ದೇಶದ ಶ್ರೇಷ್ಠ ಉದ್ಯಮಿಯಾಗಿದ್ದರೂ ಆಡಂಬರವಿಲ್ಲದೆ ಉಡುಪಿಗೆ ಬಂದಿದ್ದ ರತನ್ ಟಾಟಾ!

First Published Oct 11, 2024, 8:06 AM IST

ರತನ್ ಟಾಟಾ 2014ರ ಫೆ.1ರಂದು ಉಡುಪಿಯ ಸುವರ್ಣ ನದಿ ಪಕ್ಕದ ಪುತ್ತಿಗೆ ಗ್ರಾಮದಲ್ಲಿ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ನಂತರ ಅಲ್ಲಿರುವ ವಿದ್ಯಾ ಪೀಠಕ್ಕೆ ಭೇಟಿ ಕೊಟ್ಟು ಶ್ರೀ ನರಸಿಂಹ ಹಾಗೂ ಗಣಪತಿ ದೇವರ ದರ್ಶನವನ್ನೂ ಪಡೆದಿದ್ದರು.

ಉಡುಪಿ (ಅ.11): ರತನ್ ಟಾಟಾ 2014ರ ಫೆ.1ರಂದು ಉಡುಪಿಯ ಸುವರ್ಣ ನದಿ ಪಕ್ಕದ ಪುತ್ತಿಗೆ ಗ್ರಾಮದಲ್ಲಿ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನ ಮೇರೆಗೆ ಆಗಮಿಸಿದ ಅವರು, ಪುತ್ತಿಗೆ ಮೂಲಮಠದ ನೂತನ ಸ್ವಾಗತ ಗೋಪುರ ಉದ್ಘಾಟಿಸಿದ್ದರು. 

ನಂತರ ಅಲ್ಲಿರುವ ವಿದ್ಯಾ ಪೀಠಕ್ಕೆ ಭೇಟಿ ಕೊಟ್ಟು ಶ್ರೀ ನರಸಿಂಹ ಹಾಗೂ ಗಣಪತಿ ದೇವರ ದರ್ಶನವನ್ನೂ ಪಡೆದಿದ್ದರು. ಈ ಸಂದರ್ಭ ಶ್ರೀಗಳು ಟಾಟಾ ಅವರನ್ನು ಸನ್ಮಾನಿಸಿ ಗೌರವಿಸಿದ್ದರು. ದೇಶದ ಶ್ರೇಷ್ಠ ಉದ್ಯಮಿಯಾಗಿದ್ದರೂ ಯಾವುದೇ ಪೂರ್ವಪ್ರಚಾರವಿಲ್ಲದೆ ಅತ್ಯಂತ ಸರಳವಾಗಿ ಆಗಮಿಸಿದ್ದ ಅವರು ಪುತ್ತಿಗೆ ಗ್ರಾಮೀಣ ಪರಿಸರದಲ್ಲಿ, ಮಠದಲ್ಲಿ ಕೆಲ ಸಮಯ ಕಳೆದು ಸಂತಸ ವ್ಯಕ್ತಪಡಿಸಿದ್ದರು.

Latest Videos


ಪುತ್ತಿಗೆ ಶ್ರೀಗಳ ಸಂತಾಪ: ರತನ್ ಟಾಟಾ ಅವರ ನಿಧನಕ್ಕೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶ ಮೊದಲು ಎಂಬ ತತ್ವ ರತನ್ ಟಾಟಾ ಅವರದ್ದಾಗಿತ್ತು, ಆದರ್ಶಮಯ ಜೀವನ ನಡೆಸಿದ ಅವರು ತಮ್ಮ ಮಠಕ್ಕೆ ಆಗಮಿಸಿದ್ದಾಗ, ಭಗವದ್ಗೀತೆ ಬಗ್ಗೆ ತಮಗಿರುವ ಗೌರವವನ್ನು ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.

