IPL ಧೋನಿ ಇಲ್ಲದೇ ಸಿಎಸ್‌ಕೆ ತಂಡವೇ ಇಲ್ಲ: ಎನ್‌ ಶ್ರೀನಿವಾಸನ್‌

First Published Oct 19, 2021, 3:21 PM IST

ಚೆನ್ನೈ: 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) (IPL 2021) ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಫೈನಲ್‌ನಲ್ಲಿ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ತಂಡವನ್ನು ಮಣಿಸಿ 4ನೇ ಬಾರಿಗೆ ಐಪಿಎಲ್‌ (IPL Champion) ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಫಾರ್ಮ್ ಕೊರತೆ ಅನುಭವಿಸಿದ್ದ ಸಿಎಸ್‌ಕೆ ತಂಡದ ನಾಯಕ ಧೋನಿ 2022ರ ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎನ್ನುವುದು ಸಾಕಷ್ಟು ಚರ್ಚಿತ ವಿಷಯವಾಗಿದೆ. ಹೀಗಿರುವಾಗಲೇ ಧೋನಿ ಕುರಿತಂತೆ ಸಿಎಸ್‌ಕೆ ತಂಡದ ಮಾಲೀಕ ಎನ್‌ ಶ್ರೀನಿವಾಸನ್‌ (N Srinivasan) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಯುಎಇನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್‌ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಕೆಕೆಆರ್ ತಂಡವನ್ನು ರೋಚಕವಾಗಿ ಮಣಿಸಿ 4ನೇ ಬಾರಿಗೆ ಐಪಿಎಲ್‌ ಚಾಂಪಿಯನ್ ಆಗಿ ಹೊರಹೊಮ್ಮಿದೆ.

2020ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ಗೇರಲು ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌, ಈ ವರ್ಷ ಅಮೋಘ ಪ್ರದರ್ಶನ ತೋರುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 
(photo source- iplt20.com)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 16 ಪಂದ್ಯಗಳಿಂದ ಮಹೇಂದ್ರ ಸಿಂಗ್ ಧೋನಿ ಕೇವಲ 114 ರನ್‌ ಬಾರಿಸಿದ್ದರು. ಹೀಗಾಗಿ ಇದೇ ಧೋನಿ ಪಾಲಿನ ಕೊನೆಯ ಐಪಿಎಲ್ ಆಗಬಹುದು ಎಂದು ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು. 
 

ಎಂ.ಎಸ್‌.ಧೋನಿ ಇಲ್ಲದೇ ಚೆನ್ನೈ ಸೂಪರ್‌ ಕಿಂಗ್ಸ್‌ ಇಲ್ಲ. ಚೆನ್ನೈ ಇಲ್ಲದೇ ಧೋನಿ ಇಲ್ಲ ಎಂದು ಚೆನ್ನೈ ತಂಡದ ಮಾಲೀಕ, ಐಸಿಸಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಹೇಳಿದ್ದಾರೆ. 

ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌, ಚೆನ್ನೈ ಹಾಗೂ ತಮಿಳುನಾಡು ತಂಡದ ಒಂದು ಭಾಗ ಎಂದು ಶ್ರೀನಿವಾಸನ್‌ ಬಣ್ಣಿಸಿದ್ದಾರೆ. ಧೋನಿಯಿಲ್ಲದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 

‘ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮೆಂಟರ್‌ ಆಗಿ ಸೇವೆ ಸಲ್ಲಿಸಿದ ಬಳಿಕ ಧೋನಿ ಚೆನ್ನೈಗೆ ಬರಲಿದ್ದಾರೆ. ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಐಪಿಎಲ್‌ ಗೆದ್ದ ಸಂಭ್ರಮಾಚರಣೆ ನಡೆಯಲಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಜೊತೆ ಧೋನಿ ವೇದಿಕೆ ಹಂಚಿಕೊಳ್ಳಲಿದ್ದಾರೆ’ ಎಂದು ಶ್ರೀನಿವಾಸನ್‌ ಹೇಳಿದ್ದಾರೆ.
(photo source- iplt20.com)

ಐಪಿಎಲ್‌ ಮುಗಿಯುತ್ತಿದ್ದಂತೆಯೇ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಧೋನಿ ಟೀಂ ಇಂಡಿಯಾ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

click me!