ಬೆಂಗಳೂರು ರಾಜಕಾಲುವೆ ಕಾಮಗಾರಿ ನೋಡಿ ಚಪ್ಪಾಳೆ ತಟ್ಟಿದ ವಿಶ್ವ ಬ್ಯಾಂಕ್! ವಾಕಿಂಗ್ ಟ್ರ್ಯಾಕ್, ಗ್ರೀನ್ ಕಾರಿಡಾರ್..

Published : Sep 04, 2026, 04:44 PM IST

ಬೆಂಗಳೂರಿನ ವಾರ್ತೂರು ಕೋಡಿಯಲ್ಲಿನ ರಾಜಕಾಲುವೆಯನ್ನು, ದುರ್ನಾತ ಬೀರುವ ಕೊಳಚೆ ಪ್ರದೇಶದಿಂದ ವಿಶ್ವ ಬ್ಯಾಂಕ್ ಶ್ಲಾಘಿಸಿದ ಸುಂದರ ವಾಕಿಂಗ್ ಪಥ ಮತ್ತು ಹಸಿರು ಕಾರಿಡಾರ್ ಆಗಿ ಪರಿವರ್ತಿಸಲಾಗಿದೆ. ಈ ಯೋಜನೆಯನ್ನು ವೀಕ್ಷಣೆ ಮಾಡಿದ ವಿಶ್ವಬ್ಯಾಂಕ್ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

PREV
15

ಬೆಂಗಳೂರಿನ ಮಳೆನೀರು ಕಾಲುವೆಗಳು (ರಾಜಕಾಲುವೆ) ಎಂದರೆ ಕೇವಲ ಕೊಳಚೆ ನೀರು ಹರಿಯುವ, ಗಬ್ಬು ನಾರುವ ಜಾಗ ಎಂಬ ಹಣೆಪಟ್ಟಿ ಇತ್ತು. ಆದರೆ ಆ ಕಲ್ಪನೆಯನ್ನು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಂಪೂರ್ಣವಾಗಿ ಬದಲಾಯಿಸಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ವಾರ್ತೂರು ಕೋಡಿ ವೃತ್ತದಲ್ಲಿ ನವೀನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾದ ರಾಜಕಾಲುವೆ ಮತ್ತು ಅದರ ಪಕ್ಕದಲ್ಲೇ ಸಾರ್ವಜನಿಕರಿಗಾಗಿ ನಿರ್ಮಿಸಲಾದ ಸುಂದರ ವಾಕಿಂಗ್ ಪಥಕ್ಕೆ ವಿಶ್ವ ಬ್ಯಾಂಕ್ ಕಾರ್ಯಪಡೆ (World Bank Task Team) ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದೆ.

ವಿಶ್ವ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿರುವ ‘ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ’ (KWSRP) ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ವಿಶ್ವ ಬ್ಯಾಂಕ್ ತಂಡವು, ವಾರ್ತೂರು ಕೋಡಿಯ ಈ ಬಹುಮುಖಿ ಯೋಜನೆಯನ್ನು ಖುದ್ದು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು.

25

7 ಮೀಟರ್‌ನಿಂದ 32 ಮೀಟರ್‌ಗೆ ಕಾಲುವೆ ವಿಸ್ತರಣೆ!

ಈ ಹಿಂದೆ ಕೇವಲ 7 ರಿಂದ 8 ಮೀಟರ್ ಅಗಲವಿದ್ದ ಮಣ್ಣಿನ ಕಾಲುವೆ ಮಳೆಗಾಲದಲ್ಲಿ ಉಕ್ಕಿ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿತ್ತು. ಆದರೆ, ಯೋಜನಾ ಅನುಷ್ಠಾನ ಘಟಕ (PIU) ಲಭ್ಯವಿದ್ದ ಸರ್ಕಾರಿ ‘ಕರಾಬ್’ ಜಮೀನನ್ನು ಗುರುತಿಸಿ, ಒತ್ತುವರಿಗಳನ್ನು ತೆರವುಗೊಳಿಸಿ ಇದೀಗ ಬರೋಬ್ಬರಿ 30 ರಿಂದ 32 ಮೀಟರ್ ಅಗಲದ ಬೃಹತ್ ಮಳೆನೀರು ಕಾಲುವೆ ಕಾರಿಡಾರ್ ಆಗಿ ಪರಿವರ್ತಿಸಿದೆ. ಇದರಿಂದ ಪ್ರವಾಹದ ಭೀತಿ ಸಂಪೂರ್ಣವಾಗಿ ತಪ್ಪಲಿದೆ.

