ಧಾರವಾಡದ ಗೊಂಬೆಗಳು ಈ ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಈ ಹಿಂದೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸಾವಿನ ಬಗ್ಗೆ ನುಡಿದ ಭವಿಷ್ಯ ನಿಜವಾಗಿತ್ತು.
ಧಾರವಾಡ (ಮಾ.30): ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದ ಧಾರವಾಡದ ಗೊಂಬೆಗಳು ಇದೀಗ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಭವಿಷ್ಯವನ್ನು ನುಡಿದಿವೆ.
ರಾಜ್ಯದಲ್ಲಿ ನೂರು ವರ್ಷಗಳ ಇತಿಹಾಸವನ್ನ ಹೊಂದಿರುವ ಧಾರವಾಡ ಜಿಲ್ಲೆಯ ಹನುಮನಕೊಪ್ಪದ ಬೊಂಬೆ ಭವಿಷ್ಯವು ಬಹುತೇಕವಾಗಿ ನಿಜವೇ ಆಗಿದೆ. ಇದೀಗ ಈ ವರ್ಷದ ಭವಿಷ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭವಿಷ್ಯವನ್ನು ನುಡಿಯಲಾಗಿದೆ. ಈ ವರ್ಷ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವಿದಿಲ್ಲ. ಸಿಎಂ ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಈ ವರ್ಷವೂ ಸಿಎಂ ಸಿದ್ದರಾಮಯ್ಯ ಕುರ್ಚಿ ಭದ್ರವಾಗಿ ಇರುತ್ತದೆ. ಕಳೆದ ಸಲವೂ ಗೊಂಬೆಗಳು ಇದೇ ಮುನ್ಸೂಚನೆ ನೀಡಿದ್ದವು.
ಸುಮಾರು 100 ವರ್ಷಗಳ ಭವಿಷ್ಯದ ಇತಿಹಾಸ ಹೊಂದಿರುವ ಬೊಂಬೆಗಳು ಈ ಹಿಂದೆ ಇಂದಿರಾ ಗಾಂಧಿ ಹತ್ಯೆ, ರಾಜೀವ್ ಗಾಂಧಿ ಸಾವಿನ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಜೊತೆಗೆ, ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ವರ್ಷವೂ ಬೊಂಬೆ ಹೇಳಿದ್ದು ನಿಜವಾಗಿತ್ತು. ಇನ್ನು ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗದೇ ಯಥಾಸ್ಥಿತಿ ಕಾಯ್ದುಕೊಳ್ಳುತ್ತದೆ. ಗೋವಾ,ಕೇರಳ ರಾಜ್ಯ ರಾಜಕಾರಣಕ್ಕೆ ಧಕ್ಕೆ ಇದೆ. ಗೋವಾ, ಕೇರಳ ದಿಕ್ಕಿನ ಸೇನಾಧಿಪತಿಗೆ ಧಕ್ಕೆಯಾಗಲಿದೆ. ಈ ಹಿನ್ನೆಲೆ ಗೋವಾ ರಾಜ್ಯ ರಾಜಕಾರಣಕ್ಕೆ ಧಕ್ಕೆ ಬರಲಿದೆ ಎಂದು ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ಗೊಂಬೆಗಳು ಭವಿಷ್ಯ ನುಡಿದಿವೆ.
ಇದನ್ನೂ ಓದಿ: Happy Ugadi 2025: ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಪ್ರತಿ ವರ್ಷ ಯುಗಾದಿಗೆ ನಡೆಯುವ ಫಲ ಭವಿಷ್ಯ ಇದಾಗಿದೆ. ಆಯಾ ವರ್ಷದ ರಾಜಕೀಯ, ಮಳೆ-ಬೆಳೆ ಕರಾರುವಕ್ಕಾದ ಭವಿಷ್ಯ ನುಡಿಯಲಿದೆ. ನಿನ್ನೆ ರಾತ್ರಿ ತುಪ್ಪರಿಹಳ್ಳ ದಂಡೆ ಮೇಲೆ ಗೊಂಬೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇಂದು ಸುರ್ಯೋದಯದ ಹೊತ್ತಿಗೆ ಮರಳಿ ಗ್ರಾಮದ ಪ್ರಮುಖರು ಹೋಗಿ ನೋಡುತ್ತಾರೆ. ಆಗ ಆಯಾ ಗೊಂಬೆ, ಕಾಳುಗಳನ್ನು ಆಧರಿಸಿ ಭವಿಷ್ಯ ನಿರ್ಧಾರ ಮಾಡಲಾಗುತ್ತದೆ. ಈ ಸಲ ಮುಂಗಾರು ಮಳೆ ಕಡಿಮೆಯಾಗಲಿದೆ. ಹಿಂಗಾರು ಬೆಳಗೆ ಮಳೆ ಉತ್ತಮವಾಗಿದೆ, ಹಿಂಗಾರು ಬೆಳೆ ರೈತರ ಕೈ ಹಿಡಿಯಲಿದೆ. ಕೊಬ್ಬರಿ, ಶೇಂಗಾ, ಬೆಲ್ಲ, ಜೋಳಕ್ಕೆ ಒಳ್ಳೆ ದರ ಸಿಗೋ ಸಾಧ್ಯತೆಯಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿ ಪರಮೇಶ್ ಅಂಗಡಿ ಗ್ರಾಮಸ್ಥರನ್ನ ಮಾತನಾಡಿಸಿ ಭವಿಷ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: ಯುಗಾದಿಗೆ ಹಿಂದುತ್ವದ ಹೊಸ ಪಕ್ಷ: ಬಿಜೆಪಿಯಿಂದ ಕಹಿ ನೀಡಿದರೂ, ಕಾರ್ಯಕರ್ತರಿಗೆ ಸಿಹಿ ನೀಡಿದ ಯತ್ನಾಳ್!