Guidelines For Men: ಧರ್ಮ ಶಾಸ್ತ್ರದ ಪ್ರಕಾರ, ಉತ್ತಮ ಪತಿಯಾದವನ ಆರು ಗುಣಗಳಿವು

By Suvarna NewsFirst Published Feb 7, 2022, 1:14 PM IST
Highlights

ಆದರ್ಶ ಪತ್ನಿ ಹೇಗಿರಬೇಕೆಂಬ ಸಲಹೆಯನ್ನು ಎಲ್ಲರೂ ಕೊಡುತ್ತಾರೆ. ಆದರ್ಶ ಪತಿಯಾದವನು ಹೇಗಿರಬೇಕೆಂದು ಹೇಳುವವರು ವಿರಳ. ಆದರೆ, ನಮ್ಮ ಶಾಸ್ತ್ರಗಳಲ್ಲೇ ಈ ಬಗ್ಗೆ ಹೇಳಲಾಗಿದೆ ಎಂದು ನಿಮಗೆ ಗೊತ್ತೇ?

ಹೆಣ್ಣು ಮಕ್ಕಳು ಎದುರಾಡಬಾರದು
ನೀನು ಹುಡುಗಿ, ಹೆಚ್ಚು ಮಾತನಾಡಬಾರದು
ಹೆಂಗಸರು ತಲೆ ಎತ್ತಿ ಗಂಡಸರನ್ನು ನೋಡಬಾರದು
ಹುಡುಗಿಯರು ಕಾಲ ಮೇಲೆ ಕಾಲು ಹಾಕಿ ಕೂರಬಾರದು
ವಿವಾಹಿತೆಯು ತನ್ನ ಪತಿ, ಅತ್ತೆ, ಮಾವನ ಸೇವೆಯನ್ನು ಚಾಚೂ ತಪ್ಪದೆ ಮಾಡಬೇಕು.
.. ಇತ್ಯಾದಿ ಇತ್ಯಾದಿ
ಸಾಮಾನ್ಯವಾಗಿ ಎಲ್ಲರೂ ಹುಡುಗಿ ಹೇಗಿರಬೇಕೆಂದು ಹೆಜ್ಜೆ ಹೆಜ್ಜೆಗೂ ಬುದ್ಧಿ ಹೇಳುತ್ತಾರೆ. ಆಕೆ ಚಿಕ್ಕ ಮಗುವಾಗಿದ್ದಾಗಿದ್ದಾಗಿಂದಲೇ ಸಮಾಜದಲ್ಲಿ ಹೆಣ್ಣಾ(woman)ದವಳು ಹೇಗಿರಬೇಕೆಂಬ ಉಪದೇಶಗಳು ಶುರುವಾಗುತ್ತವೆ. ಎಲ್ಲವೂ ತಪ್ಪಲ್ಲ, ಹೇರಿಕೆಯೂ ಅಲ್ಲ.. ಒಳ್ಳೆಯದೇ. ಅದರಲ್ಲಿ ಬಹಳಷ್ಟು ತಪ್ಪೇನಲ್ಲ.