35

ಒತ್ತುವರಿ ತಡೆಗೆ '1 ಕಿ.ಮೀ ವಾಕಿಂಗ್ ಪಾತ್' ಅಸ್ತ್ರ!

ವಿಶ್ವ ಬ್ಯಾಂಕ್ ತಂಡದ ವಿಶೇಷ ಗಮನ ಸೆಳೆದ ಪ್ರಮುಖ ಅಂಶವೆಂದರೆ ಕಾಲುವೆಯುದ್ದಕ್ಕೂ ನಿರ್ಮಿಸಲಾಗಿರುವ 1 ಕಿಲೋಮೀಟರ್ ಉದ್ದ ಮತ್ತು 3.5 ಮೀಟರ್ ಅಗಲದ ಸಾರ್ವಜನಿಕ ವಾಕಿಂಗ್ ಪಥ.

ಒತ್ತುವರಿಗೆ ಶಾಶ್ವತ ಬ್ರೇಕ್: ಈ ವಾಕಿಂಗ್ ಪಥ ಕೇವಲ ನಾಗರಿಕರ ವಾಯುವಿಹಾರಕ್ಕೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗುವುದನ್ನು ಶಾಶ್ವತವಾಗಿ ತಡೆಯಲು ರೂಪಿಸಲಾದ ರಕ್ಷಣಾ ಕವಚವಾಗಿದೆ ಎಂದು ಎಂಜಿನಿಯರ್‌ಗಳು ತಂಡಕ್ಕೆ ವಿವರಿಸಿದರು.

ಸುರಕ್ಷಿತ ವಾಯುವಿಹಾರ: ಮಳೆನೀರು ಸರಾಗವಾಗಿ ಹರಿಯುವುದಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಅತ್ಯಂತ ವೈಜ್ಞಾನಿಕವಾಗಿ ಪಾದಚಾರಿ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ.

45

ಹಸಿರು ಕಾರಿಡಾರ್‌ನಿಂದ ಪ್ರಕೃತಿ ಸೌಂದರ್ಯ:

ಕಾಲುವೆಯ ಬದಿಯಲ್ಲಿ ಕೇವಲ ಕಾಂಕ್ರೀಟ್ ಗೋಡೆಗಳಿಲ್ಲ, ಬದಲಿಗೆ ಆಹ್ಲಾದಕರ ಹಸಿರೀಕರಣ ಕೈಗೊಳ್ಳಲಾಗಿದೆ. ಕಾಲುವೆಯ ಇಕ್ಕೆಲಗಳಲ್ಲಿ ರಕ್ಷಣೆಗೆ ಹಾಗೂ ಸೌಂದರ್ಯಕ್ಕಾಗಿ ಡ್ಯಾನ್ಸಿಂಗ್/ಫೇಸಿಂಗ್ ಬಿದಿರು ನೆಡಲಾಗಿದೆ. ಕಾರಿಡಾರ್‌ನ ಗಡಿಭಾಗದಲ್ಲಿ ಹೂಬಿಡುವ ಆಕರ್ಷಕ ಟ್ಯಾಬುಬಿಯಾ (Tabebuia) ಸೇರಿದಂತೆ ಹಲವು ಜಾತಿಯ ನೆರಳು ನೀಡುವ ಗಿಡಗಳನ್ನು ನೆಡಲಾಗಿದ್ದು, ಇದು ಪ್ರದೇಶದ ಗಾಳಿಯ ಗುಣಮಟ್ಟವನ್ನು ಹೆಚ್ಚಿಸಿದೆ.

