ಪ್ರಕೃತಿಯಲ್ಲಿ ಕಾಣುತ್ತೆ ಪರಶಿವನ ಮೂರು ಕಣ್ಣುಗಳು…!

By Suvarna NewsFirst Published Mar 30, 2021, 6:28 PM IST
Highlights

 ಶಿವನು ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನೀಡುವವನು. ಜಗತ್ತಿಗೆ ಬೆಳಕನ್ನು ನೀಡುವ  ಸೂರ್ಯ, ಚಂದ್ರ, ಅಗ್ನಿಯ ಪ್ರಭಾವ ಪ್ರತಿ ಮಾನವನಲ್ಲಿ ಆಗುತ್ತದೆ. ಶಿವನ ಮೂರು ಕಣ್ಣುಗಳ ಶಕ್ತಿಯು ಪ್ರತಿಯೊಬ್ಬರಲ್ಲು ಇರುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಉಪಯೋಗವನ್ನು ಮಾಡಲಾಗುತ್ತದೆ. ಶಿವನ ಮೂರು ಕಣ್ಣು ಮತ್ತು ಪ್ರಕೃತಿಯಲ್ಲಿ ಅದರ ಮಹತ್ವದ ಬಗ್ಗೆ ತಿಳಿಯೋಣ.....

ಪರಶಿವನು ಮೂರು ಕಣ್ಣನ್ನು ಹೊಂದಿರುವ ಕಾರಣ ಆತನನ್ನು ಮುಕ್ಕಣ್ಣನೆಂದು ಕರೆಯಲಾಗುತ್ತದೆ. ಶಿವನ ಮೂರು ಕಣ್ಣುಗಳು ಇನ್ನೂ ಅನೇಕ ವಿಶೇಷಗಳನ್ನು ಪ್ರತಿನಿಧಿಸುತ್ತದೆ. ಪ್ರಕೃತಿ ಮತ್ತು ಮಾನವ ಜೀವನ ದೇವರು ಕೊಟ್ಟ ವರ. ಅದಕ್ಕೆ ತಕ್ಕಂತೆ ಮಾನವ ಜೀವನಕ್ಕೆ ಅನುಕೂಲವಾಗುವಂತೆ ದೇವರು ಎಲ್ಲವನ್ನೂ ಸೃಷ್ಟಿಸಿದ್ದಾನೆ. 

ಲಯ ಕರ್ತನಾದ ಮಹಾದೇವನನ್ನು ಭಕ್ತಿಯಿಂದ ಭಜಿಸಿದರೆ ಕೇಳಿದ್ದನ್ನೆಲ್ಲ ಕೊಡುತ್ತಾನೆಂದು, ಅದಕ್ಕಾಗಿಯೇ ಆತನನ್ನು ಬೋಳೇಶಂಕರನೆಂದೂ ಕರೆಯಲಾಗುತ್ತದೆ ಎಂದು ಪುರಾಣಗಳಿಂದ ತಿಳಿಯಬಹುದಾಗಿದೆ. ಮಹಾದೇವನ ಅನೇಕ ಸ್ತೋತ್ರಗಳಲ್ಲಿ ಶಿವನ ಸ್ವರೂಪದ ಬಗ್ಗೆ ವರ್ಣಿಸಿದ್ದಾರೆ. ಶಿವ ಎಂದರೆ ಮಂಗಳಕರನೆಂದು ಹೇಳಲಾಗುತ್ತದೆ. ಪ್ರಕೃತಿಯೇ ಶಿವಮಯವೆಂದು ಸಹ ಹೇಳಲಾಗುತ್ತದೆ. 
ವೇದಸಾರ ಶಿವ ಸ್ತೋತ್ರದಲ್ಲಿ ಶಿವನ ಮೂರು ಕಣ್ಣುಗಳು ಸೂರ್ಯ, ಚಂದ್ರ ಮತ್ತು ಅಗ್ನಿಯನ್ನು ಪ್ರತಿನಿಧಿಸುತ್ತವೆ ಎಂದು ವರ್ಣಿಸಲಾಗಿದೆ. ವೇದ ಸಾರ ಶಿವ ಸ್ತೋತ್ರದ ನಾಲ್ಕನೇ ಸಾಲಿನಲ್ಲಿ “ ವಿರೂಪಾಕ್ಷಮಿನ್ದ್ವರ್ಕವಹ್ನಿಂ ತ್ರಿನೇತ್ರಂ ಸದಾನನ್ದಮೀಡೇ ಪ್ರಭುಂ ಪಂಚವಕ್ತ್ರಮ್” ಎಂದು ಉಲ್ಲೇಖಿಸಲಾಗಿದೆ.  ಇದರಲ್ಲಿ ಇಂದು, ಅರ್ಕ, ವಹ್ನಿ ತ್ರಿನೇತ್ರಂ ಎಂಬುದರಲ್ಲಿ ಇಂದು ಎಂದರೆ ಚಂದ್ರ, ಅರ್ಕ ಎಂದರೆ ಸೂರ್ಯ ಮತ್ತು ವಹ್ನಿ ಎಂದರೆ ಅಗ್ನಿ ಎಂಬ ವರ್ಣನೆ ಇದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ! 

