2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ದಳಪತಿ ವಿಜಯ್ ಅವರ ಟಿವಿಕ್ ಪಕ್ಷಕ್ಕೆ ಸರ್ಕಾರ ರಚಿಸಲು ಇನ್ನೂ 11 ಶಾಸಕರ ಬೆಂಬಲ ಬೇಕಾಗಿದೆ. ಎಐಎಡಿಎಂಕೆ ಮೈತ್ರಿಯಿಂದ ಹಿಡಿದು ವಿಶ್ವಾಸಮತ ಯಾಚನೆವರೆಗಿನ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ.
ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಹಿಂದೆಂದೂ ಕಾಣದ ಸಂಚಲನ ಸೃಷ್ಟಿಸಿದ್ದಾರೆ. ನಟನಾಗಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಅವರು, ರಾಜಕೀಯದಲ್ಲೂ ಅದೇ ವೇಗದಲ್ಲಿ ಮುನ್ನುಗ್ಗುತ್ತಿದ್ದಾರೆ.
2024ರಲ್ಲಿ ಸ್ಥಾಪನೆಯಾದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷ, ಕೇವಲ ಎರಡು ವರ್ಷಗಳಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳಿಗೆ ಇನ್ನೂ 11 ಶಾಸಕರ ಕೊರತೆ ಇರುವುದೇ ಸದ್ಯದ ರಾಜಕೀಯ ಚದುರಂಗದಾಟದ ಕೇಂದ್ರಬಿಂದುವಾಗಿದೆ.
26
108 ಅಲ್ಲ107
ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಟಿವಿಕೆ ಬಲ 107ಕ್ಕೆ ಇಳಿಯಲಿದೆ. ಹೀಗಾಗಿ ಹೆಚ್ಚುವರಿ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ರಾಜಕೀಯ ವಲಯಗಳ ಮಾಹಿತಿ ಪ್ರಕಾರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕೆಲವು ಶಾಸಕರು ವಿಜಯ್ಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಈ ಬೆಂಬಲ ಸಿಕ್ಕರೆ ಟಿವಿಕೆ ಬಲ 112ಕ್ಕೆ ಏರಬಹುದು. ನಂತರ ಬೇಕಾದ ಸಂಖ್ಯೆ ತಲುಪಲು ಸಣ್ಣ ಪಕ್ಷಗಳ ಬೆಂಬಲ ನಿರ್ಣಾಯಕವಾಗಲಿದೆ.
36
ಡಿಎಂಕೆ ಬೆಂಬಲ?
ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ), ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷಗಳ (ಸಿಪಿಎಂ) ಜೊತೆ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳಿವೆ. ಆದರೆ ಈ ಪಕ್ಷಗಳು ಡಿಎಂಕೆ ಮೈತ್ರಿಕೂಟದಲ್ಲಿ ದೀರ್ಘಕಾಲದಿಂದ ಇರುವುದರಿಂದ, ದಿಢೀರ್ ಎಂದು ವಿಜಯ್ ಬಣಕ್ಕೆ ಬರುತ್ತವೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಚುನಾವಣೆ ವೇಳೆ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ವಿಜಯ್, ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದರು. ಹೀಗಾಗಿ ಡಿಎಂಕೆ ಕಡೆಯಿಂದ ಬೆಂಬಲ ಸಿಗುವ ಸಾಧ್ಯತೆ ಕಡಿಮೆ. 'ವಿರೋಧ ಪಕ್ಷವಾಗಿ ಕೂರಲು ಸಿದ್ಧ, ಆದರೆ ಬೆಂಬಲ ನೀಡುವುದಿಲ್ಲ' ಎಂಬ ನಿಲುವಿನಲ್ಲಿ ಡಿಎಂಕೆ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಈ ನಡುವೆ, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದೇ ವಿಜಯ್ಗೆ ಸುಲಭದ ದಾರಿ ಎಂಬ ಅಭಿಪ್ರಾಯ ಬಲಗೊಳ್ಳುತ್ತಿದೆ. ಟಿವಿಕೆ ಪಕ್ಷದವರು ಎಐಎಡಿಎಂಕೆ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಒಂದು ವೇಳೆ ಮೈತ್ರಿ ಸಾಧ್ಯವಾಗದಿದ್ದರೆ, ಕೆಲವು ಶಾಸಕರನ್ನು ವೈಯಕ್ತಿಕವಾಗಿ ಸೆಳೆದು ಬೆಂಬಲ ಪಡೆಯುವ ಪ್ರಯತ್ನಗಳೂ ನಡೆಯಬಹುದು. ಇದು ಅಪಾಯಕಾರಿ ರಾಜಕೀಯ ನಡೆಯಾಗಿದ್ದರೂ, ಬೇಗನೆ ಅಧಿಕಾರ ಹಿಡಿಯಲು ಸಹಾಯ ಮಾಡುತ್ತದೆ.
