Nag Panchami 2022: ನಾಗರ ಪೂಜೆಯ ವಿಧಾನ ಹೀಗೆ..

By Suvarna NewsFirst Published Jul 28, 2022, 4:27 PM IST
Highlights

ಹಿಂದೂ ಸಂಸ್ಕೃತಿಯ ವಿವಿಧ ಪ್ರಮುಖ ದಿನಗಳಲ್ಲಿ, ನಾಗ ಪಂಚಮಿಯ ದಿನವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಂದು ಸರ್ಪವನ್ನು ಪೂಜಿಸುವುದರಿಂದ ಕಾಳ ಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಪೂಜೆ ಮಾಡುವ ವಿಧಾನ ಇಲ್ಲಿದೆ..

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಎಂದರೆ ನಾಗರ ಪಂಚಮಿ ಹಬ್ಬ. ಇದು ಅಣ್ಣತಂಗಿಯರ ಹಬ್ಬವೂ ಹೌದು, ಜೊತೆಗೆ ಶಿವನ ಆಭರಣವಾದ ಹಾವನ್ನು ಪೂಜಿಸುವ ದಿನ. ಈ ವರ್ಷ ನಾಗರ ಪಂಚಮಿಯನ್ನು ಆಗಸ್ಟ್ 2ರಂದು ಆಚರಿಸಲಾಗುತ್ತದೆ. ಶ್ರಾವಣದ ಸಾಲು ಸಾಲು ಹಬ್ಬಗಳಿಗೆ ಮುನ್ನುಡಿಯಂತೆ ಬರುವ ನಾಗರ ಪಂಚಮಿ ಹಬ್ಬವು ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ದೇಶದೆಲ್ಲೆಡೆ ದೇವಸ್ಥಾನಗಳಲ್ಲಿರುವ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ನಾಗ ಪಂಚಮಿ 2022ರಂದು ಶುಭ ಯೋಗ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ನಾಗರ ಪಂಚಮಿಯ ದಿನ ಮಂಗಳವಾರ ಬರುತ್ತಿದೆ. ನಾಗರ ಪಂಚಮಿಯ ದಿನ ಮಂಗಳವಾರವಾಗಿರುವುದರಿಂದ ಸಂಜೀವಿನಿ ಯೋಗ ರೂಪುಗೊಳ್ಳುತ್ತಿದೆ. ಇದರೊಂದಿಗೆ ಪೂರ್ವ ಫಲ್ಗುಣಿ ನಕ್ಷತ್ರ ಮತ್ತು ಹಸ್ತ ನಕ್ಷತ್ರದ ವಿಶೇಷ ಕಾಕತಾಳೀಯ ಸಹ ಕಾಣಬಹುದು. ಇದಲ್ಲದೇ ಈ ದಿನ ರವಿಯೋಗ ಮತ್ತು ಸಿದ್ಧಿಯೋಗದ ವಿಶೇಷ ಕಾಕತಾಳೀಯವೂ ಇದೆ. ನಾಗರ ಪಂಚಮಿಯ ದಿನದಂದು ಬೆಳಿಗ್ಗೆ 5.43ರಿಂದ 8.23​​ರವರೆಗೆ ಪೂಜೆಗೆ ಶುಭ ಸಮಯ. ಮತ್ತೊಂದೆಡೆ, ಪಂಚಮಿ ತಿಥಿಯು ಆಗಸ್ಟ್ 1ರಂದು ಸಂಜೆ 5:13 ರಿಂದ ಪ್ರಾರಂಭವಾಗುತ್ತಿದೆ, ಅದು ಮರುದಿನ ಅಂದರೆ ಆಗಸ್ಟ್ 2ರಂದು ಸಂಜೆ 5:41ರವರೆಗೆ ಇರುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸುವ ಸರಿಯಾದ ವಿಧಾನವನ್ನು ತಿಳಿಯೋಣ.

Nag Panchami 2022: ನಾಗರ ಹಾವಿನ ಕುರಿತ ಮೂಢನಂಬಿಕೆಗಳು ಒಂದೆರಡಲ್ಲ..

ನಾಗರ ಪಂಚಮಿ ಪೂಜಾ ವಿಧಾನ
ಮೊದಲು ಗಂಗಾಜಲ ಅಥವಾ ನೀರಿನಿಂದ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ.
ನಂತರ ಮಣೆಯ ಮೇಲೆ  ಸ್ವಚ್ಛವಾದ ಬಟ್ಟೆಯನ್ನು ಹಾಕಿ.
ಬಳಿಕ ನಾಗರನ ವಿಗ್ರಹವನ್ನು ಸ್ಥಾಪಿಸಿ. ಎಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಅದನ್ನು ನಾಗದೇವತೆಯ ಬಳಿ ಇರಿಸಿ. ಪೂಜೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ.
ಇದರ ನಂತರ ನಾಗನ ಚಿತ್ರ ಅಥವಾ ವಿಗ್ರಹದ ಮೇಲೆ ನೀರು ಮತ್ತು ಹಾಲನ್ನು ಸಿಂಪಡಿಸಿ. ಅರಿಶಿನ, ಶ್ರೀಗಂಧ, ಕುಂಕುಮ, ಅಕ್ಷತೆ ಮತ್ತು ಹೂವುಗಳು, ಧೂಪ ಮತ್ತು ನೈವೇದ್ಯವನ್ನು ಅರ್ಪಿಸಿ.
ಕೊನೆಯಲ್ಲಿ ನಿಮ್ಮ ಕಣ್ಣುಗಳನ್ನು ಮುಚ್ಚಿ ನಾಗನಲ್ಲಿ ಪ್ರಾರ್ಥಿಸಿ. ಇದರ ನಂತರ, ಪೂಜೆ ಮಾಡುವಾಗ ತಿಳಿಯದೇ ಆಗಿರಬಹುದಾದ ತಪ್ಪಿಗೆ ಕ್ಷಮೆ ಕೋರಿ. 

ನಾಗರ ಪಂಚಮಿ ಪೂಜೆಯ ಪ್ರಯೋಜನಗಳು
ಅನೇಕ ಪೌರಾಣಿಕ ಲೇಖನಗಳಲ್ಲಿಯೂ ನಾಗ ಪಂಚಮಿಯ ಪ್ರಸ್ತಾಪವಿದೆ. ದಂತಕಥೆಯ ಪ್ರಕಾರ, ಈ ದಿನದಂದು ನಾಗದೇವನನ್ನು ಪೂಜಿಸುವವನು ರಾಹು ಮತ್ತು ಕೇತುಗಳ ದುಷ್ಟ ಗ್ರಹಗಳಿಂದ ಬರುವ ಎಲ್ಲ ರೀತಿಯ ದುರದೃಷ್ಟಗಳಿಂದ ಪಾರಾಗುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕಾಳ ಸರ್ಪ ದೋಷದಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಯು ನಾಗರ ಪಂಚಮಿಯ ದಿನ ಭಕ್ತಿಯಿಂದ ಪೂಜಿಸಿದರೆ ದೋಷದ ಕೆಟ್ಟ ಪರಿಣಾಮಗಳನ್ನು ತೊಡೆದು ಹಾಕಬಹುದು. 

ಈ ದೇಗುಲದ ಬಾಗಿಲು ತೆಗೆವುದು ನಾಗಪಂಚಮಿಗೆ ಮಾತ್ರ, ಭೇಟಿ ಕೊಟ್ರೆ ನಿವಾರಣೆಯಾಗುತ್ತೆ ಕಾಳಸರ್ಪ ದೋಷ!

ಈ ದಿನ ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳು
ಧಾರ್ಮಿಕ ಗ್ರಂಥಗಳ ಪ್ರಕಾರ ನಾಗರ ಪಂಚಮಿಯ ದಿನದಂದು ಹಾವುಗಳಿಗೆ ಹಾನಿ ಮಾಡಬಾರದು, ಅವುಗಳನ್ನು ಪೂಜಿಸುವ ಮೂಲಕ ರಕ್ಷಿಸಬೇಕು. ಇದರೊಂದಿಗೆ, ಈ ದಿನ ಜೀವಂತ ಹಾವಿಗೆ ಎಂದಿಗೂ ಹಾಲು ನೀಡಬೇಡಿ. ಹಾಲನ್ನು ಸೇವಿಸಿ ಅವು ಸಾವಿಗೀಡಾಗಬಹುದು ಇಲ್ಲವೇ ಬೇರೆ ರೀತಿಯ ಆರೋಗ್ಯ ಸಮಸ್ಯೆ ಎದುರಿಸಬಹುದು. 

click me!