Ratha Saptami: ಇಂದು ಜಗದ ಹುಟ್ಟಿನ ಕಾರಣಕರ್ತ ಸೂರ್ಯ ಹುಟ್ಟಿದ ದಿನ- ರಥಸಪ್ತಮಿ

Latest Videos

ಆದರೆ, ಹುಡುಗಿಯರಿಗೆ ಇಷ್ಟೆಲ್ಲ ಬುದ್ಧಿ ಹೇಳುವ ಸಮಾಜ(society) ಗಂಡು ಮಕ್ಕಳ ವಿಷಯದಲ್ಲಿ ಅವರು ಏನು ಮಾಡಿದರೂ ಸರಿ ಎಂಬ ಧೋರಣೆ ಪ್ರದರ್ಶಿಸುತ್ತದೆ. ಈ ವಿಷಯಕ್ಕಾಗಿ ಹಲವು ಬಾರಿ ಧರ್ಮ ಶಾಸ್ತ್ರವನ್ನೇ ದೂರುವುದಿದೆ. ಆದರೆ, ಹಿಂದೂ ಧರ್ಮ ಶಾಸ್ತ್ರ ಈ ವಿಷಯದಲ್ಲಿ ಬೇಧ ತೋರಿಲ್ಲ. ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಆದರ್ಶ ಪುರುಷನಾದವನು ಹೇಗಿರಬೇಕೆಂದು ಕೂಡಾ ಹೇಳಲಾಗಿದೆ. ಆದರೆ, ಪುರುಷ ಪ್ರಧಾನ ಸಮಾಜ ಬೇಕಂತಲೇ ಪುರುಷನ ಕರ್ತವ್ಯವನ್ನು ಬದಿಗೆ ತಳ್ಳಿದೆ ಅಷ್ಟೇ. 

Narmada Jayanti: ಪರಶಿವನ ಬೆವರಾಗಿ ನದಿ ನರ್ಮದೆ ಹುಟ್ಟಿದ ದಿನವಿಂದು, ಏನು ಆಕೆಯ ಕತೆ?

ಈ ಧರ್ಮ ಶಾಸ್ತ್ರವು ಪುರುಷ(Man)ನು ಉದ್ಯೋಗ ಸ್ಥಳದಲ್ಲಿ ಮಾತ್ರವಲ್ಲ, ಮನೆಯಲ್ಲಿ, ಹೆಂಗಸರ ಜೊತೆ ಹೇಗಿರಬೇಕೆಂಬ ಬಗ್ಗೆ ಕೂಡಾ ಹೇಳಿದೆ. ಉತ್ತಮ ಪತಿಯಾಗಲು ಇರಬೇಕಾದ ಆರು ಪ್ರಮುಖ ಗುಣಗಳ ಬಗ್ಗೆ ವೇದಗಳಲ್ಲಿ ಹೇಳಲಾಗಿದೆ. ಅವನ್ನು ಹೇಳಿ ಸಾವಿರಾರು ವರ್ಷಗಳೇ ಆಗಿದ್ದರೂ ಇಂದಿಗೂ ಅವು ಪ್ರಸ್ತುತವೇ ಆಗಿವೆ. 
ಕಮಂಡನ ವೇದ ಶಾಸ್ತ್ರದಲ್ಲಿ ಉತ್ತಮ ಪತಿಯಾಗಲು ಹೇಳಿರುವ ಸೂತ್ರಗಳೇನು?
ಕಾರ್ಯೇಷು ಯೋಗೀ ಕರಣೇಷು ದಕ್ಷ 
ರೂಪೇ ಚ ಕೃಷ್ಣ ಕ್ಷಮಯಾ ತು ರಾಮಃ
ಭೋಜ್ಯೇಷು ತೃಪ್ತಃ ಸುಖ ದುಃಖ ಮಿತ್ರಂ
ಷಟ್ಕರ್ಮಯುಕ್ತ ಖಲು ಧರ್ಮನಾಥ

