ಈ ನಾಲ್ಕು ರಾಶಿಯವರು ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಲ್ವಂತೆ!

By Suvarna NewsFirst Published Sep 30, 2020, 7:56 PM IST
Highlights

ರಾಶಿ ಚಕ್ರದಲ್ಲಿ ಪ್ರತಿ ರಾಶಿಗೂ ಭಿನ್ನವಾದ ಗುಣ, ಸ್ವಭಾವಗಳಿರುತ್ತವೆ. ಹಾಗಾಗಿ ಆಯಾ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವದಲ್ಲಿ ರಾಶಿ ತತ್ವದ ಪ್ರಭಾವವೂ ಅಡಗಿರುತ್ತದೆ. ಕೆಲವು ರಾಶಿಯವರು ಕೋಪಿಷ್ಟರಾದರೆ, ಮತ್ತೆ ಕೆಲವು ರಾಶಿಯವರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಕೆಲವು ರಾಶಿಯವರು ಹೆಚ್ಚು ಮಾತನಾಡುವ ಸ್ವಭಾವವನ್ನು ಹೊಂದಿದ್ದರೆ, ಇನ್ನು ಕೆಲವು ರಾಶಿಯವರು ಮೌನವನ್ನು ಇಷ್ಟಪಡುವವರಾಗಿರುತ್ತಾರೆ. ಹಾಗೆಯೇ ತಮ್ಮ ನೋವು ದುಃಖವನ್ನು ಹಂಚಿಕೊಳ್ಳುವ ರಾಶಿಯವರು ಕೆಲವರಾದರೆ, ಈ ನಾಲ್ಕು ರಾಶಿಯವರು ತಮ್ಮ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾದರೆ ಆ ರಾಶಿಗಳು ಯಾವುದೆಂದು ತಿಳಿಯೋಣ...
 

ಮನಷ್ಯ ಅಂದ ಮೇಲೆ ಕಷ್ಟ-ಸುಖ ಎರಡನ್ನೂ ಅನುಭವಿಸಬೇಕಾಗುತ್ತದೆ. ಕಷ್ಟ ಬಂದಾಗ ಎದೆಗುಂದದೇ ಎದುರಿಸಿ, ಸುಖವಿದ್ದಾಗ ಆನಂದದಿಂದ ಅದನ್ನು ಅನುಭವಿಸುವ ಮನಃಸ್ಥಿತಿಯನ್ನು ಹೊಂದಿರಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಗುಣ-ಸ್ವಭಾವಗಳು ಭಿನ್ನವಾಗಿರುತ್ತವೆ. ಕೆಲವರು ಎಷ್ಟೇ ಕಷ್ಟವಿದ್ದರೂ ಅದನ್ನು ತೋರಿಸಿಕೊಳ್ಳದೇ ನಗುತ್ತಾ ಇರುತ್ತಾರೆ, ಮತ್ತೆ ಕೆಲವರು ತಮ್ಮ ಕಷ್ಟಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳುವ ಮನಃಸ್ಥಿತಿ ಹೊಂದಿರುತ್ತಾರೆ. ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳು ಕಷ್ಟವನ್ನು ತಾವೇ ಸಹಿಸಿಕೊಳ್ಳುತ್ತಾರೆ, ಆಪ್ತರೊಂದಿಗೂ ಅದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.

