
ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ದಿನಗಳು ಹತ್ತಿರವಾಗುತ್ತಿದ್ದಂತೆ, ಮನೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಮಂಟಪಗಳಲ್ಲಿ ವಿಘ್ನನಿವಾರಕ ಗಣಪತಿಯನ್ನು ಸ್ವಾಗತಿಸಲು ಅದ್ಧೂರಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಹಬ್ಬದ ವಾತಾವರಣದ ನಡುವೆಯೇ ನೆರೆಯ ಪಾಕಿಸ್ತಾನದ ಕರಾಚಿಯಿಂದ ಬಂದಿರುವ ಅತ್ಯಂತ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿರುವ ಮರಾಠಿ ಕುಟುಂಬವೊಂದರ ಗಣೇಶೋತ್ಸವದ ಸಿದ್ಧತೆಯ ಭಾಗವಾಗಿ, ಮುಸ್ಲಿಂ ಕಲಾವಿದನೊಬ್ಬ ದೇವಾಲಯದ ಆವರಣದಲ್ಲೇ ಕುಳಿತು ಗಣೇಶನ ವಿಗ್ರಹಕ್ಕೆ ಅತ್ಯಂತ ಶ್ರದ್ಧೆ ಹಾಗೂ ಆಕರ್ಷಕ ಬಣ್ಣಗಳನ್ನು ಹಚ್ಚುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.
ಇನ್ಸ್ಟಾಗ್ರಾಮ್ ಬಳಕೆದಾರ ಅಮರ್ ಪ್ರಕಾಶ್ ಎಂಬುವವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕರಾಚಿಯಲ್ಲಿ ನೆಲೆಸಿರುವ ಮರಾಠಿ ಸಮುದಾಯದ ಪ್ರಮುಖ ಪ್ರತಿನಿಧಿಯಾಗಿರುವ ಅಮರ್, ಪಾಕಿಸ್ತಾನದಲ್ಲಿ ತಮಗಾಗುವ ಅನುಭವಗಳನ್ನು ನಿಯಮಿತವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಈ ಬಾರಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಕರಾಚಿಯ ಮಹಾರಾಷ್ಟ್ರ ಕುಟುಂಬವೊಂದು ನಿರ್ವಹಿಸುತ್ತಿರುವ 'ಗಣೇಶ ಮಠ ಮಂದಿರ'ದ ಆವರಣದಲ್ಲಿ ವಿಗ್ರಹಕ್ಕೆ ಬಣ್ಣ ಹಚ್ಚುವ ಪ್ರಕ್ರಿಯೆಯನ್ನು ಸರೆಹಿಡಿಯಲಾಗಿದೆ. ವಿಡಿಯೋದ ಮೇಲೆ "ಕೌನ್ ಹಿಂದೂ, ಕೌನ್ ಮುಸ್ಲಿಂ? ಬಪ್ಪನ ಶಕ್ತಿ ಮತ್ತು ಕರಾಚಿಯ ಸೌಂದರ್ಯ" ಎಂಬ ಭಾವನಾತ್ಮಕ ಸಾಲುಗಳನ್ನು ಬರೆಯಲಾಗಿದೆ.
ಬಿಳಿ ಬಣ್ಣದ ಗಣೇಶನ ಮೂರ್ತಿಗೆ ಕಲಾವಿದನು ಮೊದಲು ಸ್ಪ್ರೇ ಪೇಂಟ್ ಮೂಲಕ ಮೂಲ ಬಣ್ಣಗಳನ್ನು ಹಾಕಿದ್ದಾನೆ. ನಂತರ ಸಣ್ಣ ಬ್ರಷ್ಗಳನ್ನು ಬಳಸಿಕೊಂಡು ಮೂರ್ತಿಯ ಕಣ್ಣುಗಳು, ಒಡವೆಗಳು ಹಾಗೂ ಇತರೆ ಸೂಕ್ಷ್ಮ ಭಾಗಗಳಿಗೆ ಬಣ್ಣ ತುಂಬಿದನು. ವಿಗ್ರಹಕ್ಕೆ ವೈಭವದ ಸ್ಪರ್ಶ ನೀಡಲು ಬಂಗಾರ (Gold) ಮತ್ತು ಬೆಳ್ಳಿಯ ಬಣ್ಣಗಳ (Silver shades) ಸಂಕೀರ್ಣ ಅಲಂಕಾರಿಕ ಕೆಲಸಗಳನ್ನು ಮಾಡಿ ಜೀವಂತಗೊಳಿಸಿದನು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ವಿಭಾಗವನ್ನು ಪ್ರೀತಿಯ ಎಮೋಜಿಗಳಿಂದ ತುಂಬಿಸಿದ್ದಾರೆ. ಧರ್ಮದ ಗಡಿಗಳನ್ನು ಮೀರಿ ನಿಂತ ಈ ಕಲೆ ಮತ್ತು ಭಾವೈಕ್ಯತೆಗೆ ಲಕ್ಷಾಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಮಾನವೀಯತೆಯೇ ಜಗತ್ತಿನ ಅತ್ಯುತ್ತಮ ಧರ್ಮ" ಎಂದು ಒಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.
"ನಿಜವಾದ ನಂಬಿಕೆ ಮತ್ತು ಶ್ರೇಷ್ಠ ಕಲೆಗೆ ಯಾವುದೇ ಧರ್ಮದ ಹಂಗಿಲ್ಲ. ವಿಗ್ರಹ ಅತ್ಯಂತ ಸುಂದರವಾಗಿ ಮೂಡಿಬಂದಿದೆ" ಎಂದು ಮತ್ತೊಬ್ಬ ಬಳಕೆದಾರ ಪ್ರಶಂಸಿಸಿದ್ದಾರೆ.
"ಇದು ಕೇವಲ ಕಲೆಯಷ್ಟೇ ಅಲ್ಲ, ಮಾನವೀಯತೆಯ ನೈಜ ಶಕ್ತಿ" ಎಂದು ಅನೇಕರು ಕೊಂಡಾಡಿದ್ದಾರೆ.
ಹಿಂದೂ ಧರ್ಮದ ಪ್ರಮುಖ ಹಾಗೂ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯನ್ನು ಈ ವರ್ಷ ಸೆಪ್ಟೆಂಬರ್ 14, 2026 ರಂದು ಆಚರಿಸಲಾಗುವುದು. ಅಡೆತಡೆಗಳನ್ನು ನಿವಾರಿಸುವ, ಬುದ್ಧಿವಂತಿಕೆ, ಸಮೃದ್ಧಿ ಮತ್ತು ಶುಭ ಆರಂಭದ ಸಂಕೇತವಾಗಿರುವ ಗಜಮುಖನ ಜನ್ಮದಿನವನ್ನು ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇರುವ ಭಾರತೀಯರು ಅತ್ಯಂತ ವಿಜೃಂಭಣೆಯಿಂದ ಆಚರಿಸಲಿದ್ದಾರೆ.