
ಗುರುವಾರ ಮಧ್ಯಾಹ್ನ, ಭಾರತದಲ್ಲಿ ದೊಡ್ಡ ಪ್ರಮಾಣದ ವಿಮಾನ ದುರಂತ ಸಂಭವಿಸಿದೆ. ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು, ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿ 232 ಪ್ರಯಾಣಿಕರು, 10 ಸಿಬ್ಬಂದಿ ಸದಸ್ಯರು ಮತ್ತು 2 ಪೈಲಟ್ಗಳು ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ ತಕ್ಷಣವೇ ತಾಂತ್ರಿಕ ತೊಂದರೆಯಿಂದಾಗಿ ಭೂಮಿಗೆ ಪತನಗೊಂಡಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ದುರಂತಗಳಲ್ಲೊಂದು ಎನ್ನಲಾಗುತ್ತಿದೆ. ಭಾರತದಲ್ಲಿ ಈವರೆಗೆ ಸಂಬಂವಿಸಿದ ಭೀಕರ ವಿಮಾನ ದುರಂತದ ಬಗ್ಗೆ ಇಲ್ಲಿ ನೀಡಲಾಗಿದೆ.
1996ರ ನವೆಂಬರ್ 12ರಂದು, ಭಾರತವು ತನ್ನ ಇತಿಹಾಸದಲ್ಲಿಯೇ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದನ್ನು ಕಂಡಿತು. ಹರಿಯಾಣದ ಚರ್ಖಿ ದಾದ್ರಿ ಬಳಿ ನಡೆದ ಈ ದುರಂತದಲ್ಲಿ, ಸೌದಿ ಅರೇಬಿಯನ್ ಏರ್ಲೈನ್ಸ್ನ ಬೋಯಿಂಗ್ 747 ಮತ್ತು ಕಝಾಕಿಸ್ತಾನ್ ಏರ್ಲೈನ್ಸ್ನ ಇಲ್ಯುಶಿನ್ IL-76 ವಿಮಾನಗಳು ಆಕಾಶದ ಮರ್ಧಯೆ ಡಿಕ್ಕಿಯಾಗಿ ಪತನಗೊಂಡವು. ಇದೊಂದು ಮಧ್ಯ ವಾಯುಘರ್ಷಣೆ (mid-air collision) ಆಗಿದ್ದು, ಎರಡೂ ವಿಮಾನದಲ್ಲಿದ್ದ ಒಟ್ಟು 349 ಪ್ರಯಾಣಿಸಕರು ಸ್ಥಳದಲ್ಲೇ ಮೃತಪಟ್ಟರು. ಇದು ವಿಶ್ವದ ಇತಿಹಾಸದಲ್ಲಿಯೇ ಅತ್ಯಂತ ಮಾರಕ ಮಧ್ಯವಾಯು ಡಿಕ್ಕಿಯಾಗಿ ದಾಖಲಾಗಿದ್ದು, ಭಾರತೀಯ ಆಕಾಶದಲ್ಲಿ ಈವರೆಗಿನ ಅತ್ಯಂತ ಹೀನಾಯ ವಿಮಾನ ದುರಂತವಾಗಿ ಪರಿಗಣಿಸಲಾಗಿದೆ. ಅಪಘಾತಕ್ಕೆ ಮುಖ್ಯ ಕಾರಣವೆಂದರೆ, ವಿಮಾನಗಳ ನಡುವಿನ ಸಂವಹನದ ಕೊರತೆ. ಈ ದೋಷದ ಪರಿಣಾಮವಾಗಿ ಕಝಾಕಿಸ್ತಾನ್ ವಿಮಾನವು ತನ್ನ ನಿಗದಿತ ಎತ್ತರಕ್ಕಿಂತ ಕೆಳಗೆ ಇಳಿದಿದ್ದು, ತಕ್ಷಣವೇ ಸೌದಿ ವಿಮಾನ ಡಿಕ್ಕಿಯಾಯ್ತು. ಈ ದುರ್ಘಟನೆ ನಂತರ, ಭಾರತೀಯ ವಾಯುಯಾನದಲ್ಲಿ ಹಲವು ಪ್ರಮುಖ ಬದಲಾವಣೆಗಳು ನಡೆದವು. ಆಕಾಶ ಸಂಚಾರ ನಿಯಂತ್ರಣ ವ್ಯವಸ್ಥೆ ಮತ್ತು ಪೈಲಟ್ಗಳ ತರಬೇತಿ ಕ್ರಮಗಳು ಬಲಗೊಂಡವು.