ರತನ್‌ಗೆ ಅಪರೂಪದ ಸ್ನೇಹ: ರತನ್ ಟಾಟಾ ಸ್ನೇಹ ಜೀವಿ. ಸರಳತೆಗೆ ಹೆಸರಾಗಿದ್ದವರು. ಅದಕ್ಕೆ ಸಾಕ್ಷಿಯೇ ಶಂತನು ನಾಯ್ಡು ಎನ್ನುವ ತನಗಿಂತಲೂ ಸುಮಾರು 55 ವರ್ಷದ ಕಿರಿಯ ಯುವಕನೊಂದಿಗೆ ಅರಳಿದ್ದ ಗೆಳೆತನ. ಇಬ್ಬರ ನಡುವಿನ ಆಪ್ತತೆಗಾಗಿ ಕಾರಣವಾಗಿದ್ದೂ ಇಬ್ಬರಿಗೂ ಮೂಕ ಪ್ರಾಣಿಗಳ ಮೇಲಿದ್ದ ಪ್ರೀತಿ. ರತನ್ ಟಾಟಾರಿಗೆ ನಾಯಿಗಳೆಂದರೆ ಬಹು ಇಷ್ಟ ಎನ್ನುವುದು ತಿಳಿದಿರುವ ವಿಚಾರ, ಇದೇ ಆಸಕ್ತಿ ಶಂತನು ಮತ್ತು ಟಾಟಾ ಅವರ ಭೇಟಿಗೆ ಕಾರಣವಾಗಿದ್ದು. ಶಂತನು ಎನ್‌ಜಿಒ ಮೂಲಕ ಬೀದಿ ನಾಯಗಳಿಗೆ ಆಹಾರ ಹಂಚುವ ಕೆಲಸವನ್ನು ಮಾಡುತ್ತಿದ್ದರು. 

ನಾಯ್ಡು ಅವರು ‘ಮೋಟೋಪಾವ್ಸ್’ ಎನ್ನುವ ಸಣ್ಣ ಉದ್ಯಮವನ್ನು ಪ್ರಾರಂಭಿಸಿದ್ದರು. ಈ ಮೂಲಕ ಬೀದಿ ನಾಯಿಗಳಿಗೆ ಪ್ರತಿಫಲಿತ ಕಾಲರ್‌ಗಳನ್ನು ಹಾಕುವ ಮೂಲಕ ವಾಹನ ಸವಾರರು ಕತ್ತಲೆಯಲ್ಲಿ ಬೀದಿ ನಾಯಿಗಳಿಗೆ ಹೊಡೆಯುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎನ್ನುವ ಕಲ್ಪನೆ ನಾಯ್ಡು ಅವರದ್ದು. ಇದಕ್ಕಾಗಿ ದಿಗ್ಗಜ ರತನ್‌ಗೆ ನೆರವಿಗಾಗಿ ಪತ್ರ ಬರೆದಿದ್ದರು. ಇದು ರತನ್ ಗಮನ ಸೆಳೆಯಿತು. ಯುವಕ ಶಂತನುಗೆ ಟಾಟಾ ಸಮೂಹದ ಭಾಗವಾಗಲು ಆಹ್ವಾನವಿತ್ತರು. ಎಂಬಿಎ ಮುಗಿಯುತ್ತಿದ್ದಂತೆ ಶಂತನು ನಾಯ್ಡು ರತನ್ ಟಾಟಾ ಆಪ್ತ ಸಹಾಯಕ ಮತ್ತು ಜನರಲ್ ಮ್ಯಾನೇಜರ್‌ ಆಗಿ ಕೆಲಸಕ್ಕೆ ಸೇರಿಕೊಂಡರು. ಅಂದಿನಿಂದಲೇ ಇಬ್ಬರ ಸ್ನೇಹ ಮತ್ತಷ್ಟು ಗಾಢವಾಗಿದ್ದು.

click me!