ಬೆಂಗ್ಳೂರಲ್ಲಿ ಸ್ಯಾಫ್‌ ಕಪ್‌ ಫುಟ್ಬಾಲ್‌ ಟೂರ್ನಿ! ಮೊದಲ ಬಾರಿ ಬೆಂಗಳೂರು ಆತಿಥ್ಯ

By Kannadaprabha NewsFirst Published Mar 20, 2023, 9:01 AM IST
Highlights

ಸ್ಯಾಫ್‌ ಕಪ್ ಫುಟ್ಬಾಲ್ ಟೂರ್ನಿಗೆ ಬೆಂಗಳೂರು ಆತಿಥ್ಯ
4ನೇ ಬಾರಿಗೆ ಭಾರತ ಆತಿಥ್ಯ, ಬೆಂಗಳೂರಲ್ಲಿ ಇದೇ ಮೊದಲು
ಜೂನ್ 20ರಿಂದ ಜುಲೈ 03ರ ವರೆಗೆ ನಡೆಯಲಿದೆ ಟೂರ್ನಿ

ಬೆಂಗಳೂರು(ಮಾ.20): ದಕ್ಷಿಣ ಏಷ್ಯಾ ಫುಟ್ಬಾಲ್‌ ಫೆಡರೇಷನ್‌(ಸ್ಯಾಫ್‌)ನ 14ನೇ ಆವೃತ್ತಿಯ ಚಾಂಪಿಯನ್‌ಶಿಪ್‌ಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಭಾನುವಾರ ಇಲ್ಲಿನ ಕರ್ನಾಟಕ ಒಲಿಂಪಿಕ್‌ ಸಂಸ್ಥೆ(ಕೆಒಎ) ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಅಧ್ಯಕ್ಷ ಕಲ್ಯಾಣ್‌ ಚೌಬೆ ಈ ವಿಷಯವನ್ನು ತಿಳಿಸಿದರು.

ಭಾರತ 4ನೇ ಬಾರಿಗೆ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದ್ದು, ಬೆಂಗಳೂರಲ್ಲಿ ಮೊದಲ ಬಾರಿಗೆ ಟೂರ್ನಿ ನಡೆಯಲಿದೆ. ಈ ಹಿಂದೆ 1999ರಲ್ಲಿ ಗೋವಾ, 2011ರಲ್ಲಿ ನವದೆಹಲಿ, 2015ರಲ್ಲಿ ತಿರುವನಂತಪುರಂ ನಗರಗಳು ಆತಿಥ್ಯ ವಹಿಸಿದ್ದವು.

ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ನೇಪಾಳ ಸೇರಿ ಒಟ್ಟು 6 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ತಲಾ 3 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಿ, ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲಾಗುತ್ತದೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮೀಸ್‌ಗೇರಲಿವೆ. ಪಂದ್ಯಾವಳಿಯ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಚೌಬೆ ಹೇಳಿದ್ದಾರೆ. ಭಾರತ 8 ಬಾರಿ ಚಾಂಪಿಯನ್‌ ಆಗಿದ್ದು, ಮಾಲ್ಡೀವ್‌್ಸ 2, ಬಾಂಗ್ಲಾ, ಆಫ್ಘನ್‌, ಶ್ರೀಲಂಕಾ ತಲಾ ಒಮ್ಮೆ ಪ್ರಶಸ್ತಿ ಜಯಿಸಿವೆ.

Indian Wells Open: 43ರ ಟೆನಿಸಿಗ ರೋಹನ್ ಬೋಪಣ್ಣ ವಿಶ್ವದಾಖಲೆ..!

ಬೆಂಗಳೂರಿಗೆ ಆತಿಥ್ಯ ಅವಕಾಶ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ‘ಸ್ಯಾಫ್‌ ಕಪ್‌ಗೆ ಬೆಂಗಳೂರು ಆತಿಥ್ಯ ವಹಿಸುವ ವಿಷಯ ಬಹಳ ಖುಷಿ ನೀಡಿದೆ. ಈ ಟೂರ್ನಿಯು ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ ಎನ್ನುವ ನಂಬಿಕೆ ಇದೆ’ ಎಂದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿಕಾಸ್‌, ಪರಂ

ನೊಮಿ(ಜಪಾನ್‌): 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ ಭಾರತದ ವಿಕಾಸ್‌ ಸಿಂಗ್‌ ಹಾಗೂ ಪರಂಜೀತ್‌ ಸಿಂಗ್‌ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಹಾಗೂ 2023ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಭಾನುವಾರ ಇಲ್ಲಿ ನಡೆದ ಏಷ್ಯನ್‌ 20 ಕಿ.ಮೀ. ವೇಗದ ನಡಿಗೆ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ 1 ಗಂಟೆ 20.05 ನಿಮಿಷ, 1 ಗಂಟೆ 20.08 ನಿಮಿಷಗಳಲ್ಲಿ ಗುರಿ ತಲುಪಿದರು. ವಿಕಾಸ್‌ 2ನೇ, ಪರಂಜೀತ್‌ 3ನೇ ಸ್ಥಾನ ಗಳಿಸಿದರು. 

ಒಲಿಂಪಿಕ್ಸ್‌ ಹಾಗೂ ಈ ವರ್ಷ ಆಗಸ್ಟ್‌ನಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು 1 ಗಂಟೆ 20.10 ನಿಮಿಷಗಳಲ್ಲಿ ಗುರಿ ನಿಗದಿಪಡಿಸಲಾಗಿತ್ತು. ಕಳೆದ ತಿಂಗಳು ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಆಕ್ಷ್‌ದೀಪ್‌ ಸಿಂಗ್‌ ಸಹ ಅರ್ಹತೆ ಪಡೆದಿದ್ದರು. ಈ ಮೂವರು ಭಾರತೀಯ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

click me!