ವಿಜಯಪುರ-ಹಾವೇರಿ-ಗದಗ ಜಿಲ್ಲೆಯಲ್ಲಿ ಟಿವಿ, ಮೈಕ್, ಮೊಬೈಲ್ 2 ಗಂಟೆ ಬಂದ್, ಡಂಗೂರ ಸಾರಿ ವಿನೂತನ ಅಭಿಯಾನ!

Published : Feb 04, 2026, 10:42 AM IST

ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ, ವಿಜಯಪುರ, ಹಾವೇರಿ, ಮತ್ತು ಗದಗ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯು ವಿನೂತನ ಜಾಗೃತಿ ಅಭಿಯಾನ ಆರಂಭಿಸಿದೆ. ಸಂಜೆ 7ರಿಂದ 9ರವರೆಗೆ ಟಿವಿ, ಮೊಬೈಲ್ ಬಂದ್ ಮಾಡಿ ಮಕ್ಕಳಿಗೆ ಓದಲು ಸಹಕರಿಸುವಂತೆ ಡಂಗೂರ ಸಾರುವ ಮೂಲಕ ಪೋಷಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

PREV
17
ವಿನೂತನ ಜಾಗೃತಿ

ವಿಜಯಪುರ / ಹಾವೇರಿ/ಗದಗ: ಮುಂಬರುವ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಹಿನ್ನೆಲೆ, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ವಿನೂತನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ವಿಜಯಪುರ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಪರಿಣಾಮಕಾರಿ ಜಾಗೃತಿ ಅಭಿಯಾನಗಳು ನಡೆಯುತ್ತಿವೆ.

27
ವಿಜಯಪುರ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ

ವಿಜಯಪುರ ಜಿಲ್ಲೆಯ ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲೂಕುಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳು ಸಂಪೂರ್ಣ ಗಮನವನ್ನು ಓದಿಗೆ ಕೇಂದ್ರೀಕರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಮೂರು ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ, ಬಿಇಒ ಮಹಾಂತೇಶ ಯಡ್ರಾವಿ ಅವರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಡಂಗೂರ ಸಾರುವ ಮೂಲಕ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದ್ದು, “ಯಾರ ಮನೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದಾರೋ, ಅವರು ಸಾಯಂಕಾಲ 7ರಿಂದ 9ರವರೆಗೆ ಟಿವಿ ಹಾಗೂ ಮೊಬೈಲ್ ಬಳಕೆ ಮಾಡದೇ ಮಕ್ಕಳಿಗೆ ಓದಲು ಸಹಕರಿಸಬೇಕು” ಎಂಬ ಸಂದೇಶವನ್ನು ಸಾರಲಾಗುತ್ತಿದೆ.

37
ಕಳೆದ ವರ್ಷ ರಾಜ್ಯದಲ್ಲಿ 32ನೇ ಸ್ಥಾನ ಪಡೆದಿದ್ದ ಜಿಲ್ಲೆ

ವಿಜಯಪುರ ಜಿಲ್ಲೆಯಲ್ಲಿ ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬರದಿರುವ ಹಿನ್ನೆಲೆಯಲ್ಲಿ, ಈ ಬಾರಿ ಉತ್ತಮ ಸಾಧನೆ ಮಾಡುವ ಉದ್ದೇಶದಿಂದ ಇಲಾಖೆ ಹೆಚ್ಚು ಗಮನ ಹರಿಸಿದೆ. ಕಳೆದ ವರ್ಷ ರಾಜ್ಯದಲ್ಲಿ 32ನೇ ಸ್ಥಾನ ಪಡೆದಿದ್ದ ಜಿಲ್ಲೆ, ಈ ಬಾರಿ ಉತ್ತಮ ಫಲಿತಾಂಶ ಪಡೆಯಬೇಕೆಂಬ ದೃಢ ಸಂಕಲ್ಪದೊಂದಿಗೆ ಈ ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

47
ಹಾವೇರಿ ಜಿಲ್ಲೆಯಲ್ಲಿ ‘ಟಿವಿ ಬಂದ್ – ಓದಿಗೆ ಸಮಯ’ ಅಭಿಯಾನ

ಇನ್ನು ಹಾವೇರಿ ಜಿಲ್ಲೆಯಲ್ಲಿ ಕೂಡ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯುವ ಪರೀಕ್ಷೆಗಳ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ಸಂಜೆ 7ರಿಂದ 9ರವರೆಗೆ ಟಿವಿ ಹಾಗೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಸಮಯ ಮೀಸಲಿಡುವಂತೆ ಮನವಿ ಮಾಡಲಾಗಿದೆ.

57
ಹಾವೇರಿ 33 ಗ್ರಾಮಗಳಲ್ಲಿ ಅಭಿಯಾನ

ಹಾವೇರಿ ಮತ್ತು ಸವಣೂರು ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಡಂಗೂರ ಸಾರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದು, ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಸ್ವಚ್ಛ ವಾಹಿನಿ ಗಾಡಿಯ ಮೂಲಕ ಅನೌನ್ಸ್‌ಮೆಂಟ್ ಮಾಡಿಸಿ ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ.

67
ಪೋಷಕರ ಪಾತ್ರ ಮಹತ್ವದ್ದು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ಹಂತವಾಗಿರುವುದರಿಂದ, ಈ ಸಮಯದಲ್ಲಿ ಪೋಷಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಮಕ್ಕಳಿಗೆ ಶಾಂತ ವಾತಾವರಣ ಕಲ್ಪಿಸಿ, ಟಿವಿ–ಮೊಬೈಲ್‌ನಂತಹ ಗಮನ ಭಂಗಕಾರಿ ಸಾಧನಗಳಿಂದ ದೂರವಿರಿಸುವ ಮೂಲಕ ಉತ್ತಮ ಫಲಿತಾಂಶ ಸಾಧಿಸಲು ನೆರವಾಗಬೇಕು ಎಂಬುದು ಶಿಕ್ಷಣ ಇಲಾಖೆಯ ಆಶಯವಾಗಿದೆ.

ಡಂಗೂರ ಸಾರುವ ಮೂಲಕ ನಡೆಯುತ್ತಿರುವ ಈ ಜಾಗೃತಿ ಅಭಿಯಾನದಿಂದ ಪೋಷಕರಲ್ಲಿ ಸ್ಪಂದನೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

77
ಗದಗದಲ್ಲೂ ಅಭಿಯಾನ

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೂಡ ಇದೇ ಅಭಿಯಾನವನ್ನು ಆರಂಭಿಸಿದೆ.ಪ್ರತಿ ಗ್ರಾಮಗಳಲ್ಲಿ ಸಂಜೆ 7ರಿಂದ ರಾತ್ರಿ 9ರ ವರೆಗೆ ಪ್ರತಿಯೊಬ್ಬರ ಮೊಬೈಲ್‌ಗಳು, ಪ್ರತಿ ಮನೆಯ ಟಿವಿಗಳು ಸ್ವಿಚ್‌ ಆಫ್‌ ಮಾಡುವಂತೆ ಮತ್ತು ಗ್ರಾಮಗಳಲ್ಲಿ ಶಬ್ದಮಾಲಿನ್ಯವಾಗದಂತೆ ಟ್ರ್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಂಚಾರ ಮಾಡದಂತೆ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗದಗ ತಾಪಂ ಕಾರ್ಯಾಲಯಕ್ಕೆ ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಈ ಬಗ್ಗೆ ಡಂಗೂರ ಸಾರಲು ಸಿದ್ದತೆ ಮಾಡಿಕೊಂಡಿದೆ.

Read more Photos on
click me!

Recommended Stories