ಲಯ ಕರ್ತನಾದ ಶಿವನ ಮೂರು ಕಣ್ಣುಗಳು ಸೂಚಿಸುವ ಮೂರು ಅಂಶಗಳಾದ ಚಂದ್ರ, ಸೂರ್ಯ ಮತ್ತು ಅಗ್ನಿಯು ಬೆಳಕಿನ ಮೂಲಗಳಾಗಿವೆ. ಇಡೀ ಜಗತ್ತಿಗೆ ಪ್ರಕಾಶವನ್ನು ನೀಡುವ ಮೂಲವಾಗಿದೆಳಾಗಿವೆ.
ಸೂರ್ಯ, ಚಂದ್ರ ಮತ್ತು ಅಗ್ನಿ ಇವುಗಳಲ್ಲೆವೂ ಬೇರೆ ಬೇರೆ ರೀತಿಯಲ್ಲಿ ಬೆಳಕನ್ನು ನೀಡುತ್ತವೆ ಎಂಬ ವಿಷಯ ಬಹಳಷ್ಟು ಜನಕ್ಕೆ ತಿಳಿದಿರುವುದೇ ಇಲ್ಲ. ಅವೆಲ್ಲವಕ್ಕೂ ವಿಶೇಷ ಲಕ್ಷಣ ಮತ್ತು ಗುಣವಿದೆ. 



ವಹ್ನಿ(ಅಗ್ನಿ)- ಶಿವನ ಒಂದು ಕಣ್ಣನ್ನು ಸೂಚಿಸುತ್ತದೆ. ಇದಕ್ಕೆ ಸುಡುವ ಗುಣವಿದೆ. ಅಷ್ಟೇ ಅಲ್ಲದೆ ಸುಟ್ಟ ವಸ್ತುವನ್ನು ಬೂದಿಯಾಗಿಸುತ್ತದೆ. ಜೊತೆಗೆ ಶಾಖ ಮತ್ತು ಬೆಳಕು ಎರಡನ್ನೂ ನೀಡುವ ವಿಶೇಷ ಗುಣವಿದೆ.

ಅರ್ಕ(ಸೂರ್ಯ) - ಶಿವನ ಕಣ್ಣಿನ ಪ್ರಕಾಶದ ಪ್ರಖರತೆಯು ಸೂರ್ಯನಿಗೆ ಸಮವೆಂದು ಹೇಳಲಾಗುತ್ತದೆ. ಸೂರ್ಯನ ಬೆಳಕು ಪ್ರಕಾಶಮಾನವಾಗಿರುವುದಲ್ಲದೆ, ತೀಕ್ಷ್ಣವಾಗಿರುತ್ತದೆ. ಆದರೆ ಸೂರ್ಯನು ವಸ್ತುವನ್ನು ಸುಡುವುದಿಲ್ಲ ಬದಲಾಗಿ ಪ್ರಕಾಶಿಸುತ್ತದೆ.

