'RCB ತಂಡದಿಂದ ಹೊರಬೀಳುತ್ತಿದ್ದ ಸಿರಾಜ್ ಬೆಂಬಲಿಸಿದ್ದೇ ವಿರಾಟ್ ಕೊಹ್ಲಿ': ಸತ್ಯ ಬಿಚ್ಚಿಟ್ಟ ದಿನೇಶ್ ಕಾರ್ತಿಕ್

First Published Feb 23, 2023, 6:01 PM IST

ಬೆಂಗಳೂರು(ಫೆ.23): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಓರ್ವ ಬ್ಯಾಟರ್‌ನಾಗಿ ಮಾತ್ರವಲ್ಲದೇ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದ ವಿರಾಟ್ ಕೊಹ್ಲಿ, ಕಪ್ ಗೆಲ್ಲದಿದ್ದರೂ ತಮ್ಮ ಅದ್ಭುತ ಬ್ಯಾಟಿಂಗ್ ಹಾಗೂ ನಾಯಕತ್ವ ಗುಣಗಳಿಂದ ಅಪಾರ ಮಂದಿಯ ಹೃದಯ ಗೆದ್ದಿರುವದು ಸುಳ್ಳಲ್ಲ. ಇದೀಗ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್‌ ಅವರ ಪಾಲಿಗೆ ಕೊಹ್ಲಿ ಹೀರೋ ಆಗಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿಯನ್ನು ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ.
 

ಟೀಂ ಇಂಡಿಯಾದ ಮಾರಕ ವೇಗಿ ಮೊಹಮ್ಮದ್ ಸಿರಾಜ್‌, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ರಾಷ್ಟ್ರೀಯ ತಂಡಕ್ಕೆ ಲಗ್ಗೆಯಿಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. 
 

ಸದ್ಯ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬೌಲಿಂಗ್ ಪಟ್ಟ ಅಲಂಕರಿಸಿರುವ ಮೊಹಮ್ಮದ್ ಸಿರಾಜ್‌, ವಿರಾಟ್ ಕೊಹ್ಲಿ ನಾಯಕತ್ವದಡಿ ಬೆಳೆದ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ.
 

ಒಂದು ಕಾಲದಲ್ಲಿ ಕಳಪೆ ಪ್ರದರ್ಶನದಿಂದಾಗಿ ಆರ್‌ಸಿಬಿ ತಂಡದಿಂದಲೇ ಸಿರಾಜ್ ಹೊರಬೀಳುವ ಸ್ಥಿತಿಗೆ ಬಂದಿದ್ದರು. ಆಗ ವಿರಾಟ್ ಕೊಹ್ಲಿ, ಹೈದರಾಬಾದ್ ಮೂಲದ ವೇಗಿಯ ಬೆನ್ನಿಗೆ ನಿಂತಿದ್ದರು ಎಂದು ಆರ್‌ಸಿಬಿ ವಿಕೆಟ್‌ ಕೀಪರ್‌ ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

Cricbuzz ವೆಬ್‌ಸೈಟ್‌ನಲ್ಲಿನ 'ರೈಸ್‌ ಆಫ್‌ ನ್ಯೂ ಇಂಡಿಯಾ' ವಿಶೇಷ ಶೋನಲ್ಲಿ ಭಾಗವಹಿಸಿ ಮಾತನಾಡಿದ ದಿನೇಶ್ ಕಾರ್ತಿಕ್‌, 'ಸಿರಾಜ್ ಅವರ ಕಷ್ಟದ ಕಾಲದಲ್ಲಿ, ವಿರಾಟ್ ಕೊಹ್ಲಿ, ಅಕ್ಷರಶಃ ಹಿರಿಯಣ್ಣನಂತೆ ನಿಂತು ಅವರಿಗೆ ನೆರವಾಗಿದ್ದರು. ಸಿರಾಜ್‌ಗೆ ಕೊಹ್ಲಿ ಒಂದು ರೀತಿ ದಾರಿದೀಪವಾಗಿದ್ದರು ಎಂದು ಡಿಕೆ ಹೇಳಿದ್ದಾರೆ.

ನನ್ನ ಪ್ರಕಾರ ಅವರು ವಿರಾಟ್ ಕೊಹ್ಲಿ ಮತ್ತು ಭರತ್ ಅರುಣ್‌ಗೆ ಹೆಚ್ಚಿನ ಗೌರವ ನೀಡುತ್ತಾರೆ. ಆರಂಭಿಕ ದಿನಗಳಲ್ಲಿ ಭರತ್ ಅರುಣ್‌, ಬೌಲಿಂಗ್ ಕೋಚ್‌ ಆಗಿ ಸಿರಾಜ್‌ಗೆ ನೆರವಾಗಿದ್ದರು. ಸಿರಾಜ್ ಯಶಸ್ಸಿನ ಹಿಂದೆ ಭರತ್ ಅರುಣ್‌ ಅವರ ಪಾತ್ರ ದೊಡ್ಡದಿದೆ. ಅದೇ ರೀತಿ ಸಿರಾಜ್ ದುಬಾರಿಯಾಗುತ್ತಿದ್ದರೂ ಅವರ ಮೇಲೆ ವಿಶ್ವಾಸವಿಟ್ಟು ಹೆಚ್ಚು ಹೆಚ್ಚು ಅವಕಾಶ ನೀಡಿ ಫಾರ್ಮ್‌ಗೆ ಮರಳಲು ಕೊಹ್ಲಿ ಅವಕಾಶ ನೀಡಿದ್ದರು ಎಂದು ಹೇಳಿದ್ದಾರೆ.

ಸಿರಾಜ್ ತಂಡದಿಂದ ಹೊರಬೀಳುವ ಸ್ಥಿತಿಯಲ್ಲಿದ್ದಾಗ ಕೊಹ್ಲಿ, ಆತ ನನ್ನ ಆಡುವ ಹನ್ನೊಂದರ ಬಳಗದಲ್ಲಿರಬೇಕು ಎಂದಿದ್ದರು. ನಾನಾಗ ಕೆಕೆಆರ್ ತಂಡದಲ್ಲಿದ್ದೆ. ಒಂದು ಪಂದ್ಯದಲ್ಲಿ ಅವರು ನಮ್ಮನ್ನು 100 ರನ್‌ಗಳೊಳಗೆ ಆಲೌಟ್ ಮಾಡಿದ್ದರು. ಆ ಪಂದ್ಯದಲ್ಲಿ ಸಿರಾಜ್ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು.

ಇದಾದ ಬಳಿಕ ಸಿರಾಜ್ ಅವರ ಟಿ20 ಕ್ರಿಕೆಟ್‌ ಬದುಕಿನಲ್ಲಿ ಮಹತ್ತರ ಬದಲಾವಣೆ ಸಿಕ್ಕಿತು. ಸಮಾಜದಲ್ಲಿನ ಯಾವುದೇ ವ್ಯಕ್ತಿಗೆ ಆದರೂ ಸ್ವಲ್ಪ ಆತ್ಮವಿಶ್ವಾಸ ತುಂಬಿದರೆ, ತಮ್ಮ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಸಿರಾಜ್‌ ಅವರದ್ದು ಒಂದು ಯಶಸ್ಸಿನ ಪಯಣ. ಹಲವರು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬಹುದು ಎಂದು ದಿನೇಶ್‌ ಕಾರ್ತಿಕ್ ಸಲಹೆ ನೀಡಿದ್ದಾರೆ.

click me!