2010ರ ಮೇ 22ರಂದು, ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಖ್ಯೆ 812 ಭೀಕರ ಅಪಘಾತಕ್ಕೊಳಗಾಯಿತು. ಬೋಯಿಂಗ್ 737-800 ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ರನ್ವೇ ದಾಟಿ, ತೀವ್ರ ಇಳಿಜಾರಿನಿಂದ ಆವೃತವಾದ ಟೇಬಲ್ಟಾಪ್ ಪರ್ವತದ ಬಯಲಿಗೆ ಬಿದ್ದು ಭಾರೀ ಸ್ಫೋಟಗೊಂಡಿತು. ಒಟ್ಟು 166 ಪ್ರಯಾಣಿಕರಲ್ಲಿ 158 ಜನರು ತಮ್ಮ ಪ್ರಾಣ ಕಳೆದುಕೊಂಡರು, ಹಾಗೂ ಕೆಲವರು ಗಂಭೀರವಾಗಿ ಗಾಯಗೊಂಡರು. ಇದು ಭಾರತೀಯ ನಾಗರಿಕ ವಿಮಾನಯಾನ ಇತಿಹಾಸದಲ್ಲಿಯೇ ಅತ್ಯಂತ ದುಃಖದ ಲ್ಯಾಂಡಿಂಗ್ ಅಪಘಾತಗಳಲ್ಲಿ ಒಂದಾಗಿ ದಾಖಲಾಯಿತು. ಟೇಬಲ್ಟಾಪ್ ರನ್ವೇ ಎಂಬುದು ಅದರ ಸುತ್ತಲೂ ಇಳಿಜಾರಿನಿಂದ ಆವೃತವಾಗಿರುವ ಪರ್ವತದ ಮೇಲಿರುವ ರನ್ವೇ ಆಗಿದ್ದು, ಇಂತಹ ಸ್ಥಳಗಳಲ್ಲಿ ಇಳಿಯುವಾಗ ಪೈಲಟ್ಗಳಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಿರುತ್ತದೆ. ಈ ದುರ್ಘಟನೆ ನಂತರ, ಭಾರತದಲ್ಲಿ ಟೇಬಲ್ಟಾಪ್ ರನ್ವೇಗಳ ಸುರಕ್ಷತೆ ಕುರಿತಂತೆ ತೀವ್ರ ಚರ್ಚೆ ಆರಂಭವಾಯಿತು ಮತ್ತು ಹಲವು ತಾಂತ್ರಿಕ ಸುಧಾರಣೆ ಆರಂಭವಾಯಿತು.
