ಇಂದು ಇಸ್ಕಾನ್‌ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ: 1 ಲಕ್ಷ ಲಡ್ಡು ವಿತರಣೆ

By Govindaraj SFirst Published Aug 19, 2022, 2:25 AM IST
Highlights

ಇಂದು ಶ್ರೀ ಕೃಷ್ಣಾ ಜನ್ಮಾಷ್ಟಮಿಯನ್ನ ಬರಮಾಡಿಮಾಡಿಕೊಳ್ಳಲು ರಾಜಾಜಿನಗರ ಇಸ್ಕಾನ್ ದೇವಾಲಯ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಪ್ರತಿ ವರ್ಷದಂತೆ ಈ ಭಾರಿಯೂ ಇಸ್ಕಾನ್ ದೇವಾಲಯ ಭಕ್ತರಿಗೆ ಪ್ರಸಾದವಾಗಿ ಲಡ್ಡು ವಿತರಣೆ ಮಾಡಲು ಇಸ್ಕಾನ್ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. 

ಬೆಂಗಳೂರು (ಆ.19): ಇಂದು ಶ್ರೀ ಕೃಷ್ಣಾ ಜನ್ಮಾಷ್ಟಮಿಯನ್ನ ಬರಮಾಡಿಮಾಡಿಕೊಳ್ಳಲು ರಾಜಾಜಿನಗರ ಇಸ್ಕಾನ್ ದೇವಾಲಯ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಪ್ರತಿ ವರ್ಷದಂತೆ ಈ ಭಾರಿಯೂ ಇಸ್ಕಾನ್ ದೇವಾಲಯ ಭಕ್ತರಿಗೆ ಪ್ರಸಾದವಾಗಿ ಲಡ್ಡು ವಿತರಣೆ ಮಾಡಲು ಇಸ್ಕಾನ್ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಸುಮಾರು ಒಂದು ಲಕ್ಷ ಲಡ್ಡು ಹಾಗೂ 10 ಟನ್ ಸಕ್ಕರೆ ಪೊಂಗಲ್‌ಗೂ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಿಗ್ಗೆಯಿಂದಲೇ ಬರುವ ಭಕ್ತರಿಗೆ ಯಾವುದೇ ಆಡಚಣೆ ಆಗದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಇನ್ನೂ ದೇವರ ದರ್ಶನ ಪಡೆಯುವ ಭಕ್ತರಿಗೆ ಸರದಿ ಸಾಲಿನಲ್ಲಿ ಬರಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.

ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ: ಇಂದು ಬೆಳಿಗ್ಗೆ 4:30ಕ್ಕೆ ಮಂಗಳಾರತಿ, ತುಳಸಿ ಆರತಿ ನಡೆಯಲಿದೆ. ಬಳಿಕ 7:15ಕ್ಕೆ ದರ್ಶನ ಆರತಿ, 8:45ಕ್ಕೆ ರಾಧಾ ಕೃಷ್ಣರ ಉಯ್ಯಾಲೆ ಸೇವೆ, 11ಕ್ಕೆ ರಾಧಾಕೃಷ್ಣ ಉತ್ಸವ ಮೂರ್ತಿಗೆ ಮೊದಲ ಅಭಿಷೇಕ, ಮಧ್ಯಾಹ್ನ 12ಕ್ಕೆ ರಾಜಭೋಗ್ ನೈವೇದ್ಯ, ಸಂಜೆ 5 ಕ್ಕೆ ರಾಧಾಕೃಷ್ಣ ಉತ್ಸವಮೂರ್ತಿಗೆ ಎರಡನೇ ಅಭಿಷೇಕ, ರಾತ್ರಿ 8:30 ಕ್ಕೆ ಮೂರನೇ ಅಭಿಷೇಕ ನಡೆಯಲಿದೆ. ಬಳಿಕ 10:30ಕ್ಕೆ ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ರಾಧಾಕೃಷ್ಣರ ಪಂಚಗವ್ಯ, ಪಂಚಮೃತ, ಫಲೋದಕ, ಔಷಧಿ ಸ್ನಾನ, ಮಂತ್ರಪುಷ್ಪ ಸೇವಾ ಮತ್ತು ಅಷ್ಟಾವಧಾನ ಸೇವೆಗಳು ನಡೆಯಲಿವೆ ಎಂದು ಇಸ್ಕಾನ್ ಸಾರ್ವಜನಿಕ ಸಂಪರ್ಕಾಧಿಕಾರಿ ಕುಲಶೇಖರ ಚೈತನ್ಯ ದಾಸ ಹೇಳಿದರು.

