ತಿರುಪತಿ ದೇವಸ್ಥಾನ ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರ. ಪ್ರತಿ ದಿನ ಲಕ್ಷಾಂತರ ಮಂದಿ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಹೀಗೆ ಬಂದ 20ರ ಹರೆಯದ ಯುವಕ ಕೂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪುನೀತನಾಗಿದ್ದಾನೆ.
ಸೆಪ್ಟೆಂಬರ್ 24 ರಂದು ತಿರುಪತಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ಯುವಕ ನಿಲಾವರ್ ವಿಷ್ಣು ಬಳಿಕ ತಿರುಮಲ ದೇವಸ್ಥಾನ ಟ್ರಸ್ಟ್ನ ಸಿಬ್ಬಂಧಿಗಳನ್ನು ಕರೆದೊಯ್ಯುವ ಬಸ್ ಚಾಲಕನ ಜೊತೆ ಸ್ನೇಹ ಬೆಳೆಸಿದ್ದಾನೆ.
ಬಾಲಕನಂತಿದ್ದ ನಿಲಾವರ್ ವಿಷ್ಣು ಜೊತೆ ಆತ್ಮೀಯವಾಗಿ ಮಾತನಾಡಿದ ಬಸ್ ಚಾಲಕ, ಆತನಿಗೆ ಊಟ ಕೊಡಿಸಿದ್ದಾನೆ. ಬಳಿಕ ಮನೆಗೆ ಮರಳಲು ಹಣವನ್ನೂ ನೀಡಿದ್ದಾನೆ.
ಬಸ್ ಚಾಲಕನ ಜೊತೆ ಆತ್ಮೀಯತೆ ಬೆಳೆಸಿಕೊಂಡ ಯುವಕ ಸೆಪ್ಟೆಂಬರ್ 24 ರಂದು ತಿರುಮಲ ಟ್ರಸ್ಟ್ನ ಎಲೆಕ್ಟ್ರಿಕ್ ಬಸ್ನ್ನು ಕದ್ದೊಯ್ದಿದ್ದಾನೆ. ಮಿನಿ ಬಸ್ನ್ನು ಚಲಾಯಿಸಿಕೊಂಡು ಹೋದ ಯುುವಕ ನಾಪತ್ತೆಯಾಗಿದ್ದಾನೆ.
ಇತ್ತ ಬಸ್ ಚಾಲಕ ಆತಂಕಕ್ಕೊಳಾಗಿದ್ದಾನೆ. ನಿಲ್ಲಿಸಿದ್ದ ಬಸ್ ಕಾಣೆಯಾಗಿದೆ. ತಿರುಮಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಬಳಿಕ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಯುವಕ ಬಸ್ ಕದ್ಯೊಯ್ದಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನ ಟ್ರಸ್ಟ್ ಬಸ್ ಆಗಿರುವ ಕಾರಣ ಇದರ ಸಂಪೂರ್ಣ ಜವಾಬ್ದಾರಿ ಚಾಲಕನದ್ದಾಗಿರುತ್ತದೆ. ಹೀಗಾಗಿ ಬಸ್ ಕಳುವಾಗಿರುವ ಕಾರಣ ಈ ಮೊತ್ತವನ್ನು ಭರಿಸಲು ಹೇಳಿದರೆ ಏನು ಮಾಡಲಿ, ಕೆಲಸದಿಂದ ಅಮಾನತು ಮಾಡಿದರೆ ಜೀವನ ಸಾಗುವುದು ಹೇಗೆ ಎಂದು ಬಸ್ ಚಾಲಕ ಆತಂಕಕ್ಕೆ ಒಳಗಾಗಿದ್ದಾನೆ.
ತಿರುಪತಿ ದೇವಸ್ಥಾನಕ್ಕೆ ತೆರಳಿ ತನ್ನ ಅಳಲು ತೋಡಿಕೊಂಡಿದ್ದಾನೆ. ಬಸ್ ಮರಳಿ ಸಿಗಲಿ, ಯುವಕನ ಬಂಧನವಾಗಲಿ. ಜೊತೆಗೆ ನನ್ನ ಕೆಲಸಕ್ಕೆ ಹಾಗೂ ಜೀವನಕ್ಕೆ ಯಾವುದೇ ಸಮಸ್ಯೆಯಾಗದಿರಲಿ ಎಂದು ಬೇಡಿಕೊಂಡಿದ್ದಾನೆ.
ಬಸ್ ಚಾಲನಕ ಪ್ರಾರ್ಥನೆಯನ್ನು ವೆಂಕಟೇಶ್ವರ ಕೇಳಿಸಿಕೊಂಡಿದ್ದಾನೆ. ಯುವಕ ಮತ್ತೆ ತಿರುಪತಿ ಬಸ್ ನಿಲ್ದಾಣದಲ್ಲೇ ಪತ್ತೆಯಾಗಿದ್ದಾನೆ. ಯುವಕನ ಗುರುತಿಸಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಬಸ್ನ್ನು ತಾನು ನಾಯುಡುಪೇಟೆಯಲ್ಲಿ ಬಿಟ್ಟಿರುವುದಾಗಿ ಹೇಳಿದ್ದಾನೆ.
ಬಂಧನ ಭೀತಿಯಿಂದ ಬಸ್ನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದೆ. ಆದರೆ ಮತ್ತೆ ಯಾಕೆ ತಿರುಪತಿ ಬಸ್ ನಿಲ್ದಾಣಕ್ಕೆ ಬಂದೆ ಅನ್ನೋದೇ ಗೊತ್ತಿಲ್ಲ ಎಂದಿದ್ದಾನೆ. ಇತ್ತ ಬಸ್ ಚಾಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ.