ಈಗಾಗಲೇ ತಲುಪಿದೆ, ಸಿರಾಜ್‌ಗೆ ಥಾರ್ ಕಾರು ಗಿಫ್ಟ್ ಕೊಡಿ ಫ್ಯಾನ್ಸ್ ಮನವಿಗೆ ಆನಂದ್ ಮಹೀಂದ್ರ ಉತ್ತರ ವೈರಲ್!

First Published Sep 19, 2023, 5:46 PM IST

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಊಹಿಸಲು ಅಸಾಧ್ಯವಾದ ಹೊಡೆತ ನೀಡಿದ ಭಾರತದ ವೇಗಿ ಮೊಹಮ್ಮದ್ ಸಿರಾಜ್‌ಗೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗಿದೆ. ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಸಿರಾಜ್‌ಗೆ ಮಹೀಂದ್ರ ಥಾರ್ ಉಡುಗೊರೆ ನೀಡಿ ಎಂದು ಅಭಿಮಾನಿಗಳು ಆನಂದ್ ಮಹೀಂದ್ರಾಗೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಮಹೀಂದ್ರ ಉತ್ತರ ನೀಡಿದ್ದಾರೆ.

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 50 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಟ್ರೋಫಿ ಗೆದ್ದುಕೊಂಡಿತು. ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ಭಾರತಕ್ಕೆ ಭರ್ಜರಿ ಹಾಗೂ ದಾಖಲೆ ಗೆಲುವು ತಂದುಕೊಟ್ಟಿದ್ದಾರೆ.

ಮೊಹಮ್ಮದ್ ಸಿರಾಜ್ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿರಾಜ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇತ್ತ ಸಿರಾಜ್, ತಮ್ಮ ಪಂದ್ಯಶ್ರೇಷ್ಟ ಪ್ರಶಸ್ತಿ ಮೊತ್ತವನ್ನು ಶ್ರೀಲಂಕಾ ಕ್ರೀಡಾಂಗಣ ಸಿಬ್ಬಂದಿಗೆ ನೀಡಿ ಎಲ್ಲರ ಹೃದಯ ಗೆದ್ದಿದ್ದರು. 

ಮೊಹಮ್ಮದ್ ಸಿರಾಜ್ ಸಾಧನೆಯನ್ನು ಉದ್ಯಮಿ ಆನಂದ್ ಮಹೀಂದ್ರ ಕೊಂಡಾಡಿದ್ದರು. ಈ ಕುರಿತು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇದೇ ವೇಳೆ ಅಭಿಮಾನಿಯೊಬ್ಬ ಸಿರಾಜ್ ಸಾಧನೆಗೆ ಮಹೀಂದ್ರ ಥಾರ್ ಕಾರು ಉಡುಗೊರೆ ನೀಡಿ ಎಂದು ಮನವಿ ಮಾಡಿದ್ದಾನೆ.

ಆನಂದ್ ಮಹೀಂದ್ರ ಹಾಗೂ ಅಭಿಮಾನಿಯ ಮನವಿ ಭಾರಿ ವೈರಲ್ ಆಗಿದೆ. ತಕ್ಷಣವೇ ಆನಂದ್ ಮಹೀಂದ್ರ ಅಭಿಮಾನಿ ಮನವಿಗೆ ಉತ್ತರ ನೀಡಿದ್ದಾರೆ.  ಈಗಾಗಲೇ ತಲುಪಿದೆ ಎಂದು ಆನಂದ್ ಮಹೀಂದ್ರ ಉತ್ತರಿಸಿದ್ದಾರೆ. 
 

ಹೌದು ಆನಂದ್ ಮಹೀಂದ್ರ ಏಷ್ಯಾಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮೊಹಮ್ಮದ್ ಸಿರಾಜ್‌ಗೆ ಈ ಹಿಂದೆಯೇ ಅಂದರೆ 2021ರಲ್ಲಿ ಥಾರ್ ಕಾರು ಉಡುಗೊರೆ ನೀಡಿದ್ದಾರೆ. 

ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ 6 ಕ್ರಿಕೆಟಿಗರಿಗೆ ಆನಂದ್ ಮಹೀಂದ್ರ ಥಾರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಈ ಪೈಕಿ ಸಿರಾಜ್ ಕೂಡ ಸೇರಿದ್ದಾರೆ.

ಆನಂದ್ ಮಹೀಂದ್ರ ಉಡುಗೊರೆ ಸ್ವೀಕರಿಸಿದ ಬಳಿಕ ಟ್ವೀಟ್ ಮೂಲಕ ಫೋಟೋ ಹಂಚಿಕೊಂಡಿದ್ದ ಮೊಹಮ್ಮದ್ ಸಿರಾಜ್, ಆನಂದ್ ಮಹೀಂದ್ರಾಗೆ ಧನ್ಯವಾದ ಹೇಳಿದ್ದರು.

ಪ್ರತಿಭೆಗಳನ್ನು ಪ್ರೋತ್ಸಾಹಿಸುವದಲ್ಲಿ ಆನಂದ್ ಮಹೀಂದ್ರ ಯಾವತ್ತು ಹಿಂದೆ ಬಿದ್ದಿಲ್ಲ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣ ಮೂಲಕ ತಮ್ಮ ಗಮನಕ್ಕೆ ಬಂದ ಹಲವರಿಗೆ ನೆರವು ನೀಡಿದ್ದಾರೆ.

click me!