ವೀಸಾ ತಡವಾಗಿದ್ದಕ್ಕೆ ನಾವು ಭಾರತ ಎದುರು ಸೋತಿದ್ದು..! ಕುಂಟು ನೆಪ ಹೇಳಿದ ಪಾಕ್‌ ಕೋಚ್

By Naveen KodaseFirst Published Jun 23, 2023, 4:55 PM IST
Highlights

ಸ್ಯಾಫ್‌ ಕಪ್‌ನಲ್ಲಿ ಭಾರತ ಎದುರು ಹೀನಾಯ ಸೋಲು ಕಂಡ  ಪಾಕಿಸ್ತಾನ
ಪಾಕ್ ಸೋಲಿನ ಬೆನ್ನಲ್ಲೇ ವೀಸಾ ಸಮಸ್ಯೆಯ ಕಥೆ ಹೇಳಿದ ಪಾಕ್ ಕೋಚ್
ಪಂದ್ಯ ಆರಂಭಕ್ಕೆ 6 ಗಂಟೆ ಮುಂಚೆ ಬೆಂಗಳೂರಿಗೆ ಬಂದಿದ್ದ ಪಾಕಿಸ್ತಾನ ತಂಡ

ಬೆಂಗಳೂರು(ಜೂ.23): ಸ್ಯಾಫ್‌ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಭಾರತದ ಎದುರು ಪಾಕಿಸ್ತಾನ ಫುಟ್ಬಾಲ್ ತಂಡವು 4-0 ಅಂತರದ ಹೀನಾಯ ಸೋಲು ಅನುಭವಿಸಿದೆ. ಸುನಿಲ್ ಚೆಟ್ರಿ ಬಾರಿಸಿದ ಹ್ಯಾಟ್ರಿಕ್ ಗೋಲು ಹಾಗೂ ಉದಾಂತ್ ಸಿಂಗ್ ಬಾರಿಸಿದ ಮಿಂಚಿನ ಗೋಲಿನ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಭಾರತ ಫುಟ್ಬಾಲ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸ್ಯಾಫ್ ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

90 ನಿಮಿಷಗಳ ಕಾಲ ನಡೆದ ಪಂದ್ಯದುದ್ದಕ್ಕೂ ಪಾಕಿಸ್ತಾನ ಎದುರು ಸಂಪೂರ್ಣ ಪ್ರಾಬಲ್ಯ ಮೆರೆಯುವಲ್ಲಿ ಸುನಿಲ್ ಚೆಟ್ರಿ ಪಡೆ ಯಶಸ್ವಿಯಾಯಿತು. ಇದೀಗ ಬೆನ್ನಲ್ಲೇ ಮಾತನಾಡಿರುವ ಪಾಕಿಸ್ತಾನ ತಂಡದ ಕೋಚ್ ತೋರ್ಬೆನ್‌ ವಿಟಜೆವಸ್ಕಿ, ಪಂದ್ಯವನ್ನಾಡಲು ವೀಸಾ ಸಮಸ್ಯೆ ಕಾಡಿದ್ದರಿಂದಾಗಿ ಪಂದ್ಯವನ್ನು ನಾವು ಸೋತೆವು ಎನ್ನುವ ಕುಂಟು ನೆಪವನ್ನು ಹೇಳಿದ್ದಾರೆ.  

"ಭಾರತಕ್ಕೆ ಪ್ರವಾಸ ಮಾಡಲು ನಮಗೆ ತಡವಾಗಿ ವೀಸಾ ಸಿಕ್ಕಿತು. ಮುಂಬೈ ಏರ್‌ಪೋರ್ಟ್‌ನಲ್ಲಿಯೂ ಇಮಿಗ್ರೇಶನ್‌ ವಿಚಾರವಾಗಿ ಸಾಕಷ್ಟು ಸಮಸ್ಯೆಯಾಯಿತು. ಹೀಗಾಗಿ ನಮ್ಮ ಹುಡುಗರು ಸಾಕಷ್ಟು ಕಷ್ಟವನ್ನು ಎದುರಿಸಿದರು. ಎರಡನೇ ಗುಂಪು 16 ಗಂಟೆಗಳ ಪ್ರಯಾಣದ ಬಳಿಕ ಪಂದ್ಯ ಆರಂಭಕ್ಕೆ ಕೇವಲ 6 ಗಂಟೆಯಿದ್ದಾಗ ಹೋಟೆಲ್‌ಗೆ ಬಂದಿಳಿದರು.  ಇಷ್ಟಾದ ಬಳಿಕ ಪಂದ್ಯವನ್ನಾಡುವುದು ಸುಲಭವಲ್ಲ. ಆದರೆ ನಾವು ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕಾಗುತ್ತದೆ. ಅದನ್ನಂತೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಫುಟ್ಬಾಲ್ ತಂಡದ ಕೋಚ್ ತೋರ್ಬೆನ್‌ ವಿಟಜೆವಸ್ಕಿ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಮಗೆ ಮಾರಿಷಸ್‌ನಲ್ಲೂ ಸಾಕಷ್ಟು ಸಮಸ್ಯೆಗಳಾದವು. ಆದರೆ ನಮಗೆ ಒಂದಷ್ಟು ಹೆಚ್ಚಿನ ಸಮಯಾವಕಾಶವಿದ್ದಿದ್ದರೇ, ನಾವು ಇನ್ನಷ್ಟು ಚೆನ್ನಾಗಿ ಆಡುತ್ತಿದ್ದೆವು. ರಾತ್ರಿಯಿಡಿ ನಾವು ಪ್ರಯಾಣ ಮಾಡಿದ್ದರಿಂದ ಆಟಗಾರರು ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಈ ರೀತಿಯಾದರೇ, ಪಂದ್ಯಕ್ಕೆ ಒಳ್ಳೆಯ ಸಿದ್ದತೆ ಎನಿಸಿಕೊಳ್ಳುವುದಿಲ್ಲ. ಹೀಗಾಗಿ ನಾವು ಆಟಗಾರರಿಂದ ಹೆಚ್ಚಿಗೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಪಾಕ್ ಕೋಚ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಪಾಕಿ​ಸ್ತಾನ ಆಟ​ಗಾ​ರರು 2 ಬ್ಯಾಚ್‌ಗಳಲ್ಲಿ ಬೆಂಗ​ಳೂ​ರಿಗೆ ಆಗ​ಮಿ​ಸಿ​ದರು. ಬುಧ​ವಾರ ಬೆಳ​ಗ್ಗಿನ ಜಾವ 1 ಗಂಟೆ ವೇಳೆಗೆ ಮಾರಿ​ಷಸ್‌ನಿಂದ ಮುಂಬೈಗೆ ಬಂದಿ​ಳಿದ ತಂಡದಲ್ಲಿ ಆಟ​ಗಾ​ರರು, ಕೋಚಿಂಗ್‌ ಸಿಬ್ಬಂದಿ ಸೇರಿ ಒಟ್ಟು 32 ಸದ​ಸ್ಯ​ರಿದ್ದು ಎಲ್ಲ​ರಿಗೂ ಒಂದೇ ವಿಮಾ​ನ​ದಲ್ಲಿ ಟಿಕೆಟ್‌ ಹೊಂದಿ​ಸಲು ಸಾಧ್ಯ​ವಾ​ಗ​ಲಿಲ್ಲ. ಈ ಕಾರ​ಣಕ್ಕೆ 2 ಬ್ಯಾಚ್‌ಗಳಲ್ಲಿ ತಂಡವು ಬೆಂಗ​ಳೂರು ತಲು​ಪಿತು. ಮೊದಲ ಬ್ಯಾಚ್‌ ಬೆಳಗ್ಗೆ 4 ಗಂಟೆಗೆ ಬೆಂಗ​ಳೂ​ರಿಗೆ ಹೊರ​ಟರೆ, 2ನೇ ಬ್ಯಾಚ್‌ ಬೆಳಗ್ಗೆ 9.15ರ ವಿಮಾ​ನ​ದಲ್ಲಿ ಪ್ರಯಾ​ಣಿಸಿತು. 2ನೇ ಬ್ಯಾಚ್‌ನಲ್ಲಿದ್ದ ಸದ​ಸ್ಯರು ಕಂಠೀ​ರವ ಕ್ರೀಡಾಂಗ​ಣದ ಬಳಿ ನಿಗ​ದಿ​ಯಾ​ಗಿ​ರುವ ಹೋಟೆಲ್‌ ತಲು​ಪಿ​ದಾಗ ಮಧ್ಯಾಹ್ನ 1 ಗಂಟೆ. ಅಂದರೆ ಪಂದ್ಯ ಆರಂಭ​ಗೊ​ಳ್ಳಲು ಕೇವಲ 6 ಗಂಟೆ ಮೊದಲು ಬೆಂಗಳೂರಿಗೆ ಬಂದಿಳಿದರು.

click me!