ಜ್ಯೋತಿರ್ಲಿಂಗ ಸರಣಿ: ಸ್ಮಶಾನ ಭೂಮಿಯಲ್ಲಿ ಕೂತ ದಕ್ಷಿಣಮುಖಿ ಮಹಾಕಾಳೇಶ್ವರ, ಇಲ್ಲಿ ರಾತ್ರಿ ಕಳೆದೋರ ಅಧಿಕಾರ ಪತನ!

By Suvarna NewsFirst Published Jul 26, 2022, 10:31 AM IST
Highlights

ಶ್ರಾವಣ ಶಿವನಿಗೆ ವಿಶೇಷವಾದುದು. ಈ ಮಾಸದ ಹೊಸ್ತಿಲಲ್ಲಿ ಶಿವನ ಕುರಿತು, ಆತನ ದೇವಾಲಯಗಳ ಕುರಿತು ತಿಳಿಯೋಣ. ಜ್ಯೋತಿರ್ಲಿಂಗ ಸರಣಿಯಲ್ಲಿ ಈಗಾಗಲೇ ಮೂರು ಮಹಾ ಜ್ಯೋತಿರ್ಲಿಂಗಗಳ ಬಗ್ಗೆ ತಿಳಿದಿದ್ದೇವೆ. ನಾಲ್ಕನೆಯದು ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ. ಇದರ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ. 

ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿ ನಗರದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನವು ಭಾರತದ ಹನ್ನೆರಡು ಮಹಾ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಜ್ಯೋತಿರ್ಲಿಂಗ ಎಂದರೆ ಸ್ವತಃ ಶಿವನೇ ಸ್ವಯಂಭುವಾಗಿ ಪ್ರಕಟವಾದ ಸ್ಥಳ.  ಈ ದೇವಾಲಯದ ಸುಂದರವಾದ ವಿವರಣೆಯು ಪುರಾಣಗಳು, ಮಹಾಭಾರತ ಮತ್ತು ಕಾಳಿದಾಸರಂತಹ ಮಹಾನ್ ಕವಿಗಳ ಕೃತಿಗಳಲ್ಲಿ ಕಂಡುಬರುತ್ತದೆ. ಪುರಾಣಗಳಲ್ಲಿ ಶಿವನ ಹೆಸರು 'ರುದ್ರ' ಎಂದಿದೆ. ರುದ್ರನು ವಿನಾಶದ ದೇವರೂ ಹೌದು, ಉಪಕಾರಿಯೂ ಹೌದು. ವಿಷ್ಣುವಿನಂತೆಯೇ, ಶಿವನ ಅನೇಕ ಅವತಾರಗಳನ್ನು ಪುರಾಣಗಳಲ್ಲಿ ವಿವರಿಸಲಾಗಿದೆ. ಪುರಾಣಗಳ ಎಲ್ಲಾ ದೇವತೆಗಳಲ್ಲಿ ಶಿವನ ಪ್ರಾಮುಖ್ಯತೆ ಅತ್ಯುನ್ನತವಾಗಿದೆ. ಹಾಗಾಗಿಯೇ ಆತನನ್ನು ದೇವರ ದೇವ ಮಹಾದೇವ ಎನ್ನುವುದು. ಜಟೆ, ದೇಹದ ಮೇಲೆ ಭಸ್ಮವನ್ನು ಧರಿಸಿ, ಕುತ್ತಿಗೆಯಲ್ಲಿ ಹಾವುಗಳು, ರುದ್ರಾಕ್ಷಿಯ ಮಾಲೆಗಳು, ಕೂದಲಿನಲ್ಲಿ ಚಂದ್ರ, ಗಂಗೆ, ಕೈಯಲ್ಲಿ ತ್ರಿಶೂಲ ಮತ್ತು ಬರಿಗಾಲಿನಲ್ಲಿರುವ ಶಿವನು ಕೈಲಾಸಧಾಮದಲ್ಲಿ ನೆಲೆಸಿದ್ದಾನೆ.

