ಅಬ್ಬಾ, ಅವಳಿಗೆ ಎಷ್ಟು ಧೈರ್ಯ ನೋಡಿ ಅಂದ್ರೆ ಈ ರಾಶಿಯವರೇ!
ಹುಟ್ಟಿದ ರಾಶಿ ನಕ್ಷತ್ರಕ್ಕೂ ಮನುಷ್ಯನ ಸ್ವಭಾವ ಹಾಗೂ ವ್ಯಕ್ತಿತ್ವಕ್ಕೆ ಲಿಂಕ್ ಆಗಿರುತ್ತೆ. ಹಾಗಾದರೆ ಧೈರ್ಯಶಾಲಿಗಳು ಯಾವ ರಾಶಿಗೆ ಸೇರಿದವರಾಗಿರುತ್ತಾರೆ?
ಹುಟ್ಟಿದ ರಾಶಿ ನಕ್ಷತ್ರಕ್ಕೂ ಮನುಷ್ಯನ ಸ್ವಭಾವ ಹಾಗೂ ವ್ಯಕ್ತಿತ್ವಕ್ಕೆ ಲಿಂಕ್ ಆಗಿರುತ್ತೆ. ಹಾಗಾದರೆ ಧೈರ್ಯಶಾಲಿಗಳು ಯಾವ ರಾಶಿಗೆ ಸೇರಿದವರಾಗಿರುತ್ತಾರೆ?
ಪ್ರತಿಯೊಬ್ಬರಿಗೂ ತಮ್ಮದೇ ವ್ಯಕ್ತಿತ್ವ ಇರುತ್ತೆ. ಅದನ್ನು ಕೆಲವರು ಅವರೇ ರೂಪಿಸಿಕೊಂಡರೆ ಮತ್ತೆ ಬಹುತೇಕರಿಗೆ ದೈವಬಲದಿಂದ ಬಂದಿರುತ್ತದೆ. ರಾಶಿ-ನಕ್ಷತ್ರಗಳ ಪ್ರಭಾವವೂ ಇದಕ್ಕೆ ಇರುತ್ತದೆ. ಕೆಲವು ರಾಶಿಯವರು ಬುದ್ಧಿವಂತರು, ಹೃದಯವಂತರು, ಉದಾರಿಗಳು, ದಡ್ಡರು, ಪುಕ್ಕುಲಾಗಿದ್ದರೆ, ಮತ್ತೆ ಕೆಲವರು ಏನೂ ಮಾಡಲೂ ಹಿಂದೇಟು ಹಾಕುವುದಿಲ್ಲ. ಒಟ್ಟಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಸ್ವಭಾವ. ಆದರೆ ಈ ನಾಲ್ಕು ರಾಶಿಯವರಂತೂ ಹುಟ್ಟಿನಿಂದಲೇ ಧೈರ್ಯಶಾಲಿಗಳು. ಜ್ಯೋತಿಷ್ಯ ಶಾಸ್ತ್ರ ಇವರ ಬಗ್ಗೆ ಹೇಳುವುದೇನು?
ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನ ಗುಣ, ಲಕ್ಷಣ ಮತ್ತು ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬಹುದು. ಹಿಂದೆ ಘಟಿಸಿದ, ಮುಂದೆ ಘಟಿಸಬಹುದಾದ ವಿಚಾರಗಳ ಬಗ್ಗೆಯೂ ಜ್ಯೋತಿಷ್ಯ ಸೂಚಿಸುತ್ತದೆ. ರಾಶಿ- ನಕ್ಷತ್ರಗಳನ್ನು ತಿಳಿದು ವ್ಯಕ್ತಿಯ ಸ್ವಭಾವವನ್ನು ಅರಿತುಕೊಳ್ಳುವುದು ಬಹಳ ಸುಲಭ. ಜಾತಕದಿಂದ ಜೀವನದಲ್ಲಾಗುವ ಏರು-ಪೇರು ಮತ್ತು ಬೇರೆ ಬೇರೆ ಕುತೂಹಲಕಾರಿ ಸಂಗತಿಗಳನ್ನೂ ತಿಳಿದುಕೊಳ್ಳುವುದು ಸುಲಭ. ಕೆಲವೊಮ್ಮೆ ಗ್ರಹ ಹಾಗೂ ನಕ್ಷತ್ರಗಳ ಪರಿವರ್ತನೆಯೂ ಮನುಷ್ಯನ ಪರಿಸ್ಥಿತಿಯನ್ನೇ ಬದಲಾಯಿಸಿ ಬಿಡುತ್ತದೆ. ಪ್ರತಿ ರಾಶಿಗೂ ತನ್ನದೇ ಆದ ವಿಭಿನ್ನ ಸ್ವಭಾವಗಳಿರುತ್ತವೆ. ರಾಶಿಗೆ ಅನುಗುಣವಾದ ವ್ಯಕ್ತಿತ್ವ ಇರುತ್ತದೆ. ಕೆಲವು ರಾಶಿಯವರು ಹೆಚ್ಚು ಸೂಕ್ಷ್ಮ ಸ್ವಭಾವದವರಾಗಿದ್ದರೆ, ಮತ್ತೆ ಕೆಲವರು ಗಟ್ಟಿಗರು. ಹಾಗಾಗಿ ಕೆಲವು ರಾಶಿಯವರಿಗೆ ಹೆದರಿಕೆ ಪದದ ಅರ್ಥವೇ ಗೊತ್ತಿರೋಲ್ಲ. ಎಂಥದ್ದೇ ಸಂದರ್ಭ ಎದುರಾದರೂ ದೃತಿಗೆಡದೇ ಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರಿಗೆ ಧೈರ್ಯವೇ ಸರ್ವತ್ರ ಸಾಧನ. ಅಷ್ಟಕ್ಕೂ ಆ ರಾಶಿಗಳು ಯಾವುವು?
ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯವರು ಛಲ ಹೆಚ್ಚಿರೋರು ಮತ್ತು ಧೈರ್ಯಶಾಲಿಗಳು. ಮಂಗಳ ಗ್ರಹ ಈ ರಾಶಿಯವರಿಗೆ ಅಧಿಪತಿ. ಮಂಗಳ ಧೈರ್ಯ, ಕೋಪ, ಸಾಹಸ ಮತ್ತು ವಿಜಯಕಾರಕ ಗ್ರಹ. ಹಾಗಾಗಿ ಮೇಷ ರಾಶಿಯವರಿಗೆ ಮಂಗಳ ಗ್ರಹದ ಪ್ರಭಾವ ಹೆಚ್ಚು. ಮೇಷ ರಾಶಿಯವರು ಯಾವುದೇ ಕಾರಣಕ್ಕೂ ಬೇರೆಯವರ ಮುಂದೆ ತಲೆಬಾಗೋಲ್ಲ. ಇವರ ಧೈರ್ಯದಿಂದಲೇ ಜೀವನದಲ್ಲಿ ಯಶಸ್ವಿಗಳಾಗುತ್ತಾರೆ. ಅದಕ್ಕೋಸ್ಕರವೇ ಯಾರಿಗೂ ಬೆದರದ ಸ್ವಭಾವ ಇವರದ್ದು. ಈ ರಾಶಿಯವರ ಈ ಗುಣಗಳೇ ಇವರ ಸಫಲತೆಗೆ ಕಾರಣವೆನ್ನುತ್ತದೆ ಜ್ಯೋತಿಷ್ಯ.
ವೃಷಭ ರಾಶಿಯವರು ಹೆಚ್ಚು ಧೈರ್ಯವಂತರು. ಅಷ್ಟೇ ಅಲ್ಲದೆ ಈ ರಾಶಿಯವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ತಿಳಿದು ನಿಭಾಯಿಸಬಲ್ಲರು. ಈ ರಾಶಿಯವರು ಎಲ್ಲ ಸಂಕಷ್ಟಗಳನ್ನೂ ಸುಲಭವಾಗಿ ನಿಭಾಯಿಸುವುದಲ್ಲದೆ, ಕಷ್ಟಕ್ಕೆ ಹೆದರದೇ ಧೈರ್ಯವಾಗಿ ಎದುರಿಸಬಲ್ಲರು. ಹಾಗೆಯೇ ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳುವ ಚತುರತೆಯೂ ಇವರಿಗಿರುತ್ತದೆ.
