
ನವದೆಹಲಿ(ಏ.04): ಬೆಂಗಳೂರು ಎಫ್ಸಿ ವಿರುದ್ಧದ ಐಎಸ್ಎಲ್ ಪ್ಲೇ-ಆಫ್ ಪಂದ್ಯದಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದ ಘಟನೆಗೆ ಸಂಬಂಧಿಸಿದಂತೆ ಕೇರಳ ಬ್ಲಾಸ್ಟರ್ಸ್ ಹಾಗೂ ತಂಡದ ಇವಾನ್ ವುಕೊಮನೋವಿಚ್ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಕೇರಳ ಬ್ಲಾಸ್ಟರ್ಸ್, ‘ಬಿಎಫ್ಸಿ ವಿರುದ್ಧದ ಘಟನೆಗೆ ಪ್ರಾಮಾಣಿಕ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಮೈದಾನ ತೊರೆಯುವ ನಮ್ಮ ನಿರ್ಧಾರ ದುರದೃಷ್ಟಕರ ಹಾಗೂ ಆ ಕ್ಷಣದ ಆವೇಶದಲ್ಲಿ ನಡೆದ ಘಟನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ’ ಎಂದಿದೆ.
ಇವಾನ್ ಕೂಡಾ ಟ್ವಿಟರ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿ, ತಮ್ಮ ನಡೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕ್ಷಮೆಯಾಚಿಸಬೇಕೆಂಬ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಆದೇಶ ಪಾಲಿಸಿದ ಕೇರಳ ತಂಡ ಹೆಚ್ಚುವರಿ 2 ಕೋಟಿ ರುಪಾಯಿ ದಂಡ ಪಾವತಿಯಿಂದ ತಪ್ಪಿಸಿಕೊಂಡಿದೆ.
ವಿವಾದದ ಹಿನ್ನೆಲೆ: ಮಾರ್ಚ್ 3ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ಸಿಯ ಸುನಿಲ್ ಚೆಟ್ರಿ ಬಾರಿಸಿದ ಫ್ರೀ ಕಿಕ್ ಗೋಲನ್ನು ವಿರೋಧಿಸಿ ಕೇರಳ ಆಟಗಾರರು ಆಟ ನಿಲ್ಲಿಸಿ ಮೈದಾನ ತೊರೆದಿದ್ದರು. ಹೀಗಾಗಿ ಕೇರಳ ಬ್ಲಾಸ್ಟರ್ ತಂಡಕ್ಕೆ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಶಿಸ್ತು ಸಮಿತಿ 4 ಕೋಟಿ ರುಪಾಯಿ ದಂಡ ವಿಧಿಸಿ, 10 ದಿನಗಳ ಒಳಗೆ ಬಹಿರಂಗ ಕ್ಷಮೆಯಾಚಿಸುವಂತೆ ಸೂಚಿಸಿತ್ತು. ಅಲ್ಲದೇ ಕೋಚ್ ಇವಾನ್ರನ್ನು 10 ಪಂದ್ಯಗಳಿಂದ ಅಮಾನತು ಮಾಡಿ, 5 ಲಕ್ಷ ರು. ದಂಡ ಪಾವತಿಸಲು ಸೂಚಿಸಿ ಬಹಿರಂಗ ಕ್ಷಮೆಯಾಚನೆಗೂ ಆದೇಶಿಸಿತ್ತು. ಆದೇಶ ಉಲ್ಲಂಘಿಸಿದರೆ 2 ಕೋಟಿ ರುಪಾಯಿ ಹೆಚ್ಚುವರಿ ದಂಡ ಹಾಕುವುದಾಗಿ ಎಐಎಫ್ಎಫ್ ಷರತ್ತು ಹಾಕಿತ್ತು.
ವನಿತಾ ಫುಟ್ಬಾಲ್: ರಾಜ್ಯಕ್ಕೆ ಇಂದು ಬಿಹಾರ ಸವಾಲು
ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ಕರ್ನಾಟಕ ತನ್ನ 3ನೇ ಪಂದ್ಯವನ್ನು ಬಿಹಾರ ವಿರುದ್ಧ ಆಡಲಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಗುಂಪು-6ರಲ್ಲಿ ಸ್ಥಾನ ಪಡೆದಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ 9-1 ಗೋಲುಗಳಲ್ಲಿ ಗೆಲುವು ಸಾಧಿಸಿತ್ತು.
ಅಂತಿಮ ಘಟ್ಟದತ್ತ ಕೊಡವ ಕೌಟುಂಬಿಕ ಹಾಕಿ; ಇಂದಿನಿಂದ ಪ್ರಿ ಕ್ವಾರ್ಟರ್ ಫೈನಲ್
2ನೇ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 3-1 ಗೋಲುಗಳ ಗೆಲುವು ಕಂಡಿದ್ದ ರಾಜ್ಯ ತಂಡ ಸದ್ಯ 6 ಅಂಕ ಗಳಿಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಪ್ರಧಾನ ಸುತ್ತಿಗೇರಲಿದ್ದು, 2ನೇ ಸ್ಥಾನ ಪಡೆಯುವ ತಂಡ ಪ್ರಧಾನ ಸುತ್ತಿಗೇರಲು ಉಳಿದ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಿದೆ.
ಏಪ್ರಿಲ್ 25ರಿಂದ ಇಂಡಿಯನ್ ವುಮೆನ್ಸ್ ಲೀಗ್ ಫುಟ್ಬಾಲ್
ನವದೆಹಲಿ: 6ನೇ ಆವೃತ್ತಿಯ ಇಂಡಿಯನ್ ವುಮೆನ್ಸ್ ಲೀಗ್(ಐಡಬ್ಲ್ಯುಎಲ್) ಫುಟ್ಬಾಲ್ ಟೂರ್ನಿ ಏ.25ರಿಂದ ಆರಂಭವಾಗಲಿದೆ ಎಂದು ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಘೋಷಿಸಿದೆ. ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, 8 ತಂಡಗಳು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 4 ತಂಡಗಳು ನಾಕೌಟ್ ಹಂತ ಪ್ರವೇಶಿಸಲಿದೆ ಎಂದು ಎಐಎಫ್ಎಫ್ ತಿಳಿಸಿದೆ. ಅಲ್ಲದೇ ಈ ಬಾರಿ ತಂಡದಲ್ಲಿ ಮೂವರು ವಿದೇಶಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಕಳೆದ ಆವೃತ್ತಿಯಲ್ಲಿ ಗೋಕುಲಂ ಕೇರಳ ಚಾಂಪಿಯನ್ ಆಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.