ಇಂದು(ಚಂದ್ರ) – ಶಿವನು ರೌದ್ರಾವತಾರ ತಾಳುವ ರುದ್ರನೇ ಆದರೂ ಶಾಂತ ಸ್ವರೂಪವನ್ನು ಹೊಂದಿರುವ ಚಂದ್ರಶೇಖರನು ಆಗಿದ್ದಾನೆ. ಹಾಗಾಗಿ ಶಿವನ ಒಂದು ಕಣ್ಣನ್ನು ಮಾನವ ಜಗತ್ತಿಗೆ ಪ್ರಕೃತಿ ನೀಡಿರುವ ಚಂದ್ರನನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಚಂದ್ರನೇ ತಂಪು ಮತ್ತು ಶಾಂತ ಸ್ವಭಾವದ ಗುಣವನ್ನು ತೋರ್ಪಡಿಸುತ್ತದೆ.

ಮೂರೂ ಕಣ್ಣುಗಳಲಿ ವಿಶ್ವವನ್ನೇ ಗಮನಿಸುವ ಶಿವ
ಶಿವನು ತನ್ನ ಮೂರು ಕಣ್ಣುಗಳಿಂದ ಇಡೀ ವಿಶ್ವವನ್ನೇ ನೋಡುತ್ತಾನೆ. ಮನುಷ್ಯನು ದುಃಖದಿಂದ, ನಿರಾಸೆಯಿಂದ ಶಿವನ ಬಳಿ ಪರಿಹಾರಕ್ಕಾಗಿ ಬೇಡಿದಾಗ, ಆತನು ತನ್ನ ಚಂದ್ರನಂತ ಕಣ್ಣುಗಳಿಂದ ಸಾಂತ್ವನವನ್ನು ಮತ್ತು ಖುಷಿಯನ್ನು ನೀಡುತ್ತಾನೆ. ಜ್ಞಾನವನ್ನು ನೀಡುವ ಸಂದರ್ಭದಲ್ಲಿ ಆತನ ಕಣ್ಣುಗಳು ಅತ್ಯಂತ ಪ್ರಕಾಶಮಾನವಾಗುತ್ತದೆ.

ಇದನ್ನು ಓದಿ: ಫರ್ನಿಚರ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು.. 

ಬೆಳಕು-ಕತ್ತಲೆಗಳ ಸಮಾಗಮ
ಬೆಳಕು ಎಂದರೆ ಜ್ಞಾನ ಎಂದೂ ಅರ್ಥವನ್ನು ಕೊಡುತ್ತದೆ. ಜ್ಞಾನದ ಬೆಳಕು ಆವರಿಸಿದಾಗ ಕತ್ತಲೆ ಎಂಬ ಅಂಧಕಾರದಿಂದ ಹೊರಬರಲು ಸಾಧ್ಯ. ಕಲಿಯಬೇಕೆಂಬ ಹಂಬಲದಿಂದ ಜ್ಞಾನವನ್ನು ಅರ್ಜಿಸಿಕೊಳ್ಳುವವ ಜ್ಞಾನವಂತ ವಿದ್ಯಾರ್ಥಿಯಾದರೆ, ಆ ಜ್ಞಾನವನ್ನು ಧಾರೆಯೆರೆಯುವವ ಉತ್ತಮ  ಗುರುವಾಗಿರುತ್ತಾನೆ. ಜಗತ್ತಿನಲ್ಲಿ ನಡೆಯುವ ಪ್ರತಿ ಹಂತದಲ್ಲೂ ಬೆಳಕು-ಕತ್ತಲೆಗಳ ಸಮಾಗಮವಿರುತ್ತದೆ. ಅಂಧಕಾರವನ್ನು ಕಳೆದು ಬೆಳಕನ್ನು ಕಾಣುವುದು ಶಿವನ ಕಣ್ಣುಗಳಿಂದಲೇ ಆಗಿರುತ್ತದೆ. ಶಿವನ ಕೃಪೆ ಸದಾ ಇರಲೇಬೇಕಾಗುತ್ತದೆ.

