KL Rahul
ಪಂಜಾಬ್ ಕಿಂಗ್ಸ್ನ ಕೆ.ಎಲ್.ರಾಹುಲ್ ಹಾಗೂ ಸನ್ರೈಸರ್ಸ್ ಹೈದರಾಬಾದ್ನ ರಶೀದ್ ಖಾನ್ಗೆ ಲಖನೌ ತಂಡದ ಮಾಲಿಕರು ಹೆಚ್ಚು ಸಂಭಾವನೆ ನೀಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಈ ಎರಡು ತಂಡಗಳು ದೂರಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ರಾಹುಲ್, ಪಂಜಾಬ್ ತಂಡದಲ್ಲೇ ಉಳಿದರೆ ಗರಿಷ್ಠ 16 ಕೋಟಿ ರುಪಾಯಿ ಸಿಗಲಿದೆ. ಆದರೆ ಅವರಿಗೆ 20 ಕೋಟಿ ರು. ನೀಡುವುದಾಗಿ ಆಮಿಷ ಒಡ್ಡಲಾಗುತ್ತಿದೆ ಎನ್ನಲಾಗಿದೆ.
ಇನ್ನು ರಶೀದ್ರನ್ನು ಸನ್ರೈಸರ್ಸ್ 12 ಕೋಟಿ ರುಪಾಯಿ ನೀಡಿ ಉಳಿಸಿಕೊಳ್ಳಲು ಯೋಜನೆ ರೂಪಿಸಿದೆ ಎಂದು ಹೇಳಲಾಗಿದ್ದು, ಲಖನೌ ಮಾಲಿಕರು 16 ಕೋಟಿ ರು. ನೀಡುವುದಾಗಿ ರಶೀದ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ‘ನಾವು ಇದುವರೆಗೆ ಯಾವುದೇ ಲಿಖಿತ ದೂರನ್ನು ಸ್ವೀಕರಿಸಿಲ್ಲ. ಆದರೆ ಆಟಗಾರರನ್ನು ಸೆಳೆಯುವ ಬಗ್ಗೆ ಮೌಖಿಕ ದೂರು ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮಕೈಗೊಳ್ಳಲಿದ್ದೇವೆ’ ಎಂದಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಕಾನೂನು ಬಾಹಿರವಾಗಿ ಹಣಕಾಸಿನ ಮಾತುಕತೆ ನಡೆದಿದ್ದರೆ, ರಾಹುಲ್ ಹಾಗೂ ರಶೀದ್ ಖಾನ್ ಒಂದು ವರ್ಷಗಳ ಕಾಲ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಐಪಿಎಲ್ನಿಂದ ಬ್ಯಾನ್ ಆಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಬಿಸಿಸಿಐ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದೇ ರೀತಿ 2010ರಲ್ಲಿ ರವೀಂದ್ರ ಜಡೇಜಾ ಒಂದು ವರ್ಷಗಳ ಕ್ರಿಕೆಟ್ನಿಂದ ಬ್ಯಾನ್ ಆಗಿರ ವಿಚಾರ ಬಹುತೇಕರಿಗೆ ಮರೆತು ಹೋಗಿರಬಹುದು. ಹೌದು, ರಾಜಸ್ಥಾನ ರಾಯಲ್ಸ್ ತಂಡದ ಒಪ್ಪಂದದಲ್ಲಿರುವಾಗಲೇ ಜಡೇಜಾ, ಬೇರೆ ಫ್ರಾಂಚೈಸಿ ಜತೆ ಮಾತುಕತೆ ನಡೆಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಜಡೇಜಾ ಐಪಿಎಲ್ನಿಂದ ಬ್ಯಾನ್ ಆಗಿದ್ದರು
ಮಂಗಳವಾರ ರೀಟೈನ್ ಆದ ಆಟಗಾರರ ಪಟ್ಟಿಸಲ್ಲಿಸಲು ಅಂತಿಮ ದಿನವಾಗಿದೆ. ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಐಪಿಎಲ್ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಬಹಿರಂಗಗೊಳಿಸಲಾಗುತ್ತದೆ.