ನವರಾತ್ರಿಯಲ್ಲಿ ಪುಸ್ತಕಗಳನ್ನು ಪೂಜಿಸುವ ಸಂಪ್ರದಾಯವಿದೆ. ಆದರೆ ಯಾವ ಪುಸ್ತಕಗಳನ್ನು ಪೂಜಿಸಬೇಕು, ಯಾವುದನ್ನು ಪೂಜಿಸಬಾರದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಜ್ಞಾನದ ಸಂಕೇತವಾದ ಪುಸ್ತಕಗಳನ್ನು ಪೂಜಿಸುವ ವಿಧಾನ ಮತ್ತು ಮಹತ್ವವನ್ನು ವಿವರಿಸಲಾಗಿದೆ.
ನವರಾತ್ರಿ ಹತ್ತಿರ ಬರುತ್ತಿದೆ. ನವರಾತ್ರಿಯಲ್ಲಿ ಶಾರದಾ ಪೂಜೆ ಅಥವಾ ಸರಸ್ವತಿಯ ಪೂಜೆ ಮಾಡುತ್ತಾರೆ. ಸರಸ್ವತಿಯ ಫೋಟೋ ಅಥವಾ ಮೂರ್ತಿ ಇರುವವರು ಅದನ್ನಿಟ್ಟು ಪೂಜಿಸಿದರೆ, ಕೆಲವರು ಪುಸ್ತಕವನ್ನಿಟ್ಟು ಪೂಜಿಸುತ್ತಾರೆ. ಹೀಗೆ ಪುಸ್ತಕಕ್ಕೆ ಪೂಜೆ ಮಾಡಬಹುದೇ? ಯಾವ ಪುಸ್ತಕಗಳಿಗೆ ಮಾಡಬೇಕು? ಯಾವುದಕ್ಕೆ ಮಾಡಬಾರದು?
ಈಗ ಪುಸ್ತಕಗಳೂ ಡಿಜಿಟಲ್ ಆಗುತ್ತಿವೆ. ಆದರೆ ಪುಸ್ತಕಗಳೇ ಇಲ್ಲದ ಕಾಲ ಎಂದೂ ಬರಲಾರದು. ಎಲ್ಲ ಜ್ಞಾನವೂ ಡಿಜಿಟಲೈಸ್ ಆದರೂ, ಜ್ಞಾನ ಎಂದರೆ ಪುಸ್ತಕ ಎಂದೇ ನಾವು ಭಾವಿಸಿರುವುದು. ಹೀಗಾಗಿ ಪುಸ್ತಕಗಳನ್ನು ಜ್ಞಾನಕ್ಕೆ ಸಮೀಕರಿಸಲಾಗುತ್ತದೆ. ಜ್ಞಾನದ ಅಧಿದೇವತೆ ಸರಸ್ವತಿ ಅಥವಾ ಶಾರದೆ. ಬ್ರಹ್ಮನ ರಾಣಿಯಾದ ಈಕೆ ಜ್ಞಾನಾಂಕಿತೆಯಾಗಿ ಬ್ರಹ್ಮದೇವರ ಸೃಷ್ಟಿಗೆ ಶಕ್ತಿಯನ್ನು ತುಂಬಿದವಳು. ಹೀಗಾಗಿ ನವರಾತ್ರಿಯಂದು ಆಕೆಗೂ ಪೂಜೆ ಸಲ್ಲುತ್ತದೆ. ಒಂದು ಕೈಯಲ್ಲಿ ವೀಣೆ, ಇನ್ನೊಂದರಲ್ಲಿ ತಾಳೆಯೋಲೆ ಗ್ರಂಥಗಳನ್ನು ಹಿಡಿದ ಅವಳು ಓದು ಹಾಗೂ ಲಲಿತಕಲೆಗಳ ಅಧಿದೇವತೆ.
ಸರಸ್ವತಿ ಪೂಜೆ ಹೇಗೆ ಮಾಡಬೇಕು ಎಂಬ ಪ್ರಶ್ನೆಗೆ ಸ್ವಾಮಿ ವಿವೇಕಾನಂದರು 'ಶ್ರವಣ, ಮನನ, ನಿದಿಧ್ಯಾಸನವೇ' ನಿಜವಾದ ಸರಸ್ವತಿ ಪೂಜೆ ಎನ್ನುತ್ತಾರೆ. ಪ್ರಜ್ಞೆ , ವಿವೇಕ, ಜಾಣ್ಮೆ, ಕೌಶಲಕ್ಕೆ ಆಧಾರವೇ ಸರಸ್ವತಿ ಮಾತೆ. ಬದುಕಿನ ಏಳ್ಗೆಗೆ ಆಕೆಯೇ ಮೂಲಾಧಾರ. ಮೂಲಾಧಾರದಲ್ಲಿ ಚೈತನ್ಯ ಅರಳಿದರೇ ಸಹಸ್ರಾರದಲ್ಲಿ ವಿವೇಕ ಅರಳುವುದು, ಬೆಳಕು ಕಾಣುವುದು ಎನ್ನುವುದು ಜ್ಞಾನಿಗಳ ಮಾತು. ವೀಣಾಪಾಣಿ, ಪುಸ್ತಕಧಾರಿಣಿಯಾದ ಸರಸ್ವತಿ ಕಲೆ ಮತ್ತು ವಿದ್ಯೆಯ ಪ್ರತಿರೂಪ. ಆಕೆಯ ಆರಾಧನೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪೂರಕವಾಗುತ್ತದೆ.