Bengaluru: ಇಸ್ಕಾನ್‌ನಲ್ಲಿ ಸಡಗರ ಸಂಭ್ರಮದ ಶ್ರೀ ಬಲರಾಮ ಜಯಂತಿ ಆಚರಣೆ

ಈ ಭಾರೀ ಇಸ್ಕಾನ್‌ನಲ್ಲಿ ಗುರುವಾಯೂರು ಅಲಂಕಾರ: ಈ ಸಲ ಕೃಷ್ಣಾ ಜನ್ಮಾಷ್ಟಮಿ ಗೆ ಇಸ್ಕಾನ್ ದೇಗುಲದಲ್ಲಿ ಕೇರಳದ ಗುರುವಾಯೂರು ವಿನ್ಯಾಸದಲ್ಲಿ ಹೊರಾಂಗಣ ಮತ್ತು ಒಳಾಂಗಣ ಅಲಂಕಾರ ಮಾಡಲಾಗಿದೆ. ಅಲ್ಲಿನ ಸಾಂಪ್ರದಾಯಿಕ ತೆಂಗಿನ ಗರಿಗಳ ವಿಶೇಷ ವಿನ್ಯಾಸವೂ ಒಳಗೊಂಡಿದೆ ಎಂದು ಇಸ್ಕಾನ್ ಸಾರ್ವಜನಿಕ ಸಂಪರ್ಕಾಧಿಕಾರಿ ಕುಲಶೇಖರ ಚೈತನ್ಯ ದಾಸ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದರು.

ಇತ್ತ ಹಬ್ಬದ ಹಿನ್ನೆಲೆ ಕಳೆದ ಒಂದು ವಾರದಿಂದ ನಗರದ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮುದ್ದು ಕೃಷ್ಣನ ಅಲಂಕಾರಿಕ ಸಾಮಗ್ರಿಗಳು, ಕೃಷ್ಣನ ಮೂರ್ತಿಗಳು, ಬೊಂಬೆಗಳು, ಉಯ್ಯಾಲೆ, ವಿವಿಧ ವಿನ್ಯಾಸಗಳ ಕೊಳಲು, ಬಣ್ಣಬಣ್ಣದ ಮಡಿಕೆಗಳು ಸೇರಿದಂತೆ ನಾನಾ ಸಾಮಗ್ರಿಗಳ ಖರೀದಿ ಜೋರಿತ್ತು. ಗುರುವಾರ ವಿವಿಧ ದೇವಸ್ಥಾನಗಳು, ಹಿಂದೂ ಸಂಘ ಸಂಸ್ಥೆಗಳು, ಶಾಲೆಗಳು, ನರ್ಸಿರಿ, ಪ್ಲೆ ಹೋಂಗಳಲ್ಲಿ ಮಕ್ಕಳಿಗೆ ಕೃಷ್ಣ, ರಾಧೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಪುಟಾಣಿಗಳು ಪಾಲ್ಗೊಂಡು ಸಂಭ್ರಮಿಸಿದರು.

ಇಸ್ಕಾನ್‌ನ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನ ಲೋಕಾರ್ಪಣೆ, ಕನ್ನಡದಲ್ಲಿ ಭಾಷಣ ಮಾಡಿದ ರಾಜ್ಯಪಾಲ!

ಇಂದು ನಾನಾ ಕಡೆ ಆಚರಣೆ: ಚಂದ್ರಪ್ಪ ವೃತ್ತದ ಎಸ್‌ಎಲ್‌ಎನ್‌ ಸಿಟಿಯ ಆನಂದ ಗೋವಿಂದ ದೇವಸ್ಥಾನ, ಕೃಷ್ಣ ಮಠಗಳು, ಸಂಘ ಸಂಸ್ಥೆಗಳಲ್ಲಿ ಶುಕ್ರವಾರ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವೈಟ್‌ಫೀಲ್ಡ್‌ನ ಕೆಪಿಟಿಒ ಕನ್ವೆನ್ಷನ್‌ ಸೆಂಟರ್‌ ಆವರಣದಲ್ಲಿ ಇಸ್ಕಾನ್‌ನಿಂದ ಅದ್ಧೂರಿಯಾಗಿ ಗೋಕುಲಾಷ್ಟಮಿಯನ್ನು ಶುಕ್ರವಾರ ಆಯೋಜಿಲಾಗಿದೆ. 50 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ರಾಜಾಜಿನಗರ ಇಸ್ಕಾನ್‌ ದೇವಾಲಯದಿಂದ ಶ್ರೀಕೃಷ್ಣ, ರುಕ್ಮಿಣಿ, ಸತ್ಯಭಾಮ ಉತ್ಸವ ಮೂರ್ತಿಗಳನ್ನು ಮೆರವಣಿಗೆಯೊಂದಿಗೆ ಕರೆದೊಯ್ದು, ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಗೆ ವೇಷಭೂಷಣ, ಭಗವದ್ಗಿತಾ ಶ್ಲೊಕ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

click me!