ಸ್ವರ್ಣವಲ್ಲೀಯಲ್ಲಿ ಸೆ.26ರಿಂದ ಶರನ್ನವರಾತ್ರಿ ಆರಂಭ: ಗಂಗಾಧರೇಂದ್ರ ಸರಸ್ವತೀ ಶ್ರೀ

By Kannadaprabha NewsFirst Published Sep 13, 2022, 11:19 AM IST
Highlights

ನವರಾತ್ರಿಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಮಠಕ್ಕೆ ಭೇಟಿ ನೀಡುತ್ತಾರೆ. ದಶಮಿಯ ಕಾರ್ಯಕ್ರಮ ಇಲ್ಲಿ ವಿಶೇಷವಾಗಿದೆ. ಆಶೀರ್ವಚನ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ: ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಶ್ರೀ
 

ಶಿರಸಿ(ಸೆ.13):  ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸೆ.26ರಿಂದ ಅ.5ರವರೆಗೆ ಶರನ್ನವರಾತ್ರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಗಳು ಗಂಗಾಧರೇಂದ್ರ ಸರಸ್ವತೀ ಶ್ರೀ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಕುರಿತು ಸೋಮವಾರ ಸ್ವರ್ಣವಲ್ಲೀ ಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಗಂಗಾಧರೇಂದ್ರ ಸರಸ್ವತೀ ಶ್ರೀ ಮಾಹಿತಿ ನೀಡಿದರು. ಸೆ.26ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಪೂಜಾ, ಪುಣ್ಯಾಹ, ಮಹಾಸಂಕಲ್ಪ, ಋುತ್ವಿಕ್‌ ವರಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ದುರ್ಗಾಪೂಜೆ ಹಾಗೂ ಮಹಾಮಂಗಳಾರತಿ, ಪ್ರತಿದಿನ ರಾತ್ರಿ ದುರ್ಗಾ ಮಹಾಪೂಜಾ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ಸೆ.30ರಂದು ಲಲಿತಾ ಪಂಚಮಿ, ಸಂಜೆ ಶತರುದ್ರಾಭಿಷೇಕ ಸಹಿತ ಮಹಾಪೂಜಾ, ಮಹಾಮಂಗಳಾರತಿ, ಅ.2ರಂದು ಬೆಳಿಗ್ಗೆ ಶಾರದಾ ಸ್ಥಾಪನೆ, ಅ.3ರಂದು ದುರ್ಗಾಷ್ಟಮಿ, ಅ.4ರಂದು ಮಹಾನವಮಿ, ಲಕ್ಷ್ಮೀ ಪೂಜೆ, ಕ್ಷೇತ್ರಪಾಲ ಬಲಿ ಮತ್ತು ಅ.5ರಂದು ವಿಜಯಾದಶಮಿ ನಡೆಯಲಿದೆ ಎಂದರು.

ಅಬ್ಬಬ್ಬಾ..12 ಕೆಜಿ ಲಡ್ಡು ಹರಾಜಿನಲ್ಲಿ 61 ಲಕ್ಷಕ್ಕೆ ಸೇಲ್..!

ವಿಜಯದಶಮಿಯಂದು ಸಂಜೆ 4.30ಕ್ಕೆ ಲಕ್ಷ್ಮೀನರಸಿಂಹ ದೇವರ ಸೀಮೋಲ್ಲಂಘನ, ಶಮೀಪೂಜಾ, ಅಷ್ಟಾವಧಾನ ಸೇವಾ ನಡೆಯಲಿದೆ. ನಂತರ ಸಂಜೆ 8 ಗಂಟೆಗೆ ಮಹಾಮಂಗಳಾರತಿ, ವಿವಿಧ ಸೇವೆ, ಆಶೀರ್ವಚನ, ಫಲಮಂತ್ರಾಕ್ಷತೆ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.

ಅ.6ರಂದು ನವಚಂಡಿ ಹೋಮ ಮತ್ತು ಲಕ್ಷ್ಮೀ ನರಸಿಂಹ ಮಂತ್ರ ಹವನ ಪೂರ್ಣಾಹುತಿ, ಮಹಾಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಪ್ರತಿದಿನ ಸಂಜೆ 6.30ಕ್ಕೆ ಸೇವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಶ್ರೀಗಳು ನುಡಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ನಳ್ಳಿ, ವ್ಯವಸ್ಥಾಪಕ ಎಸ್‌.ಎನ್‌. ಗಾಂವಕರ ಬೆಳ್ಳಿಪಾಲ, ಶ್ರೀಗಳ ಆಪ್ತ ಕಾರ್ಯದರ್ಶಿ ಸಿಂಧೂರ ಭಟ್‌ ಇದ್ದರು.

ನವರಾತ್ರಿಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಮಠಕ್ಕೆ ಭೇಟಿ ನೀಡುತ್ತಾರೆ. ದಶಮಿಯ ಕಾರ್ಯಕ್ರಮ ಇಲ್ಲಿ ವಿಶೇಷವಾಗಿದೆ. ಆಶೀರ್ವಚನ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಅಂತ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಶ್ರೀ ತಿಳಿಸಿದ್ದಾರೆ.
 

click me!