ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 405ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 431ನೇ ಜಯಂತ್ಯೋತ್ಸವದ ಅಂಗವಾಗಿ 'ಗುರು ವೈಭವೋತ್ಸವ' ಕಳೆಗಟ್ಟಿದೆ. ಉತ್ಸವದ 5ನೇ ದಿನದ ಅಂಗವಾಗಿ ಶ್ರೀಮಠದ ಯೋಗೀಂದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕೆಎಸ್ಸಿಎ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ರಾಯರ ದರ್ಶನ ಪಡೆದರು.
26
'ಸಂಸ್ಕೃತಿ ನಾಶವಾಗುತ್ತಿದೆ ಎಂಬ ನೋವಿದೆ': ಕುಮಾರಸ್ವಾಮಿ ಕಳವಳ
ವೇದಿಕೆ ಮೇಲೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, "ದೇಶ ಆರ್ಥಿಕವಾಗಿ ಸದೃಢವಾಗುತ್ತಿದ್ದರೂ, ನಮ್ಮ ಪೂರ್ವಜರು ನೀಡಿದ ಸಂಸ್ಕೃತಿ ಮತ್ತು ಕೌಟುಂಬಿಕ ಬಾಂಧವ್ಯಗಳು ನಾಶವಾಗುತ್ತಿರುವುದು ನೋವು ತರುತ್ತಿದೆ. ಇಂದು ಮಕ್ಕಳಿಂದಲೇ ತಂದೆ-ತಾಯಿಗಳು ನೋವು ಅನುಭವಿಸುವಂತಾಗಿದೆ. ಇಂತಹ ವಾತಾವರಣವನ್ನು ತಿದ್ದುವ ಶಕ್ತಿ ಕೇವಲ ಗುರುಗಳಿಗೆ ಮತ್ತು ರಾಯರ ಅನುಗ್ರಹಕ್ಕೆ ಮಾತ್ರ ಇದೆ" ಎಂದು ಭಾವುಕರಾಗಿ ನುಡಿದರು
36
ಸಾಧಕರಿಗೆ 'ರಾಯರ ಅನುಗ್ರಹ ಪ್ರಶಸ್ತಿ' ಗೌರವ
ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ವರು ಸಾಧಕರಿಗೆ ಪ್ರತಿಷ್ಠಿತ 'ರಾಯರ ಅನುಗ್ರಹ ಪ್ರಶಸ್ತಿ' ನೀಡಿ ಸನ್ಮಾನಿಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ವೆಂಕಟೇಶ್ ಪ್ರಸಾದ್ ಅವರಿಗೆ ಶ್ರೀಗಳು ಫಲಪುಷ್ಪ ನೀಡಿ, ರಾಯರ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ದೃಶ್ಯ ಭಕ್ತರ ಕಣ್ಮನ ಸೆಳೆಯಿತು.
'ಗುರು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವವರು': ಶ್ರೀಗಳ ಸಂದೇಶ
ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು, "ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರು ಎಂದರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು" ಎಂದು ಬಣ್ಣಿಸಿದರು. "ವಿದ್ಯುತ್ ಹೋದಾಗ ಜನರೇಟರ್ ಆನ್ ಮಾಡಿ ಬೆಳಕು ಕೊಡುವವನೂ ಒಬ್ಬ ಗುರುವೆನಿಸಿಕೊಳ್ಳುತ್ತಾನೆ. ಲೌಕಿಕ ಮತ್ತು ತತ್ವಜ್ಞಾನದ ಮೂಲಕ ಬದುಕಿಗೆ ಬೆಳಕು ನೀಡುವ ನಿಜವಾದ ಗುರುಗಳಲ್ಲಿ ರಾಯರು ಅಗ್ರಮಾನ್ಯರು" ಎಂದು ಗುರುವಿನ ಮಹತ್ವವನ್ನು ವಿವರಿಸಿದರು.
56
ಮಣ್ಣಿನ ಮಗ ದೇವೇಗೌಡರು ಹಾಗೂ ಎಚ್ಡಿಕೆ ಸೇವೆಗೆ ಮೆಚ್ಚುಗೆ
ಇದೇ ವೇಳೆ ಶ್ರೀಗಳು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಜನಸೇವೆಯನ್ನು ಶ್ಲಾಘಿಸಿದರು. "ದೊಡ್ಡಗೌಡರು ಮಣ್ಣಿನ ಮಗನಾಗಿ ದೇಶ ಮೆಚ್ಚುವಂತೆ ಆಡಳಿತ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿ, ಈಗ ಕೇಂದ್ರ ಮಂತ್ರಿಯಾಗಿ ಧರ್ಮ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ" ಎಂದು ಶ್ರೀಗಳು ಕೊಂಡಾಡಿದರು.
66
'ನಂಬಿ ಕೆಟ್ಟವರಿಲ್ಲವೋ' ಎಂದು ರಾಯರನ್ನು ಸ್ಮರಿಸಿದ ವೆಂಕಟೇಶ್ ಪ್ರಸಾದ್
'ನಂಬಿ ಕೆಟ್ಟವರಿಲ್ಲವೋ' ಎಂದು ರಾಯರನ್ನು ಸ್ಮರಿಸಿದ ವೆಂಕಟೇಶ್ ಪ್ರಸಾದ್
ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ತಮ್ಮ ಭಾಷಣವನ್ನು 'ನಂಬಿ ಕೆಟ್ಟವರಿಲ್ಲವೋ...' ಎಂಬ ಪುರಂದರದಾಸರ ಕೀರ್ತನೆಯ ಸಾಲುಗಳೊಂದಿಗೆ ಆರಂಭಿಸಿ ರಾಯರಿಗೆ ನಮಿಸಿದರು. "ನನ್ನ ಕ್ರಿಕೆಟ್ ಸಾಧನೆಯ ಹಿಂದೆ ರಾಯರ ಆಶೀರ್ವಾದವಿದೆ. 1998ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ನನಗೆ ವಿಶ್ವದ ಬೆಸ್ಟ್ ಕ್ರಿಕೆಟರ್ ಪ್ರಶಸ್ತಿ ಲಭಿಸಿತ್ತು. ಇಲ್ಲಿ ನಾವು ಏನನ್ನು ಕೇಳಿಕೊಳ್ಳುತ್ತೇವೆಯೋ ಅದು ಖಂಡಿತ ಈಡೇರುತ್ತದೆ" ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.