ವೈದ್ಯರು ಮೃತನೆಂದು ಘೋಷಿಸಿದ್ದರು, ಮಗನನ್ನು ಉಳಿಸಿದ ತಾಯಿ ಮಮತೆ: ಈ ಘಟನೆ ನಡೆದಿದ್ದು ಹರ್ಯಾಣದ ಬಹಾದ್ದೂರ್ಗಢದ ಕಿಲೆ ಮೊಹಲ್ಲಾದಲ್ಲಿ. ಇಲ್ಲಿನ ನಿವಾಸಿಗಳಾದ ಹಿತೇಶ್ ಹಾಗೂ ಜಾಹ್ನವಿ ದಂಪತಿಯ ಆರು ವರ್ಷದ ಮಗನಿಗೆ ಟೈಫಾಯ್ಡ್ ಆಗಿತ್ತು. ಹೀಗಿರುವಾಗ ದಂಪತಿ ತಮ್ಮ ಮಗನನ್ನು ರೋಹ್ತಕ್ನ ಖಾಸಗಿ ಆಸ್ಪತ್ರೆಗೆ ದಾಕಲಿಸಿದ್ದರು. ಆದರೆ ಇಲ್ಲಿ ಬಾಲಕನ ಪರಿಶೀಲಿಸಿದ ವೈದ್ಯರು ಆತನನ್ನು ದೆಹಲಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೂಡಲೇ ಬಾಲಕನ್ನು ದೆಹಲಿಗೊಯ್ಯಲಾಗಿದೆ. ಆದರೆ ಇಲ್ಲಿ ಮೇ 26ರಂದು ಚಿಕಿತ್ಸೆ ಮಧ್ಯೆ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ದಿಕ್ಕು ತೋಚದ ತಂದೆ ತಾಯಿ ಮಗನ ಶವದೊಂದಿಗೆ ಮನೆಗೆ ಬಂದಿದ್ದಾರೆ.
undefined
ಮಗನ ಶವ ಅಪ್ಪಿಕೊಂಡು ಮರಳಿ ಬಾ ಕಂದ ಎನ್ನುತ್ತಲೇ ಇದ್ದ ತಾಯಿ:ಕತ್ತಲೆಯಾಗಿದ್ದ ಕಾರಣ ಕುಟುಂಬ ಸದಸ್ಯರು ಉಪ್ಪು ಹಾಗೂ ಐಸ್ ಸಂಗ್ರಹಿಸಿ ಶವವನ್ನು ಮನೆಯಲ್ಲೇ ಇಟ್ಟಿದ್ದಾರೆ. ಬೆಳಗ್ಗಾಗುತ್ತಿದ್ದಂತೆಯೇ ಬಾಲಕನ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ. ಆಸುಪಾಸಿನ ಮನೆಯವರು ಹಾಗೂ ಕುಟುಂಬಸ್ಥರೂ ಆಗಮಿಸಿದ್ದರು. ಅನೇಕ ಮಂದಿ ಸ್ಮಶಾನಕ್ಕೂ ತಲುಪಿದ್ದರು. ಆದರೆ ಇಷ್ಟೆಲ್ಲಾ ನಡೆದರು, ಆ ಕಂದನ ಒಂಭತ್ತು ತಿಂಗಳು ಹೊತ್ತು, ಹೆತ್ತು ಆರು ವರ್ಷ ಆತನ ಕೋಪ, ನಗು, ಅಳು, ಕೀಟಲೆ ಎಲ್ಲವನ್ನೂ ನೋಡಿಕೊಂಡಿದ್ದ ತಾಯಿ ಮಾತ್ರ ಶವ ಕೊಡಲು ಸಿದ್ಧರವಿರಲಿಲ್ಲ.