ರಾಶಿಯನುಸಾರ ತೆಗೆದುಕೊಂಡರೆ ಪ್ರತಿ ರಾಶಿಯ ಸ್ವಭಾವಕ್ಕೆ ಅನುಗುಣವಾಗಿ ಅವರ ವ್ಯಕ್ತಿತ್ವ ಮತ್ತು ಸ್ವಭಾವವಿರುತ್ತದೆ. ಕೆಲವು ರಾಶಿಯವರು ಸುಖ ಬರಲಿ, ದುಃಖವಿರಲಿ ಎರಡನ್ನೂ ಸರಿಯಾಗಿ ನಿಭಾಯಿಸುತ್ತಾರೆ. ಕೆಲವು ರಾಶಿಯವರು ಕಷ್ಟ ಬಂದಾಗ ನಿರಾಶೆಗೊಳಗಾಗಿ ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಳ್ಳುತ್ತಾರೆ. ಕಷ್ಟವನ್ನು ಸ್ನೇಹಿತರೊಂದಿಗೆ, ಆಪ್ತರೊಂದಿಗೆ ಹೇಳಿಕೊಂಡು ಅದಕ್ಕೆ ಸರಿಯಾದ ಸಮಾಧಾನವನ್ನು ಪಡೆಯುವ ರಾಶಿಯವರು ಕೆಲವರಾದರೆ, ದುಃಖ ಕಷ್ಟಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ತಮ್ಮಲ್ಲೇ ಇಟ್ಟುಕೊಂಡು ಕೊರಗುವ ರಾಶಿಯವರು ಕೆಲವರು. ಅಂಥ ನಾಲ್ಕು ರಾಶಿಯವರ ಬಗ್ಗೆ ಈಗ ತಿಳಿದುಕೊಳ್ಳೋಣ...

ಇದನ್ನು ಓದಿ: ಹಣೆಯ ರೇಖೆ ಹೇಳುತ್ತೆ ನಿಮ್ಮ ಭವಿಷ್ಯವನ್ನು.! 

ಕರ್ಕಾಟಕ ರಾಶಿ
ನೋವನ್ನು ಯಾರೊಂದಿಗೂ ಹೇಳಿಕೊಳ್ಳದೇ ಇರುವ ರಾಶಿಯವರ ಪಟ್ಟಿಯಲ್ಲಿ ಕರ್ಕಾಟಕ ರಾಶಿಯವರು ಮೊದಲಿಗರು. ಹೆಚ್ಚು ಸಹನೆಯನ್ನು ಹೊಂದಿರುವ ಈ ರಾಶಿಯವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಬೇಗ ಭಾವುಕರಾಗುವ ಈ ರಾಶಿಯವರು ಭಾವನಾ ಜೀವಿಗಳಾಗಿರುತ್ತಾರೆ. ಯಾರೊಂದಿಗೂ ಬೇಗ ಸ್ನೇಹ ಬೆಳೆಸದ ಇವರು, ಪ್ರೀತಿಯಲ್ಲಿ ಬೀಳುವುದು ಸಹ ನಿಧಾನ ಮತ್ತು ವಿರಳ. ಈ ರಾಶಿಯವರು ತಮ್ಮ ದುಃಖವನ್ನು ಯಾರಿಗೂ ಹೇಳಲು ಇಷ್ಟಪಡುವುದಿಲ್ಲ. ದುಃಖವನ್ನು ಹಂಚಿಕೊಳ್ಳುವುದಕ್ಕಿಂತ, ಹಂಚಿಕೊಳ್ಳದಿರುವುದು ಉತ್ತಮವೆಂಬುದು ಕರ್ಕ ರಾಶಿಯವರ ಅಭಿಪ್ರಾಯ.



ಕನ್ಯಾ ರಾಶಿ
ಏಕಾಂತವನ್ನು ಇಷ್ಟ ಪಡುವ ಕನ್ಯಾ ರಾಶಿಯವರು ತಮ್ಮೊಳಗೇ ಆಲೋಚನಾ ಮಗ್ನರಾಗಿರುತ್ತಾರೆ. ಈ ರಾಶಿಯವರು ತಮ್ಮ ವ್ಯಕ್ತಿತ್ವವನ್ನು ಯಾರೊಂದಿಗೂ ತೋರ್ಪಡಿಸಿಕೊಳ್ಳುವುದಿಲ್ಲ. ಕನ್ಯಾ ರಾಶಿಯವರು ತಮ್ಮ ಸುಖ-ದುಃಖ, ಸಮಸ್ಯೆಗಳನ್ನು ಎಂದಿಗೂ ಹಂಚಿಕೊಳ್ಳುವುದಿಲ್ಲ. ಹಾಗಾಗಿ ಈ ರಾಶಿಯವರು ಹೇಗೆ? ಎಂಬ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಕಷ್ಟಸಾಧ್ಯವಾಗಿರುತ್ತದೆ. ಈ ರಾಶಿಯವರು ತಮ್ಮ ಬಗ್ಗೆಯೇ ಕೀಳರಿಮೆ ಹೊಂದಿರುತ್ತಾರೆ. ಇವರು ಪರಿಪೂರ್ಣರೆಂದು ಜೊತೆಗಿದ್ದವರು ಎಷ್ಟೇ ತಿಳಿಸಿ ಹೇಳಿದರೂ ನಂಬಲು ಇವರು ತಯಾರಿರುವುದಿಲ್ಲ. ಆದರೆ, ಇವರಿಗೇ ಇವರ ಶಕ್ತಿಯ ಅರಿವು ಆಗುವವರೆಗೂ ಬೇರೆಯವರ ಮಾತು ಇವರಿಗೆ ಅರ್ಥವಾಗುವುದಿಲ್ಲ.

