ಆರಂಭದಲ್ಲೇ ಧೋನಿಗೆ ಗಾಳ ಹಾಕಿದ CSK ಮಾಲೀಕ ಎನ್ ಶ್ರೀನಿವಾಸನ್ ಯಾರು..? ಅವರ ನೆಟ್ ವರ್ತ್ ಎಷ್ಟು ಗೊತ್ತಾ?

First Published Mar 27, 2024, 3:32 PM IST

ಬೆಂಗಳೂರು: ಕ್ರಿಕೆಟ್ ಜಗತ್ತಿನ ಎನ್ ಶ್ರೀನಿವಾಸನ್ ಚಿರಪರಿಚಿತ ಹೆಸರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಎನ್ ಶ್ರೀನಿವಾಸನ್ ಯಾರು? ಅವರ ಹಿನ್ನೆಲೆ ಏನು? ಅವರ ಒಟ್ಟು ಸಂಪತ್ತು ಎಷ್ಟು?. ಧೋನಿಯನ್ನು ಸಿಎಸ್‌ಕೆ ತಂಡಕ್ಕೆ ಕರೆ ತಂದಿದ್ದು ಹೇಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಈ ಬಾರಿ ಧೋನಿ ಬದಲಿಗೆ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಬದಲಿಗೆ ಋತುರಾಜ್ ಗಾಯಕ್ವಾಡ್ ನಾಯಕರಾಗಿದ್ದು ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಆದರೆ ಇದು ಧೋನಿಯದ್ದೇ ನಿರ್ಧಾರ ಎನ್ನುವುದನ್ನು ಸ್ವತಃ ಸಿಎಸ್‌ಕೆ ಫ್ರಾಂಚೈಸಿ ಖಚಿತಪಡಿಸಿದೆ.

ಇದೆಲ್ಲದರ ನಡುವೆ ನಾವಿಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಎನ್ ಶ್ರೀನಿವಾಸನ್ ಅವರ ಬಗ್ಗೆ ತಿಳಿದುಕೊಳ್ಳೋಣ. ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವು ಅತ್ಯಂತ ಯಶಸ್ವಿ ಹಾಗೂ ಸ್ಥಿರ ಪ್ರದರ್ಶನ ತೋರಲು ಧೋನಿ ಎಷ್ಟು ಕಾರಣವೋ, ಮಾಲೀಕರು ಅಷ್ಟೇ ಕಾರಣ.

ಹೀಗೆ ಹೇಳಿದರೆ ನಿಮಗೆ ಅತಿಶಯೋಕ್ತಿ ಎನಿಸಬಹುದು. ಆದರೆ 2008ರ ಚೊಚ್ಚಲ ಆವೃತ್ತಿಯಲ್ಲೇ ಕ್ಯಾಪ್ಟನ್ ಕೂಲ್ ಧೋನಿಯನ್ನು ಸಿಎಸ್‌ಕೆ ತಂಡ ಖರೀದಿಸಿದ್ದೇ ಒಂದು ಮಾಸ್ಟರ್ ಸ್ಟ್ರೋಕ್ ನಡೆ. ಯಾಕೆಂದರೆ ಧೋನಿ ಟಿ20 ವಿಶ್ವಕಪ್ ಗೆದ್ದಿದ್ದು ಬಿಟ್ಟರೇ, ಆಗಿನ್ನೂ ನಾಯಕನಾಗಿ ಅಷ್ಟೇನೂ ದೊಡ್ಡ ಹೆಸರು ಮಾಡಿರಲಿಲ್ಲ.

ಇಂತಹ ಧೋನಿಯನ್ನು ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಹಠಕ್ಕೆ ಬಿದ್ದು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಸಿಎಸ್‌ಕೆ ಮಾಲೀಕ ಶ್ರೀನಿವಾಸನ್ ಯಶಸ್ವಿಯಾಗಿದ್ದರು. ಅದರ ಪರಿಣಾಮವೇ ಇಂದು ಸಿಎಸ್‌ಕೆ ಹೆಸರಿನಲ್ಲಿ 5 ಐಪಿಎಲ್ ಟ್ರೋಫಿ ಇವೆ.

ಚೊಚ್ಚಲ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಆಗಿನ ಕಾಲದಲ್ಲೇ ಸುಮಾರು 6 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ಮೂಲಕ ಧೋನಿ ಚೊಚ್ಚಲ ಆವೃತ್ತಿಯ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದರು.