2020ರ ಆಗಸ್ಟ್ 7ರಂದು, ಕೋಝಿಕ್ಕೋಡ್ (ಕ್ಯಾಲಿಕಟ್) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ IX-1344 ಭೀಕರ ಅಪಘಾತಕ್ಕೀಡಾಯಿತು. ವಂದೇ ಭಾರತ್ ಮಿಷನ್ದ ಭಾಗವಾಗಿ ದುಬೈನಿಂದ ಭಾರತಕ್ಕೆ ಹಿಂದಿರುಗುತ್ತಿದ್ದ ಈ ವಿಮಾನದಲ್ಲಿ 190 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಮಳೆ ಮತ್ತು ಕಳಪೆ ಹವಾಮಾನದ ನಡುವೆ ಟೇಬಲ್ಟಾಪ್ ರನ್ವೇನಲ್ಲಿ ಲ್ಯಾಂಡ್ ಆಗುತ್ತಿರುವಾಗ, ವಿಮಾನವು ನಿಯಂತ್ರಣ ತಪ್ಪಿ 30 ಅಡಿ ಆಳದ ಕಂದಕಕ್ಕೆ ಜಾರಿತು. ತೀವ್ರ ಹೊಡೆತದಿಂದ ವಿಮಾನ ಎರಡು ಭಾಗಗಳಾಗಿ ಮುರಿಯಿತು. ಈ ಭೀಕರ ಅಪಘಾತದಲ್ಲಿ 18 ಜನರು ಪ್ರಾಣ ಕಳೆದುಕೊಂಡರು, ಆಗುಹೋಗು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡರು. ತನಿಖೆ ಪ್ರಕಾರ, ಈ ಘಟನೆಗೆ ಕಳಪೆ ಹವಾಮಾನ ಮತ್ತು ಸವಾಲಿನ ರನ್ವೇ ಪರಿಸ್ಥಿತಿಗಳು ಕಾರಣವಾಗಿವೆ. ಈ ಘಟನೆ, ಭಾರತದಲ್ಲಿನ ಟೇಬಲ್ಟಾಪ್ ವಿಮಾನ ನಿಲ್ದಾಣಗಳ ಸುರಕ್ಷತೆ ಮತ್ತು ತುರ್ತು ನಿರ್ವಹಣಾ ವ್ಯವಸ್ಥೆಗಳ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಯಿತು.
ಜುಲೈ 17, 1998 ರಂದು, ಬಿಹಾರದ ಪಾಟ್ನಾದಲ್ಲಿ ಸಂಭವಿಸಿದ ಅಲೈಯನ್ಸ್ ಏರ್ ಫ್ಲೈಟ್ 7412 ದುರಂತವು ಭಾರತೀಯ ವಾಯುಯಾನ ಇತಿಹಾಸದಲ್ಲಿ ಒಂದಾಗಿದೆ. ವಿಮಾನವು ಪಾಟ್ನಾ ವಿಮಾನ ನಿಲ್ದಾಣಕ್ಕೆ ಇಳಿಯುವ ವೇಳೆ, ಪೈಲಟ್ "ಗೋ-ರೌಂಡ್" (ಪುನಃ ಏರಲು) ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲೇ ನಿಯಂತ್ರಣ ತಪ್ಪಿ, ಹತ್ತಿರದ ಜನನಿಬಿಡ ಪ್ರದೇಶಕ್ಕೆ ಬಿದ್ದಿತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲ 55 ಜನರು, ಜೊತೆಗೆ ನೆಲದಲ್ಲಿದ್ದ ಐದು ಜನರು ದುರ್ಘಟನೆಯ ಬಲಿಯಾದರು. ಸ್ಥಳೀಯ ನಿವಾಸಿಗಳ ಮನೆಗಳು ಹಾಗೂ ಇತರ ಕಟ್ಟಡಗಳು ಕೂಡ ಈ ಅಪಘಾತದಲ್ಲಿ ಹಾನಿಗೊಳಗಾದವು. ಈ ಘಟನೆ ಪೈಲಟ್ ತರಬೇತಿ, ವಿಮಾನ ನಿಯಂತ್ರಣ ಮತ್ತು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿತು. ಇದು ನಗ್ನವಾಗಿ ಬಹಿರಂಗಗೊಂಡ ನಂತರದ ತನಿಖೆಗಳಲ್ಲಿ ಪೈಲಟ್ರ ನಿರ್ಧಾರ ಮತ್ತು ತಕ್ಷಣದ ಪ್ರತಿಕ್ರಿಯೆಯ ಕೊರತೆ ಮಹತ್ವದ ಕಾರಣಗಳಾಗಿ ಗುರುತಿಸಲಾಯಿತು.
