ಶ್ರಾವಣಕ್ಕೆ ಉಜ್ಜಯಿನಿ ಮಹಾಕಾಳೇಶ್ವರನಿಂದ ಆನ್‌ಲೈನ್ ದರ್ಶನ..!

By Suvarna NewsFirst Published Jul 13, 2020, 11:35 AM IST
Highlights

ಮಧ್ಯಪ್ರದೇಶದ ಉಜ್ಜಯಿನಿಯ ಪವಿತ್ರ ನದಿಯಾಗಿರುವ ಶಿಪ್ರಾದಲ್ಲಿ ಮಹಾಕಾಳೇಶ್ವರನ ರೂಪದಲ್ಲಿ ಶಿವ ನೆಲೆಸಿದ್ದಾನೆಂಬುದು ಭಕ್ತರ ನಂಬಿಕೆ. ದೇಶದಲ್ಲಿರುವ 12 ಜ್ಯೋತಿರ್ಲಿಂಗದಲ್ಲಿ ಇದೂ ಸಹ ಒಂದು ಪ್ರಮುಖ ಕ್ಷೇತ್ರವಾಗಿದೆ. ಪುರಾಣದ ಪ್ರಕಾರ ಈ ದೇವಾಲಯವನ್ನು ಕಟ್ಟಿದ್ದು ಬ್ರಹ್ಮ ಎಂದು ಹೇಳಲಾಗುತ್ತದೆ. ಮತ್ತಿದಕ್ಕೆ “ಸ್ವಯಂಭೂ” ಅಂದರೆ ತಾನೇ ಸೃಷ್ಟಿಸಿಕೊಂಡ ದೇಗುಲ ಎಂದೂ ಹೇಳಲಾಗುತ್ತದೆ. ಇಂತಹ ಪುರಾಣ ಇತಿಹಾಸ ಇರುವ ಈ ದೇಗುಲದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಆದರೆ, ಕೊರೋನಾ ಇರುವುದರಿಂದ ಇದೇ ಪ್ರಥಮ ಬಾರಿಗೆ ತಂತ್ರಜ್ಞಾನದ ಮೊರೆಹೋಗಿ “ಲೈವ್ ದರ್ಶನ’’ದ ವ್ಯವಸ್ಥೆ ಮಾಡಲಾಗಿದೆ. ಹಾಗಾದರೆ ಏನು..? ಎತ್ತ..? ಎಂಬುದನ್ನು ನೋಡೋಣ ಬನ್ನಿ…

ಕೊರೋನಾ ಸೋಂಕು ಮಾನವ ನಿರ್ಮಿತವೋ, ಪ್ರಕೃತಿ ಮುನಿಸೋ ಇಲ್ಲವೋ ದೇವರ ಶಾಪವೋ ಗೊತ್ತಿಲ್ಲ. ಆದರೆ, ಇದು ಎಲ್ಲರಿಗೂ ಸಂಕಷ್ಟದ ಕಾಲವಾಗಿದ್ದು, ಅಗ್ನಿಪರೀಕ್ಷೆ ಎದುರಾಗಿದೆ. ಇದನ್ನು ಜನರು ಯಾವ ಮಟ್ಟಿಗೆ ಎದುರಿಸುತ್ತಾರೆ ಎಂಬುದು ಮುಖ್ಯ. ಆದರೀಗ ದೇವರ ದರ್ಶನಕ್ಕೂ ಕಷ್ಟಪಡುವಂತಹ ಸ್ಥಿತಿ ಉಂಟಾಗಿದೆ.

ಕೆಲಕಾಲ ಲಾಕ್‌ಡೌನ್ ಆಗಿ ಸಾರ್ವಜನಿಕ ಮುಕ್ತವಾಗಿದ್ದರೂ ಮತ್ತೆ ಲಾಕ್‌ಡೌನ್ ಕರಿನೆರಳು ಕಾಣಿಸಿಕೊಳ್ಳುತ್ತಿದೆ. ಕಳೆದ ಲಾಕ್‌ಡೌನ್ ವೇಳೆ ದೇವರಿಗೂ ಬಿಸಿ ತಟ್ಟಿದ್ದು, ಭಕ್ತರು ಯಾರೂ ದೇಗುಲಕ್ಕೆ ಹೋಗುವಂತಿರಲಿಲ್ಲ. ಲಾಕ್‌ಡೌನ್ ಸಡಿಲಿಕೆ ಮಾಡಿದ ನಂತರ ಸದ್ಯ ಆ ಆತಂಕ ಇಲ್ಲದಿದ್ದರೂ ದೇಗುಲಗಳಲ್ಲಿ ಜನಜಂಗುಳಿ ಆಗುವಂತಿಲ್ಲ. ಆದರೆ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಭಾವನೆಗಳನುಸಾರ ಜನ ಭೇಟಿ ಕೊಟ್ಟೇಕೊಡುತ್ತಾರೆ. ಆಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ಆಷಾಡ ಶುಕ್ರವಾರ ಸೇರಿದಂತೆ ಹಲವು ಆಚರಣೆಗಳಿಗೆ ಭಕ್ತರಿಗೆ ಪ್ರಮುಖ ದೇವಾಲಯಗಳಲ್ಲಿ ಪ್ರವೇಶವೇ ಇಲ್ಲದಂತೆ ಮಾಡಲಾಗಿದೆ. 