ಇದರರ್ಥ ಇಂತಿದೆ;
ಕಾರ್ಯೇಷು ಯೋಗಿ- ಒಬ್ಬ ಯೋಗಿ(yogi)ಯಂತೆ ಪ್ರತಿಫಲ ಆಪೇಕ್ಷಿಸದೆ ಪರಿಶ್ರಮದಿಂದ ಕೆಲಸ ಮಾಡಬೇಕು. 
ಕರಣೇಷು ದಕ್ಷ- ತಂದೆಯಾಗಿ, ಪತಿಯಾಗಿ, ಮಗನಾಗಿ ಕುಟುಂಬ ನಡೆಸುವುದರಲ್ಲಿ, ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ, ದಕ್ಷತೆಯಿಂದಲೂ, ಸಂಯಮದಿಂದಲೂ ವ್ಯವಹರಿಸಬೇಕು.
ರೂಪೇಚ ಕೃಷ್ಣ- ಇಲ್ಲಿ ರೂಪ ಎಂಬುದರ ನೇರಾನೇರ ಅರ್ಥವಲ್ಲ. ಬಹಳ ಉತ್ಸಾಹಿಯೂ, ನಗುತ್ತಾ(smile) ಇರುವವನು ಸುಂದರನಾಗಿ ಕಾಣುತ್ತಾನೆ. ಅಂತೆಯೇ ಉತ್ತಮ ಪುರುಷನು ಕೃಷ್ಣ(Lord Krishna)ನಂತೆ ಈ ಗುಣರೂಪಗಳನ್ನು ಹೊಂದಿ ಸದಾ ಸಂತೋಷದಿಂದಿರಬೇಕು. 
ಕ್ಷಮಯಾ ತು ರಾಮಃ- ರಾಮ(Lord Rama)ನಂತೆ ಏಕಪತ್ನಿವ್ರತಸ್ಥನಾಗಿದ್ದು, ಮರ್ಯಾದಾ ಪುರುಷೋತ್ತಮನಾಗಿದ್ದು, ಕ್ಷಮಿಸುವ ಗುಣ ಹೊಂದಿರುವವನು ಆಗಿರಬೇಕು. ಪುರುಷನಲ್ಲಿ ಸಂಯಮ ಹೆಚ್ಚಿರಬೇಕು. ಆತ ಸಂಬಂಧ(relationship)ದಲ್ಲಿ ಕ್ಷಮಿಸಿ ಮುನ್ನಡೆಯಬೇಕೇ ಹೊರತು ದ್ವೇಷ ಸಾಧಿಸಬಾರದು. 
ಭೋಜ್ಯೇಷು ತೃಪ್ತಃ- ಹೆಂಡತಿಯಾಗಲೀ, ತಾಯಿಯಾಗಲೀ ನೀಡಿದ ಆಹಾರಕ್ಕೆ ಕೊಂಕು ನುಡಿಯಬಾರದು. ಸಂತೋಷದಿಂದ ಅದನ್ನು ತಿಂದು ತೃಪ್ತಿ ವ್ಯಕ್ತಪಡಿಸಬೇಕು. 
ಸುಖ ದುಃಖ ಮಿತ್ರಂ- ಪತ್ನಿ(wife)ಯ ಎಲ್ಲ ಸುಖ ದುಃಖಗಳಲ್ಲಿ , ಕುಟುಂಬದ ನೋವು ನಲಿವುಗಳಲ್ಲಿ ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲ  ಸರಿ-ತಪ್ಪುಗಳನ್ನು ಹಂಚಿಕೊಂಡು ಗೆಳೆಯನ ಹಾಗೆ ಹೆಗಲು ಕೊಡಬೇಕು. 
ಷಟ್ಕರ್ಮಯುಕ್ತ ಖಲು ಧರ್ಮನಾಥ- ಈ ಆರು ರೀತಿಯ ಕರ್ತವ್ಯ ಪಾಲನೆ ಮಾಡುವವನು, ಗುಣಗಳನ್ನು ಹೊಂದಿದವನೇ ನಿಜವಾದ ಧರ್ಮನಾಥ- ಆದರ್ಶ ಪುರುಷ.

ತಾಯಿಯಾದವಳು ತನ್ನ ಪುತ್ರನಿಗೆ ಈ ಎಲ್ಲ ಗುಣಗಳನ್ನು ಕಲಿಸುತ್ತಾ ಬೆಳೆಸಿದರೆ, ಸಮಾಜ ಆತನಲ್ಲಿ ಇದನ್ನೇ ನಿರೀಕ್ಷಿಸುವುದಾಗಿ ತೋರಿಸಿಕೊಂಡರೆ, ಖಂಡಿತಾ ಜಗತ್ತಿನ ಈಗಿನ ಅರ್ಧಕ್ಕರ್ಧ ಸಮಸ್ಯೆಗಳು ಬಗೆಹರಿಯುವವಲ್ಲವೇ?

click me!