ವಾಸ್ತವವಾಗಿ, ಈ ದೇವಾಲಯವು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಭಕ್ತರ ದಂಡೇ ಇರುತ್ತದೆ. ಆದರೆ ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಹೇಗೆ ಹುಟ್ಟಿಕೊಂಡಿತು ಎಂಬುದು ಕೆಲವೇ ಜನರಿಗೆ ತಿಳಿದಿದೆ. ಸೂರ್ಯ ದೇವರ ಹನ್ನೆರಡು ಕಿರಣಗಳಿಂದ ಜ್ಯೋತಿರ್ಲಿಂಗವು ಕಾಣಿಸಿಕೊಂಡಿದೆ ಎಂದು ಇಂದು ನಾವು ನಿಮಗೆ ಹೇಳುತ್ತೇವೆ.

12 ರಶ್ಮಿಗಳಿಂದ ಜ್ಯೋತಿರ್ಲಿಂಗ ಪ್ರಕಟ
ಜ್ಯೋತಿರ್ಲಿಂಗ ಪ್ರಕಟವಾದ ಬಗ್ಗೆ ಬ್ರಹ್ಮ, ವಿಷ್ಣುವಿನ ಜಗಳ ಪ್ರಸಂಗವನ್ನು ಶಿವ ಬಗೆಹರಿಸಿದ ಕತೆ ತಿಳಿದೇ ಇದೆ. ಇಲ್ಲಿ ಮತ್ತೊಂದು ಕತೆ ಇದೆ. ಬ್ರಹ್ಮಾಂಡದ ಸೃಷ್ಟಿಯಾದಾಗ, ಸೂರ್ಯನ ಮೊದಲ 12 ಕಿರಣಗಳು ಭೂಮಿಯ ಮೇಲೆ ಬಿದ್ದವು. ಅವುಗಳಿಂದ 12 ಜ್ಯೋತಿರ್ಲಿಂಗಗಳನ್ನು ತಯಾರಿಸಲಾಯಿತು. ಅವುಗಳಲ್ಲೊಂದು ಉಜ್ಜಯಿನಿ ಮಹಾಕಾಳೇಶ್ವರ ಜ್ಯೋತಿರ್ಲಿಂಗ. ಅಂದಿನಿಂದ ಉಜ್ಜಯಿನಿಯಲ್ಲಿ ಮಹಾಕಾಳೇಶ್ವರನನ್ನು ಪೂಜಿಸಲಾಗುತ್ತದೆ. ಉಜ್ಜಯಿನಿಯ ಸಂಪೂರ್ಣ ಭೂಮಿಯನ್ನು ಉಸರ್ ಭೂಮಿ ಎಂದು ಕರೆಯಲಾಗುತ್ತದೆ. ಅಂದರೆ ಸ್ಮಶಾನ ಭೂಮಿ. ಮಹಾಕಾಳ ಭಗವಂತನ ಮುಖವು ದಕ್ಷಿಣದ ಕಡೆಗೆ ಇದೆ. ಆದ್ದರಿಂದ ತಂತ್ರ ಚಟುವಟಿಕೆಗಳ ದೃಷ್ಟಿಯಿಂದ ಉಜ್ಜಯಿನಿ ಮಹಾಕಾಳ ದೇವಾಲಯವು ಬಹಳ ವಿಶೇಷವಾದ ಮಹತ್ವವನ್ನು ಹೊಂದಿದೆ. ಮಹಾಕಾಳ ನಗರದಲ್ಲಿ, ಭಗವಾನ್ ಹರಸಿದ್ಧಿ, ಕಾಲಭೈರವ, ವಿಕ್ರಾಂತ ಭೈರವ ಇತ್ಯಾದಿ ಕುಳಿತಿದ್ದಾರೆ. 

ಜ್ಯೋತಿರ್ಲಿಂಗ ಸರಣಿ: ಪರ್ವತದ ಕೋರಿಕೆ ಈಡೇರಿಸಲು ಉದ್ಭವವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ..

ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಸಂಕೀರ್ಣವು ಅನೇಕ ದೇವರು ಮತ್ತು ದೇವತೆಗಳ ಅನೇಕ ದೇವಳಗಳನ್ನು ಹೊಂದಿದೆ. ದೇವಾಲಯದಲ್ಲಿ ಪುರಾತನವಾದ ತೊಟ್ಟಿಯೂ ಇದೆ, ಇಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುವ ಜೊತೆಗೆ ಮುಂಬರುವ ತೊಂದರೆಗಳು ನಾಶವಾಗುತ್ತವೆ. ಮಹಾಕಾಳೇಶ್ವರ ದೇವಾಲಯವು ಮೂರು ವಿಭಾಗಗಳಲ್ಲಿದೆ. ಕೆಳಗಿನ ಭಾಗದಲ್ಲಿ ಮಹಾಕಾಳೇಶ್ವರನೇ ಇದ್ದಾನೆ. ಓಂಕಾರೇಶ್ವರ ಕೇಂದ್ರ ಭಾಗದಲ್ಲಿದ್ದಾನೆ. ಮೇಲಿನ ಭಾಗದಲ್ಲಿ ನಾಗಚಂದ್ರೇಶ್ವರ ದೇವರಿದ್ದಾನೆ. ಮಹಾಕಾಳೇಶ್ವರನ ಗರ್ಭಗುಡಿಯಲ್ಲಿ ಪಾರ್ವತಿ ದೇವಿ, ಗಣೇಶ ಮತ್ತು ಕಾರ್ತಿಕೇಯನ ವಿಗ್ರಹಗಳನ್ನು ಕಾಣಬಹುದು. 

ಅಂದ ಹಾಗೆ ಭಗವಾನ್ ಕೃಷ್ಣನು ಉಜ್ಜಯಿನಿಯಿಂದ ತನ್ನ ಶಿಕ್ಷಣವನ್ನು ಪಡೆದಿರುವ ಉಲ್ಲೇಖಗಳಿವೆ. ಉಜ್ಜಯಿನಿಯ ಖ್ಯಾತಿಯು ಪ್ರಾಚೀನ ಕಾಲದಿಂದಲೂ ಧಾರ್ಮಿಕ ನಗರವಾಗಿ ಕಂಡುಬರುತ್ತದೆ. ಇದನ್ನು ಬಹಳ ಕಾಲ ರಾಜ ಮಹಾರಾಜ ವಿಕ್ರಮಾದಿತ್ಯ ಆಳಿದ್ದಾನೆ. 

ಜ್ಯೋತಿರ್ಲಿಂಗ ಸರಣಿ: 6 ಬಾರಿ ದಾಳಿಗೂ ಜಗ್ಗದೆ ನಿಂತ ಸೋಮನಾಥ, ಪುರಾಣ ಪುಣ್ಯ ಕತೆ ಕೇಳಿ..

ಪಿಎಂ, ಸಿಎಂ, ರಾಜ ಯಾರೂ ಇಲ್ಲಿ ಉಳಿಯೋಲ್ಲ!
ಬ್ರಹ್ಮಾಂಡದ ಸೃಷ್ಟಿಯೊಂದಿಗೆ ಮಹಾಕಾಲ ಸ್ವತಃ ಕಾಣಿಸಿಕೊಂಡರು. ಇಂದಿಗೂ ಉಜ್ಜಯಿನಿಯ ರಾಜ ಮಹಾಕಾಳ. ಆತನ ಬಗ್ಗೆ ಒಂದು ದಂತಕಥೆ ಇದೆ, ಅದು ಇಂದಿಗೂ ಸತ್ಯವಾಗಿದೆ. ಮಹಾರಾಜ್ ಮಹಾಕಾಳನ ನಗರವಾದ ಉಜ್ಜಯಿನಿಯಲ್ಲಿ ಹಿಂದೆ ಯಾವುದೇ ರಾಜರು ಉಳಿಯಲು ಅವಕಾಶವಿರಲಿಲ್ಲ. ಹಾಗೊಂದು ವೇಳೆ ಬೇರೆ ರಾಜರು ಇಲ್ಲಿ ರಾತ್ರಿ ಕಳೆದರೆ ಅವರು ಅಧಿಕಾರ ಕಳೆದುಕೊಳ್ಳಬೇಕಾಗುತ್ತಿತ್ತು. ಈ ಕಾರಣಕ್ಕಾಗಿ, ಇಂದಿಗೂ ಇಲ್ಲಿ ಯಾವುದೇ ರಾಜಕಾರಣಿಗಳು, ಪ್ರಮುಖ ಸ್ಥಾನದಲ್ಲಿರುವವರು ರಾತ್ರಿ ತಂಗುವುದಿಲ್ಲ. 

click me!