ಇದನ್ನು ಓದಿ: ಶುಕ್ರವಾರದ ವ್ರತ ವಿಧಾನ ಪಾಲಿಸಿ, ಈ ಲಾಭ ಪಡೆಯಿರಿ! 

ಶ್ರಾವಣದಲ್ಲಿ ಭಕ್ತರು ಹೆಚ್ಚು
ಈಗ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದರ್ಶನವೂ ಕಷ್ಟ ಎಂಬ ಸುದ್ದಿ ಹೊರಬಿದ್ದಿದೆ. ಅದರಲ್ಲೂ ವಿಶೇಷವಾಗಿ ಶ್ರಾವಣ ಮಾಸದಲ್ಲಿ ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತಿತ್ತು. ಹಿಂದು ಸಂಪ್ರದಾಯದಲ್ಲಿ ಶ್ರಾವಣಮಾಸಕ್ಕೆ ಅದರದೇ ಆದ ಪವಿತ್ರ ಸ್ಥಾನಮಾನವಿದೆ. ಸತ್ಯಯುಗದಲ್ಲಿ ಸಮುದ್ರ ಮಥನವಾಗಿದ್ದು ಶ್ರಾವಣ ಮಾಸದಲ್ಲಿಯೇ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಇಂತಹ ಸಂದರ್ಭದಲ್ಲಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬುದು ಬಹುತೇಕರ ನಂಬಿಕೆ. ಹೀಗಾಗಿ ಈ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. 

ಹೈಟೆಕ್ ದರ್ಶನಕ್ಕೆ ಮುಂದು
ಈ ಬಾರಿಯೂ ಉಜ್ಜಯಿನಿಯ ಪಂಚಾಂಗದ ಪ್ರಕಾರ ಈಗಾಗಲೇ ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ಮಾಸದಲ್ಲಿ ಜನ ಸೇರುವುದು ಹೆಚ್ಚಾಗಿದ್ದು, ಅರದಲ್ಲೂ ಜ್ಯೋತಿರ್ಲಿಂಗವನ್ನು ಹೊಂದಿರುವ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲಕ್ಕೆ ಬರುವವರ ಸಂಖ್ಯೆ ಸಾವಿರಾರು. ಅಲ್ಲದೆ, ಕೊರೋನಾದಂತಹ ಈ ಸಂದರ್ಭದಲ್ಲಿ ಹೆಚ್ಚಿನ ಜನ ಸೇರಿದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ತುಸು ಕಷ್ಟವೇ ಸರಿ. ಇನ್ನು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಒಬ್ಬರನ್ನು ತಡೆದು ಒಬ್ಬರನ್ನು ಬಿಡುವುದು ತುಂಬಾ ಕಷ್ಟಕರ. ಜೊತೆಗೆ ಇವುಗಳನ್ನು ನಿಭಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯೂ ಬೇಕಾಗುತ್ತದೆ. ಹೀಗಾಗಿ ದೇವಸ್ಥಾನವೂ ಈಗ ಹೈಟೆಕ್ ದರ್ಶನಕ್ಕೆ ಮುಂದಾಗಿದೆ. 

ಇದನ್ನು ಓದಿ: ಭಾಗ್ಯಶಾಲಿ ಹುಡುಗಿಯರಲ್ಲಿ ಇರುತ್ತೆ ಈ ಚಿಹ್ನೆಗಳು!