1990ರ ಫೆಬ್ರವರಿ 14ರಂದು, ಇಂಡಿಯನ್ ಏರ್ಲೈನ್ಸ್ ಫ್ಲೈಟ್ 605 ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಳಿಯುವ ಸಮಯದಲ್ಲಿ ಭೀಕರ ಅಪಘಾತಕ್ಕೀಡಾಯಿತು. ವಿಮಾನವು ಏರ್ಬಸ್ A320 ಮಾದರಿಯದ್ದು. ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್ರಿಂದ ತೊಂದರೆ ಉಂಟಾಗಿ ವಿಮಾನವು ರನ್ವೇ ಮೀರಿಸಿ, ನೇರವಾಗಿ ಆವರಣದ ಹೊರಗೆ ಹೋಗಿ ಪತನಗೊಂಡಿತು. ಈ ದುರಂತದಲ್ಲಿ ಒಟ್ಟು 146 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿಯರು ಇದ್ದರು. ಅವುಗಳಲ್ಲಿ 92 ಜನ ಬಲಿಯಾದರು ಹಲವರು ಗಂಭೀರವಾಗಿ ಗಾಯಗೊಂಡರು. ತನಿಖೆಯು ಈ ಅಪಘಾತಕ್ಕೆ ಪೈಲಟ್ ದೋಷ ಹಾಗೂ ಕಾಕ್ಪಿಟ್ ವಿನ್ಯಾಸದ ಜಟಿಲತೆಗಳು ಕಾರಣವೆಂದು ನಿರ್ಧರಿಸಿತು. ಈ ಘಟನೆ ನಂತರ, A320 ವಿಮಾನದ ಕಾಕ್ಪಿಟ್ ವಿನ್ಯಾಸ, ಪೈಲಟ್ ತರಬೇತಿ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತಾಗಿ ಗಂಭೀರವಾಗಿ ಪರಿಗಣಿಸಲಾಯಿತು. ಈ ಅಪಘಾತವು ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತಾ ನಿಯಮಗಳು ಮತ್ತಷ್ಟು ಬಲಪಡಿಸಲು ಪ್ರೇರಣೆಯಾಯಿತು.
ಅಕ್ಟೋಬರ್ 19, 1988 ರಂದು ಅಹಮದಾಬಾದ್ನಲ್ಲಿ ಮತ್ತೊಂದು ಭೀಕರ ವಿಮಾನ ದುರಂತ ಸಂಭವಿಸಿತ್ತು. ಇಂಡಿಯನ್ ಏರ್ಲೈನ್ಸ್ ಫ್ಲೈಟ್ IC-113 ನಗರದ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ, ಅಂತಿಮ ಇಳಿಯುವ ಹಂತದಲ್ಲೇ ಅಪಘಾತಕ್ಕೀಡಾಯಿತು. ಈ ಭೀಕರ ಅಪಘಾತದಲ್ಲಿ 130 ಜನರು ಸಾವಿಗೀಡಾದರು, ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಮಾರಕವಾದ ವಿಮಾನ ದುರಂತಗಳಲ್ಲಿ ಒಂದಾಗಿದ್ದು, ಅಂದಿನ ಆಘಾತ ಇನ್ನೂ ಜನರ ನೆನಪಿನಲ್ಲಿ ಜೀವಂತವಾಗಿದೆ. ಈ ಘಟನೆ ಇಂದು ಅಹಮದಾಬಾದ್ನಲ್ಲಿ ನಡೆದ ಇತ್ತೀಚಿನ ವಿಮಾನ ಅಪಘಾತದ ಹಿನ್ನೆಲೆ ಯನ್ನು ಮತ್ತೊಮ್ಮೆ ಚರ್ಚೆಗೆ ತರುತ್ತಿದೆ, ಏಕೆಂದರೆ ಎರಡೂ ದುರಂತಗಳು ಸಂಭವಿಸಿದ ಸ್ಥಳ ಅಹಮದಾಬಾದ್ ನಗರವೇ ಆಗಿದೆ. 1988ರ ಈ ದುರಂತವು ವಿಮಾನ ಇಳಿಯುವ ಹಂತದ ಸುರಕ್ಷತೆ, ದೃಷ್ಯಮಾನತೆ, ಹಾಗೂ ಹವಾಮಾನದ ಪ್ರಭಾವ ಕುರಿತು ಮಹತ್ವದ ಪಾಠಗಳನ್ನು ಕಲಿತಿತ್ತು.