ಸಿಂಹ ರಾಶಿ ಹೆಸರಿಗೆ ತಕ್ಕಂತೆ ಈ ರಾಶಿಯವರು ಬಾಲ್ಯದಿಂದಲೂ ಧೈರ್ಯವಂತರು. ಬಾಲ್ಯದಲ್ಲಿ ಇವರ ಆಟಗಳೇ ಬೇರೆಯವರಿಗೆ ಆಶ್ಚರ್ಯವನ್ನುಂಟು ಮಾಡುವಂತಿರುತ್ತದೆ. ಇವರು ಯಾವುದಕ್ಕೂ ಅಂಜುವುದಿಲ್ಲವೆಂಬುವಂತಿರುತ್ತದೆ ಇವರ ವರ್ತನೆ. ಸೂರ್ಯ ಸಿಂಹ ರಾಶಿಯ ಅಧಿಪತಿ. ಸಾಹಸ – ನಿಯಮ – ಉಚ್ಛಪದವಿ – ಧೈರ್ಯ ಮತ್ತು ನಾಯಕತ್ವ ಗುಣಗಳ ಕಾರಕ ಗ್ರಹ. ಹಾಗಾಗಿ ಈ ರಾಶಿಯವರ ಗುಣವು ಸೂರ್ಯ ಗ್ರಹದಿಂದ ಪ್ರಭಾವಿತವಾಗಿ ಇನ್ನಷ್ಟು ಧೈರ್ಯವಂತವಾಗಿರುತ್ತದೆ. ಜೊತೆಗೆ ಸಿಂಹ ರಾಶಿಯವರು ಹೆಚ್ಚು ಬುದ್ಧಿವಂತರೂ ಹೌದು.
ಜಯ ಸಾಧಿಸುವಲ್ಲಿ ಧನು ರಾಶಿಯವರದ್ದು ಎತ್ತಿದ ಕೈ. ಇವರಿಗೆ ಸೋಲು ಎಂಬುದನ್ನು ಅರಿಗಿಸಿಕೊಳ್ಳುವುದು ತುಸು ಕಷ್ಟ. ಇದರಿಂದ ತಮ್ಮ ಜಯದತ್ತಲೇ ಹೆಚ್ಚು ಕೇಂದ್ರೀಕರಿಸಿರುತ್ತಾರೆ. ಇದಕ್ಕೋಸ್ಕರ ಕಠೋರ ನಿರ್ಧಾರವನ್ನು ತೆಗೆದುಕೊಳ್ಳಲೂ ಹಿಂದು ಮುಂದು ನೋಡುವುದಿಲ್ಲ. ಕಠೋರ ಸ್ವಭಾವದವರಂತೆ ಕಂಡರೂ ಇವರು ಆಂತರ್ಯದಲ್ಲಿ ಮೃದು ಸ್ವಭಾವದವರಾಗಿರುತ್ತಾರೆ. ಜೊತೆಗೆ ಎಂಥ ಸಮಸ್ಯೆಗಳೇ ಬಂದರೂ ದೃತಿಗೆಡದೆ ಅದನ್ನು ಸುಲಭ ಹಾಗೂ ಸರಳವಾಗಿ ಎದುರಿಸಿಕೊಂಡು ಹೋಗುವ ಚಾಕಚಕ್ಯತೆಯನ್ನು ಇವರಿಗಿರುತ್ತದೆ. ಈ ಗುಣವೇ ಇವರಿಗೆ ಹೆಚ್ಚು ಧೈರ್ಯವನ್ನು ತಂದುಕೊಡುತ್ತದೆ.