ಜ್ಞಾನದ ಅರಿವು ಕೊಡುವ ಶಿವ
ಕಡುಗತ್ತಲೆಯಲ್ಲಿ ಒಂದು ಪುಟ್ಟ ದೀಪ ಆ ಸೀಮೀತ ಪ್ರದೇಶಕ್ಕೆ ಬೆಳಕನ್ನು ನೀಡುತ್ತದೆ. ಅದೇ ಸೂರ್ಯನು ತನ್ನ ಬೆಳಕಿನಿಂದ ಜಗತ್ತನ್ನೇ ಬೆಳಗಿಸುತ್ತಾನೆ. ಅಂತೆಯೇ ಶಿವನ ಶಕ್ತಿಯು ಅಂತಹದ್ದಾಗಿದೆ. ಅದೇ ಶಿವನ ಶಕ್ತಿಯು ಕ್ಷಣಾರ್ಧದಲ್ಲಿ ಜ್ಞಾನದ ಅರಿವನ್ನು ಮೂಡಿಸುವ ಅದ್ಭುತ ಶಕ್ತಿಯ ಭಂಡಾರವಾಗಿದೆ.     

ಇದನ್ನು ಓದಿ:

ಸುಡುವ-ತಂಪು ನೀಡುವ ಗುಣ
ಶಿವನ ಉರಿಗಣ್ಣಿಗೆ ಸುಟ್ಟು ಬೂದಿ ಮಾಡುವ ಶಕ್ತಿಯಿದೆ. ಕಾಮದೇವನ ಕಥೆಯಲ್ಲಿ ಪುರಾಣಗಳು ಹೇಳಿರುವಂತೆ ಶಿವನು ಕಣ್ಣಿನ ಜ್ವಾಲೆಯಿಂದ ಸುಟ್ಟು ಕಾಮದೇವನನ್ನು ಬೂದಿ ಮಾಡಿದ್ದ. ಶಿವನ ಕಣ್ಣಿಗೆ ಸುಡುವ ಶಕ್ತಿಯೂ ಇದೆ ಎಂಬುದನ್ನು ತಿಳಿಯಬಹುದಾಗಿದೆ.        
ಹಾಗೆಯೇ ಮೂರು ವಿಧದ ಮನುಷ್ಯರನ್ನು ನೋಡಬಹುದಾಗಿದೆ. ಸಿಟ್ಟಿನಲ್ಲಿದ್ದಾಗ, ನೋಡುವ ನೋಟ ಏನನ್ನಾದರು ಸುಟ್ಟು ಬಿಡುವಷ್ಟು ಕಠೋರವಾಗಿರುತ್ತದೆ. ಅದಕ್ಕೆ ಅಗ್ನಿ ದೃಷ್ಟಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಪ್ರೀತಿಸುವ, ಸಾಂತ್ವನ ನೀಡುವ, ಆಶ್ವಾಸನೆಯನ್ನು ನೀಡುವ ದೃಷ್ಟಿಯು ಚಂದ್ರನಷ್ಟೇ ತಂಪಾಗಿರುತ್ತದೆ. ಅದೇ ಅಕ್ಕರೆಯಿಂದ ನೋಡುವ ನೋಟಕ್ಕೆ ಚಂದ್ರ ದೃಷ್ಟಿ ಎನ್ನುತ್ತಾರೆ. ಜ್ಞಾನವನ್ನು ನೀಡುವ ಗುರುವಿನ ನೋಟವನ್ನು ಸೂರ್ಯ ದೃಷ್ಟಿ ಎನ್ನಲಾಗುತ್ತದೆ. ಜ್ಞಾನದ ಬೆಳಕಿನಿಂದ ಅಂಧಕಾರವನ್ನು ನೀಗಿಸುವ ದೃಷ್ಟಿ ಇದಾಗಿರುತ್ತದೆ.

click me!