ್ತೊಂಬತ್ತನೇ ವಯಸ್ಸಿನಲ್ಲಿ ಮದುವೆಯಾಗಿತ್ತು. ಆದರೆ ಮದುವೆಗೂ ಮುನ್ನವೇ ಪ್ರಿಯಾಂಕಾಗೆ ಮೋಹನ್ ಜೊತೆ ಪ್ರೇಮಸಂಬಂಧವಿತ್ತು. ಮನೆಯವರಿಗೆ ಈ ವಿಷಯ ತಿಳಿದು ಮದುವೆಗೆ ಮುಂದಾದಾಗ ಮೋಹನ್ ಜೊತೆ ಆಕೆ ಬ್ರೇಕಪ್ ಮಾಡಿಕೊಂಡಿದ್ದಳು. ಆದರೆ ವಿಚಿತ್ರವೆಂದರೆ, ಮದುವೆಯಾಗಿ ಭರ್ತಿ 19 ವರ್ಷಗಳ ನಂತರ ಪ್ರಿಯಾಂಕಾಗೆ ಮೋಹನ್ ಆಕಸ್ಮಿಕವಾಗಿ ಮತ್ತೆ ಭೇಟಿಯಾಗಿದ್ದಾನೆ. ಹಳೆಯ ಪ್ರೀತಿ ಮತ್ತೆ ಚಿಗುರೊಡೆದು ಇಬ್ಬರ ನಡುವೆ ಅಕ್ರಮ ಸಂಬಂಧ ಶುರುವಾಗಿದೆ. ಪ್ರಿಯಾಂಕಾ ತನ್ನ ಮೊಬೈಲ್‌ನಲ್ಲಿ ಮೋಹನ್ ನಂಬರ್ ಅನ್ನು ಯಾರಿಗೂ ಸಂಶಯ ಬಾರದಂತೆ 'ಅಡ್ವೋಕೇಟ್ ಸಾನ್ವಿ' (Advocate Saanvi) ಎಂದು ಸೇವ್ ಮಾಡಿಕೊಂಡು ದಿನನಿತ್ಯ ಮಾತನಾಡುತ್ತಿದ್ದಳು ಎಂಬುದು ಬಯಲಾಗಿದೆ.

78
ಮಗುವನ್ನು ಕೊಂದು ಐವಿಎಫ್ ಮೂಲಕ ಹೊಸ ಮಗುವಿಗೆ ಪ್ಲಾನ್?

ಪತಿ ಪ್ರವೀಣ್ ಮಾಡಿರುವ ಮತ್ತೊಂದು ಸ್ಫೋಟಕ ಆರೋಪವೆಂದರೆ, ಪ್ರಿಯಾಂಕಾ ಮತ್ತು ಮೋಹನ್ ಇಬ್ಬರೂ ಪತಿ-ಪತ್ನಿ ಎಂದು ಹೇಳಿಕೊಂಡು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ಐವಿಎಫ್ (IVF) ಚಿಕಿತ್ಸೆಗಾಗಿ ತೆರಳಿದ್ದರು. ನನ್ನ ಮಗುವನ್ನು ಕೊಲೆ ಮಾಡಿ, ಅವರಿಬ್ಬರ ಹೊಸ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೇ ಎಂಬ ಅನುಮಾನವನ್ನು ಪ್ರವೀಣ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೋಹನ್ ತನ್ನ ಸ್ವಂತ ಪತ್ನಿ ವಾಸವಿದ್ದ ಮನೆಯಿಂದ ಕೇವಲ 300 ಮೀಟರ್ ದೂರದಲ್ಲೇ ಪ್ರಿಯಾಂಕಾಗೆ ಪ್ರತ್ಯೇಕ ವಿಲ್ಲಾ ಕೊಡಿಸಿ ಇಟ್ಟಿದ್ದನು. ಈ ಅಕ್ರಮ ಸಂಬಂಧದ ವಿಚಾರ ತಿಳಿದ ಮೋಹನ್ ಪತ್ನಿ ವಿಲ್ಲಾ ಬಳಿ ಬಂದು ದೊಡ್ಡ ಗಲಾಟೆ ಮಾಡಿದ್ದರು. ಈ ಹಿಂದೆ ತಮಗೆ ತೊಂದರೆ ನೀಡಲು ಮಹದೇವಪುರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಸುಳ್ಳು ಕೇಸ್ ಕೂಡ ದಾಖಲಿಸಲಾಗಿತ್ತು ಎಂದು ಪತಿ ಪ್ರವೀಣ್ ಆಳಲು ತೋಡಿಕೊಂಡಿದ್ದಾರೆ.

88
ಆರೋಪಿ ಮೋಹನ್ ಹಿನ್ನೆಲೆ ಏನು?

ಬಂಧಿತ ಆರೋಪಿ ಮೋಹನ್ ದೊಡ್ಡ ರಿಯಲ್ ಎಸ್ಟೇಟ್ ಮತ್ತು ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ ಬಿಸಿನೆಸ್ ಹೊಂದಿದ್ದಾನೆ. ಆತ 'Saanvipriya Buildtech Pvt Ltd' ಎಂಬ ಕಂಪನಿಯಲ್ಲಿ ಪಾರ್ಟ್ನರ್ ಶಿಪ್ ಓನರ್ ಆಗಿದ್ದು, ತನ್ನ ಸಹೋದರನ ಜೊತೆ ಸೇರಿ ಉದ್ಯಮ ನಡೆಸುತ್ತಿದ್ದಾನೆ. ಹೊಸಕೋಟೆ ರಸ್ತೆಯಲ್ಲಿರುವ ಪ್ರಿಯಾಂಕಾ ಕುಟುಂಬದ ಜಮೀನಿನ ವ್ಯಾಜ್ಯದ ಕೇಸ್ ಒಂದರ ಸರಣಿಯಲ್ಲಿ ಮೋಹನ್ ಪರಿಚಯವಾಗಿ, ಹಳೆಯ ಪ್ರೀತಿ ಮತ್ತೆ ಮುಂದುವರಿಯಲು ದಾರಿಯಾಗಿತ್ತು ಎನ್ನಲಾಗಿದೆ. ಸದ್ಯ ಕೊಲೆ ಆರೋಪಿ ಮೋಹನ್ ಪೊಲೀಸರ ಅತಿಥಿಯಾಗಿದ್ದು, ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ, ಮಗುವಿನ ತಾಯಿ ಪ್ರಿಯಾಂಕಾ ಸದ್ಯ ತಲೆಮರೆಸಿಕೊಂಡಿದ್ದಾಳೆ. ಆಕೆಗಾಗಿ ಕಾಡುಗೋಡಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸದಲ್ಲಿದ್ದಾರೆ.

Read more Photos on
click me!

Recommended Stories