ಭಾವನೆಗಳಿಗೆ ಸ್ಪಂದನೆ
ಪ್ರತಿ ವರ್ಷ ಶ್ರಾವಣ ಮಾಸದ ದಿನಗಳಲ್ಲಿ ತಪ್ಪದೇ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವವರು ಹಲವಾರು ಮಂದಿ ಇರುತ್ತಾರೆ. ಇನ್ನು ಕೆಲವರು ಈ ಬಾರಿಯಾದರೂ ದೇವರ ದರ್ಶನ ಪಡೆಯಬೇಕೆಂದು ಮೊದಲೇ ಸಂಕಲ್ಪ ಮಾಡಿಕೊಂಡಿರುತ್ತಾರೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳುವುದು ಸುಲಭದ ಮಾತಲ್ಲ. ಹಾಗಂತ ದರ್ಶನ ಕೊಡದಿದ್ದರೆ ಎಲ್ಲರಿಗೂ ಬೇಸರ. ಈ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿ ತಂತ್ರಜ್ಞಾನದ ಮೊರೆ ಹೋಗಿದೆ. ಈ ಮೂಲಕ ಪೂಜಾ ವಿಧಿವಿಧಾನಗಳು ಹೇಗೂ ನಡೆಯುತ್ತವೆ. ಅದನ್ನು ಭಕ್ತರಿಗೆ ತೋರಿಸುವ ಅವಕಾಶವನ್ನು ಕಲ್ಪಿಸಿದರೆ ಆಯಿತು  ಎಂದು ನಿರ್ಧರಿಸಿ ಈಗ ಲೈವ್ ದರ್ಶನಕ್ಕೆ ಅನುವು ಮಾಡಿಕೊಟ್ಟಿದೆ. ಹೀಗಾಗಿ ಲೈವ್ ದರ್ಶನ ಪಡೆಯಲಿಚ್ಛಿಸುವವರು http://dic.mp.nic.in/ujjain/mahakal/default.aspx  ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದಾಗಿದೆ. ಈ ಮೂಲಕ ಭಕ್ತರ ಭಾವನೆಗೆ ಸ್ಪಂದಿಸಲಾಗಿದೆ. 

ಇದನ್ನು ಓದಿ: ಕನಸಿನಲ್ಲಿ ಹಣ್ಣುಗಳ ಕಂಡರೆ ನಿಮಗೆಂಥ ಅದೃಷ್ಟ ಗೊತ್ತಾ..!? 

ಶ್ರಾವಣ ಸೋಮವಾರ ಪಲ್ಲಕ್ಕಿ ಮಹೋತ್ಸವ
ಪ್ರತಿ ಶ್ರಾವಣ ಸೋಮವಾರ ಪಲ್ಲಕ್ಕಿ ಮಹೋತ್ಸವ ಇರುತ್ತದೆ. ಆ ಸೋಮವಾರದಂದು ವ್ರತ ಆಚರಣೆ ಮಾಡುವ ಭಕ್ತರು, ವ್ರತವನ್ನು ಪೂರೈಸಿ ದೇವರ ದರ್ಶನ ಪಡೆಯುತ್ತಾರೆ. ಅಲ್ಲದೆ, ಈ ಆಚರಣೆಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಆದರೆ, ಈ ಕೊರೋನಾ ಕಾಲದಲ್ಲಿ ಜನ ಸೇರಿದರೆ ಸೋಂಕು ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆ ಇರುವುದರಿಂದ ಪಲ್ಲಕ್ಕಿ ಮಹೋತ್ಸವವನ್ನು ನಿಲ್ಲಿಸದೇ ಸಾರ್ವಜನಿಕರಿಗೆ ಲೈವ್ ದರ್ಶನ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಉಜ್ಜಯಿನಿ ದೇವಸ್ಥಾನದಲ್ಲಿ ಅನುಸರಿಸಿಕೊಂಡು ಬರಲಾಗುತ್ತಿರುವ ಪೂರ್ಣಿಮಂತ್ ಕ್ಯಾಲೇಂಡರ್ (ಪಂಚಾಂಗ) ಪ್ರಕಾರ ಜುಲೈ 6 ರಿಂದಲೇ ಶ್ರಾವಣ ಮಾಸ ಪ್ರಾರಂಭವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸಾರ್ವಜನಿಕರು ನೇರವಾಗಿ ದರ್ಶನ ಪಡೆಯಲು ಅನುಮತಿ ನೀಡದೇ ಈ ಕ್ರಮವನ್ನು ಅನುಸರಿಸಲಾಗುತ್ತಿದೆ. 

click me!