ಅಭಿಮಾನಿಗಳಿಗೆ ನಿರ್ಬಂಧ; ಖಾಲಿ ಕ್ರೀಡಾಂಗಣದಲ್ಲಿ ISL ಫೈನಲ್!

By Suvarna NewsFirst Published Mar 13, 2020, 7:51 PM IST
Highlights

ಕೊರೋನಾ ವೈರಸ್‌ನಿಂದ ಐಪಿಎಲ್ ಟೂರ್ನಿ ಹಾಗೂ ತವರಿನ ಏಕದಿನ ಸರಣಿ ರದ್ದಾಗಿದೆ. ಇದೀಗ ಐಎಸ್‌ಎಲ್ ಫುಟ್ಬಾಲ್ ಫೈನಲ್ ಪಂದ್ಯಕ್ಕೂ ತಟ್ಟಿದೆ. ನಾಳೆ(ಮಾ.14) ನಡೆಯಲಿರುವ ಫೈನಲ್ ಪಂದ್ಯ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಭಿಮಾನಿಗಳಿಗೆ ಪ್ರವೇಶ ನಿಷೇಧಿಸಿದೆ.
 

ಗೋವಾ(ಮಾ.13):  ಕೊರೋನಾ ವೈರಸ್ ಇಡೀ ವಿಶ್ವವನ್ನ ತಲ್ಲಣಗೊಳಿಸಿದೆ. ಇದೀಗ ಭಾರತದಲ್ಲಿ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಅಂತಿಮ ಘಟ್ಟದಲ್ಲಿರುವ ಐಎಸ್ಎಲ್ ಫೈನಲ್ ಪಂದ್ಯಕ್ಕೂ ಕೊರೋನಾ ವೈರಸ್ ಭೀತಿ ತಟ್ಟಿದೆ. ಎಟಿಕೆ ಹಾಗೂ ಚೆನ್ನೈಯನ್ ಎಫ್‌ಸಿ ನಡುವಿನ ಫೈನಲ್ ಪಂದ್ಯ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊರೋನಾ ವೈರಸ್‌ನಿಂದ ಅಭಿಮಾನಿಗಳಿಗೆ ನಿರ್ಬಂಧ ವಿದಿಸಲಾಗಿದೆ.

ಇದನ್ನೂ ಓದಿ: ಭಾರತ-ಸೌತ್ ಆಫ್ರಿಕಾ ಏಕದಿನ ಸರಣಿ ರದ್ದು, ಕೊರೋನಾಗೆ ಬಲಿಯಾಯ್ತು ಕ್ರಿಕೆಟ್!

ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಚೆನ್ನೈಯಿನ್ ಎಫ್ ಸಿ ಹಾಗೂ ಎಟಿಕೆ ತಂಡಗಳು ಫೈನಲ್ ನಲ್ಲಿ ಪರಸ್ಪರ ಮುಖಾಮುಖಿಯಾಗುವುದರೊಂದಿಗೆ ಹೀರೋ ಇಂಡಿಯನ್ ಲೀಗ್ ನ ಆರನೇ ಆವೃತ್ತಿಗೆ ತೆರೆ ಬೀಳಲಿದೆ. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಎಟಿಕೆ ಹಾಗು ಚೆನ್ನೈಯಿನ್ ತಂಡಗಳು ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿವೆ.

ಇದನ್ನೂ ಓದಿ:ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ.

ಪ್ಲೇ ಆಫ್ ನಲ್ಲಿ ಚೆನ್ನೈಯಿನ್ ತಂಡ ಉತ್ತಮ ಪ್ರದರ್ಶನ ತೋರಿ 6-5 ಗೋಲುಗಳ ಅಂತರದಲ್ಲಿ  ಗೋವಾ ತಂಡವನ್ನು ಮಣಿಸಿದ್ದರೆ ಎಟಿಕೆ 3-2 ಸರಾಸರಿಯಲ್ಲಿ ಬೆಂಗಳೂರು ತಂಡಕ್ಕೆ ಸೋಲುಣಿಸಿತ್ತು. ಇದೇ ಮೊದಲ ಬಾರಿ ಈ ಎರಡು ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ, ವಿಶೇಷವೆಂದರೆ ಇತ್ತಂಡಡಗಳು ಇದುವರೆಗೂ ಫೈನಲ್ ನಲ್ಲಿ ಸೋತಿಲ್ಲ. ಶನಿವಾರ ಒಂದು ತಂಡ ಫೈನಲ್ ನಲ್ಲಿ ಸೋಲಲೇಬೇಕಾಗುತ್ತದೆ. ಈ ಋತುವಿನಲ್ಲಿ ಎಟಿಕೆ ತಂಡ ಸ್ಥಿರ ಪ್ರದರ್ಶನ ತೋರಿದ ತಂಡವೆನಿಸಿದೆ. ಚೆನ್ನೈಯಿನ್ ತಂಡ ಅಚ್ಚರಿಯ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿತ್ತು. ಓವೆನ್ ಕೊಯ್ಲ್ ಆಗಮನದ ನಂತರ ಚೆನ್ನೈಯಿನ್ ತಂಡದ ಅದೃಷ್ಟವೇ ಬದಲಾಯಿತು.  ಕೊಯ್ಲ್ ಬರುವುದಕ್ಕೆ ಮುನ್ನ ಚೆನ್ನೈಯಿನ್ ತಂಡ ತಾನು ಆಡಿರುವ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದು ಪಂದ್ಯ. ಗಳಿಸಿರುವುದು ಕೇವಲ ನಾಲ್ಕು ಗೋಲುಗಳು. ನೂತನ ಕೋಚ್ ಆಗಮನದ ನಂತರ ಮಾಜಿ ಚಾಂಪಿಯನ್ ಎಂಟು ಪಂದ್ಯಗಳನ್ನು ಗೆದ್ದಿತ್ತು.