undefined
ಬಾಯಿಯಿಂದ ಗಾಳಿ ಕೊಡ್ತಿದ್ದ ತಂದೆ, ಕಚ್ಚಿದ ಮಗ:ತಾಯಿಯ ಮಮತೆ, ನೋವು ಕಂಡು ಅಲ್ಲಿದ್ದವರೆಲ್ಲಾ ಭಾವುಕರಾಗಿದ್ದರು. ಆಕೆ ಪದೇ ಪದೇ ಕಂದಾ ಒಂದು ಬಾರಿ ಎದ್ದೇಳು, ಮರಳಿ ಬಾ ಎಂದಷ್ಟೇ ಹೇಳುತ್ತಿದ್ದಳು. ಪದೇ ಪದೇ ಮುಖದ ಮೇಲಿದ್ದ ಬಟ್ಟೆ ತೆಗೆದು ಮಗನ ಹಣೆಗೆ ಮುತ್ತಿಡುತ್ತಿದ್ದಳು. ಆದರೆ ಅಷ್ಟರಲ್ಲಿ ನೋಡ ನೋಡುತ್ತಿದ್ದಂತೆಯೇ ಮೃತ ದೇಹದಲ್ಲಿ ಚಲನವಲನ ಆರಂಭವಾಗಿದೆ. ಅಲ್ಲಿದ್ದವರೆಲ್ಲಾ ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದರು. ಆದರೆ ತಡ ಮಾಡದ ತಂದೆ ಹಿತೇಶ್ ಹಾಗೂ ಕುಟುಂಬದ ಕೆಲ ಮಂದಿ ಕೂಡಲೇ ಬಾಲಕನಿಗೆ ಬಾಯಿಗೆ ಬಾಯಿ ಇಟ್ಟು ಉಸಿರಾಟ ನೀಡಲಾರಂಭಿಸಿದರು. ಇನ್ನು ಕೆಲವರು ಕೈ, ಕಾಲನ್ನು ಉಜ್ಜಲಾರಂಭಿಸಿದರು. ಈ ನಡುವೆ ಬಾಲಕ ತಂದದೆಯ ತುಟಿಯನ್ನೂ ಒಂದು ಬಾರಿ ಕಚ್ಚಿದ್ದಾನೆನ್ನಲಾಗಿದೆ. ಇದರಿಂದ ಅಲ್ಲಿದ್ದವರೆಲ್ಲರ ಮುಖದಲ್ಲಿ ಸಂಭ್ರಮ ಮನೆ ಮಾಡಿದೆ. ಕೂಡಲೇ ಮಗುವನ್ನೆತ್ತಿ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ.
undefined
ತಾಯಿಯ ಮಮತೆಯೇ ಬಾಲಕನ ಬದುಕಿಸಿದೆ:ಮೇ 26ರಂದು ಬಾಲಕನನ್ನು ಆಸ್ಪತ್ರೆಗೊಯ್ದ ಕುಟುಂಬಸ್ಥರು ಚಿಕಿತ್ಸೆ ನೀಡುವಂತೆ ಹೇಳಿದ್ದಾರೆ. ಬಾಲಕನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮೊದಲೇ ಆತ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಆದರೆ ಬಾಲಕ ಚಿಕಿತ್ಸೆಗೆ ಬೇಗ ಸ್ಪಂದಿಸಿ, ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಮಂಗಳವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಾಗ ಬಾಲಕನ ನೋಡಲು ಮನೆ ಎದುರು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಘಟನೆಗೆ ಸಾಕ್ಷಿಯಾದ ಪ್ರತಿಯೊಬ್ಬರೂ ತಾಯಿಯ ಮಮತೆಯೇ ಬಾಲಕನನ್ನು ಬದುಕಿಸಿದೆ ಎಂದಿದ್ದಾರೆ. ಕೆಲ ಸಮಯದ ಹಿಂದೆ ಮನೆ ಮಾಡಿದ್ದ ಶೋಕದ ವಾತಾವರಣ ಮಾಯವಾಗಿ ಸಂಭ್ರಮ ನಿರ್ಮಾಣವಾಗಿದೆ.
undefined