56
ವಿಶ್ವಾಸಮತ ಯಾಚನೆಯಲ್ಲಿ ಕಸರತ್ತು
ಮೈತ್ರಿ ರಾಜಕೀಯ ವಿಫಲವಾದರೂ ವಿಜಯ್ ಬಣದಲ್ಲಿ ಮತ್ತೊಂದು ಲೆಕ್ಕಾಚಾರ ಸಿದ್ಧವಾಗಿದೆ ಎನ್ನಲಾಗಿದೆ. ಅದೆಂದರೆ, ವಿಶ್ವಾಸಮತ ಯಾಚನೆ ವೇಳೆ ಕೆಲವು ಶಾಸಕರು ಗೈರುಹಾಜರಾದರೆ ಬಹುಮತಕ್ಕೆ ಬೇಕಾದ ಸಂಖ್ಯೆ ಕಡಿಮೆಯಾಗುತ್ತದೆ. 234 ಸದಸ್ಯರಿರುವ ವಿಧಾನಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು ಮತದಾನಕ್ಕೆ ಬರದಿದ್ದರೆ, ಬಹುಮತದ ಗುರಿ 103ಕ್ಕೆ ಇಳಿಯಬಹುದು. ಇದು ಸದ್ಯದ ಟಿವಿಕೆ ಬಲಕ್ಕೆ (107) ತೀರಾ ಹತ್ತಿರದಲ್ಲಿದೆ. ಈ ತಂತ್ರದ ಬಗ್ಗೆಯೂ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.
66
ಪದಗ್ರಹಣ ಯಾವಾಗ?
ಸದ್ಯ ತಮಿಳುನಾಡು ರಾಜಕೀಯದ ಸಂಪೂರ್ಣ ಗಮನ ರಾಜ್ಯಪಾಲರ ಮುಂದಿನ ನಡೆ ಮೇಲೆ ನೆಟ್ಟಿದೆ. ವಿಜಯ್ ಅವರಿಂದ 118 ಶಾಸಕರ ಬೆಂಬಲ ಪತ್ರವನ್ನು ಕೇಳುತ್ತಾರೆಯೇ ಅಥವಾ ನೇರವಾಗಿ ಸರ್ಕಾರ ರಚಿಸಲು ಆಹ್ವಾನಿಸಿ ನಂತರ ವಿಶ್ವಾಸಮತ ಸಾಬೀತುಪಡಿಸಲು ಅವಕಾಶ ನೀಡುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸಿನಿಮಾವನ್ನು ಸಂಪೂರ್ಣವಾಗಿ ಬಿಟ್ಟು ರಾಜಕೀಯಕ್ಕೆ ಬಂದಿರುವ ವಿಜಯ್, ಇದೀಗ ಮುಖ್ಯಮಂತ್ರಿ ಹುದ್ದೆಯ ಅತೀ ಸಮೀಪದಲ್ಲಿದ್ದಾರೆ.
ಮೇ 7 ರಂದು ಪದಗ್ರಹಣ ನಡೆಯಬಹುದು ಎಂಬ ವದಂತಿಗಳಿದ್ದರೂ, ಮೈತ್ರಿ ಲೆಕ್ಕಾಚಾರ ಮತ್ತು ಬೆಂಬಲದ ರಾಜಕೀಯವೇ ಅಂತಿಮ ನಿರ್ಧಾರವನ್ನು ನಿರ್ಧರಿಸಲಿದೆ.
ಎಂಜಿಆರ್ ಶೈಲಿಯಲ್ಲಿ ವಿಜಯ್ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. ತಮಿಳುನಾಡು ರಾಜಕೀಯದ ಮುಂದಿನ ಕೆಲವು ದಿನಗಳು, ಒಂದು ಥ್ರಿಲ್ಲರ್ ಸಿನಿಮಾದ ಕ್ಲೈಮ್ಯಾಕ್ಸ್ಗಿಂತ ಕಡಿಮೆಯಿರದು ಎಂಬುದು ಮಾತ್ರ ಖಚಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