ವೇದೋಕ್ತವಾಗಿ ಸರಸ್ವತಿ ವಿದ್ಯಾ ದೇವತೆ. ವಿದ್ಯೆಯಲ್ಲಿ ಎರಡು ಬಗೆಗಳಿವೆ. ತಾಯಿ ಸರಸ್ವತಿಯನ್ನು ಆರಾಧಿಸುವ ಮೂಲಕ ನಮಗೆ ಸುವಿದ್ಯೆಯನ್ನು ಕೊಡು ಎಂದು ಪ್ರಾರ್ಥಿಸಬೇಕು. ಮುಖ್ಯವಾಗಿ ಸಂಗೀತಗಾರರು ತಮ್ಮ ಜೀವನಾಡಿಯಾಗಿರುವ ಸಂಗೀತ ವಾದ್ಯಗಳನ್ನು ಸರಸ್ವತಿಯ ಪ್ರತಿರೂಪವೇ ಎಂದು ಭಾವಿಸುತ್ತಾರೆ. ಅದರಲ್ಲೂ ತಾನ್ಪುರ ಅಥವಾ ತಂಬೂರಿ ಸರಸ್ವತಿಯ ಪ್ರತಿರೂಪವೇ ಆಗಿದೆ. ಹೀಗೆ ವಸ್ತುಗಳನ್ನು ಸಾಂಕೇತಿಕವಾಗಿ ಪರಿಗಣಿಸದೆ ಅದರಲ್ಲಿ ದೈವೀ ಭಾವನೆ ಮೇಳೈಸಿಕೊಂಡಾಗ ಅದು ದೈವೀ ಸ್ವರೂಪವಾಗೇ ಕಾಣುತ್ತದೆ.
ಭಾರತದ ಈ 6 ಕಡೆಗಳಲ್ಲಿ ರಾವಣನನ್ನು ಪೂಜಿಸಲಾಗುತ್ತದೆ ಗೊತ್ತಾ?
ಪುಸ್ತಕ ಪೂಜೆ ಹೇಗೆ ಮಾಡುವುದು?
- ಮನೆಯಲ್ಲಿ ಹಳೆಯ ತಾಳೆಯೋಲೆ ಗ್ರಂಥಗಳಿದ್ದರೆ ಅವುಗಳನ್ನು ದೇವರ ಪೀಠದ ಮೇಲಿಟ್ಟು ಪೂಜಿಸಬಹುದು. ಆದರೆ ಇವು ಉತ್ತಮ ಜ್ಞಾನದ ಗ್ರಂಥಗಳಾಗಿರಬೇಕು.
- ಭಗವದ್ಗೀತೆ, ವೇದಗಳು, ಉಪನಿಷತ್ತುಗಳ ಗ್ರಂಥಗಳು ಪೂಜೆಗೆ ಶ್ರೇಷ್ಠ. ರಾಮಾಯಣ, ಮಹಾಭಾರತ ಕಾವ್ಯಗಳನ್ನೂ ಪೂಜಿಸಬಹುದು.
- ಭಕ್ತ ಹಾಗೂ ಆರಾಧನೆಗೆ ಸಂಬಂಧಿಸಿದ ಕೃತಿಗಳು, ಪುರಾಣಗಳು, ಬ್ರಹ್ಮಸೂತ್ರಗಳು, ಸಂತರ ಜೀವನಚರಿತ್ರೆ, ಇವುಗಳನ್ನು ಭಜಿಸಬಹುದು.
- ಕೆಲವರು ತಮ್ಮ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಲೆಕ್ಕದ ಪುಸ್ತಕಗಳನ್ನು ಪೂಜಿಸುತ್ತಾರೆ. ಇದರಿಂದ ಮಧ್ಯಮ ಫಲ.
- ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಪುಸ್ತಕಗಳನ್ನು ಇಟ್ಟು ಪೂಜಿಸುವುದರಿಂದ ಫಲವಿದೆ.
- ಸಾಮಾನ್ಯ ಲೌಕಿಕ ಪುಸ್ತಕಗಳು, ಕಾದಂಬರಿಗಳು ಪೂಜೆಗೆ ಅರ್ಹವಲ್ಲ. ದುಷ್ಟರ, ಕೊಲೆಗಾರರ ಕತೆಗಳನ್ನು ಪೂಜಿಸುವುದರಿಂದ ಹಾನಿ ಖಚಿತ.
- ಪುಸ್ತಕಗಳನ್ನು ನೀಟಾಗಿ ಇಟ್ಟುಕೊಳ್ಳಬೇಕು. ಕಿವಿಗಳು ಮಡಿಸಿರಬಾರದು. ಕೊಳೆಯಾಗಬಾರದು. ಕೆಂಪು ಅಥವಾ ಹಸಿರು ಬಟ್ಟೆಯಲ್ಲಿ ಸುತ್ತಿ ಇಡಬೇಕು.
- ವ್ಯಾಸಪೀಠದಲ್ಲಿ ಇಟ್ಟರೆ ಚೆನ್ನ. ಅದರ ಮೇಲೆ ಅಕ್ಷತೆ ಕಾಳು, ಹೂವು, ಕುಂಕು- ಅರಶಿನ ಇಡಬೇಕು.
ಸದ್ಗುರು ಜಗ್ಗಿ ವಾಸುದೇವ್ ಕೂಡ ನಾಗಾ ಸಾಧು! ಇಲ್ಲಿದೆ ನೋಡಿ ವಿಡಿಯೋ