Dharmasthala Laksha Deepotsava: ಚಿತ್ರಗಳಲ್ಲಿ ನೋಡಿ, ಶಾಸ್ತ್ರೋಕ್ತವಾಗಿ ನಡೆದ ಕೆರೆಕಟ್ಟೆ ಉತ್ಸವ

First Published Nov 21, 2022, 4:41 PM IST

ಧರ್ಮಸ್ಥಳ (ನ.21): ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಯ ದೇವಳದ ಲಕ್ಷದೀಪೋತ್ಸವದ ಅಂಗವಾಗಿ ಎರಡನೇಯ ದಿನದ ರಾತ್ರಿ ಕೆರೆಕಟ್ಟೆ ಉತ್ಸವ ಧರ್ಮಾದಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ನಡೆಯಿತು. ಮೊದಲಿಗೆ ದೇವಸ್ಥಾನದ ಒಳಭಾಗದಲ್ಲಿ ಸಕಲ ಶಾಸ್ತ್ರ ಗಳೊಂದಿಗೆ ಪೂಜೆ ನಡೆಸಿ ಸಂಪ್ರದಾಯದಂತೆ ಜಾಗಟೆ, ಶಂಖ, ನಾದಸ್ವರ, ಡೋಲು, ಸಂಗೀತ ಮೂಲಕ ಹೂಗಳು ಮತ್ತು ಆಭರಣಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ 16 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ಆನೆ, ಬಸವ, ಪಂಜು, ಗೊಂಬೆಗಳ ಮೆರವಣಿಗೆಯ ಜೊತೆಗೆ ಸಹಸ್ರಾರು ಭಕ್ತರ ಜೊತೆಯಲ್ಲಿ ಪಲ್ಲಕ್ಕಿಯಲ್ಲಿ ಕೆರೆ ಸುತ್ತ 5 ಸುತ್ತು ಪ್ರದಕ್ಷಿಣೆಯನ್ನು ವಿಶೇಷ ವಾದ್ಯಗಳ ಮೂಲಕ ನಡೆಸಲಾಯಿತು.

ಕೆರೆಕಟ್ಟೆ ಉತ್ಸವದಲ್ಲಿ ದಾರಿಯುದ್ದಕ್ಕೂ ನಡೆದ ಮಂತ್ರಪಠಣ, ಶಂಖ ಜಾಗಟೆಗಳ ನಾದ ನೆರೆದಿದ್ದ ಭಕ್ತ ಸಮೂಹದಲ್ಲಿ ಭಕ್ತಿಭಾವವನ್ನು ಮೂಡಿಸಿತು. 

ಕೆರೆಕಟ್ಟೆ ಉತ್ಸವದಲ್ಲಿ ದಾರಿಯುದ್ದಕ್ಕೂ ಭಕ್ತರು ಭಕ್ತಿಯಿಂದ ದೀಪ ಹಚ್ಚುತ್ತಿದ್ದ ದೃಶ್ಯಗಳು ಮತ್ತು ಭಜನೆಗಳು ನೆರದಿದ್ದವರನ್ನು ಭಕ್ತಿಪರವಶವರನ್ನಾಗಿಸಿತು. 

ನಂತರ ದೇವರನ್ನು ರಥದೆಡೆಗೆ ಮಾನವ ಸರಪಳಿ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆ ಮತ್ತು ದೇವಸ್ಥಾನ ಸಿಬ್ಬಂದಿಗಳು  ಉತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.

ಕೆರೆಕಟ್ಟೆ ಉತ್ಸವದಲ್ಲಿ ದೇವರನ್ನು ಕೆರೆಕಟ್ಟೆಯಲ್ಲಿ ಕೂರಿಸಿ ಸಂಗೀತ, ನಾದಸ್ವರ, ಶಂಖ ಜಾಗಟೆ ಮೂಲಕ ದೇವರಿಗೆ ಪೂಜೆ ಸಲ್ಲಿಸಲಾಯಿತು.

ಬಳಿಕ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ ಮಂಗಳಾರತಿ ಮಾಡಿ, ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆಯ ನಂತರ ಮತ್ತೆ ದೇವಳದ ಒಳಕ್ಕೆ ಕರೆತರಲಾಯಿತು. 

ಉತ್ಸವದ ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ವರ್ಗದ ಪ್ರಮುಖರು, ವೈದಿಕ ಸಮಿತಿಯವರು, ಮತ್ತು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ವರದಿ ಮತ್ತು ಚಿತ್ರಗಳು: ಅರ್ಪಿತ್ ಇಚ್ಚೆ, ಎಸ್.ಡಿ.ಎಂ ಕಾಲೇಜು ಉಜಿರೆ

ಎರಡನೇಯ ದಿನದ ರಾತ್ರಿ  ಶಾಸ್ತ್ರೋಕ್ತವಾಗಿ ನಡೆದ ಕೆರೆಕಟ್ಟೆ ಉತ್ಸವದ ದೃಶ್ಯ,  ಪಲ್ಲಕ್ಕಿಯಲ್ಲಿ ದೇವರ ಮೆರವಣಿಗೆಯ ದೃಶ್ಯ. 

click me!