ಭಾರತದ ವಾಯುಯಾನ ಇತಿಹಾಸದಲ್ಲಿ ಅತೀ ಭಯಾನಕವಾಗಿ ನೆನಪಾಗುವ ಘಟನೆಯೆಂದರೆ ಕಾನಿಷ್ಕ ಬಾಂಬ್ ದಾಳಿ. ಇದು ಜೂನ್ 23, 1985ರಂದು ನಡೆದಿದೆ. ಏರ್ ಇಂಡಿಯಾ ಫ್ಲೈಟ್ 182, ಕೆನಡಾದಿಂದ ಭಾರತಕ್ಕೆ ಆಗಮಿಸುತ್ತಿದ್ದಾಗ, ಐರ್ಲೆಂಡ್ ಕರಾವಳಿಯ ಆಕಾಶದಲ್ಲಿ ಸಿಖ್ ಉಗ್ರಗಾಮಿಗಳು ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿತು. ಈ ಭೀಕರ ಘಟನೆಯಲ್ಲಿ 329 ಪ್ರಯಾಣಿಕರು ಮತ್ತು ಸಿಬ್ಬಂದಿ ಎಲ್ಲರೂ ತಮ್ಮ ಜೀವವನ್ನು ಕಳೆದುಕೊಂಡರು. ಇದು ಕೇವಲ ಭಾರತದಲ್ಲಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿಯೂ ವಾಯುಯಾನ ಭದ್ರತೆಗೆ ಸಂಬಂಧಿಸಿದಂತೆ ಸಂಭವಿಸಿದ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿ ಇತಿಹಾಸದಲ್ಲಿ ನೆನಪಾಗುತ್ತಿದೆ. ಈ ದುರಂತವು ಅಂತರರಾಷ್ಟ್ರೀಯ ವಿಮಾನಯಾನ ಕ್ಷೇತ್ರದಲ್ಲಿ ಭದ್ರತಾ ದುರ್ಬಲತೆಗಳ ಕಠಿಣ ಎಚ್ಚರಿಕೆಯಾಗಿ ಬದಲಾಗಿದೆ ಮತ್ತು ಇದರಿಂದಾಗಿ ವಾಯುಯಾನ ಭದ್ರತೆಗೆ ಸಂಬಂಧಿಸಿದ ಕ್ರಮಗಳಲ್ಲಿ ಹಲವು ತಿದ್ದುಪಡಿ ಮತ್ತು ಕಠಿಣ ನಿಯಮಗಳು ಜಾರಿಗೆ ಬಂದವು.
1982ರ ಜೂನ್ 21ರಂದು, ಏರ್ ಇಂಡಿಯಾ ಫ್ಲೈಟ್ 403 ಬಾಂಬೆ (ಈಗಿನ ಮುಂಬೈ) ವಿಮಾನ ನಿಲ್ದಾಣದತ್ತ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತಕ್ಕೀಡಾಯಿತು. ಈ ವೇಳೆ ಭಾರೀ ಮಳೆಯು, ವಿಪತ್ತು ಸಂಭವಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಭಾರೀ ಮಾನ್ಸೂನ್ ಮಳೆಯ ಕಾರಣದಿಂದ, ಲ್ಯಾಂಡಿಂಗ್ ಸಂದರ್ಭದಲ್ಲಿದ್ದ ಗೋಚರತೆಯ ಕೊರತೆ ಮತ್ತು ಆರ್ದ್ರ ರನ್ವೇ ಪರಿಸ್ಥಿತಿಗಳ ನಡುವೆ ವಿಮಾನವು ನಿಯಂತ್ರಣ ತಪ್ಪಿ ಪತನಗೊಂಡಿತು. ವಿಮಾನದಲ್ಲಿದ್ದ 111 ಪ್ರಯಾಣಿಕರು ಮತ್ತು ಸಿಬ್ಬಂದಿಯ ಪೈಕಿ 17 ಜನರು ತಮ್ಮ ಪ್ರಾಣ ಕಳೆದುಕೊಂಡರು. ಬಹುತೆಕ ಜನರು ಬದುಕುಳಿದರೂ ಈ ದುರಂತವು, ಹವಾಮಾನದ ಪ್ರಭಾವ ಮತ್ತು ರನ್ವೇ ಸುರಕ್ಷತೆಯ ಮಹತ್ವವನ್ನು ಒತ್ತಿಹೇಳುವಂತಾಗಿದ್ದು, ತುರ್ತು ನಿರ್ವಹಣಾ ಕ್ರಮಗಳ ಅಗತ್ಯತೆಯ ಮೇಲೂ ಬೆಳಕು ಚೆಲ್ಲಿತು.