ಇದನ್ನು ಓದಿ: ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..! 

ವೃಶ್ಚಿಕ ರಾಶಿ
ಈ ರಾಶಿಯವರು ಹೆಚ್ಚು ಸಮಾಜಮುಖಿಯಾಗಿರುತ್ತಾರೆ. ಇವರು ಯಾರನ್ನು ಬೇಗ ನಂಬುವುದಿಲ್ಲ. ಇವರ ವಿಶ್ವಾಸ ಗಳಿಸಿಕೊಳ್ಳುವುದು ತುಂಬಾ ಕಠಿಣ. ಹಾಗೆಯೇ ವೃಶ್ಚಿಕ ರಾಶಿಯವರು ತಮ್ಮ ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಎಷ್ಟೇ ಕಷ್ಟವಾದ ಪರಿಸ್ಥಿತಿಯಲ್ಲಿದ್ದರೂ ಅದನ್ನು ತೋರಿಸಿಕೊಳ್ಳದೇ ಇರುವ ಚಾಕಚಕ್ಯತೆ ಇವರಿಗಿರುತ್ತದೆ. ಇವರಿಗಿರುವ ಸಂಕಷ್ಟವನ್ನು ಯಾರಿಂದಲೂ ಪರಿಹರಿಸಲು ಸಾಧ್ಯವಿಲ್ಲವೆಂಬುದು ಈ ರಾಶಿಯವರ ಭಾವನೆ ಹಾಗಾಗಿ ಯಾರೊಂದಿಗೂ ದುಃಖವನ್ನು ಹೇಳಿಕೊಳ್ಳುವುದಿಲ್ಲ.

ಇದನ್ನು ಓದಿ: ಮಾರ್ಗಿಯಾಗುತ್ತಿರುವ ಶನಿ; ಯಾವ ರಾಶಿಗಳ ಮೇಲೆ ಯಾವ ಪರಿಣಾಮ...! 

ಕುಂಭ ರಾಶಿ
ಈ ರಾಶಿಯವರು ಸಹ ದುಃಖವನ್ನು ತೋರಿಸಿಕೊಳ್ಳದೇ ಇರುವದರಲ್ಲಿ ನಿಸ್ಸೀಮರು. ದುಃಖವನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಎಲ್ಲರಿಗೂ ಅದು ತಿಳಿಯುತ್ತದೆಯೇ ಹೊರತು ಯಾವುದೇ ರೀತಿಯ ಪರಿಹಾರ ದೊರಕುವುದಿಲ್ಲವೆಂಬುದು ಇವರ ಅಭಿಪ್ರಾಯ. ಹಾಗಾಗಿ ಇವರ ಕಷ್ಟದ ಸಂಗತಿ ಬೇರೆಯವರ ಚರ್ಚೆಗೆ ಆಹಾರವಾಗುವುದನ್ನು ಈ ರಾಶಿಯವರು ಇಷ್ಟಪಡುವುದಿಲ್ಲ. ಇವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಈ ರಾಶಿಯವರು ತಮ್ಮ ಸುಖ ಅಥವಾ ದುಃಖದ ವಿಚಾರವನ್ನು ಇವರಾಗೇ ಹೇಳಿದರೆ ಮಾತ್ರ ಇತರರಿಗೆ ತಿಳಿಯುತ್ತದೆ. ಇಲ್ಲವಾದಲ್ಲಿ ಈ ರಾಶಿಯವರನ್ನು ನೋಡಿ ಅರಿತುಕೊಳ್ಳಲಾಗುವುದಿಲ್ಲ. 

click me!