ಇನ್ನು ಒಂದು ಪಂದ್ಯ ಗೆದ್ದರೆ ಚೆನ್ನೈಯಿನ್ ತಂಡ ಇತಿಹಾಸ ನಿರ್ಮಿಸಲಿದೆ. 14 ಗೋಲುಗಳನ್ನು  ಗಳಿಸಿರುವ ನೆರಿಜುಸ್ ವಾಸ್ಕಿಸ್ ಅತಿ ಹೆಚ್ಚು ಗೋಲು ಗಳಿಸಿದ ಗೌರವಕ್ಕೆ ಪಾತ್ರರಾಗಲು ಹೋರಾಟ ನಡೆಸಲಿದ್ದಾರೆ. ತಂಡದ ಇನ್ನೋರ್ವ ಸ್ಟ್ರೈಕರ್ ರಫಾಯಲ್ ಕ್ರಿವೆಲ್ಲೆರೊ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಲಾಲ್ ರಯಾನ್ಜುವಾಲಾ ಚಾಂಗ್ಟೆ ಎರಡೂ ಪ್ಲೇ ಆಫ್ ಪಂದ್ಯಗಳಲ್ಲಿ ಗೋಲು ಗಳಿಸಿದ ಭಾರತದ ಮೊದಲ ಆಟಗಾರರೆನಸಿದ್ದಾರೆ.

‘’ಎಟಿಕೆ ತಂಡವನ್ನು ನಾನು ಬಹಳವಾಗಿ ಗೌರವಿಸುತ್ತೇನೆ. ಅವರಲ್ಲಿ ಉತ್ತಮ ಗುಣಮಟ್ಟದ ಆಟಗಾರಿದ್ದಾರೆ. ನಾವು ನಮ್ಮ ನೈಜ ಶೈಲಿಯ ಆಟಕ್ಕೆ ಬದ್ಧರಾಗಿರುತತ್ತೇವೆ, ಏಕೆಂದರೆ ನಮ್ಮ ಶೈಲಿಯೇ ನಮಗೆ ಜಯ ತಂದುಕೊಟ್ಟಿದೆ. ನಾವು ಈಗಲೂ ಒತ್ತಡದಲ್ಲಿದ್ದೇವೆ, ತಂಡ ಏಕಾಗ್ರತೆಯಿಂದ ತನ್ನ ನೈಜ ಆಟವಾಡಿದರೆ ಯಶಸ್ಸು ಖಚಿತ,’’ ಎಂದು ಕೊಯ್ಲ್ ಹೇಳಿದ್ದಾರೆ.

 ಎಟಿಕೆ ತಂಡ ರಾಯ್ ಕೃಷ್ಣ ಹಾಗೂ ಡೇವಿಡ್ ವಿಲಿಯಮ್ಸ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. 15 ಗೋಲುಗಳನ್ನು ಗಳಿಸಿರುವ ಕೃಷ್ಣ ಗೋಲ್ಟನ್ ಬೂಟು ಧರಿಸಲು ಸಜ್ಜಾಗಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟ ಡೇವಿಡ್ ವಿಲಿಯಮ್ಸ್ ಕೂಡ ಜಯದ ರೂವಾರಿ.

‘’ನಾವು ಫೈನಲ್ ಪಂದ್ಯವನ್ನು ಹೆಚ್ಚು ಖುಷಿಯಿಂದ ಆಡಲಿದ್ದೇವೆ. ಆದರೂ ನಾವು ಎದುರಾಳಿಯನ್ನು ಗೌರವಿಸುತ್ತೇವೆ.  ನಮಗೆ ಜಯ ಗಳಿಸಲು ಈಗ 90 ನಿಮಿಷ  ಉಳಿದಿದೆ. ಫೈನಲ್ ಇರುವುದು ಒಂದು ಮಾತ್ರ. ಕೆಲವು ಆಟಗಾರರಿಗೆ ಮುಂದಿನ ಫೈನಲ್ ಆಟುವ ಅವಕಾಶ ಸಿಗದೇ ಇರಬಹುದು. ಆದರೆ ನಾಳೆಯ ಫೈನಲ್ ಗೆ ಒಂದು ಹೃದಯ ಹಾಗೂ ಸಂಪೂರ್ಣ ಮನಸ್ಸಿನ ಅಗತ್ಯ ನಮಗಿದೆ,’’ ಎಂದು ಎಟಿಕೆ ಕೋಚ್ ಆಂಟೋನಿಯೊ ಹಬ್ಬಾಸ್ ಹೇಳಿದ್ದಾರೆ.

click me!