ವಿಶ್ವ ಬ್ಯಾಂಕ್‌ನ ಪರಿಸರ ಮತ್ತು ಸಾಮಾಜಿಕ (E&S) ತಜ್ಞರು ಈ ಹಸಿರೀಕರಣವನ್ನು ವಿಶೇಷವಾಗಿ ಪ್ರಶಂಸಿಸಿದ್ದು, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಬಳಕೆಯನ್ನು ಒಂದೇ ಯೋಜನೆಯಲ್ಲಿ ಬೆಸೆದಿರುವುದು ಅದ್ಭುತ ಪರಿಕಲ್ಪನೆ ಎಂದಿದ್ದಾರೆ.

55

ಭವಿಷ್ಯದ ಒಳಚರಂಡಿ (UGD) ವ್ಯವಸ್ಥೆಗೂ ಜಾಗ ಮೀಸಲು!

ಸಾಮಾನ್ಯವಾಗಿ ರಸ್ತೆ ಅಥವಾ ಪಾದಚಾರಿ ಮಾರ್ಗ ನಿರ್ಮಿಸಿದ ನಂತರ ಒಳಚರಂಡಿ ಪೈಪ್‌ಲೈನ್ ಹಾಕಲು ಮತ್ತೆ ಅಗೆಯುವುದು ನಗರಗಳಲ್ಲಿ ಸಾಮಾನ್ಯ. ಆದರೆ ಈ ಯೋಜನೆಯಲ್ಲಿ ದೂರದೃಷ್ಟಿ ವಹಿಸಲಾಗಿದ್ದು, ಭವಿಷ್ಯದ ಒಳಚರಂಡಿ ಲೈನ್‌ಗಳನ್ನು ಅಳವಡಿಸಲು ಕಾರಿಡಾರ್‌ನಲ್ಲಿ ಮುಂಚಿತವಾಗಿಯೇ ಸ್ಥಳಾವಕಾಶ ಮೀಸಲಿಡಲಾಗಿದೆ. ಇದರಿಂದ ವಾಕಿಂಗ್ ಪಥಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ಸ್ಥಳೀಯ ನಿವಾಸಿಗಳ ಹರ್ಷ:

ವಿಶ್ವ ಬ್ಯಾಂಕ್ ತಂಡ ಸ್ಥಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಸ್ಥಳೀಯ ಸಾರ್ವಜನಿಕರು ಸಹ ಪ್ರಾಧಿಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದುರ್ನಾತ ಬೀರುತ್ತಿದ್ದ ಪ್ರದೇಶವೀಗ ಸುಂದರ ವಾಕಿಂಗ್ ಸ್ಪಾಟ್ ಆಗಿ ಬದಲಾಗಿದ್ದು, ಬೆಳಗ್ಗೆ ಮತ್ತು ಸಂಜೆ ಸುರಕ್ಷಿತವಾಗಿ ವಾಕಿಂಗ್ ಮಾಡಲು ಅನುಕೂಲವಾಗಿದೆ ಎಂದು ಹರ್ಷ ಹಂಚಿಕೊಂಡರು. ನಗರದಲ್ಲಿ ಲಭ್ಯವಿರುವ ಸರ್ಕಾರಿ ಜಮೀನುಗಳಲ್ಲಿ ಇದೇ ಮಾದರಿಯನ್ನು ಅನುಸರಿಸಿ, ಇತರ ರಾಜಕಾಲುವೆಗಳನ್ನೂ ವಾಕಿಂಗ್ ಪಥ ಹಾಗೂ ಗ್ರೀನ್ ಕಾರಿಡಾರ್‌ಗಳನ್ನಾಗಿ ಅಭಿವೃದ್ಧಿಪಡಿಸಲು GBA/PIU ಮುಂದಾಗಿದೆ.

Read more Photos on
click me!

Recommended Stories