1978ರ ಜನವರಿ 1ರಂದು, ಹೊಸ ವರ್ಷದ ದಿನವೇ ಭಾರತವು ತನ್ನ ಇತಿಹಾಸದಲ್ಲಿನ ಅತ್ಯಂತ ದುಃಖದ ವಾಯುಯಾನ ಅಪಘಾತಗಳಲ್ಲಿ ಒಂದನ್ನು ಅನುಭವಿಸಿತು. ಏರ್ ಇಂಡಿಯಾ ಫ್ಲೈಟ್ 855, ಮುಂಬೈನಿಂದ ಹೊರಟು ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ವೈಫಲ್ಯ ಕಾರಣವಾಗಿ ಅರೇಬಿಯನ್ ಸಮುದ್ರ ದಲ್ಲಿ ಪತನಗೊಂಡಿತು. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 213 ಜನರೂ ಬಲಿಯಾದರು. ಈ ಘಟನೆ ನಂತರ, ಭಾರತದಲ್ಲಿ ಪೈಲಟ್ ತರಬೇತಿ ವಿಧಾನಗಳು, ವಿಮಾನಗಳ ಉಪಕರಣಗಳ ನಿರ್ವಹಣೆ ಮತ್ತು ವಿಮಾನ ದಿಕ್ಕು ನಿರ್ವಹಣಾ ವ್ಯವಸ್ಥೆಗಳಲ್ಲಿ ಹಲವು ಸುಧಾರಣೆಗಳನ್ನು ತರಲಾಯಿತು. ಈ ದುರಂತವು, ದೇಶದ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತಾ ಮಾನದಂಡಗಳನ್ನು ಮರುಪರಿಶೀಲಿಸುವ ತೀವ್ರ ಅಗತ್ಯವಿದೆಯೆಂಬ ಸಂದೇಶವನ್ನು ಬಲವಾಗಿ ಮೂಡಿಸಿತು.
ವಿಮಾನ ಅಪಹರಣ ಕೂಡ ಭಾರತ ಕಂಡ ಮತ್ತೊಂದು ಕಳವಳಕಾರಿ ಅಂಶ. 1971 ರಿಂದ 2000ರ ಅವಧಿಯಲ್ಲಿ 15 ಕ್ಕೂ ಹೆಚ್ಚು ಅಪಹರಣ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ, 1999ರಲ್ಲಿ ಇಂಡಿಯನ್ ಏರ್ಲೈನ್ಸ್ ಫ್ಲೈಟ್ 814 ನ್ನು ಉಗ್ರರು ಅಪಹರಿಸಿ ಅಫ್ಗಾನಿಸ್ತಾನದ ಕಂದಹಾರ್ಗೆ ಕೊಂಡೊಯ್ದರು. ಬಹುತೇಕ ಪ್ರಯಾಣಿಕರು ಬದುಕುಳಿದರೂ, ಉಗ್ರರ ಬಿಡುಗಡೆಗಾಗಿ ಸರ್ಕಾರ ಒತ್ತಡಕ್ಕೆ ಒಳಗಾಯಿತು.