ನಾರಾಯಣಸ್ವಾಮಿ ಶ್ರೀನಿವಾಸನ್ ಕೇವಲ ಐಪಿಎಲ್ ತಂಡದ ಮಾಲೀಕರಷ್ಟೇ ಅಲ್ಲ. ಅವರು ಭಾರತದ ದಿಗ್ಗಜ ಉದ್ಯಮಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇಂಡಿಯಾ ಸಿಮೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅವರು, ಐಸಿಸಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿಯೂ ಸೈ ಎನಿಸಿಕೊಂಡಿದ್ದಾರೆ.

ಎನ್ ಶ್ರೀನಿವಾಸನ್ 1945, ಜನವರಿ 03ರಂದು ತಮಿಳುನಾಡಿನ ಕಲ್ಲಿದೈಕುರಿಚ್ಚಿ ಎಂಬಲ್ಲಿ ಜನಿಸಿದರು. ಅವರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪೂರೈಸಿದರು. ಇದಾದ ಬಳಿಕ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.

ಇದಾದ ಬಳಿಕ ಷಿಕಾಗೋದಲ್ಲಿ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಎಂ ಎಸ್ಸಿ ಸ್ನಾತಕೋತ್ತರ ಪದವಿ ಪೂರೈಸಿದರು. ಶ್ರೀನಿವಾಸನ್ ಅವರ ತಂದೆ ಟಿಎಸ್ ನಾರಾಯಣಸ್ವಾಮಿ, ಇಂಡಿಯಾ ಸಿಮೆಂಟ್ ಸ್ಥಾಪಕ ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದರು. 

ಇನ್ನು 1989ರಲ್ಲಿ ಈ ಸಂಸ್ಥೆಯ ಮೂಲಕವೇ ಎನ್ ಶ್ರೀನಿವಾಸನ್ ತಮ್ಮ ವೃತ್ತಿಪರ ಜೀವನ ಆರಂಭಿಸಿದರು. ಹಂತ ಹಂತವಾಗಿ ಈ ಸಂಸ್ಥೆಯಲ್ಲಿ ಬೆಳೆದ ಶ್ರೀನಿವಾಸನ್, ವೈಸ್ ಚೇರ್‌ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯನ್ನೂ ಅಲಂಕರಿಸಿ ಸೈ ಎನಿಸಿಕೊಂಡರು.

ಇನ್ನು ಎನ್ ಶ್ರೀನಿವಾಸನ್ ಅವರ ಒಟ್ಟು ನೆಟ್‌ ವರ್ತ್ 2022ರ ವರದಿಯೊಂದರ ಪ್ರಕಾರ ಬರೋಬ್ಬರಿ 7.2 ಬಿಲಿಯನ್ ಡಾಲರ್. ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ₹599,894,640,000(ಇಂದಿನ ಮೌಲ್ಯ) ಆಗಿದೆ.

ಎನ್‌ ಶ್ರೀನಿವಾಸನ್ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ಚಿನ್ನದ ಮೊಟ್ಟೆಯಿಡುವ ಕೋಳಿ ಎನಿಸಿದೆ. ಎರಡು ವರ್ಷ ಬ್ಯಾನ್ ಆಗಿದ್ದರೂ, ಐಪಿಎಲ್‌ನಲ್ಲಿ ಸಿಎಸ್‌ಕೆ ಬ್ರ್ಯಾಂಡ್‌ ವ್ಯಾಲ್ಯೂ ಏನೂ ಕಡಿಮೆಯಾಗಿಲ್ಲ. ಮೀಡಿಯಾ ರೈಟ್ಸ್, ಸ್ಪಾನ್ಸರ್‌ಶಿಪ್, ಟಿಕೆಟ್ ಮಾರಾಟ ಹಾಗೂ ಬ್ರ್ಯಾಂಡ್ ಉತ್ಫನ್ನಗಳ ಪ್ರಮೋಷನ್‌ನಿಂದ ಕೋಟಿ ಲೆಕ್ಕಾಚಾರದಲ್ಲಿ ಹಣ ಶ್ರೀನಿವಾಸನ್‌ಗೆ ಸೇರುತ್ತದೆ.

click me!